'ಕಟೀಲ್‌ ವಿದೂಷಕ, ಬಾಯಿಗೆ ಬಂದಂತೆ ಮಾತನಾಡ್ತಾರೆ'

By Kannadaprabha NewsFirst Published Apr 13, 2021, 8:54 AM IST
Highlights

ಸೋನಿಯಾ ಗಾಂಧಿ ಅವರಿಗೆ ಅನುಭವ ಇರುವುದಕ್ಕೆ ಅವರು ಪ್ರಧಾನಮಂತ್ರಿ ಆಗಲಿಲ್ಲ. ಆದರೆ ಮನಮೋಹನ ಸಿಂಗ್‌ ಅವರನ್ನು ಪ್ರಧಾನಿಯನ್ನಾಗಿ ಮಾಡಿದರು. ಇಂತಹ ತ್ಯಾಗ ಮನೋಭಾವ ಬಿಜೆಪಿ ಅವರಿಗೆ ಇದೆಯಾ? ಎಂದು ಕಟೀಲ್‌ಗೆ ಪ್ರಶ್ನಿಸಿದ ಸಿದ್ದರಾಮಯ್ಯ

ಕಾರಟಗಿ(ಏ.13):  ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಒಬ್ಬ ವಿದೂಷಕ, ಜೋಕರ್‌. ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡುವ ಅಗತ್ಯವಿಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

ಮಸ್ಕಿ ಉಪಚುನಾವಣೆಯಲ್ಲಿ ಪಾಲ್ಗೊಳ್ಳಲು ತೆರಳುವ ಮುನ್ನ ಸೋಮವಾರ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೋನಿಯಾ ಗಾಂಧಿ ಅವರಿಗೆ ಅನುಭವ ಇರುವುದಕ್ಕೆ ಅವರು ಪ್ರಧಾನಮಂತ್ರಿ ಆಗಲಿಲ್ಲ. ಆದರೆ ಮನಮೋಹನ ಸಿಂಗ್‌ ಅವರನ್ನು ಪ್ರಧಾನಿಯನ್ನಾಗಿ ಮಾಡಿದರು. ಇಂತಹ ತ್ಯಾಗ ಮನೋಭಾವ ಬಿಜೆಪಿ ಅವರಿಗೆ ಇದೆಯಾ? ಎಂದ ಸಿದ್ದು ಪ್ರಶ್ನಿಸಿದರು.

ಸುಳ್ಳು ಹೇಳೋದ್ರಲ್ಲಿ ಬಿಜೆಪಿಗರು ನಿಸ್ಸೀಮರು: ಸಿದ್ದರಾಮಯ್ಯ

ಅವಹೇಳನಕಾರಿ ಮಾತನಾಡಿಲ್ಲ:

ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಂಗಲ ಅಂಗಡಿ ಕುರಿತು ಅವಹೇಳನಕಾರಿಯಾಗಿ ಏನನ್ನೂ ಮಾತನಾಡಿಲ್ಲ. ಹೀಗಾಗಿ ಇಲ್ಲಿ ಕ್ಷಮೆ ಕೇಳುವ ಪ್ರಮೇಯವೇ ಬರುವುದಿಲ್ಲ. ನಾನೂ ಯಾರನ್ನೂ ಅವಮಾನಿಸಿಲ್ಲ. ಸುರೇಶ ಅಂಗಡಿ ನಾಲ್ಕು ಬಾರಿ ಸಂಸದರಾಗಿದ್ದರೂ ಕೇಂದ್ರದಿಂದ ರಾಜ್ಯಕ್ಕೆ ದೊರಕಬೇಕಾದ ಪಾಲನ್ನು ಕೇಳಲೇ ಇಲ್ಲ. ಇನ್ನು, ಯಾವುದೇ ರಾಜಕೀಯ ಅನುಭವವಿಲ್ಲದ ಮಂಗಲ ಕೇಳಲು ಸಾಧ್ಯವೇ ? ಎಂದು ಜನರ ಬಳಿ ಪ್ರಶ್ನೆ ಇಟ್ಟಿದ್ದೇನೆ ಅಷ್ಟೆ ಎಂದರು.

ಈ ಕುರಿತು ಜಗದೀಶ್‌ ಶೆಟ್ಟರ್‌ ಹೇಳಿಕೆ ನನಗೆ ಸಂಬಂಧಿಸಿಲ್ಲ. ಅವರು, ಮಂಗಲ ಬೀಗರಾಗಿದ್ದುಕೊಂಡು ಮಾತನಾಡಿದ್ದಾರಷ್ಟೇ. ನನ್ನ ಹೇಳಿಕೆಗಳನ್ನು ಜನ ತೆಗೆದುಕೊಳ್ಳುವ ರೀತಿ ಮುಖ್ಯವೇ ಹೊರತು, ಬಿಜೆಪಿ ನಾಯಕರ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ, ಅದರ ಅಗತ್ಯತೆನೂ ನನಗೆ ಇಲ್ಲ ಎಂದರು.
 

click me!