ಕೊರೋನಾ ಕಾಟ: ಈ ಬಾರಿ ಪೂಜೆಗಷ್ಟೇ ಧಾರವಾಡ ದಸರಾ ಸೀಮಿತ..!

By Kannadaprabha NewsFirst Published Oct 17, 2020, 11:32 AM IST
Highlights

ಯುಗಾದಿಯಿಂದ ಹಿಡಿದು ದಸರಾ ವರೆಗೂ ಇದ್ದೇ ಇದೆ ಸೋಂಕಿನ ಭಯ| ನವರಾತ್ರಿಗೂ ತಟ್ಟಿದ ಸೋಂಕಿನ ಎಫೆಕ್ಟ್, ಮೆರವಣಿಗೆ, ಸಾಂಸ್ಕೃತಿಕ ಕಾರ್ಯಕ್ರಮ ರದ್ದು| 

ಬಸವರಾಜ ಹಿರೇಮಠ

ಧಾರವಾಡ(ಅ.17): ಕೊರೋನಾ ವೈರಸ್‌ನ ಪರಿಣಾಮ ಬರೀ ಯುಗಾದಿ, ಹೋಳಿ ಹುಣ್ಣಿಮೆ, ಮೊಹರಂ, ಶ್ರಾವಣ, ರಂಜಾನ್‌, ಗಣೇಶ ಹಬ್ಬ, ನಾಗರ ಪಂಚಮಿ ಅಲ್ಲದೇ, ಇದೀಗ ದಸರಾ ಹಬ್ಬಕ್ಕೂ ತಟ್ಟಿದೆ. ಪ್ರತಿವರ್ಷ ನವರಾತ್ರಿ ನಿಮಿತ್ತ ಧಾರವಾಡದಲ್ಲಿ ಅದ್ಧೂರಿಯಾಗಿ ಜರುಗುತ್ತಿದ್ದ ದಸರಾ ಹಬ್ಬಕ್ಕೆ ಕೊರೋನಾ ಕರಿಛಾಯೆ ಬಿದ್ದಿದೆ. ಕೋವಿಡ್‌-19 ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆ ಸೋಂಕಿನ ನಿಯಂತ್ರಣಕ್ಕಾಗಿ ದಸರಾ ಸಂಭ್ರಮ ಸಹ ನಾವೀಗ ಕೈ ಬಿಡಬೇಕಿದ್ದು, ಧಾರವಾಡ ಜಂಬೂ ಸವಾರಿ ಉತ್ಸವ ಸಮಿತಿ ಈ ಬಾರಿ ದೇವಿ ಪೂಜೆಗೆ ಮಾತ್ರ ದಸರಾ ಹಬ್ಬವನ್ನು ಸೀಮಿತಗೊಳಿಸಿದೆ.

ಮೊದಲ ಬಾರಿ ರದ್ದು:

ಮೈಸೂರು ದಸರಾ ಉತ್ಸವದ ಪ್ರೇರಣೆಯಿಂದ ಕಳೆದ 17 ವರ್ಷಗಳಿಂದ ಧಾರವಾಡದಲ್ಲಿ ಅತಿ ಸಂಭ್ರಮದಿಂದ ದಸರಾ ಉತ್ಸವ ನಡೆಯುತ್ತಿತ್ತು. ಆದರೆ, ಇದೇ ಮೊದಲ ಬಾರಿಗೆ ಉತ್ಸವದ ಪ್ರಮುಖ ಆಕರ್ಷಣೆ ಜಂಬೂ ಸವಾರಿ ಮೆರವಣಿಗೆಯೇ ರದ್ದಾಗಿದೆ. ಇದರೊಂದಿಗೆ ಗಾಂಧಿನಗರ ಈಶ್ವರ ದೇವಸ್ಥಾನ, ಕರ್ನಾಟಕ ವಿದ್ಯಾವರ್ಧಕ ಸಂಘ ಹಾಗೂ ತಾಲೂಕಿನ ನಿಗದಿಯಲ್ಲಿ ನಡೆಯುತ್ತಿದ್ದ ಎಲ್ಲ ಸಾಂಸ್ಕೃತಿಕ ಕಾರ್ಯಕ್ರಮ, ವಿವಿಧ ಸ್ಪರ್ಧೆಗಳು, ಸಾಹಸ ಮತ್ತು ಪ್ರದರ್ಶನಗಳನ್ನು ರದ್ದುಗೊಳಿಸಲಾಗಿದೆ.

ಧಾರವಾಡದಲ್ಲಿ ಅದ್ಧೂರಿ ದಸರಾ ಆಚರಣೆ

17ರಂದು ದೇವಿ ಮೂರ್ತಿ ಪ್ರತಿಷ್ಠಾಪನೆ:

ಕೋವಿಡ್‌ ನಿಯಮ ಪಾಲಿಸುವ ಹಿನ್ನೆಲೆ ಸಮಿತಿ ಸದಸ್ಯರು ಹಾಗೂ ಬೆರಳೆಣಿಕೆ ಭಕ್ತರು ಸೇರಿಕೊಂಡು ಅ. 17ರಂದು ಗಾಂಧಿನಗರ ಈಶ್ವರ ದೇವಸ್ಥಾನದ ಬಳಿ ದೇವಿ ಮೂರ್ತಿ ಪ್ರತಿಷ್ಠಾಪಿಸಿ ಒಂಬತ್ತು ದಿನಗಳ ಕಾಲ ಅ. 25ರ ವರೆಗೆ ಪೂಜೆ ಮಾಡಲಾಗುವುದು. ಪ್ರತಿವರ್ಷ ಅಂದಾಜು . 35 ಲಕ್ಷ ವೆಚ್ಚದಲ್ಲಿ ದಸರಾ ಆಚರಿಸಲಾಗುತ್ತಿತ್ತು. ಜಂಬೂ ಸವಾರಿ ಮೂಲಕ ಇಡೀ ಧಾರವಾಡದಲ್ಲಿ ದೇವಿ ಮೆರವಣಿಗೆ ಮಾಡಲಾಗುತ್ತಿತ್ತು. ಈ ಬಾರಿ ಬರೀ ಪ್ರತಿಷ್ಠಾಪನೆ ಹಾಗೂ ಪೂಜೆ ಮಾತ್ರ ನೆರವೇರಲಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳು, ಮಹಿ​ಳೆ​ಯ​ರಿ​ಗಾಗಿ ನೃತ್ಯ, ಗಾನ ಸ್ಪರ್ಧೆ, ಜಾನ​ಪದ ವೇಷಭೂಷಣ, ಸಮೂಹ ಗಾಯನ, ಚಿತ್ರ​ಕ​ಲೆ, ಅಡುಗೆ, ವಿವಿಧ ಆಟ​ಗಳ ಸ್ಪರ್ಧೆಗಳು, ಕರಕುಶಲ ವಸ್ತು ಪ್ರದರ್ಶನಗಳನ್ನು ರದ್ದುಗೊಳಿಸಲಾಗಿದೆ. ಈ ದಸರಾ ವೀಕ್ಷಣೆಗೆ ಬರೀ ಧಾರವಾಡ ಅಲ್ಲದೇ ಹೊರ ಜಿಲ್ಲೆಗಳ ಜನರು ಬರುತ್ತಿದ್ದರು. ಆದರೆ, ಈ ಬಾರಿ ಸರಳವಾಗಿ ಆಚರಿಸಲಾಗುತ್ತಿದೆ ಎಂದು ಉತ್ಸವ ಸಮಿತಿ ಅಧ್ಯಕ್ಷ ಗುರುರಾಜ ಹುಣಸೀಮರದ ‘ಕನ್ನಡಪ್ರಭ’ಕ್ಕೆ ಮಾಹಿತಿ ಹಂಚಿಕೊಂಡರು.

ಜಾತ್ರೆ ಸಹ ರದ್ದು:

ನವ​ರಾತ್ರಿ ನಿಮಿತ್ತ ಧಾರ​ವಾ​ಡ​ದಲ್ಲಿ ಲಕ್ಷ್ಮೀನಾರಾಯಣ ಮತ್ತು ನಗರೇಶ್ವರ ದೇವಸ್ಥಾನಗಳಲ್ಲಿ ನವರಾತ್ರಿ ಉತ್ಸವ ಮತ್ತು ಜಾತ್ರೆ ನಡೆ​ಯುತ್ತದೆ. ನಗರದ ರವಿವಾರ ಪೇಟೆಯಲ್ಲಿ ನಡೆಯುವ ಲಕ್ಷ್ಮೀ ನಾರಾಯಣ ಜಾತ್ರೆಯು ಬಲು ಪ್ರಸಿದ್ಧ. ನವರಾತ್ರಿಯ ಸಂದರ್ಭದಲ್ಲಿ ಸರ್ವಾಭರಣ ಭೂಷಿತರಾದ ಲಕ್ಷ್ಮೀನಾರಾಯಣರ ಮೂರ್ತಿಗಳು ದಿನಕ್ಕೊಂದು ಬೆಡಗನ್ನು ಬೀರುತ್ತವೆ. ಜಾತ್ರೆಯ ಸಂದರ್ಭದಲ್ಲಿ ಕಿಕ್ಕಿರಿದು ಜನ ಸೇರುತ್ತಾರೆ. ಆದರೆ, ಈ ಬಾರಿ ಕೋವಿಡ್‌ ಹಿನ್ನೆಲೆ ಈ ಜಾತ್ರೆಗಳು ಸಹ ಸಾಂಕೇತಿಕವಾಗಿ ನಡೆಯಲಿದ್ದು, ಈ ದೇವಸ್ಥಾನಗಳಲ್ಲೂ ದೇವಿಗೆ ಪೂಜೆ ಮಾತ್ರ ನಡೆಯಲಿದೆ.

ಧಾರವಾಡ ಜಂಬೂ ಸವಾರಿ ಉತ್ಸವ ಸಮಿತಿಯಿಂದ ನಡೆಯುವ ದಸರಾ ಉತ್ಸವದಲ್ಲಿ ಕಳೆದ ಒಂಬತ್ತು ವರ್ಷಗಳಿಂದ ಒಂಬತ್ತು ದಿನಗಳ ಕಾಲ ಪ್ರತಿಷ್ಠಾಪಿಸುವ ದೇವಿ ಮೂರ್ತಿ, ಪೂಜಾ ಸಾಮಗ್ರಿಗಳು ಹಾಗೂ ಪೆಂಡಾಲ್‌ ನಿರ್ವಹಣೆ, ಖರ್ಚು- ವೆಚ್ಚ ತಮ್ಮದು. ಪತ್ನಿ ಮಂಜುಳಾ ಅವರ ಹೆಸರಿನಲ್ಲಿ ಪ್ರತಿವರ್ಷ ಪೂಜಾ ಕಾರ್ಯ ನೆರವೇರಿಸುತ್ತಿದ್ದೇವೆ. ಕೋವಿಡ್‌ ಹಿನ್ನೆಲೆ ಮೆರವಣಿಗೆ ರದ್ದುಗೊಳಿಸಿದ್ದು, ಪೂಜಾ ಕಾರ್ಯ ಮಾತ್ರ ನಡೆಯಲಿದೆ. ಕೆಲಗೇರಿಯ ಮಂಜುನಾಥ ಹಿರೇಮಠ ದೇವಿ ಮೂರ್ತಿ ಸಿದ್ಧಪಡಿಸಿದ್ದು ಅ. 17ರಂದು ಪ್ರತಿಷ್ಠಾಪಿಸಲಾಗುತ್ತಿದೆ ಎಂದು ದಸರಾ ಉತ್ಸವ ಸಮಿತಿ ನಿರ್ದೇಶಕ ಗಣಪತಿರಾವ್‌ ಮುಂಜಿ ತಿಳಿಸಿದ್ದಾರೆ. 
 

click me!