ಸರ್ಕಾರಿ ನೌಕರರಿಗೆ ರಿಯಾಯಿತಿ ದರದಲ್ಲಿ ದಿನಸಿ

By Kannadaprabha NewsFirst Published Dec 25, 2019, 12:29 PM IST
Highlights

ಸರ್ಕಾರಿ ನೌಕರರು ರಿಯಾಯಿತಿ ದರದಲ್ಲಿ ದಿನಸಿ ಸಾಮಾನುಗಳನ್ನು ಪಡೆದುಕೊಳ್ಳಬಹುದಾಗಿದೆ. ಈ ಬಗ್ಗೆ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರು ಮಾಹಿತಿ ನೀಡಿದ್ದಾರೆ. 

ಶಿವಮೊಗ್ಗ [ಡಿ.25]:  ರಾಜ್ಯ ಸರ್ಕಾರಿ ನೌಕರರ ಸಂಘದ ವತಿಯಿಂದ ಸರ್ಕಾರಿ ನೌಕರರಿಗೆ ರಿಯಾಯಿತಿ ದರದಲ್ಲಿ ದಿನಸಿ- ಗೃಹ ಬಳಕೆ ವಸ್ತುಗಳ ಮಾರಾಟ ಕೇಂದ್ರವನ್ನು ಸದ್ಯದಲ್ಲಿಯೇ ಶಿವಮೊಗ್ಗದಲ್ಲಿ ಆರಂಭಿಸಲಾಗುವುದು ಎಂದು ಸಂಘದ ರಾಜ್ಯಾಧ್ಯಕ್ಷ ಸಿ.ಎಸ್‌. ಷಡಾಕ್ಷರಿ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರಿ ನೌಕರರರಿಗೆ ಅನುಕೂಲವಾಗುವ ದೃಷ್ಟಿಯಿಂದ ಮತ್ತು ದಿನಸಿ ಹಾಗೂ ಗೃಹ ಬಳಕೆ ವಸ್ತುಗಳು ನೌಕರ ಬಾಂಧವರಿಗೆ ಸುಲಭ ದರದಲ್ಲಿ ದೊರಕಬೇಂಬ ಉದ್ದೇಶದಿಂದ ಮಾರಾಟ ಕೇಂದ್ರ ತೆರೆಯಲಾಗುತ್ತಿದೆ. ಲಕ್ಷ್ಮೀ ಚಿತ್ರಮಂದಿರ ಸಮೀಪದಲ್ಲಿರುವ ಕಂದಾಯ ಇಲಾಖೆಯ ಕಟ್ಟಡದಲ್ಲಿ ಸದ್ಯ ಇದನ್ನು ಆರಂಭಿಸಲಾಗುವುದು. ಮುಂದಿನ ದಿನಗಳಲ್ಲಿ ಸರ್ಕಾರಿ ನೌಕರರ ಸಂಘದ ಜಾಗದಲ್ಲಿ ಪ್ರಾರಂಭಿಸಲು ಚಿಂತನೆ ನಡೆಸಲಾಗಿದೆ. ಈ ಕೇಂದ್ರ ಜನವರಿ ತಿಂಗಳಿನಲ್ಲಿ ಕಾರ್ಯಾರಂಭಗೊಳ್ಳಲಿದೆ ಎಂದರು.

ಸರ್ಕಾರಿ ನೌಕರರು ಹಾಗೂ ಅಧಿಕಾರಿಗಳು ಇದರ ಪ್ರಯೋಜನ ಪಡೆದುಕೊಳ್ಳಬಹುದು. ಇದಕ್ಕಾಗಿ ಸಂಘದಲ್ಲಿ ನೋಂದಣಿ ಮಾಡಿಸಿಕೊಳ್ಳುವುದು ಕಡ್ಡಾಯವಾಗಿದೆ. ಸಂಸ್ಥೆಯ ಗುರುತಿನ ಚೀಟಿ, ಆಧಾರ್‌ ಕಾರ್ಡ್‌, ಭಾವಚಿತ್ರ ಮತ್ತು ಪ್ರಸ್ತುತ ವೇತನ ಪತ್ರ ನೀಡಿ ನಿಗದಿತ ಶುಲ್ಕದೊಂದಿಗೆ ನೊಂದಣಿ ಮಾಡಿಸಿಕೊಳ್ಳಬೇಕು. ಖರೀದಿಸುವ ವಸ್ತುಗಳಿಗೆ ಸಾಲ ಕೂಡ ನೀಡಲಾಗುವುದು. ವೇತನ ಪಟ್ಟಿಪರಿಗಣಿಸಿ ಗೃಹ ಬಳಕೆ ವಸ್ತುಗಳಿಗೆ ಸಾಲ ನೀಡಲಾಗುವುದು. ದಿನಸಿ ಸಾಲ ಒಂದೇ ಕಂತಿನಲ್ಲಿ ಕಡಿತಗೊಳಿಸಲಾಗುವುದು ಎಂದು ತಿಳಿಸಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಜಿಲ್ಲೆಯಲ್ಲಿ ಸುಮಾರು 20 ಸಾವಿರ ಸರ್ಕಾರಿ ನೌಕರರಿದ್ದಾರೆ. ಸುಮಾರು 5-8 ಸಾವಿರಕ್ಕೂ ಹೆಚ್ಚು ನೌಕರರು ನೋಂದಣಿ ಮಾಡಿಸಬಹುದೆಂಬ ನಿರೀಕ್ಷೆ ಇದೆ. ಶೇ.10 ರಿಂದ 40 ರವರೆಗೆ ರಿಯಾಯಿತಿ ನೀಡಲಾಗುವುದು. ಇದರ ಸದುಪಯೋಗವನ್ನು ಸರ್ಕಾರಿ ನೌಕರರು ಪಡೆಯಬಹುದು ಎಂದರು.

ಗೃಹ ಬಳಕೆ ವಸ್ತುಗಳಿಗೆ ಸಾಯಿ ಇಂಟರ್‌ ನ್ಯಾಷನಲ್‌ ಸಂಸ್ಥೆಯೊಂದಿಗೆ ಒಡಂಬಡಿಕೆ ಮಾಡಿಕೊಂಡಿದ್ದು, ವಿವಿಧ ಬ್ರ್ಯಾಂಡ್‌ಗಳ ಮೊಬೈಲ್‌, ಟಿವಿ, ರೆಫ್ರಿಜಿರೇಟರ್‌, ವಾಷಿಂಗ್‌ ಮಷಿ​ನ್‌ ಮುಂತಾದವು ಸುಲಭ ದರದಲ್ಲಿ ಸಿಗಲಿವೆ. ಇದರ ಜೊತೆಗೆ ದಿನಸಿ ವಸ್ತುಗಳು ಕೂಡ ಸಿಗಲಿವೆ ಎಂದು ಮಾಹಿತಿ ನೀಡಿದರು.

click me!