ಶ್ರೀರಾಮ್ ಫೈನಾನ್ಸ್ ಲಿ.ನಿಂದ 100 ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ವಿತರಣೆ

By Sathish Kumar KHFirst Published Jan 16, 2024, 6:14 PM IST
Highlights

ಶ್ರೀರಾಮ ಫೈನಾನ್ಸ್‌ ಲಿ. ವತಿಯಿಂದ ತಿಪಟೂರಿನಲ್ಲಿ ವಾಹನ ಚಾಲಕರ 100 ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹಧನ ವಿತರಣೆ ಮಾಡಲಾಯಿತು.

ತುಮಕೂರು (ಜ.16): ಶ್ರೀರಾಮ ಸೇವಾ ಸಂಕಲ್ಪದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ತಿಪಟೂರು ವಾಹನ ಚಾಲಕರ 100 ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹಧನ ವಿತರಣೆ ಕಾರ್ಯಕ್ರಮದಲ್ಲಿ ತಿಪಟೂರು ತಾಲೂಕು ತಹಸೀಲ್ದಾರ್ ಪವನ್ ಕುಮಾರ್ ಅವರು ಮಕ್ಕಳಿಗೆ ಪ್ರೋತ್ಸಾಹಧನವನ್ನು ವಿತರಣೆ ಮಾಡಿದರು. 

ನಗರದ ಶ್ರೀ ಸತ್ಯಗಣಪತಿ ಅಮೃತ ಮಹೋತ್ಸವ ಭವನದಲ್ಲಿ ಶ್ರೀರಾಮ ಫೈನಾನ್ಸ್‌ ಲಿ. ಪ್ರಾಯೋಜಕತ್ವದಲ್ಲಿ ಶ್ರೀರಾಮ್ ಸೇವಾ ಸಂಕಲ್ಪ ವತಿಯಿಂದ ಆಯೋಜನೆ ಮಾಡಲಾಗಿದ್ದ ವಿದ್ಯಾರ್ಥಿ ಪ್ರೋತ್ಸಾಹ ಧನ ವಿತರಣಾ ಸಮಾರಂಭದಲ್ಲಿ ಪ್ರೋತ್ಸಾಹಧನ ವಿತರಣೆ ನಂತರ ಮಾತನಾಡಿದ ಅವರು ಪ್ರತಿಯೊಂದಿ ಖಾಸಗಿ ಸಂಸ್ಥೆಗಳು ಇಂತಹ ಸಮಾಜಿಕ ಕಾರ್ಯಗಳನ್ನು ಮಾಡಬೇಕು. ಸಮಾಜದ ಶಿಕ್ಷಣ, ಸಂಸ್ಕೃತಿ ಹಾಗೂ ಸಮುದಾಯ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವ ಮೂಲಕ ತಮ್ಮ ಜೊತೆಗೆ ಸಮಾಜದ ಅಭಿವೃದ್ಧಿ ಮಾಡುವುದಕ್ಕೆ ಪೂರಕ ವಾತಾವರಣ ನಿರ್ಮಾಣ ಆಗುತ್ತದೆ. ಇನ್ನು ವಾಹನ ಚಾಲಕರು ತಮ್ಮ ದುಡಿಮೆ ಜೀವನ ನಿರ್ವಹಣೆಗೆ ಸಾಕಾಗುವ ಸಂದರ್ಭದಲ್ಲಿ ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಗಮನ ಕೊಡಲು ಸಾಧ್ಯವಾಗುವುದಿಲ್ಲ. ಆದರೆ, ಶ್ರೀರಾಮ ಸೇವಾ ಸಂಕಲ್ಪದಿಂದ ನೀಡಲಾದ ಪ್ರೋತ್ಸಾಹಧನದ ಹಣವನ್ನು ಪುಸ್ತಕ, ಪೆನ್ನು ಹಾಗೂ ಇತರೆ ಶೈಕ್ಷಣಿಕ ಸಂಬಂಧಿತ ಸಾಮಗ್ರಿ ಖರೀದಿಗೆ ಬಳಕೆ ಮಾಡಿಕೊಳ್ಳಬೇಕು. ಎಲ್ಲ ಹಣವೂ ಸದುಪಯೋಗ ಆಗಬೇಕು ಎಂದು ತಿಳಿಸಿದರು.

ಈ ಸಮಾರಂಭದಲ್ಲಿ 8ರಿಂದ 10ನೇ ತರಗತಿಯ 100 ಮಕ್ಕಳಿಗೆ ಶೈಕ್ಷಣಿಕ ಪ್ರೋತ್ಸಾಹಧನ ನೀಡಲಾಯಿತು. ಈ ವೇಳೆ ತಿಪಟೂರು ಗ್ರಾಮಾಂತರ ಠಾಣೆ ಎಸ್‌ಐ ಐ.ಡಿ. ನಾಗರಾಜು, ಎಆರ್‌ಟಿಒ ಶ್ರೀಮತಿ ಸುಧಾಮಣಿ, ತಿಪಟೂರು ವಕೀಲರ ಸಂಘದ ಅಧ್ಯಕ್ಷ ಲಕ್ಷ್ಮಣ್, ಶ್ರೀರಾಮ ಫೈನಾನ್ಸ್‌ ಲಿ. ಸ್ಟೇಟ್‌ ಹೆಡ್‌ ವಿಜಯ್‌ಕುಮಾರ್ ಪಿ.ಜಿ., ರೀಜನಲ್ ಬ್ಯುಸಿನೆಸ್ ಮುಖ್ಯಸ್ಥರಾದ ಟಿ.ಆರ್. ರಾಘವೇಂದ್ರ, ಟಿ. ಪ್ರವೀಣ್‌ ಕುಮಾರ್, ಮ್ಯಾನೇಜರ್ ಎಂ.ಕೆ. ಪರಶುರಾಮ ಮತ್ತಿತರರು ಉಪಸ್ಥಿತರಿದ್ದರು.

click me!