ಮಡಿಕೇರಿ: ಆರೋಗ್ಯ ಕೇಂದ್ರದಲ್ಲಿ ವೈದ್ಯರ ಕೊರತೆ, ಧರಣಿ ಎಚ್ಚರಿಕೆ

By Kannadaprabha NewsFirst Published Aug 1, 2019, 3:37 PM IST
Highlights

ಎಲ್ಲಡೆ ಜನ ಸಾಂಕ್ರಾಮಿಕ ರೋಗಗಳ ಭೀತಿಯಲ್ಲಿದ್ದರೆ ಮಡಿಕೇರಿಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯರೇ ಇಲ್ಲ. ಅತಿ ಹೆಚ್ಚು ಗ್ರಾಮಗಳನ್ನು ಹೊಂದಿರುವ ನಾಪೋಕ್ಲು ವ್ಯಾಪ್ತಿಯಲ್ಲಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯರ ಕೊರತೆ ಇದ್ದು, ಜನಸಾಮಾನ್ಯರು ಪರದಾಡುವಂತಾಗಿದೆ.

ಮಡಿಕೇರಿ(ಆ.01): ಅತಿ ಹೆಚ್ಚು ಗ್ರಾಮಗಳನ್ನು ಹೊಂದಿರುವ ನಾಪೋಕ್ಲು ವ್ಯಾಪ್ತಿಯಲ್ಲಿ ಸಮುದಾಯ ಆರೋಗ್ಯ ಕೇಂದ್ರ ಇದೆಯಾದರೂ ಅಗತ್ಯವಾಗಿ ಬೇಕಾಗಿರುವ ವೈದ್ಯರಿಲ್ಲದೆ ಗ್ರಾಮಸ್ಥರು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿರುವ ನಾಪೋಕ್ಲು ಆರ್‌.ಟಿ.ಐ. ಕಾರ್ಯಕರ್ತ ಕೆ.ಎ.ಹ್ಯಾರಿಸ್‌, ತಕ್ಷಣ ವೈದ್ಯರ ನೇಮಕಕ್ಕೆ ಜನಪ್ರತಿನಿಧಿಗಳು ಹಾಗೂ ಹಿರಿಯ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ಯಾರೂ ಕಾಳಜಿ ತೋರಿಸುತ್ತಿಲ್ಲ:

ಪತ್ರಿಕಾ ಹೇಳಿಕೆ ನೀಡಿರುವ ಅವರು ಹೆಚ್ಚು ಜನಸಂಖ್ಯೆ ಹೊಂದಿರುವ ನಾಪೋಕ್ಲು ಪಟ್ಟಣದಲ್ಲಿ 1893ರಿಂದ ಪ್ರಾರಂಭವಾದ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಕೋಟಿಗಟ್ಟಲೇ ಹಣ ಖರ್ಚು ಮಾಡಿ ಸುಸಜ್ಜಿತ ಕಟ್ಟಡ ನಿರ್ಮಿಸಿ ಹತ್ತು ವರ್ಷಗಳ ಹಿಂದೆ ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮೇಲ್ದರ್ಜೆಗೆ ಏರಿಸಲಾಯಿತು. ಆದರೆ ವೈದ್ಯರ ನೇಮಕದ ಬಗ್ಗೆ ಮಾತ್ರ ಯಾರೂ ಕಾಳಜಿ ತೋರಿಲ್ಲವೆಂದು ಆರೋಪಿಸಿದ್ದಾರೆ.

ಸೇವೆಯಲ್ಲಿ ಉಳಿಯುವುದೇ ಕಷ್ಟ:

ಸಮುದಾಯ ಆರೋಗ್ಯ ಕೇಂದ್ರಕ್ಕೆ ಪ್ರತಿದಿನ 400 ರಿಂದ 500 ಮಂದಿ ರೋಗಿಗಳು ಬರುತ್ತಿದ್ದು, ಡಾ.ಮದನ್‌ ಎಂಬುವವರು ದೇವ ಮಾನವರಂತೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇದೀಗ ಮೂಳೆ ತಜ್ಞ ಡಾ. ಪೂವಯ್ಯ ಎಂಬುವವರು ಕೂಡ ನೇಮಕಗೊಂಡಿದ್ದು, ಸೇವೆಯಲ್ಲಿ ಉತ್ಸುಕರಾಗಿದ್ದಾರೆ. ಆದರೆ ಸೇವಾ ಮನೋಭಾವದ ವೈದ್ಯರಿಗೆ ಅಗತ್ಯವಾಗಿ ಬೇಕಾದ ಸೌಲಭ್ಯಗಳು ಲಭ್ಯವಿಲ್ಲದೆ ಇರುವುದರಿಂದ ವೈದ್ಯರು ಸೇವೆಯಲ್ಲಿ ಉಳಿಯುವುದೇ ಕಷ್ಟಎಂಬಾಂತಾಗಿದೆ.

ರಾಂಪುರ ಆಸ್ಪತ್ರೆಯಲ್ಲಿ ರೋಗಿಯ ಬೆಡ್ ಮೇಲೆ ರೋಗ ಪೀಡಿತ ಶ್ವಾನಗಳು..!

ಮೂಲಭೂತ ಸೌಲಭ್ಯ ಒದಗಿಸಿ:

ಈ ಕೇಂದ್ರದಲ್ಲಿ ನಾಲ್ವರು ವೈದ್ಯರ ಕೊರತೆ ಇದ್ದು, ಎಕ್ಸರೇ ಯಂತ್ರ ತಾಂತ್ರಿಕ ಕಾರಣದಿಂದ ಸ್ಥಗಿತಗೊಂಡು ಹಲವು ದಿನಗಳೇ ಕಳೆದಿದೆ. ತುರ್ತು ಸಂದರ್ಭದಲ್ಲಿ ಕೂಡ ವೈದ್ಯರ ಕೊರತೆ ಎದುರಾಗುತ್ತಿದ್ದು, ರೋಗಿಗಳು ಅಥವಾ ಗಾಯಾಳುಗಳು ಪ್ರಾಣ ಕಳೆದುಕೊಂಡ ಘಟನೆಗಳೂ ನಡೆದಿವೆ. ಸ್ತ್ರೀರೋಗ ವೈದ್ಯರ ಕೊರತೆ ಗ್ರಾಮಸ್ಥರನ್ನು ಹೆಚ್ಚಾಗಿ ಕಾಡುತ್ತಿದ್ದು, ರೋಗಿಗಳು ಅಸಹಾಯಕ ಪರಿಸ್ಥಿತಿಯನ್ನು ಅನುಭವಿಸುತ್ತಿದ್ದಾರೆ. ಆದ್ದರಿಂದ ವೈದ್ಯರಿಗೆ ವಸತಿ ವ್ಯವಸ್ಥೆ ಮತ್ತು ಮೂಲಭೂತ ಸೌಲಭ್ಯಗಳನ್ನು ಒದಗಿಸಿಕೊಡುವ ಮೂಲಕ ಹೆಚ್ಚುವರಿ ವೈದ್ಯರ ನೇಮಕಕ್ಕೆ ಆಡಳಿತ ವ್ಯವಸ್ಥೆ ಕ್ರಮ ಕೈಗೊಳ್ಳಬೇಕೆಂದು ಹ್ಯಾರಿಸ್‌ ಒತ್ತಾಯಿಸಿದ್ದಾರೆ.

ಕರ್ನಾಟಕ ರಾಜಕೀಯದ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವೈದ್ಯರ ಕೊರತೆಯನ್ನು ತುಂಬುವಂತೆ ಹಲವು ಬಾರಿ ಸಂಬಂಧಪಟ್ಟಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಸ್ಪಂದನೆ ದೊರೆತ್ತಿಲ್ಲವೆಂದು ಆರೋಪಿಸಿರುವ ಅವರು, ತಕ್ಷಣ ಅಗತ್ಯವಿರುವಷ್ಟುವೈದ್ಯರ ನೇಮಕಕ್ಕೆ ಕ್ರಮ ಕೈಗೊಳ್ಳದಿದ್ದಲ್ಲಿ ಗ್ರಾಮಸ್ಥರ ಸಹಕಾರದೊಂದಿಗೆ ಹೋರಾಟವನ್ನು ರೂಪಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

click me!