
ಸರಗೂರು [ಸೆ.02]: ತಾಲೂಕಿನ ಚಿಕ್ಕದೇವಮ್ಮನ ಬೆಟ್ಟದ ತಪ್ಪಲಿನಲ್ಲಿರುವ ಕುನ್ನಪಟ್ಟಣವನ್ನು ಸ್ಥಳಾಂತರ ಮಾಡಲೇಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಭಾನುವಾರ ಸಂಜೆ ಪ್ರವಾಹ ಪೀಡಿತ ಪ್ರದೇಶವಾದ ತಾಲೂಕಿನ ಕುನ್ನಪಟ್ಟಣಕ್ಕೆ ಭೇಟಿ ನೀಡಿ, ಸ್ಥಳ ಪರಿಶೀಲಿಸಿ ಬಳಿಕ ಮಾತನಾಡಿದ ಅವರು, ಬೆಟ್ಟದಿಂದ ಕಲ್ಲುಬಂಡೆಗಳು ಕುಸಿದರೆ ಮನೆಗಳ ಮೇಲೆ ಉರುಳಿ, ಮನೆಗಳು, ಜನ, ಜಾನುವಾರುಗಳಿಗೆ ಅನನುಕೂಲವಾಗಿದೆ. 35 ವರ್ಷಗಳಿಂದಲೂ ಗ್ರಾಮಸ್ಥರ ಬೇಡಿಕೆ ನನೆಗುದಿಗೆ ಬಿದ್ದಿದೆ. ಹೀಗಾಗಿ ಗ್ರಾಮವನ್ನು ಸೂಕ್ತ ಸ್ಥಳಕ್ಕೆ ಶಾಶ್ವತವಾಗಿ ಸ್ಥಳಾಂತರ ಮಾಡಬೇಕಾದ ಅವಶ್ಯಕತೆ ಇದೆ ಎಂದರು.
ಹೆಚ್ಚಿನ ಜಿಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ
ಗ್ರಾಮವನ್ನು ಸ್ಥಳಾಂತರ ಮಾಡಲು ಮಾಜಿ ಸಂಸದ ಆರ್. ಧ್ರುವನಾರಾಯಣ್, ಮಾಜಿ ಶಾಸಕ ದಿ. ಚಿಕ್ಕಮಾದು ಬಹಳಷ್ಟುಶ್ರಮಿಸಿದರು. ಆದರೆ, ಗ್ರಾಮದ ಸಮಸ್ಯೆ ಕಡತ ಕಂದಾಯ ಇಲಾಖೆ ಬಳಿ ಇದೆ. ಈ ಕುರಿತು ಕಂದಾಯ ಇಲಾಖೆ ಕಾರ್ಯದರ್ಶಿ ಹಾಗೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೊಂದಿಗೆ ಮಾತನಾಡುತ್ತೇನೆ. ಸ್ಥಳಾಂತರಿಸುವಂತೆ ಒತ್ತಾಯ ಮಾಡುತ್ತೇನೆ ಎಂದರು.