ಕೃಷಿಗೆ ತೊಂದರೆಯಾಗದಂತೆ ಬಿತ್ತನೆ ಬೀಜ ಪೂರೈಕೆ: ಶಾಸಕ ದರ್ಶನ್‌ ಧ್ರುವನಾರಾಯಣ್‌

By Kannadaprabha NewsFirst Published Jul 30, 2023, 11:21 PM IST
Highlights

ರೈತರ ಕೃಷಿ ಚಟುವಟಿಕೆಗಳಿಗೆ ತೊಂದರೆಯಾಗದಂತೆ ಬಿತ್ತನೆ ಬೀಜಗಳನ್ನು ಪೂರೈಸಲು ಕ್ರಮವಹಿಸಲಾಗಿದೆ. ಜೊತೆಗೆ ಸಬ್ಸಿಡಿ ದರದಲ್ಲಿ ರೈತರಿಗೆ ಬಿತ್ತನೆ ಬೀಜ ಪೂರೈಸಲಾಗುತ್ತಿದ್ದು, ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಶಾಸಕ ದರ್ಶನ್‌ ಧ್ರುವನಾರಾಯಣ್‌ ಹೇಳಿದರು.

ನಂಜನಗೂಡು (ಜು.30): ರೈತರ ಕೃಷಿ ಚಟುವಟಿಕೆಗಳಿಗೆ ತೊಂದರೆಯಾಗದಂತೆ ಬಿತ್ತನೆ ಬೀಜಗಳನ್ನು ಪೂರೈಸಲು ಕ್ರಮವಹಿಸಲಾಗಿದೆ. ಜೊತೆಗೆ ಸಬ್ಸಿಡಿ ದರದಲ್ಲಿ ರೈತರಿಗೆ ಬಿತ್ತನೆ ಬೀಜ ಪೂರೈಸಲಾಗುತ್ತಿದ್ದು, ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಶಾಸಕ ದರ್ಶನ್‌ ಧ್ರುವನಾರಾಯಣ್‌ ಹೇಳಿದರು. ಪಟ್ಟಣದ ಟಿಎಪಿಸಿಎಂಎಸ್‌ ಆವರಣದಲ್ಲಿ ರೈತರಿಗೆ ಬಿತ್ತನೆ ಬೀಜ ವಿತರಿಸುವ ಪ್ರಕ್ರಿಯೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ರಾಜ್ಯಾದ್ಯಂತ ಉತ್ತಮ ಮಳೆಯಾಗುತ್ತಿದ್ದು, ರೈತರ ಕೃಷಿ ಚಟುವಟಿಕೆ ತೊಂದರೆಯಾಗದಂತೆ ಎಚ್ಚರಿಕೆವಹಿಸಿ ಅವಧಿಗಿಂತ ಮೊದಲೇ ಬಿತ್ತನೆ ಬೀಜದ ವಿತರಣೆಗೆ ಚಾಲನೆ ನೀಡಲಾಗಿದೆ. ಅಲ್ಲದೆ ಬಿತ್ತನೆ ಬೀಜ ವಿತರಣೆ ಸಂದರ್ಭದಲ್ಲಿ ಆಗುತ್ತಿದ್ದ ನೂಕು ನುಗ್ಗಲನ್ನು ತಪ್ಪಿಸಲು ತಾಲೂಕಿನ ಹುಲ್ಲಹಳ್ಳಿ, ಹುರ, ಬಿಳಿಗೆರೆ, ನಗರ್ಲೆ ಮತ್ತು ನಗರದ ಟಿಎಪಿಸಿಎಂಎಸ್‌, ಎಪಿಎಂಸಿ ಆವರಣದಲ್ಲೂ ಸಹ ಬಿತ್ತನೆ ಬೀಜ ವಿತರಣಾ ಕೇಂದ್ರವನ್ನು ತೆರೆಯಲಾಗಿದ್ದು. ರೈತರಿಗೆ ತೊಂದರೆಯಾಗದಂತೆ ದಾಸ್ತಾನು ಸಹ ಮಾಡಲಾಗಿದೆ. ರೈತರು ಆತಂಕ ಪಡೆದೆ ಬಿತ್ತನೆ ಬೀಜವನ್ನು ಪಡೆಯಬಹುದಾಗಿದೆ ಎಂದರು.

ಈ ಬಾರಿ ಮೈಸೂರಿನಲ್ಲಿ ಬಿತ್ತನೆ ಬೀಜದ ಕೊರತೆ ಇಲ್ಲ: ಸಚಿವ ಮಹದೇವಪ್ಪ

ಎಲ್ಲ ರೈತರಿಗೂ ತಮ್ಮ ಹಿಡುವಳಿಗೆ ಅನುಗುಣವಾಗಿ ಬಿತ್ತನೆ ಬೀಜದ ಪ್ರಮಾಣವನ್ನು ನಿಗದಿಪಡಿಸಿ ಆನ್‌ಲೈನ್‌ ಮೂಲಕ ಬಿತ್ತನ ಬೀಜ ವಿತರಿಸಲಾಗುತ್ತಿದೆ. ಬಿತ್ತನೆ ಬೀಜದ ಪ್ರತಿ ಬ್ಯಾಗ್‌ನಲ್ಲಿ ಬೀಜ ಪ್ರಮಾಣ ಸಂಸ್ಥೆಯ ಕ್ಯೂಆರ್‌ ಕೋಡ್‌ ಒಳಗೊಂಡ ಲೇಬಲ್ ಅಳವಡಿಸಲಾಗಿದೆ. ಇದರಿಂದ ಬಿತ್ತನೆ ಬೀಜ ಕಳಪೆ ಆದಲ್ಲಿ, ಮೊಳಕೆ ಬರದೆ ನಷ್ಟವಾದಲ್ಲಿ ಸಂಬಂಧಪಟ್ಟಏಜೆನ್ಸಿ ಮತ್ತು ಕೃಷಿ ಇಲಾಖೆ ಹೊಣೆಗಾರರಾಗುತ್ತಾರೆ. ಜೊತೆಗೆ ಪರಿಹಾರ ಪಡೆಯಲು ಸಹ ಸಹಾಯವಾಗಲಿದೆ. ಆದ್ದರಿಂದ ರೈತರು ಈ ಲೇಬಲ್ ಅನ್ನು ಜೋಪಾನವಾಗಿ ಇಟ್ಟುಕೊಳ್ಳಬೇಕು ಎಂದು ಸಲಹೆ ನೀಡಿದರು.

ಕೃಷಿ ಸಹಾಯಕ ನಿರ್ದೇಶಕ ದೀಪಕ್‌ ಮಾತನಾಡಿ, ರೈತರಿಂದ ಜ್ಯೋತಿ ಭತ್ತಕ್ಕೆ ಮಾತ್ರ ಬಹಳಷ್ಟುಬೇಡಿಕೆ ಇತ್ತು. ಹಿಂದಿನ ವರ್ಷಗಳಲ್ಲಿ ಜ್ಯೋತಿ ಬತ್ತದ ಬಿತ್ತನೆ ಬೀಜ ದೊರಕದೆ ತೊಂದರೆ ಉಂಟಾಗುತ್ತಿತ್ತು. ಈ ಬಾರಿ ಅದನ್ನು ತಪ್ಪಿಸಲು ಸಾಕಷ್ಟು ದಾಸ್ತಾನು ಇಡಲಾಗಿದೆ. ಜೊತೆಗೆ ಸಾಮಾನ್ಯ ವರ್ಗಕ್ಕೆ 200 ರು. ಸಬ್ಸಿಡಿ ನೀಡಿ ಪ್ರತಿ ಬ್ಯಾಗ್‌ಗೆ 943 ರೂಂ ನಿಗದಿಪಡಿಸಲಾಗಿದೆ. ಎಸ್ಸಿ, ಎಸ್ಟಿವರ್ಗದವರಿಗೆ 300 ಸಬ್ಸಿಡಿ ನೀಡಲಾಗುತ್ತಿದ್ದು, ಪ್ರತಿ ಬ್ಯಾಗ್‌ಗೆ 843 ರು. ಗಳನ್ನು ನಿಗದಿಪಡಿಸಿ ಬಿತ್ತನೆ ಬೀಜವನ್ನು ವಿತರಣೆ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಟೋಲ್‌ ಸಂಗ್ರಹಿಸುವವರು ನಾವಲ್ಲ, ಹೆದ್ದಾರಿ ಪ್ರಾಧಿಕಾರದವರು: ಸಿದ್ದರಾಮಯ್ಯ

ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ಟಿಎಪಿಸಿಎಂಎಸ್‌ ಅಧ್ಯಕ್ಷ ಹಾಗೂ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮಹೇಶ್‌, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರಾದ ಸಿ.ಎಂ. ಶಂಕರ್‌, ಶ್ರೀಕಂಠನಾಯಕ, ಟಿಎಪಿಸಿಎಂಎಸ್‌ ಉಪಾಧ್ಯಕ್ಷ ರಾಜು, ಮುಖಂಡರಾದ ವಿಜಯಕುಮಾರ್‌, ಮಂಜುನಾಥ್‌, ನಾಗೇಶ್‌ರಾಜ, ಅಬ್ದುಲ ಖಾದರ್‌, ನಾಗರಾಜು, ರಾಜೇಶ, ಜಯರಾಮು ಇದ್ದರು.

click me!