
ಶಿವಮೊಗ್ಗ: ಜೈಲಿನಿಂದ ಬಿಡುಗಡೆಯಾಗಿ ಬಂದಿದ್ದ ತಂದೆಯನ್ನು ಮಗನೇ ಕೊಲೆ ಮಾಡಿ ಮೃತ ದೇಹವನ್ನು ಚಿಕ್ಕಪ್ಪನ ಜಮೀನಿನಲ್ಲಿರುವ ಬಾವಿಗೆ ಎಸೆದಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ತುಮರಿ ಸಮೀಪದ ಗೊರಗೋಡಿನಲ್ಲಿ ನಡೆದಿದೆ. ಗ್ರಾಮದ ಸುಬ್ರಾಯ (55) ಮೃತ ವ್ಯಕ್ತಿಯಾಗಿದ್ದಾರೆ.
ಆರೋಪಿ ಮಗ ಜಯಂತ್, ತಂದೆಯ ಜೊತೆ ಜಗಳಕ್ಕಿಳಿದು, ಕತ್ತಿ ಹಾಗೂ ಕೋಲಿನಿಂದ ತಂದೆಯನ್ನು ಕೊಲೆ ಮಾಡಿರುವ ಆರೋಪ ಕೇಳಿ ಬಂದಿದೆ. ತಂದೆಯನ್ನು ಕೊಲೆಗೈದ ಬಳಿಕ ತಮ್ಮ ಚಿಕ್ಕಪ್ಪನ ಗದ್ದೆಯಲ್ಲಿರುವ ಬಾವಿಗೆ ಶವವನ್ನು ಎಸೆದಿದ್ದಾಗಿ ಪೊಲೀಸರ ವಿಚಾರಣೆ ವೇಳೆ ಬಾಯಿಬಿಟ್ಟಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ.
ಕೊಲೆಯಾಗಿರುವ ಸುಬ್ರಾಯ , ಈ ಹಿಂದೆ ತನ್ನ ತಂದೆ ಮತ್ತು ತಂಗಿಯನ್ನು ಕೊಲೆ ಮಾಡಿ ಸುಮಾರು 14 ವರ್ಷ ಜೈಲು ಶಿಕ್ಷೆ ಅನುಭವಿಸಿದ್ದನಂತೆ. ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ ಆತ ಇತ್ತೀಚೆಗೆ, ಅಂದರೆ ಮೇ ತಿಂಗಳಲ್ಲಿ ಜೈಲಿನಿಂದ ಬಿಡುಗಡೆಯಾಗಿ ಮನೆಗೆ ವಾಪಸ್ ಬಂದಿದ್ದ ಎನ್ನಲಾಗಿದೆ.
ಜೈಲಿನಿಂದ ಬಿಡುಗಡೆಯಾಗಿ ಬಂದ ಬಳಿಕ ಊರಿಗೆ ಬಾರದೇ ಬೇರೆ ಊರಿನಲ್ಲಿ ಸುಬ್ರಾಯ ನೆಲೆಸಿದ್ದನಂತೆ. ಆದರೆ 5 ದಿನಗಳ ಹಿಂದಷ್ಟೇ ಊರಿಗೆ ಮರಳಿದ್ದ ಆತ, ಊರಿಗೆ ಬಂದವನು ತನ್ನ ಪತ್ನಿ ಹಾಗೂ ಮಗನಿಗೆ ಕಿರುಕುಳ ನೀಡುತ್ತಿದ್ದನಂತೆ. ಅಲ್ಲದೇ ಅವರನ್ನು ಕೊಲೆಗೆ ಬೆದರಿಸುತ್ತಿದ್ದನಂತೆ. ಈ ಬಗ್ಗೆ ಪತ್ನಿ ಮತ್ತು ಮಗ ಇಬ್ಬರು ಪೊಲೀಸರಿಗೆ ದೂರು ಕೂಡ ನೀಡಿದ್ದರಂತೆ.
ಆದರೆ ಈ ಬಗ್ಗೆ ಪೊಲೀಸರು ವಿಚಾರಣೆ ಮಾಡಿ ಕ್ರಮಕೈಗೊಳ್ಳಬೇಕು ಎಂದಿರುವಾಗಲೇ ಮತ್ತೆ ಸುಬ್ರಾಯ, ಮಗ ಹಾಗೂ ಪತ್ನಿಯೊಂದಿಗೆ ಜಗಳ ಮಾಡಿದ್ದಾನಂತೆ. ಇದರಿಂದ ತಪ್ಪಿಸಿಕೊಳ್ಳಲು ಮಗನೇ ತಂದೆಯನ್ನು ಕೊಲೆ ಮಾಡಿದ್ದಾನೆ ಎಂದು ಪ್ರಕರಣ ದಾಖಲಿಸಿಕೊಂಡ ಕಾರ್ಗಲ್ ಠಾಣೆ ಪೊಲೀಸರು ಮಾಹಿತಿ ನೀಡಿದ್ದಾರೆ. ಸದ್ಯ ಕೃತ್ಯ ಎಸಗಿದ ಆರೋಪಿ ಮಗನನ್ನು ಪೊಲೀಸರು ಬಂಧಿಸಿದ್ದಾರೆ. ಕೃತ್ಯ ನಡೆದ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಇನ್ನು, ಘಟನೆ ಕುರಿತಂತೆ ಏಷ್ಯಾನೆಟ್ ಸುವರ್ಣ ನ್ಯೂಸ್ನೊಂದಿಗೆ ಮಾತನಾಡಿದ ಸ್ಥಳೀಯರಾದ ಸತ್ಯನಾರಾಯಣ ಅವರು, ಸುಬ್ರಾಯ ಅಲಿಯಾಸ್ ಕತ್ತಿ ಸುಬ್ಬಾ ಕೊಲೆಯಾಗಿದೆ, ಅದರಲ್ಲೂ ಆತನ ಮಗನೇ ಕೊಲೆ ಮಾಡಿದ್ದಾನೆ ಎಂಬ ಆರೋಪ ಕೇಳಿ ಬಂದಾಗ ನಮಗೆ ಬಹಳ ಬೇಸರ ಆಯ್ತು. ಬೇಸರ ಎರಡು ಕಾರಣಕ್ಕೆ ಆಯ್ತು, ಒಂದು ವ್ಯವಸ್ಥೆಯ ಬಗ್ಗೆ ಬೇಸರ ಆಯ್ತು. ಎರಡನೇ ಅಂಶ ತಂದೆಯನ್ನೇ ಕೊಲೆ ಮಾಡಲು ಮಗ ಮುಂದಾಗಿದ್ದಾನೆ ಅಂದರೆ, ಅದರ ಹಿಂದಿನ ಮನೋವೈಜ್ಞಾನಿಕ ಕಾರಣವೇನು? ಹುಡುಗ ದುಡುಕಿ ಬಿಟ್ಟಿದ್ದಾನೆ ಅನಿಸಿದೆ. ಆದರೆ ಇಲ್ಲಿ ಒಂದು ಅಂಶ ಗಮನಿಸಬೇಕಾದರೆ, ಕೊಲೆಯಾದ ಸುಬ್ರಾಯ 17 ವರ್ಷಗಳ ಹಿಂದೆ ಇಬ್ಬರನ್ನು ಕೊಲೆ ಮಾಡಿ ಜೈಲಿಗೆ ಹೋಗಿ ಜೀವಾವಧಿ ಶಿಕ್ಷೆ ಅನುಭವಿಸಿದ್ದ. ಆದರೆ ಎರಡು ವರ್ಷಗಳ ಹಿಂದೆ ಆತ ಬಿಡುಗಡೆಯಾಗಿ ಬಂದಿದ್ದ, ಆಗ ಮಗ-ಪತ್ನಿಯ ಕೊಲೆಗೆ ಯತ್ನಿಸಿದ್ದ. ಆದರೆ ಸಾಕ್ಷಿ ಆಧಾರ ನೀಡಲು ವಿಫಲವಾದ ಹಿನ್ನೆಲೆಯಲ್ಲಿ ಆತ ಮತ್ತೆ ಜೈಲಿನಿಂದ ವಾಪಸ್ ಬಂದಿದ್ದ. ಆಗ ಮತ್ತೆ ಅಮ್ಮ-ಮಗನ ಕೊಲೆಗೆ ಬೆದರಿಕೆ ಹಾಕಿದ್ದ ವಿಡಿಯೋಗಳು ಸಾಕಷ್ಟು ವೈರಲ್ ಆಗಿತ್ತು, ಆದರೆ ಈಗ ಕೊಲೆ ಮಾಡಿರುವ ಹುಡುಗ ಎಲ್ಲಿ ಅಪ್ಪನ ಕೈಯಲ್ಲಿ ಕೊಲೆ ಆಗ್ತಿನೋ ಅಥವಾ ಅಮ್ಮನ ಕೊಲೆ ಆಗುತ್ತೆ ಅನ್ನೋ ಆತ್ಮರಕ್ಷಣೆಗೆ ಈ ಕೃತ್ಯ ಮಾಡಿಬಹದು. ಪೊಲೀಸರು ಈ ಬಗ್ಗೆ ಸಕರಾತ್ಮಕವಾಗಿ ಸ್ಪಂದನೆ ನೀಡಬಹುದಿತ್ತು. ಆದರೆ ಕೊಲೆಯಾದ ವ್ಯಕ್ತಿಗೂ ಮನೋಚಿಕಿತ್ಸೆ ಕೊಡಿಸುವುದು ಅಥವಾ ಆತನನ್ನು ಜಿಲ್ಲೆಯಿಂದ ಗಡಿಪಾರು ಮಾಡುವ ಕ್ರಮವನ್ನು ಮಾಡಬಹುದಿತ್ತು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.