ಹುನಗುಂದ: ಖ್ಯಾತ ಬಾಲಿವುಡ್‌ ಗಾಯಕಿ ಮಧುಶ್ರೀಗೆ ಸಿದ್ದಶ್ರೀ ಪ್ರಶಸ್ತಿ

By Suvarna NewsFirst Published Dec 21, 2019, 10:43 AM IST
Highlights

ಬಾಲಿವುಡ್‌ ಗಾಯಕಿ ಮಧುಶ್ರೀ ಭಟ್ಟಾಚಾರ್ಯಗೆ ಸಿದ್ದಶ್ರೀ ರಾಷ್ಟ್ರೀಯ ಪ್ರಶಸ್ತಿ| ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಸಿದ್ದನಕೊಳ್ಳದ ಸಿದ್ದಶ್ರೀ ಉತ್ಸವದ ನಿಮಿತ್ತ ಕೊಡಮಾಡಲ್ಪಡುವ ಸಿದ್ದಶ್ರೀ ರಾಷ್ಟ್ರೀಯ ಪ್ರಶಸ್ತಿ| ಸಿದ್ದಶ್ರೀ ಪ್ರಶಸ್ತಿಯನ್ನು ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಹಾಗೂ ಪೂಜ್ಯಶ್ರೀ ಪಂಡಿತ ಪುಟ್ಟರಾಜ ಗವಾಯಿಗಳಿಗೆ ಮರಣೋತ್ತರವಾಗಿ ನೀಡಿದೆ|

ಅಮೀನಗಡ(ಡಿ.21): ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಸುಕ್ಷೇತ್ರ ಸಿದ್ದನಕೊಳ್ಳದ ಸಿದ್ದಶ್ರೀ ಉತ್ಸವದ ನಿಮಿತ್ತ 2020ನೇ ಸಾಲಿನ ಸಿದ್ದಶ್ರೀ ರಾಷ್ಟ್ರೀಯ ಪ್ರಶಸ್ತಿಗೆ ಖ್ಯಾತ ಬಾಲಿವುಡ್‌ ಗಾಯಕಿ ಮಧುಶ್ರೀ ಭಟ್ಟಾಚಾರ್ಯ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಸಿದ್ದನಕೊಳ್ಳದ ಧರ್ಮಾಧಿಕಾರಿ ಡಾ.ಶಿವಕುಮಾರ ಸ್ವಾಮೀಜಿ ತಿಳಿಸಿದ್ದಾರೆ.

ಶ್ರೀಮಠದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಿದ್ದನಕೊಳ್ಳದ ನಿರಂತರ ದಾಸೋಹಮಠ ಹಾಗೂ ಕಲಾ ಪೋಷಕ ಮಠವೂ ಆಗಿರುವುದರಿಂದ, ಲಿಂಗೈಕ್ಯ ಮಹಾತಪಸ್ವಿ ಸಿದ್ದಪ್ಪಜ್ಜ ಜಾತ್ರಾ ಮಹೋತ್ಸವದ ಅಂಗವಾಗಿ ಸಿದ್ದನಕೊಳ್ಳದ ಧರ್ಮಾಧಿಕಾರಿ ಡಾ.ಶಿವಕುಮಾರ ಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ ನಡೆದ ಉತ್ಸವದ ಪೂರ್ವಭಾವಿ ಸಭೆಯಲ್ಲಿ, ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

2020 ಜನವರಿ 14 ರಿಂದ ಮೂರು ದಿನಗಳ ಕಾಲ ನಡೆಯುವ ಸಿದ್ದಶ್ರೀ ಉತ್ಸವದ ಸಮಾರಂಭದಲ್ಲಿ 6ನೇ ಸಿದ್ದಶ್ರೀ ರಾಷ್ಟ್ರೀಯ ಪ್ರಶಸ್ತಿ ನೀಡಲಾಗುವುದು. ಅಲ್ಲದೇ ಜ.15 ರಂದು ಖ್ಯಾತ ಬಾಲಿವುಡ್‌ ಗಾಯಕಿ ಮಧುಶ್ರೀ ಭಟ್ಟಾಚಾರ್ಯ ಅವರು ಉತ್ಸವದಲ್ಲಿ ಕಾರ್ಯಕ್ರಮ ನೀಡಲಿದ್ದಾರೆ. ಪ್ರಶಸ್ತಿಯು 25 ಸಾವಿರ ನಗದು, ನೆನಪಿನ ಕಾಣಿಕೆ ಹೊಂದಿದೆ. ಈ ಹಿಂದೆ ಸಿದ್ದಶ್ರೀ ಪ್ರಶಸ್ತಿಯನ್ನು ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ, ಅಂಧರಿಗೆ ಕಣ್ಣಾಗಿ ಲಕ್ಷಾಂತರ ಮಕ್ಕಳಿಗೆ ಆಶ್ರಯ ನೀಡಿದ ಪೂಜ್ಯಶ್ರೀ ಪಂಡಿತ ಪುಟ್ಟರಾಜ ಗವಾಯಿಗಳಿಗೆ ಮರಣೋತ್ತರವಾಗಿ ನೀಡಿದೆ. ಮಲೆನಾಡಿನ ಸೊಬಗಿನಲ್ಲಿ ಶಿಕ್ಷಣ ಕ್ರಾಂತಿಯನ್ನು ಮಾಡಿ ಸಾವಿರಾರು ಪ್ರತಿಭೆಗಳನ್ನು ಉನ್ನತ ಮಟ್ಟದ ಸಾಧನೆಯನ್ನು ಮಾಡಲು ಪ್ರೇರೆಪಿಸಿದ ಮೂಡಬಿದರೆಯ ಮೋಹನ್‌ ಆಳ್ವಾ, ಬಾಗಲಕೋಟೆಯ ಭಾಗದ ಗುರು ಗೋವಿಂದ ಭಟ್ಟರ ಮರಿ ಮೊಮ್ಮಗ ಮಹೇಶ ಜೋಶಿ ಅವರಿಗೆ ನೀಡಲಾಗಿದೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಬದಾಮಿ ಪುರಸಭೆ ಸದಸ್ಯ ನಾಗರಾಜ ಕಾಚೆಟ್ಟಿ, ಹುನಗುಂದ ತಾಲೂಕು ಕ.ಸಾ.ಪ. ಅಧ್ಯಕ್ಷ ಮಹಾಂತೇಶ ಹಳ್ಳೂರ, ಬಿಜೆಪಿ ಯುವ ಧುರೀಣ ನಬಿ ನದಾಫ್‌, ಕೆಲೂರ ಗ್ರಾ.ಪಂ.ಮಾಝಿ ಅಧ್ಯಕ್ಷ ಮೈಲಾರೆಪ್ಪ ಕೊಪ್ಪದ ಮುಂತಾದವರಿದ್ದರು.
 

click me!