ಪಾಂಡೇಶ್ವರ ಲೆವೆಲ್ ಕ್ರಾಸಿಂಗ್‌ ಟ್ರಾಫಿಕ್ ದಟ್ಟಣೆ ಶಮನಕ್ಕೆ ದಕ್ಷಿಣ ರೈಲ್ವೆ ಮಹತ್ವದ ಹೆಜ್ಜೆ, ಚತುಷ್ಪಥ ರಸ್ತೆ!

Published : Mar 04, 2026, 05:33 PM IST
Pandeshwar Level Crossing Road in Mangaluru

ಸಾರಾಂಶ

ಮಂಗಳೂರಿನ ಪಾಂಡೇಶ್ವರ ಲೆವೆಲ್ ಕ್ರಾಸಿಂಗ್‌ನಲ್ಲಿನ ತೀವ್ರ ಟ್ರಾಫಿಕ್ ಸಮಸ್ಯೆಗೆ ಪರಿಹಾರವಾಗಿ, ರಸ್ತೆಯನ್ನು ಚತುಷ್ಪಥವಾಗಿ ಅಭಿವೃದ್ಧಿಪಡಿಸಲು ದಕ್ಷಿಣ ರೈಲ್ವೆ ಅನುಮೋದನೆ ನೀಡಿದೆ. ಸಂಸದ ಬ್ರಿಜೇಶ್ ಚೌಟ ಅವರ ಪ್ರಯತ್ನದ ಫಲವಾಗಿ ಈ ಯೋಜನೆ ಜಾರಿಯಾಗುತ್ತಿದೆ. 

ಮಂಗಳೂರು ನಗರದಲ್ಲಿ ಹಲವು ವರ್ಷಗಳಿಂದ ಸಾರ್ವಜನಿಕರು ಅನುಭವಿಸುತ್ತಿದ್ದ ತೀವ್ರ ಟ್ರಾಫಿಕ್ ದಟ್ಟಣೆ ಮತ್ತು ಕಿರಿಕಿರಿ ಸಮಸ್ಯೆಗೆ ಇದೀಗ ಶಾಶ್ವತ ಪರಿಹಾರ ದೊರೆಯುವ ದಿಸೆಯಲ್ಲಿ ಮಹತ್ವದ ಹೆಜ್ಜೆ ಇಡಲಾಗಿದೆ. ಪಾಂಡೇಶ್ವರ ಲೆವೆಲ್ ಕ್ರಾಸಿಂಗ್ ಭಾಗದ ರಸ್ತೆಯನ್ನು ಚತುಷ್ಪಥವಾಗಿ (ನಾಲ್ಕು ಪಥ) ಅಭಿವೃದ್ಧಿಪಡಿಸಲು ದಕ್ಷಿಣ ರೈಲ್ವೆ ಅನುಮೋದನೆ ನೀಡಿದೆ. ಈ ಕುರಿತು ಪ್ರಕಟಣೆ ನೀಡಿರುವ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರ ಕಚೇರಿ, ಪಾಂಡೇಶ್ವರ ಲೆವೆಲ್ ಕ್ರಾಸಿಂಗ್‌ನಲ್ಲಿ ಉಂಟಾಗಿರುವ ಗಂಭೀರ ಟ್ರಾಫಿಕ್ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸಬೇಕೆಂಬುದು ಸ್ಥಳೀಯ ನಿವಾಸಿಗಳ ಬಹುಕಾಲದ ಬೇಡಿಕೆಯಾಗಿದೆ ಎಂದು ತಿಳಿಸಿದೆ.

ಸಂಸದರಿಂದ ಕಟ್ಟುನಿಟ್ಟಿನ ಸೂಚನೆ

ಸಮಸ್ಯೆಯ ಗಂಭೀರತೆಯನ್ನು ಮನಗಂಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಇತ್ತೀಚೆಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ರೈಲ್ವೆ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿದ್ದರು. ಈ ಸಭೆಯಲ್ಲಿ ಶಾಸಕ ವೇದವ್ಯಾಸ ಕಾಮತ್ ಹಾಗೂ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಉಪಸ್ಥಿತರಿದ್ದರು.

ಪಾಂಡೇಶ್ವರ ಲೆವೆಲ್ ಕ್ರಾಸಿಂಗ್ ಸಮಸ್ಯೆಗೆ ದೀರ್ಘಕಾಲಿಕ ಪರಿಹಾರ ಕಂಡುಕೊಳ್ಳಲು ಸಮಗ್ರ ಯೋಜನೆ ರೂಪಿಸುವ ಅಗತ್ಯವಿದೆ ಎಂದು ಸಂಸದರು ಒತ್ತಿ ಹೇಳಿದ್ದಾರೆ. ಈ ನಿಟ್ಟಿನಲ್ಲಿ Mangaluru City Corporation ಹಾಗೂ ರೈಲ್ವೆ ಇಲಾಖೆ ಅಧಿಕಾರಿಗಳು ಪರಸ್ಪರ ಸಮನ್ವಯತೆಯಿಂದ ಕಾರ್ಯನಿರ್ವಹಿಸಿ ಸಮಗ್ರ ವರದಿ ಸಿದ್ಧಪಡಿಸಬೇಕು. ಬಳಿಕ ಅದನ್ನು ರೈಲ್ವೆ ಇಲಾಖೆಯ ಅಧಿಕೃತ ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡುವಂತೆ ಮನಪಾ ಅಧಿಕಾರಿಗಳಿಗೆ ನಿರ್ದೇಶಿಸಲಾಗಿದೆ.

ನಾಲ್ಕು ಪಥ ರಸ್ತೆ ನಿರ್ಮಾಣಕ್ಕೆ ಒಪ್ಪಿಗೆ

ಪಾಂಡೇಶ್ವರ ಲೆವೆಲ್ ಕ್ರಾಸಿಂಗ್ ರಸ್ತೆ Southern Railway ವ್ಯಾಪ್ತಿಗೆ ಸೇರಿದೆ. ಈ ರಸ್ತೆ ಭಾಗವನ್ನು ನಾಲ್ಕು ಪಥಗಳಾಗಿ ಅಭಿವೃದ್ಧಿಪಡಿಸಲು ರೈಲ್ವೆ ಇಲಾಖೆ ಇದೀಗ ಅಧಿಕೃತ ಒಪ್ಪಿಗೆ ನೀಡಿದೆ. ದಕ್ಷಿಣ ರೈಲ್ವೆಯ ಜನರಲ್ ಮ್ಯಾನೇಜರ್ ಹಾಗೂ ಪಾಲಕ್ಕಾಡ್ ವಿಭಾಗದ ಡಿವಿಷನಲ್ ರೈಲ್ವೆ ಮ್ಯಾನೇಜರ್ (ಡಿಆರ್‌ಎಂ) ಅವರೊಂದಿಗೆ ಸಂಸದರು ನಡೆಸಿದ ನಿರಂತರ ಚರ್ಚೆಗಳ ಫಲವಾಗಿ ಈ ನಿರ್ಧಾರ ಸಾಧ್ಯವಾಗಿದೆ ಎಂದು ತಿಳಿಸಲಾಗಿದೆ.

ಪ್ರಸ್ತುತ ಮನಪಾ ವ್ಯಾಪ್ತಿಗೆ ಸೇರಿದ ರಸ್ತೆ ಚತುಷ್ಪಥವಾಗಿದ್ದರೂ, ರೈಲ್ವೆ ವ್ಯಾಪ್ತಿಯಲ್ಲಿರುವ ಭಾಗ ಮಾತ್ರ ದ್ವಿಪಥವಾಗಿರುವುದರಿಂದ ಇಲ್ಲಿ ವಾಹನ ಸಂಚಾರದಲ್ಲಿ ತೀವ್ರ ತೊಂದರೆ ಉಂಟಾಗುತ್ತಿತ್ತು. ಈಗ ಈ ಭಾಗವೂ ಅಗಲೀಕರಣಗೊಂಡರೆ ಸಂಪೂರ್ಣ ರಸ್ತೆ ಚತುಷ್ಪಥವಾಗಿ ರೂಪಾಂತರಗೊಂಡು ವಾಹನ ಸಂಚಾರ ಸುಗಮವಾಗಲಿದೆ.

ಅಂದಾಜು ಪಟ್ಟಿ, ಟೆಂಡರ್ ಪ್ರಕ್ರಿಯೆ

ಈ ರಸ್ತೆ ಅಗಲೀಕರಣ ಕಾಮಗಾರಿಗೆ ಸಂಬಂಧಿಸಿದಂತೆ ಸದ್ಯ ಅಂದಾಜು ಪಟ್ಟಿ (ಎಸ್ಟಿಮೇಟ್) ಸಿದ್ಧಪಡಿಸಲಾಗುತ್ತಿದೆ. ಮಾರ್ಚ್ ಅಂತ್ಯದೊಳಗೆ ಕಾಮಗಾರಿಗೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಬಳಿಕ ಕಾಮಗಾರಿ ಪ್ರಾರಂಭವಾಗಲಿದೆ.

‘ಡಬಲ್ ಬೂಮ್’ ಆಟೋಮ್ಯಾಟಿಕ್ ಗೇಟ್ ವ್ಯವಸ್ಥೆ

ಸುರಕ್ಷತೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಇಲ್ಲಿ ‘ಡಬಲ್ ಬೂಮ್’ ಆಟೋಮ್ಯಾಟಿಕ್ ಗೇಟ್ ವ್ಯವಸ್ಥೆಯನ್ನು ಅಳವಡಿಸಲು ಯೋಜಿಸಲಾಗಿದೆ. ಈ ವ್ಯವಸ್ಥೆಯಿಂದ ರೈಲು ಸಂಚಾರದ ವೇಳೆ ಗೇಟ್ ಮುಚ್ಚುವ ಮತ್ತು ತೆರೆಯುವ ಪ್ರಕ್ರಿಯೆ ಹೆಚ್ಚು ಸಮರ್ಥವಾಗಿ ನಡೆಯಲಿದ್ದು, ವಾಹನಗಳ ಅನಾವಶ್ಯಕ ನಿರೀಕ್ಷೆ ಸಮಯ ಕಡಿಮೆಯಾಗಲಿದೆ.

ಒಟ್ಟಾರೆ, ರಸ್ತೆ ಅಗಲೀಕರಣ ಮತ್ತು ಆಧುನಿಕ ಗೇಟ್ ವ್ಯವಸ್ಥೆ ಜಾರಿಯಾದ ಬಳಿಕ ಪಾಂಡೇಶ್ವರ ಭಾಗದಲ್ಲಿ ಟ್ರಾಫಿಕ್ ದಟ್ಟಣೆ ಸಮಸ್ಯೆ ಗಣನೀಯವಾಗಿ ಕಡಿಮೆಯಾಗುವ ನಿರೀಕ್ಷೆಯಿದೆ. ಭವಿಷ್ಯದಲ್ಲಿ ಸುಗಮ ಹಾಗೂ ಸುರಕ್ಷಿತ ಸಂಚಾರಕ್ಕೆ ಇದು ದಾರಿಯಾಗಲಿದೆ ಎಂದು ಸಂಸದರ ಕಚೇರಿ ವಿಶ್ವಾಸ ವ್ಯಕ್ತಪಡಿಸಿದೆ.

PREV
Read more Articles on
click me!

Recommended Stories

ಗಲ್ಫ್ ರಾಷ್ಟ್ರಗಳಲ್ಲಿ ಯುದ್ಧ: ಭಟ್ಕಳದಲ್ಲಿ ಮಧ್ಯರಾತ್ರಿಯಿಂದಲೇ ಪೆಟ್ರೋಲ್‌ ಬಂಕ್‌ನಲ್ಲಿ ಕ್ಯೂ ನಿಂತ ವಾಹನ ಸವಾರರು!
​KERC new power rates: ಬೇಸಿಗೆ ಆರಂಭದಲ್ಲೇ ಕರೆಂಟ್ ಶಾಕ್: ಯಾರಿಗೆ ವರ, ಯಾರಿಗೆ ಹೊರೆ? ಕೃಷಿ ಪಂಪ್‌ಸೆಟ್‌ಗಳಿಗೂ ದರ ಏರಿಕೆ ಬಿಸಿ?