
ವರದಿ: ಕಿರಣ್ಎಲ್ ತೊಡರನಾಳ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿತ್ರದುರ್ಗ
ಚಿತ್ರದುರ್ಗ (ಆ.14): ಕವಾಡಿಗರಹಟ್ಟಿಯಲ್ಲಿ ಕಲುಷಿತ ನೀರು ಸೇವಿಸಿ ನಡೆದ ದುರಂತದಿಂದಾಗಿ ಆರು ಜನ ಸಾವನ್ನಪ್ಪಿದ್ದಾರೆ. ಹೀಗಾಗಿ ಚಿತ್ರದುರ್ಗದಲ್ಲಿ ನೀರನ್ನು ಕುಡಿಯಲು ಜನರಲ್ಲಿ ಆತಂಕ ಶುರುವಾಗಿದೆ. ಆದ್ದರಿಂದ ಎಚ್ಚೆತ್ತ ಜಿಲ್ಲಾಡಳಿತ ಸಾರ್ವಜನಿಕರು ಹಾಗು ವಿಶೇಷ ಜಾಗೃತಿ ಸಪ್ತಾಹ ನಡೆಸುತ್ತಿದೆ. ಹಾಗಾದ್ರೆ ಆ ಜಾಗೃತಿಯ ಝಲಕ್ ಹೇಗಿತ್ತು ಅನ್ನೋದ್ರ ಡಿಟೈಲ್ಸ್ ಇಲ್ಲಿದೆ ನೋಡಿ. ನೀರಿನ ಕುರಿತ ಬೀದಿ ನಾಟಕ ಮಾಡ್ತಾ ಮನೋರಂಜನೆ ಮೂಲಕ ಜನರಲ್ಲಿ ಜಾಗೃತಿ ಮೂಡಿಸ್ತಿರೋ ನಗರಸಭೆ ಸಿಬ್ಬಂದಿಗಳು. ಈ ದೃಶ್ಯಗಳು ಕಂಡು ಬಂದಿದ್ದು, ಚಿತ್ರದುರ್ಗದ ಜೆ.ಜೆ ಹಟ್ಟಿ ಬಳಿ.
ಹೌದು, ಕಳೆದ 20 ದಿನಗಳ ಹಿಂದೆಯಷ್ಟೇ ಕಲುಷಿತ ನೀರು ಸೇವಿಸಿ, ಚಿತ್ರದುರ್ಗದ ಕವಾಡಿಹರಹಟ್ಟಿಯಲ್ಲಿ ಆರು ಜನ ಸಾವನ್ನಪ್ಪಿದ್ದರು. 200 ಕ್ಕು ಹೆಚ್ಚು ಜನ ನಾಗರೀಕರು ಅಸ್ವಸ್ಥರಾಗಿ ಆಸ್ಪತ್ರೆಸೇರಿದ್ದರು.ಹೀಗಾಗಿ ಇಡೀ ಚಿತ್ರದುರ್ಗ ಜಿಲ್ಲೆಯಾದ್ಯಂತ ಆತಂಕ ಮನೆ ಮಾಡಿದೆ. ಶಾಂತಿಸಾಗರ ಹಾಗು ವಿವಿಸಾಗರದಿಂದ ಸರಬರಾಜಾಗುವ ನೀರನ್ನು ಸೇವಿಸಲು ಭಯ ಶುರುವಾಗಿದೆ. ಅದ್ರಲ್ಲು ಶಾಂತಿಸಾಗರದ ನೀರು ಕುಡಿಯಲು ಯೋಗ್ಯವಲ್ಲ ಎಂಬ ವರದಿ ಬಳಿಕ ನಾಗರೀಕರ ಆತಂಕ ಮತ್ತಷ್ಟು ಹೆಚ್ಚಾಗಿದೆ. ಹೀಗಾಗಿ ಎಚ್ಚೆತ್ತ ಜಿಲ್ಲಾಡಳಿತ ಜನರ ಆತಂಕ ಶಮನ ಗೊಳಿಸಲು ಜಾಗೃತಿ ಸಪ್ತಾಹ ನಡೆಸ್ತಿದೆ.
ಚಿತ್ರದುರ್ಗ ಜಿಲ್ಲಾಡಳಿತ ಯಡವಟ್ಟು: ಕುಡಿಯುವ ನೀರಿಗೆ ಜನರ ಪರದಾಟ
ಈ ಜಾಗೃತಿ ಸಪ್ತಾಹಕ್ಕೆ ಉಸ್ತುವಾರಿ ಸಚಿವ ಸುಧಾಕರ್ ಚಾಲನೆ ನೀಡಿದ್ರು. ನೀರು ಸೇವಿಸಲು ಯಾವ್ದೇ ಆತಂಕ ಬೇಡ,ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ರು. ಇನ್ನು ಚಿತ್ರದುರ್ಗ ನಗರದ 35 ವಾರ್ಡ್ಗಳಲ್ಲೂ ಜಾಗೃತಿ ಮೂಡಿಸಲಾಗ್ತಿದೆ. ಜಾಗೃತಿ ಸಪ್ತಾಹದ ನೇತೃತ್ವವನ್ನು ಜಿಲ್ಲಾಧಿಕಾರಿ ದಿವ್ಯಪ್ರಭು ವಹಿಸಿಕೊಂಡಿದ್ದೂ, ಶಾಲಾ, ಕಾಲೇಜು ವಿದ್ಯಾರ್ಥಿಗಳು, ಸಂಘ ಸಂಸ್ಥೆಗಳು,ಆರೋಗ್ಯ ಇಲಾಖೆ ಹಾಗು ನಗರಸಭೆ ಸಹಭಾಗಿತ್ವದಲ್ಲಿ ಕುಡಿಯುವ ನೀರು ಮತ್ತು ಸ್ವಚ್ಛತೆ ಕುರಿತು ಜಾಗೃತಿ ಸಪ್ತಾಹ ನಡೆಸಲಾಗುತ್ತಿದೆ.ಈ ವೇಳೆ ಮನೋರಂಜನೆ ಮೂಲಕ ಜನರ ಗಮನ ಸೆಳೆದು ಮನ ಪರಿವರ್ತನೆ ಮಾಡಲಾಗ್ತಿದೆ.
ಗೃಹಜ್ಯೋತಿಯಿಂದ ಗ್ರಾಹಕರ ಆರ್ಥಿಕ ಹೊರೆ ತಪ್ಪಿದೆ: ಸಚಿವ ಡಿ.ಸುಧಾಕರ್
ಇದ್ರಿಂದಾಗಿ ಜನರು ಯಾವ ರೀತಿಯ ನೀರನ್ನು ಕುಡಿಯಬೇಕು, ಅದಕ್ಕೂ ಮುನ್ನ ಯಾವ ಮುಂಜಾಗ್ರತಾ ಕ್ರಮಗಳನ್ನು ವಹಿಸಬೇಕು ಎಂಬುದನ್ನು ಜಾಗೃತಿ ಮೂಲಕ ವಿಷಯ ತಿಳಿಸಲಾಯಿತು ಎಂದು ತಿಳಿಸಿದರು. ಒಟ್ಟಾರೆ ಚಿತ್ರದುರ್ಗದಲ್ಲಿ ನಡೆದ ಕಲುಷಿತ ನೀರಿನ ದುರಂತದ ಆತಂಕದಿಂದ ಜನರು ಹೊರ ಬರ್ತಿಲ್ಲ. ಪ್ರಾಣ ಭಯದಿಂದ ನೀರು ಸೇವಿಸಲು ಮೀನಾಮೇಷ ಎಣಿಸ್ತಿದ್ದಾರೆ. ಹೀಗಾಗಿ ಅವರ ಆತಂಕಶಮನಗೊಳಿಸಿ,ಸ್ವಚ್ಛತೆ ಮತ್ತು ನೀರಿನ ಬಳಕೆ ಜನರಲ್ಲಿ ಜಾಗೃತಿ ಮೂಡಿಸಲು ಜಿಲ್ಲಾಡಳಿತ ವಿಶೇಷ ಅಭಿಯಾನ ಆರಂಭಿಸಿರೋದು ಸಾರ್ವಜನಿಕರ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.