'ಜೈಲಿಗೆ ಹಾಕಿದ್ರು 9 ದಿನ ಗಣೇಶ ಪ್ರತಿಷ್ಠಾಪನೆ'

By Kannadaprabha NewsFirst Published Sep 9, 2021, 2:18 PM IST
Highlights

*  ಹಿಂದೂ ಮಹಾಗಣಪತಿ ಮಹಾ ಮಂಡಳಿದಿಂದ ನಿರ್ಣಯ
*  ಕೊರೋನಾ ನಿಯಮ ಪಾಲನೆಯೊಂದಿಗೆ ಹಬ್ಬ ಆಚರಣೆ
*  ಪ್ರತಿಷ್ಠಾಪನೆ ಪೂರ್ವಾನುಮತಿಗೆ ಹಣ ಕೊಡಬೇಡಿ
 

ತಾಳಿಕೋಟೆ(ಸೆ.09): ಹಿಂದೂಗಳ ಹಬ್ಬ ಹರಿದಿನಗಳು ಬಂದಾಗ ಷರತ್ತುಗಳನ್ನು ವಿಧಿಸುವ ಮೂಲಕ ಭಕ್ತರ ಭಾವನೆಗಳಿಗೆ ಬೆಂಕಿ ಇಡುವ ಕಾರ್ಯ ಸರ್ಕಾರ ಮಾಡುತ್ತಿದೆ. ಇಂತಹ ಅಸಂಬದ್ಧ ಷರತ್ತುಗಳನ್ನು ಹಿಂಪಡೆಯಬೇಕು. ಹಿಂದೂ ಮಹಾ ಗಣಪತಿ ಮಹಾ ಮಂಡಳಿಯಿಂದ ಕೂಡಿಸಲಾಗುವ ಗಣಪತಿ 9 ದಿನಗಳ ಕಾಲ ಪ್ರತಿಷ್ಠಾಪನೆ ಮಾಡುತ್ತೇವೆ. ಜೈಲಿಗೆ ಒಯ್ದರೂ, ಗುಂಡು ಹಾಕಿದರೂ ಬಿಡುವುದಿಲ್ಲ ಎಂದು ಹಿಂದೂ ಮಹಾಗಣಪತಿ ಮಹಾ ಮಂಡಳಿಯ ಗೌರವ ಉಪಾಧ್ಯಕ್ಷ ಕೆಸರಟ್ಟಿಯ ಶಂಕರಲಿಂಗ ಗುರುಪೀಠದ ಸೋಮಲಿಂಗ ಶ್ರೀ ಆಕ್ರೋಶ ಭರಿತವಾಗಿ ಹೇಳಿದರು.

ಬುಧವಾರ ತಿಲಕ ರಸ್ತೆಯ ಹಿಂದೂ ಮಹಾ ಮಹಾಮಂಡಳಿಯ ಕಾರ್ಯಾಲಯದಲ್ಲಿ ಕರೆಯಲಾದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜಕಾರಣಿಗಳ ಕಾರ್ಯಕ್ರಮವಿದ್ದಾಗ ಷರತ್ತುಗಳಿಲ್ಲ. ಮೆರವಣಿಗೆ ಮಾಡಬಹುದು. ಆದರೆ, ಹಿಂದೂಗಳ ಹಬ್ಬ ಹರಿದಿನಗಳ ಬಂದಾಗ ಷರತ್ತುಗಳನ್ನು ವಿಧಿಸುವ ಮೂಲಕ ಭಕ್ತರ ಭಾವನೆಗಳಿಗೆ ಧಕ್ಕೆ ತರುವಂತಹ ಕೆಲಸ ಸರ್ಕಾರ ಮಾಡುತ್ತಿದೆ. ಭಾರತೀಯ ಸಂಸ್ಕೃತಿಯಲ್ಲಿ ಸಂಸ್ಕಾರವಿದೆ. ಸಿದ್ಧಾಂತವಿದೆ. ಆ ಭಾವನೆಗಳಿಗೆ ಬೆಂಕಿ ಇಡುವ ಕಾರ್ಯ ಸರ್ಕಾರ ಮಾಡುತ್ತಿದೆ. 5 ದಿನ ಗಣಪತಿ ಕೂಡ್ರಿಸಬೇಕು. ಗಣಪತಿ ಇಷ್ಟೇ ಇರಬೇಕು ಎಂಬುದು ಸರಿಯಾದ ಕ್ರಮವಲ್ಲ. ಸರ್ಕಾರದ ನಿಯಮಗಳನ್ನು ಪಾಲನೆ ಮಾಡುತ್ತೇವೆ. ಗಣಪತಿ 9 ದಿನಗಳ ಕಾಲ ಪ್ರತಿಷ್ಠಾಪಿಸಲಿದ್ದೇವೆ. ಪೂಜೆ ಪುನಸ್ಕಾರ ಮಾಡುತ್ತೇವೆ ಎಂದರು.

ನಿಯಮ ಪಾಲಿಸುತ್ತೇವೆ:

ಡಿಜೆ ಹಚ್ಚುವುದಿಲ್ಲ. ಕೋವಿಡ್‌ ನಿಯಮದಡಿ ಪಾಲಿಸಿ, ಶಾಂತತೆ ಕಾಪಾಡಿಕೊಳ್ಳುತ್ತೇವೆ. ಆದರೆ, ಇಷ್ಟೇ ಗಣಪತಿ, ನಾಲ್ಕೈದು ಬಡಾವಣೆಗಳು ಕೂಡಿ ಒಂದೇ ಕಡೆ ಗಣಪತಿ ಕೂಡಿಸಿರಿ ಎಂಬುದು ತಪ್ಪು. ಗಣಪತಿಯನ್ನು ಮನೆ ಮನೆಯಲ್ಲಿ ಪೂಜೆ ಮಾಡುತ್ತಾರೆ. ಅವರವರ ಭಾವನೆ ಭಕ್ತಿಗೆ ಮಾರಕವಾಗುವಂತಹ ಸರ್ಕಾರದ ಷರತ್ತುಗಳಾಗಿವೆ. ಮಹಾ ಗಣಪತಿ ಪ್ರತಿಷ್ಠಾಪನೆಯ ಮುಂದೆ ಪೂಜೆಗಳು ನಡೆಯುತ್ತವೆ ಆದರೆ ಮನರಂಜನೆ ಇನ್ನೂಳಿದ ಕಾರ್ಯಕ್ರಮಗಳನ್ನು ರದ್ದು ಮಾಡುತ್ತೇವೆ. ಆದರೆ ದಿನಗಳ ಷರತ್ತು ಸರಿಯಾದುದ್ದಲ್ಲ. ಮಹಾನಗರ ಪಾಲಿಕೆಯ ರಿಜಲ್ಟ್ಬಂದಾಗ ಸಾವಿರಾರು ಜನರು ಒಗ್ಗೂಡಿ ದೊಡ್ಡ ದೊಡ್ಡ ಮೆರವಣಿಗಳು ನಡೆದಿರುವುದು ಕಣ್ಮುಂದೆ ಇವೆ. ಶ್ರೀಮಂತರ ಮಧುವೆಗೆ ಷರತ್ತುಗಳಿಲ್ಲ. ಬಡವರ ಮಧುವೆಗಳಿಗೆ ಷರತ್ತುಗಳಿವೆ ಎಂದು ಹೇಳಿದರು.

ಸರ್ಕಾರಕ್ಕೆ ಸೆಡ್ಡು ಹೊಡೆದ ಗಣೇಶ ಉತ್ಸವ ಸಮಿತಿ

ಹಿಂದೂ ಮಹಾಗಣಪತಿ ಮಹಾ ಮಂಡಳಿಯ ಗೌರವ ಕಾರ್ಯದರ್ಶಿಗಳಾದ ವೇ.ಸಂತೋಷಬಟ್ಜೋಶಿ, ಕಾಶಿನಾಥ ಅರಳಿಚಂಡಿ ಮಾತನಾಡಿದರು.ಈ ಸಮಯದಲ್ಲಿ ಮಂಡಳಿಯ ಪ್ರಕಾಶ ಪಾಟೀಲ, ಆನಂದ ಹಜೇರಿ, ಗುರುರಾಜ ಕಲಾಲ, ವಿಜಯ ಕಲಾಲ, ಪ್ರತೀಕ ಮಹೇಂದ್ರಕರ, ವಿಠ್ಠಲ ಹಜೇರಿ, ಅಶ್ವಿನ ಬೇದರಕರ, ಬಾಬು ಅಗಸರ, ಗಜದಂಡಯ್ಯ ಸ್ವಾಮಿ ಹಿರೇಮಠ, ಕಿರಣ ಬಡಿಗೇರ, ಕಿಶೋರ, ಮೊದಲಾದವರು ಉಪಸ್ಥಿತರಿದ್ದರು.

ಹಿಂದೂ ಪದ್ಧತಿಯಂತೆ ಉತ್ಸವ

ಮಹಾ ಗಣಪತಿ ಮಹಾ ಮಂಡಳಿಯ ವತಿಯಿಂದ ಕೂಡಿಸಲಾಗುವ ಗಣಪತಿ 9 ದಿನಗಳವರೆಗೆ ಕೂಡಿಸುತ್ತೇವೆ. ಇದರಲ್ಲಿ ಬದಲಾವಣೆಗಳಿಲ್ಲ. ಯಾರ ಬಂದ್ರು ನಿಲ್ಲಲ್ಲ. ಇದು ಹಿಂದೂ ಮಹಾ ಗಣಪತಿ ಮಹಾಮಂಡಳಿಯ ನಿರ್ಣಯ. ನಮ್ಮನ್ನು ಜೈಲಿಗೆ ಒಯ್ದರು ಬಿಡಲ್ಲ. ಎದೆಗೆ ಗುಂಡು ಹಾಕಿದರೂ ಬಿಡಲ್ಲ. ನಾವು ಜೇಲಿನಲ್ಲಿ ಕುಳಿತೆ ಗಣಪತಿಯ ಪೂಜೆ ಮಾಡುತ್ತೇವೆ. ಹಿಂದೂ ಧರ್ಮದ ಪದ್ಧತಿಯಂತೆ ಗಣೇಶನ ಉತ್ಸವ ನಾವು ಮಾಡಿಯೇ ತಿರುತ್ತೇವೆ ಎಂದರು.
ಪ್ರತಿಷ್ಠಾಪನೆ ಪೂರ್ವಾನುಮತಿಗೆ ಹಣ ಕೊಡಬೇಡಿ

ನಗರದಲ್ಲಿ ಮಂಡಳಿಯವರು ಗಣೇಶ ಪ್ರತಿಷ್ಠಾಪನೆಗೆ ಯಾವುದೇ ಪೂರ್ವಾನುಮತಿ ಪಡೆಯಲು ಹಣ ತುಂಬಬೇಕಾದ ಅವಶ್ಯಕತೆ ಇರುವದಿಲ್ಲ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ತಿಳಿಸಿದ್ದಾರೆ.

ನಗರದಲ್ಲಿ ಕೆಲವರು ಇದಕ್ಕಾಗಿ ಇಲಾಖೆ ಅನುಮತಿಯನ್ನು ಕೊಡಿಸುತ್ತೇವೆ ಎಂದು ಸಾರ್ವಜನಿಕವಾಗಿ ತಿಳಿಸಿದ್ದು, ಯಾವುದೇ ಸ್ಟೇಶನ್ಗೆ ಹೋಗುವ ಅವಶ್ಯಕತೆ ಇಲ್ಲ. ಇದಕ್ಕಾಗಿ ಈಗಾಗಲೇ ಅಧಿಕಾರಿಗಳಿಗೆ ತಿಳಿಸಲಾಗಿದೆ. ಕಾರಣ ನೇರವಾಗಿ ತಮ್ಮ ಕಾರ್ಯಾಲಯವನ್ನು ಸಂಪರ್ಕಿಸಬಹುದಾಗಿದೆ. ಕೆಲವರು ಅನುಮತಿ ಕೊಡಿಸುತ್ತೇವೆಂದು ಅನವಶ್ಯಕವಾಗಿ ಹಣವನ್ನು ವಸೂಲಿ ಮಾಡಿ ಅಕ್ರಮವಾಗಿ ಹಣವನ್ನು ಸಂಗ್ರಹಿಸುತ್ತಾರೆ. ಗಣೇಶ ಉತ್ಸವ ಮಂಡಳಿಯವರು ಯಾವುದೇ ಪೂರ್ವಾನುಮತಿಗೆ ಹಣ ನೀಡುವ ಅವಶ್ಯಕತೆ ಇರುವುದಿಲ್ಲ. ಯಾವ ಇಲಾಖೆಗೂ ಹಣ ಕೊಟ್ಟು ಅನುಮತಿ ಪಡೆಯಲು ಹೋಗಬಾರದು ಎಂದು ನಗರ ಶಾಸಕ ಯತ್ನಾಳ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
 

click me!