ಬೈಯ್ಯಪ್ಪನಹಳ್ಳಿ ಸರ್‌ಎಂವಿ ರೈಲು ನಿಲ್ದಾಣಕ್ಕೆ ಪ್ರಧಾನಿ ಶೀಘ್ರ ಚಾಲನೆ

Kannadaprabha News   | Asianet News
Published : Mar 29, 2021, 08:32 AM IST
ಬೈಯ್ಯಪ್ಪನಹಳ್ಳಿ ಸರ್‌ಎಂವಿ ರೈಲು ನಿಲ್ದಾಣಕ್ಕೆ ಪ್ರಧಾನಿ ಶೀಘ್ರ ಚಾಲನೆ

ಸಾರಾಂಶ

ಮೆಜೆಸ್ಟಿಕ್‌ನಲ್ಲಿ ಇರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಟರ್ಮಿನಲ್‌ ಮತ್ತು ಯಶವಂತಪುರ ಟರ್ಮಿನಲ್‌ಗಳಲ್ಲಿ ಹೆಚ್ಚು ಜನ ದಟ್ಟಣೆ|ಬೈಯಪ್ಪನಹಳ್ಳಿಯ ಹೊಸ ಟರ್ಮಿನಲ್‌ ಅನ್ನು ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಅಭಿವೃದ್ಧಿ| ಈಗಾಗಲೇ ಮೋದಿ ಅವರ ಸಮಯ ಕೋರಿದ್ದೇವೆ: ಸುನೀತ್‌ ಶರ್ಮಾ| 

ಬೆಂಗಳೂರು(ಮಾ.29): ಬೈಯ್ಯಪ್ಪನಹಳ್ಳಿಯಲ್ಲಿ ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಅಭಿವೃದ್ಧಿ ಪಡಿಸಿರುವ ಬೆಂಗಳೂರಿನ ಮೂರನೇ ರೈಲ್ವೇ ಟರ್ಮಿನಲ್‌ ‘ಸರ್‌ ಎಂ ವಿಶ್ವೇಶ್ವರಯ್ಯ ಟರ್ಮಿನಲ್‌’ ಅನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಶೀಘ್ರವೇ ಉದ್ಘಾಟಿಸಲಿದ್ದಾರೆ ಎಂದು ರೈಲ್ವೆ ಮಂಡಳಿಯ ಅಧ್ಯಕ್ಷ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುನೀತ್‌ ಶರ್ಮಾ ಹೇಳಿದ್ದಾರೆ.

ಭಾನುವಾರ ಬೈಯ್ಯಪ್ಪನಹಳ್ಳಿಯ ಹೊಸ ರೈಲ್ವೇ ನಿಲ್ದಾಣಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ದೇಶದ ಅತ್ಯುತ್ತಮ ನಿಲ್ದಾಣವಾಗಿ ಇದನ್ನು ನಿರ್ಮಿಸಲಾಗಿದ್ದು, ಉದ್ಘಾಟನೆಗೆ ಈಗಾಗಲೇ ಪ್ರಧಾನಿ ಅವರ ಸಮಯ ಕೋರಿದ್ದೇವೆ ಎಂದು ತಿಳಿಸಿದ್ದಾರೆ.

ಮೆಜೆಸ್ಟಿಕ್‌ನಲ್ಲಿ ಇರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಟರ್ಮಿನಲ್‌ ಮತ್ತು ಯಶವಂತಪುರ ಟರ್ಮಿನಲ್‌ಗಳಲ್ಲಿ ಹೆಚ್ಚು ಜನ ದಟ್ಟಣೆ ಇರುತ್ತದೆ. ಆದ್ದರಿಂದ ಬೆಂಗಳೂರಿಗೆ ಮೂರನೇ ಟರ್ಮಿನಲ್‌ ಬಹಳ ಅವಶ್ಯಕತೆಯಿತ್ತು. ಬೈಯಪ್ಪನಹಳ್ಳಿಯ ಹೊಸ ಟರ್ಮಿನಲ್‌ ಅನ್ನು ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಅಭಿವೃದ್ಧಿಪಡಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ವಿಶ್ವದ ಅತಿ ಉದ್ದದ ಹುಬ್ಬಳ್ಳಿ ರೈಲ್ವೆ ಪ್ಲಾಟ್‌​ಫಾರಂ ಶೀಘ್ರ ಲೋಕಾರ್ಪಣೆ

ಸಂಪೂರ್ಣ ಹವಾನಿಯಂತ್ರಿತವಾಗಿರುವ ಈ ಟರ್ಮಿನಲ್‌ನಲ್ಲಿ ಸಾಕಷ್ಟುಲಿಫ್ಟ್‌, ಎಸ್ಕಲೇಟರ್‌, ಓಡಾಟದ ಜಾಗವಿದೆ. ಪಾರ್ಕಿಂಗ್‌ ಸೌಲಭ್ಯ ಉತ್ತಮವಾಗಿದೆ. ಪ್ರಯಾಣಿಕ ಸ್ನೇಹಿ ಸೌಲಭ್ಯಗಳನ್ನು ಜನರು ಸ್ವಾಗತಿಸುತ್ತಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ರೈಲ್‌ ವ್ಹೀಲ್‌ ಕಾರ್ಖಾನೆಗೆ ಭೇಟಿ

ಯಲಹಂಕದ ರೈಲ್‌ ವ್ಹೀಲ್‌ ಕಾರ್ಖಾನೆಗೆ ಭೇಟಿ ನೀಡಿದ ಸುನೀತ್‌ ಶರ್ಮಾ, ನೈಋುತ್ಯ ರೈಲ್ವೆ ಮತ್ತು ರೈಲ್‌ ವ್ಹೀಲ್‌ ಫ್ಯಾಕ್ಟರಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಈ ಸಂದರ್ಭದಲ್ಲಿ ನೈಋುತ್ಯ ರೈಲ್ವೆಯ ಜನರಲ್‌ ಮ್ಯಾನೇಜರ್‌ ಅಜಯ್‌ ಕುರ್ಮಾ ಸಿಂಗ್‌, ನೈಋುತ್ಯ ರೈಲ್ವೆಯ ಪೂರ್ಣಗೊಂಡ ಕಾಮಗಾರಿ ಮತ್ತು ಸಾಧನೆಗಳ ಮಾಹಿತಿ ನೀಡಿದರು. ರೈಲ್ವೆ ವ್ಹೀಲ್‌ ಫ್ಯಾಕ್ಟರಿಯ ಜನರಲ್‌ ಮ್ಯಾನೇಜರ್‌ ರಾಜೀವ್‌ ಕುಮಾರ್‌ ವ್ಯಾಸ್‌, ಬೆಂಗಳೂರಿನ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಅಶೋಕ್‌ ಕುಮಾರ್‌ ವರ್ಮಾ ಸೇರಿದಂತೆ ನೈಋುತ್ಯ ರೈಲ್ವೆಯ ಹಿರಿಯ ಅಧಿಕಾರಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.
 

PREV
click me!

Recommended Stories

ನಮ್ಮ ಹಣ ನಮಗೆ ಬೇಕಾದವರಿಗೆ ನೀಡುತ್ತೇವೆ: ನ್ಯಾಷನಲ್ ಹೆರಾಲ್ಡ್ ಕೇಸಲ್ಲಿ ಸಮನ್ಸ್‌ಗೆ ಡಿಕೆಶಿ ಆಕ್ರೋಶ
ಬೆಂಗಳೂರು ಕಬ್ಬನ್‌ಪಾರ್ಕ್‌ ಪುಷ್ಪ ಪ್ರದರ್ಶನಕ್ಕೆ ಇಂದು ತೆರೆ