ವಿಧಾನಸೌಧದಲ್ಲಿ 10 ಲಕ್ಷ ಪತ್ತೆ: ತನಿಖೆಗೆ ಸಿದ್ದರಾಮಯ್ಯ ಆಗ್ರಹ

By Kannadaprabha NewsFirst Published Jan 7, 2023, 3:00 AM IST
Highlights

ಪತ್ತೆಯಾದ ಸಿಎಂ ಅಥವಾ ಸಚಿವರಿಗೆ ಕೊಡಲು ತಂದಿರಬಹುದು, ನಾನು ಹಿಂದೂ ವಿರೋಧಿಯಲ್ಲ, ಹಿಂದುತ್ವದ ವಿರೋಧಿ: ವಿಪಕ್ಷ ನಾಯಕ ಸಿದ್ದರಾಮಯ್ಯ 

ಹುಬ್ಬಳ್ಳಿ(ಜ.07):  ವಿಧಾನಸೌಧಕ್ಕೆ ಹೋಗಿದ್ದ ಎಂಜಿನಿಯರ್‌ರೊಬ್ಬರ ಬ್ಯಾಗ್‌ನಲ್ಲಿ .10 ಲಕ್ಷ ಪತ್ತೆಯಾಗಿದೆ. ವರ್ಗಾವಣೆ ಅಥವಾ ಬೇರೆ ಯಾವುದಾದರೂ ಕೆಲಸ ಮಾಡಿಸಿಕೊಳ್ಳಲು ಮಂತ್ರಿ ಅಥವಾ ಮುಖ್ಯಮಂತ್ರಿಗೆ ನೀಡಲು ಅದನ್ನು ತಂದಿರಬಹುದೆಂಬ ಅನುಮಾನವಿದೆ. ಈ ಕುರಿತು ಸಮಗ್ರ ತನಿಖೆ ನಡೆಸುವಂತೆ ಸರ್ಕಾರವನ್ನು ವಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ. ಇಲ್ಲಿನ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕೋಪಯೋಗಿ ಇಲಾಖೆ ಕಿರಿಯ ಎಂಜಿನಿಯರ್‌ ವಿಧಾನಸೌಧಕ್ಕೆ ಏಕೆ ಹಣ ತೆಗೆದುಕೊಂಡು ಹೋಗಿದ್ದಾರೆ. ಯಾವುದಾದರೂ ಸಚಿವರಿಗೆ ಅಥವಾ ಮುಖ್ಯಮಂತ್ರಿಗೆ ನೀಡಲು ಹಣ ತೆಗೆದುಕೊಂಡು ಹೋಗಿರಬಹುದು ಎನ್ನುವ ಕುರಿತು ನನಗೆ ಅನುಮಾನವಿದೆ. ಆ ಬಗ್ಗೆ ಸರ್ಕಾರ ತನಿಖೆ ನಡೆಸಬೇಕಾಗಿದೆ ಎಂದು ತಿಳಿಸಿದರು.

ಹಳ್ಳಿಭಾಷೆಯಲ್ಲಿ ಹೆದರುವವರಿಗೆ ಬೆಕ್ಕು, ನಾಯಿ ಎನ್ನುತ್ತಾರೆ. ರಾಜ್ಯದ ಹಿತದೃಷ್ಟಿಯಿಂದ ಪ್ರಧಾನಿ ಎದುರು ಧೈರ್ಯವಾಗಿ ಮಾತನಾಡಿ ರಾಜ್ಯಕ್ಕೆ ಬರಬೇಕಾದ ಹಣವನ್ನು ಪಡೆಯಬೇಕು ಎಂಬ ಅರ್ಥದಲ್ಲಿ ಮಾತನಾಡಿದ್ದೇನೆಯೇ ಹೊರತು ಮುಖ್ಯಮಂತ್ರಿಗೆ ಅಗೌರವ ತೋರುವ ಉದ್ದೇಶದಿಂದ ‘ನಾಯಿ ಮರಿ’ ಎಂದಿಲ್ಲವೆಂದು ಸ್ಪಷ್ಟನೆ ನೀಡಿದರು. ಬಿ.ಎಸ್‌. ಯಡಿಯೂರಪ್ಪ ಅವರಿಗೆ ಜನರು ‘ರಾಜಾಹುಲಿ’ ಎನ್ನುತ್ತಾರೆ, ನನಗೆ ಟಗರು ಮತ್ತು ‘ಹೌದು ಹುಲಿಯಾ’ ಎನ್ನುತ್ತಾರೆ ಅದನ್ನು ತಪ್ಪಾಗಿ ಅರ್ಥೈಸಿಕೊಂಡರೆ ಹೇಗೆ ಎಂದು ಪ್ರಶ್ನಿಸಿದರು.

ಸರ್ಕಾರದ ಜನವಿರೋಧಿ ನೀತಿಯಿಂದ ಜನರ ಬದುಕು ನಾಶ: ಎಸ್‌.ಆರ್.ಹಿರೇಮಠ

ಹಿಂದು ವಿರೋಧಿಯಲ್ಲ, ಹಿಂದುತ್ವದ ವಿರೋಧಿ:

2024ರಲ್ಲಿ ರಾಮಮಂದಿರ ನಿರ್ಮಾಣವಾಗಲಿದೆ ಎಂಬ ಅಮಿತ್‌ ಶಾ ಹೇಳಿಕೆಗೆ, ರಾಮಮಂದಿರ ನಿರ್ಮಾಣಕ್ಕೆ ನಮ್ಮ ವಿರೋಧ ಇಲ್ಲ. ನಾವು ಸಹ ಹಳ್ಳಿಯಲ್ಲಿ ರಾಮಮಂದಿರ ಕಟ್ಟಿದ್ದೇವೆ. ಆದರೆ ಮಂದಿರ ವಿಷಯವನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದಕ್ಕೆ ಹಾಗೂ ಅದನ್ನು ಇನ್ನೊಂದು ಧರ್ಮದ ವಿರುದ್ಧ ಬಳಸಿಕೊಳ್ಳುವುದಕ್ಕೆ ವಿರೋಧ ಇದೆ. ಸಮಾಜದಲ್ಲಿ ಹಿಂದೂ, ಮುಸ್ಲಿಂ, ಕ್ರೈಸ್ತ ಸೇರಿದಂತೆ ಎಲ್ಲ ಧರ್ಮಗಳು ಸಮವಾಗಿವೆ. ಇವುಗಳ ಹೆಸರಲ್ಲಿ ರಾಜಕಾರಣ ಮಾಡುವುದು ಸರಿಯಲ್ಲ. ನಾನು ಹಿಂದೂ ವಿರೋಧಿಯಲ್ಲ, ಹಿಂದುತ್ವದ ವಿರೋಧಿಯಾಗಿರುವುದಾಗಿ ತಿಳಿಸಿದರು.

ಸರ್ಕಾರದಿಂದ ಗುತ್ತಿಗೆದಾರರ ₹6 ಸಾವಿರ ಕೋಟಿ ಬಾಕಿ: ಸುಭಾಸ ಪಾಟೀಲ ಆರೋಪ

1925ರಿಂದ 47ರ ವೆರೆಗೆ ಗಂಭೀರ ಸ್ವರೂಪದಲ್ಲಿ ನಡೆದ ಸ್ವಾತಂತ್ರ್ಯ ಹೋರಾಟದಲ್ಲಿ ಯಾವೊಬ್ಬ ಆರ್‌ಎಸ್‌ಎಸ್‌ ಹಾಗೂ ಹಿಂದೂ ಮಹಾಸಭಾದ ಮುಖಂಡರು ಭಾಗವಹಿಸಿಲ್ಲ. ಆಗ ಆರ್‌ಎಸ್‌ಎಸ್‌ನ ಸಂಸ್ಥಾಪಕರಾಗಲಿ, ಪದಾಧಿಕಾರಿಗಳಾಗಲಿ ಯಾರಾದರೂ ಅದರಲ್ಲಿ ಭಾಗಿಯಾಗಿದ್ದರಾ ಎಂದು ಪ್ರಶ್ನಿಸಿದರು.

ಎಸ್‌ಡಿಪಿಐ ನಿಷೇಧದ ಕುರಿತು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿಕೆಗೆ, ಧರ್ಮ ಹಾಗೂ ಜಾತಿ ಹೆಸರಲ್ಲಿ ಯಾರೇ ರಾಜಕೀಯ ಮಾಡಿದರೂ ಅದು ತಪ್ಪು. ಕೋಮುವಾದ ಮಾಡುವ ಯಾವುದೇ ಪಕ್ಷಗಳು ಜನರನ್ನು ಆಳಲು ಯೋಗ್ಯವಲ್ಲ. ಎಲ್ಲ ಜಾತಿ, ಧರ್ಮದವರನ್ನು ಒಟ್ಟಿಗೆ ಕರೆದೊಯ್ಯಬೇಕು ಎಂಬುದನ್ನು ಸಂವಿಧಾನವೇ ಹೇಳಿದೆ. ಎಲ್ಲರನ್ನೂ ಮುನುಷ್ಯರಂತೆ ಕಾಣಬೇಕು ಎಂದು ಹೇಳಿದರು.

click me!