Kodagu: ಕೆರೆ, ಕಟ್ಟೆ, ಬಾವಿ ಕಟ್ಟುವುದರಲ್ಲಿ ಕಾಯಕ ಕಂಡ ಸಿದ್ದರಾಮೇಶ್ವರರು: ಜಯಂತಿ ಆಚರಣೆ

By Sathish Kumar KHFirst Published Jan 19, 2023, 11:24 PM IST
Highlights

12ನೇ ಶತಮಾನದಲ್ಲಿ ಕೆರೆಕಟ್ಟೆ, ಬಾವಿ ಅಭಿವೃದ್ಧಿ ಕೆಲಸಗಳಲ್ಲಿ ಹೆಚ್ಚು ಕಾಯಕ ಕಂಡ ವೇಮನ
ಶಿವಯೋಗಿ ಸಿದ್ದರಾಮೇಶ್ವರ ಹಾಗೂ ಮಹಾಯೋಗಿ ವೇಮನ ಜಯಂತಿಯಲ್ಲಿ ಗಣ್ಯರ ಅಭಿಮತ

ವರದಿ: ರವಿ ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್ 

ಕೊಡಗು (ಜ.19): ಶಿವಯೋಗಿ ಸಿದ್ದರಾಮೇಶ್ವರರು 12 ನೇ ಶತಮಾನದಲ್ಲಿ ಶಿವಶರಣರಾಗಿದ್ದರು. ಕನ್ನಡ ಕಾವ್ಯ ಮತ್ತು ಸಮಕಾಲೀನ ವಚನ ಹಾಗೂ ಸಾಹಿತ್ಯಕಾರರಾಗಿದ್ದಾರೆ ಎಂದು ನಗರಸಭೆ ಅಧ್ಯಕ್ಷರಾದ ಅನಿತಾ ಪೂವಯ್ಯ ಅವರು ಹೇಳಿದರು. 

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಗರದ ಭಾರತೀಯ ವಿದ್ಯಾಭವನದಲ್ಲಿ ಗುರುವಾರ ನಡೆದ ಶ್ರೀ ಶಿವಯೋಗಿ ಸಿದ್ದರಾಮೇಶ್ವರ ಹಾಗೂ ಮಹಾಯೋಗಿ ವೇಮನ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಶಿವಯೋಗಿ ಸಿದ್ದರಾಮೇಶ್ವರರು ಕೆರೆಕಟ್ಟೆ, ಬಾವಿ ಇತರೆ ಅಭಿವೃದ್ಧಿ ಕೆಲಸಗಳಲ್ಲಿ ಹೆಚ್ಚು ಕಾಯಕ ಕಂಡಿದ್ದರು. ಇವರು 12 ನೇ ಶತಮಾನದಲ್ಲಿ ವಚನಕಾರರಲ್ಲಿ ಪ್ರಮುಖರಾಗಿದ್ದಾರೆ. ಮಹಾಯೋಗಿ ವೇಮನ ಅವರು ಕವಿ ಹಾಗೂ ಸಾಹಿತಿಯಾಗಿ ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಎಲ್ಲರೂ ಸಮಾನವಾಗಿ ಬದುಕು ಕಟ್ಟಿಕೊಳ್ಳುವಂತಾಗಲು ಶ್ರಮಿಸಿದ್ದಾರೆ ಎಂದರು.

BIG-3 Impact: ಕಷ್ಟದಲ್ಲಿದ್ದ ತಾಯಿ ಮಗನಿಗೆ ನೆರವಾದ ಕನ್ನಡದ ಜನತೆ: ದಾನಿಗಳಿಂದ ಭರಪೂರ ಧನಸಹಾಯ

ಸೊನ್ನಲ್ಲಿಗೆ ಸಿದ್ದರಾಮೇಶ್ವರ ಎಂಬ ಹೆಸರಿದೆ: ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ನಂಜುಂಡೇಗೌಡ  ಅವರು ಮಾತನಾಡಿ ಸಮಾಜದಲ್ಲಿ ಸಾಧನೆ ಮಾಡಿದ ಮಹನೀಯರ ಜಯಂತಿಗಳು ಕೇವಲ ಆಚರಣೆಗೆ ಸೀಮಿತಗೊಳಿಸದೇ, ಅವರ ತತ್ವ ಆದರ್ಶಗಳನ್ನು ಪ್ರತಿಯೊಬ್ಬರೂ ಪಾಲನೆ ಮಾಡುವ ನಿಟ್ಟಿನಲ್ಲಿ ನಾವು ಉತ್ತಮ ಸಮಾಜ ಕಟ್ಟಬೇಕಾಗಿದೆ. ಶಿವಯೋಗಿ ಸಿದ್ದರಾಮೇಶ್ವರು ಬಸವಣ್ಣ, ಅಲ್ಲಮಪ್ರಭುಗಳ ಕಾಲದ ಮಹಾನ್ ಪವಾಡ ಪುರುಷರು. 12 ನೇ ಶತಮಾನದಲ್ಲೇ ಕಾಯಕದ ಮೂಲಕ ಆಧ್ಯಾತ್ಮ ಕಂಡುಕೊಂಡವರು. ಇವರ ಆದರ್ಶಗಳನ್ನು ಇಂದಿನ ಯುವ ಪೀಳಿಗೆ ತಿಳಿದುಕೊಳ್ಳುವಂತಾಗಬೇಕು.

ಫ.ಗು ಹಳಕಟ್ಟಿ ಅವರು ಸಿದ್ದರಾಮೇಶ್ವರ ವಚನಗಳನ್ನು ಸೇರಿ, ಶರಣರ ವಚನಗಳನ್ನು ಸಂಗ್ರಹಿಸಿದ್ದಾರೆ. ಇವರನ್ನು ಸೊನ್ನಲ್ಲಿಗೆ ಸಿದ್ದರಾಮೇಶ್ವರರು ಎಂತಲೂ ಕೂಡ ಕರೆಯುತ್ತಾರೆ. 12 ನೇ ಶತಮಾನದಲ್ಲೇ ಸಾವಿರಾರು ಕೆರೆ, ಕಟ್ಟೆಗಳನ್ನು ನಿರ್ಮಿಸಿದ್ದಾರೆ. ಅವರ ವಚನ ಸಂಸ್ಕೃತಿಯನ್ನು ಉಳಿಸಿಕೊಳ್ಳುವುದು ಎಲ್ಲರ ಜವಾಬ್ದಾರಿಯಾಗಿದೆ. ಕನ್ನಡದಲ್ಲಿ ಸರ್ವಜ್ಞ ಕವಿ, ತಮಿಳಿನ ತಿರುವಳ್ಳವರ್ ಹಾಗೂ ತೆಲುಗಿನಲ್ಲಿ ವೇಮನ ಅವರು ಪ್ರಸಿದ್ದರಾಗಿದ್ದಾರೆ. ಇವರಿಂದ ಸಾಮಾನ್ಯ ಆಡುಭಾಷೆಯಲ್ಲಿ ತ್ರಿಪದಿಯ ಪದ್ಯಗಳನ್ನು ರಚಿಸಿ ಸಮಾಜದ ಬದಲಾವಣೆಗೆ ಮುಂದಾಗಿದ್ದಾರೆ ಎಂದರು.

BIG 3ನಿತ್ಯ ತಾಯಿ-ಮಗನ ನರಕಯಾತನೆ: ಸಾಲ ತೀರಿಸಲಾಗದೇ ಪರದಾಡುತ್ತಿದೆ ಕುಟುಂಬ

ತ್ರಿವಿಧಿಗಳಲ್ಲಿ ಯೋಗಿನಾಥ ಅಂಕಿತವಿದೆ:  ಸರಸ್ವತಿ ಡಿ.ಇಡಿ ಕಾಲೇಜಿನ ಪ್ರಾಂಶುಪಾಲರಾದ ಕುಮಾರ ಅವರು ಮಾತನಾಡಿ ಸಿದ್ಧರಾಮ ವಚನ, ಸ್ವರವಚನ, ಬಸವಸ್ತೋತ್ರದ ತ್ರಿವಿಧಿ, ಅಷ್ಟಾವರಣ ಸ್ತೋತ್ರದ ತ್ರಿವಿಧಿ, ಸಂಕೀರ್ಣ ತ್ರಿವಿಧಿ ಎಂದು ಮುಂತಾಗಿ ವೈವಿಧ್ಯಮಯ ಸಾಹಿತ್ಯ ಸೃಷ್ಟಿಮಾಡಿದ್ದಾರೆ. ವಚನ ಮತ್ತು ಸ್ವರವಚನಗಳಲ್ಲಿ 'ಕಪಿಲಸಿದ್ಧ ಮಲ್ಲಿಕಾರ್ಜುನ' ಎಂಬ ಅಂಕಿತವಿದ್ದರೆ, ತ್ರಿವಿಧಿಗಳಲ್ಲಿ 'ಯೋಗಿನಾಥ' ಎಂದು ಅಂಕಿತವಿದೆ. ಸದ್ಯ ಇವರ 1162 ವಚನಗಳು ದೊರೆತಿದ್ದು, ಅವುಗಳಲ್ಲಿ ವೈಯುಕ್ತಿಕ ಬದುಕಿನ ಸಂಗತಿಗಳು ಧರ್ಮತತ್ವ ಜಿಜ್ಞಾಸೆ, ಸಾಮಾಜಿಕ ಕಳಕಳಿ ಪ್ರಧಾನವೆನಿಸಿವೆ. 21 ನೇ ಶತಮಾನದಲ್ಲಿ ಮಹಾಯೋಗಿ ವೇಮನ ಅವರ ತತ್ವಗಳು ನಮಗೆ ಮಾರ್ಗದರ್ಶನವಾಗಿದೆ. ಇವುಗಳನ್ನು  ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಮನುಷ್ಯನ ದುರಾಸೆಯ ಆಲೋಚನೆಗಳನ್ನು ತೊಡೆದು ಹಾಕಲು ವೇಮನ ವಚನಗಳು ಪ್ರಮುಖ ಪಾತ್ರವಹಿಸಿದೆ ಎಂದು ಹೇಳಿದರು.

ಭೋವಿ ಸಮಾಜಕ್ಕೆ ಮನೆ, ನಿವೇಶನ ಕಲ್ಪಿಸಿ:  ಭೋವಿ ಸಮಾಜದ ಜಿಲ್ಲಾ ಅಧ್ಯಕ್ಷರಾದ ಡಿ.ಸುಜೀತ್ ಅವರು ಮಾತನಾಡಿ ಭೋವಿ ಸಮಾಜದಲ್ಲಿ ಹಲವು ಉಪಜಾತಿಗಳು ಇದ್ದು, ಅಲೆಮಾರಿಗಳ ರೀತಿ ಬದುಕುತ್ತಿದ್ದು, ಶಾಲಾ ದಾಖಲಾತಿ ಸರಿಪಡಿಸುವಂತಾಗಬೇಕು. ನಮ್ಮ ಸಮಾಜದಲ್ಲಿ ಇಂದಿಗೂ ಸಹ ನಿವೇಶನ, ಮನೆ ಇಲ್ಲದೆ ಬದುಕು ಸವೆಸುತ್ತಿದ್ದು, ನಿವೇಶನ ಹಾಗೂ ಮನೆ ನೀಡುವಂತಾಗಬೇಕು. ಭೂ ರಹಿತರಿಗೆ ಭೂಮಿ ಒದಗಿಸುವಂತಾಗಬೇಕು. ಸೋಮವಾರಪೇಟೆ, ಬಾಣವಾರ, ಕೊಡ್ಲಿಪೇಟೆ, ಸುಂಟಿಕೊಪ್ಪ ಮತ್ತಿತರ ಕಡೆಗಳಲ್ಲಿ ಸ್ಮಶಾನಕ್ಕೆ ಜಾಗ ಒದಗಿಸಬೇಕು. ಸಮಾಜದಲ್ಲಿ ಕೂಲಿ ಕೆಲಸ ಮಾಡಿ ಬದುಕುತ್ತಿದ್ದು, ಸ್ವಂತ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಅವಕಾಶ ಮಾಡಬೇಕು ಎಂದು ಅವರು ಮನವಿ ಮಾಡಿದರು. 

ಈ ವೇಳೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಚಿನ್ನಸ್ವಾಮಿ ಸ್ವಾಗತಿಸಿದರು. ಶಂಕರಯ್ಯ ನಾಡಗೀತೆ ಹಾಡಿದರು. ಮಣಜೂರು ಮಂಜುನಾಥ್ ನಿರೂಪಿಸಿ, ವಂದಿಸಿದರು.

click me!