PSI Recruitment: ಕಲ್ಯಾಣ ಕರ್ನಾಟಕ ಭಾಗಕ್ಕೆ ಅನ್ಯಾಯ: ಸಿಎಂಗೆ ಶಾಸಕ ರಾಜೂಗೌಡ ಪತ್ರ

By Kannadaprabha NewsFirst Published Jan 24, 2022, 11:51 AM IST
Highlights

*  ಸರಿಪಡಿಸುವಂತೆ ಶಾಸಕ ರಾಜೂಗೌಡ ಸರ್ಕಾರಕ್ಕೆ ಮನವಿ
*  ಕಾನೂನಾತ್ಮಕ ಹೋರಾಟಕ್ಕೆ ಸಿದ್ಧತೆ: ಲಕ್ಷ್ಮೀಕಾಂತ ಪಾಟೀಲ್
*  ನೇಮಕಾತಿ ಪಟ್ಟಿ ನ್ಯಾಯಯುತವಾದದ್ದಲ್ಲ 
 

ಯಾದಗಿರಿ(ಜ.24):  ಪೊಲೀಸ್ ಇಲಾಖೆ(Police Department) ಹೊರಡಿಸಿರುವ 542 ಸಬ್‌ಇನ್ಸಪೆಕ್ಟರ್‌ಗಳ (ಪಿಎಸೈ ಸಿವಿಲ್) ಆಯ್ಕೆ ಪಟ್ಟಿಯಲ್ಲಿ ಕಲ್ಯಾಣ ಕರ್ನಾಟಕ ಭಾಗದ(Kalyana-Karnataka) (371ಜೆ) ಅಭ್ಯರ್ಥಿಗಳಿಗೆ ಅನ್ಯಾಯವಾಗಿದ್ದು, ಈ ಕೂಡಲೇ ಸರಿಪಡಿಸುವಂತೆ ಮಾಜಿ ಸಚಿವ, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಅಧ್ಯಕ್ಷ ಹಾಗೂ ಸುರಪುರದ ಶಾಸಕ ನರಸಿಂಹ ನಾಯಕ (ರಾಜೂಗೌಡ)(Narasimha Naik) ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ. 

ಈ ಕುರಿತ ಪತ್ರದಲ್ಲಿ ವಿಸ್ಕೃತವಾಗಿ ವಿವರಿಸಿರುವ ಶಾಸಕ ರಾಜೂಗೌಡ(Rajugouda), ಪಿಎಸೈ ಹುದ್ದೆಗಳ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಇಲಾಖೆ ವೆಬ್ ಸೈಟಿನಲ್ಲಿ ಜ.19 ರಂದು ಪ್ರಕಟಿಸಲಾಗಿದೆ. ಆಯ್ಕೆ ಪಟ್ಟಿಯಲ್ಲಿ ಕಲ್ಯಾಣ ಕರ್ನಾಟಕ (371ಜೆ) 2013ರ ನ್ವಯ ಈ ಭಾಗದ ಹೆಚ್ಚು ಅಂಕ ಗಳಿಸಿದ ಅಭ್ಯರ್ಥಿಗಳನ್ನು ’ನಾನ್ ಕೆಕೆ‘ (ಕಲ್ಯಾಣ ಕರ್ನಾಟಕ ಭಾಗದವರಲ್ಲದ) ಆಯ್ಕೆಗೆ ಪರಿಗಣಿಸದೆ ಕಲ್ಯಾಣ ಕರ್ನಾಟಕ ಭಾಗದಲ್ಲಿಯೇ ಮೆರಿಟ್ ಆಧಾರದ ಮೇಲೆ ಆಯ್ಕೆ ಮಾಡಲಾಗಿದೆ. 

PSI Recruitment ಕಲ್ಯಾಣ ಕರ್ನಾಟಕ ಭಾಗಕ್ಕೆ ಆಗುತ್ತಿರುವ ಅನ್ಯಾಯದ ವಿರುದ್ಧ ಧ್ವನಿ ಎತ್ತಿದ ಕೈ ಶಾಸಕರು

ಪಿಎಸೈ ಅಥವಾ ಆರ್‌ಎಸ್‌ಐ ಹುದ್ದೆಗಳಿಗೆ ಅರ್ಜಿ ಸಲ್ಲಿಸುವಾಗ, ಕಲ್ಯಾಣ ಕರ್ನಾಟಕ ಭಾಗದ ಅಭ್ಯರ್ಥಿಗಳಿಗೆ(candidates) ’ನೀವು ಯಾವ ವೃಂದದ ಹುದ್ದೆಗಳಲ್ಲಿ ಆಯ್ಕೆಯಾಗಲು ಬಯಸಿದ್ದೀರಿ ? ಎಂಬ ಪ್ರಯಾರಿಟಿ ಕೇಳುವಲ್ಲಿಯೂ ಅನ್ಯಾಯವಾಗುತ್ತಿದೆ. ಕೆಪಿಎಸ್ಸಿಯಲ್ಲಿಯೂ(KPSC) ಪ್ರಯಾರಿಟಿ ಕೇಳಿದರೂ ಸಹ ಹೆಚ್ಚು ಅಂಕ ಗಳಿಸಿದ ಕಲ್ಯಾಣ ಕರ್ನಾಟಕದ ಅಭ್ಯರ್ಥಿಗಳನ್ನು ನಾನ್-ಎಚ್ಕೆ’ ಪಟ್ಟಿಯಲ್ಲಿ ಸೇರಿಸಿಕೊಂಡು, ಕಡಮೆ ಅಂಕ ಪಡೆದ ಅಭ್ಯರ್ಥಿಗಳನ್ನು ಕಲ್ಯಾಣ ಕರ್ನಾಟಕ ಪಟ್ಟಿಯಲ್ಲಿ ಈವರೆಗೂ ಸೇರಿಸುತ್ತಾ ಬಂದಿದೆ. ಆದ್ದರಿಂದ ಕೂಡಲೇ ಪಿಎಸೈ ತಾತ್ಕಾಲಿಕ ಆಯ್ಕೆ ಪಟ್ಟಿ ತಡೆಹಿಡಿದು, ಕಲ್ಯಾಣ ಕರ್ನಾಟಕ ಮೀಸಲಾತಿಗೆ(Reservation) ಅನುಗುಣವಾಗಿ ಮೆರಿಟ್ ಆಧಾರದ ಮೇಲೆ ಆಯ್ಕೆ ಪಟ್ಟಿ ಪುನರ್ ಪರಿಶೀಲಿಸುವಂತೆ ಸಂಬಂಧಿತ ಅಧಿಕಾರಿಗಳಿಗೆ ಸೂಚಿಸುವಂತೆ ರಾಜೂಗೌಡ ಸಿಎಂಗೆ ಮನವಿ ಮಾಡಿದ್ದಾರೆ. 

ಕಾನೂನಾತ್ಮಕ ಹೋರಾಟಕ್ಕೆ ಸಿದ್ಧತೆ: ಲಕ್ಷ್ಮೀಕಾಂತ ಪಾಟೀಲ್

ಈ ಭಾಗದ ಅಭ್ಯರ್ಥಿಗಳಿಗೆ ಅನ್ಯಾಯವಾದ ಕುರಿತು, ಕಾನೂನಾತ್ಮ ಹೋರಾಟದ ಸಿದ್ಧತೆ ಮಾಡುತ್ತಿರುವುದಾಗಿ ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಲಕ್ಷ್ಮೀಕಾಂತ ಎ. ಪಾಟೀಲ್ ಮದ್ದರಕಿ ‘ಕನ್ನಡಪ್ರಭ’ಕ್ಕೆ(Kannada Prabha) ಪ್ರತಿಕ್ರಿಯಿಸಿದರು.

ಮೆರಿಟ್ ಪ್ರಕಾರ ಅತೀ ಹೆಚ್ಚು ಅಂಕ ಪಡೆದು ಉತ್ತೀರ್ಣರಾದವರನ್ನು ರಾಜ್ಯವ್ಯಾಪಿ ನೇಮಕಾತಿಯಲ್ಲಿ ಪರಿಗಣಿಸಿ, ನಂತರ ಉಳಿದ ಅಭ್ಯರ್ಥಿಗಳನ್ನು 371 (ಜೆ) ಮೀಸಲಾತಿ ಅಡಿಯಲ್ಲಿ ನೇಮಕಾತಿ ಮಾಡಿಕೊಳ್ಳಬೇಕೆಂದು ಕಾನೂನಿನಲ್ಲಿ ನಿಯಮವಿದೆ. ಆದರೆ, ಅತೀ ಹೆಚ್ಚು ಅಂಕ ಪಡೆದ ಕಲ್ಯಾಣ ಕರ್ನಾಟಕದ ಅಭ್ಯರ್ಥಿಗಳನ್ನು ಕಲ್ಯಾಣ ಕರ್ನಾಟಕ ಮೀಸಲಾತಿಗೆ ಮಾತ್ರ ಸೀಮಿತಗೊಳಿಸಿ, ಈ ಭಾಗದ ಉಳಿದ ಅಭ್ಯರ್ಥಿಗಳಿಗೆ ನೇರ ಅನ್ಯಾಯ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದರು. 

ಹೀಗಾಗಿ, ಪೊಲೀಸ್ ಇಲಾಖೆ ಬಿಡುಗಡೆ ಮಾಡಿರುವ 542 ಪೊಲೀಸ್ ಸಬ್ ಇನ್ಸಪೆಕ್ಟರ್‌ಗಳ ನೇಮಕಾತಿ ಪಟ್ಟಿ ನ್ಯಾಯಯುತವಾದದ್ದಲ್ಲ. ಸರ್ಕಾರ ಕೂಡಲೇ ಪಟ್ಟಿಯನ್ನು ಪುನರ್ ಪರಿಷ್ಕರಿಸಿ ಅಥವಾ ಪರಿಶೀಲಿಸಿ ಕಲ್ಯಾಣ ಕರ್ನಾಟಕದ ಅಭ್ಯರ್ಥಿಗಳಿಗೆ ಆಗುತ್ತಿರುವ ಅನ್ಯಾಯವನ್ನು ಕೂಡಲೇ ಸರಿಪಡಿಸಬೇಕೆಂದು ಪಾಟೀಲ್ ಆಗ್ರಹಿಸಿದರು. 

BJP Politics: ತಮ್ಮದೇ ಸರ್ಕಾರದ ವಿರುದ್ಧವೇ ಗುಡುಗಿಡ ಚಿಂಚನಸೂರು...!

ಪಿಎಸೈ ನೇಮಕಾತಿ ಆಯ್ಕೆ ಪಟ್ಟಿ 371 (ಜೆ) ಸಂವಿಧಾನಾತ್ಮಕ ಮೀಸಲಾತಿಗೆ ವಿರೋಧವಾಗಿದ್ದು, ಕಲ್ಯಾಣ ಕರ್ನಾಟಕ ಭಾಗದ ಅಭ್ಯರ್ಥಿಗಳಿಗೆ ಅನ್ಯಾವಾಗಿದೆ. ಈ ಹಿಂದೆ ಕೆಪಿಎಸ್ಸಿ ಪ್ರಕಟಿಸಿದ ಎಲ್ಲಾ ಆಯ್ಕೆ ಪಟ್ಟಿಗಳಲ್ಲಿ ಕಲ್ಯಾಣ ಕರ್ನಾಟಕ ಭಾಗದ ಮೀಸಲಾತಿಗೆ ಅನುಸಾರವಾಗಿ ಆಯ್ಕೆಪಟ್ಟಿ ಪ್ರಕಟಿಸಲಾಗುತ್ತಿತ್ತು. ಆದರೆ, ಈ ಬಾರಿ ಪ್ರಕಟಿಸಿದ ಪಿಎಸೈ ಸಿವಿಲ್ ಆಯ್ಕೆಪಟ್ಟಿಯಲ್ಲಿ ಇದು ಪರಿಗಣಿಸಿಲ್ಲ ಅಂತ ಸುರಪುರ ಶಾಸಕ ರಾಜೂಗೌಡ ತಿಳಿಸಿದ್ದಾರೆ.  

ಪ್ರಾದೇಶಿಕ ಅಸಮತೋಲನ(Regional Imbalances) ಹೋಗಲಾಡಿಸಲು ಅಂದಿನ ಹೈದರಾಬಾದ ಕರ್ನಾಟಕ, ಈಗಿನ ಕಲ್ಯಾಣ ಕರ್ನಾಟಕ ಭಾಗದವರಿಗೆ ನ್ಯಾಯ ಸಿಗಬೇಕೆಂಬ ಮಹದುದ್ದೇಶದಿಂದ 371 (ಜೆ) ಜಾರಿಗೆ ತರಲಾಗಿತ್ತು. ಆದರೆ, ರಾಜ್ಯ ಬಿಜೆಪಿ ಸರ್ಕಾರ ಮಾತ್ರ ಎಲ್ಲಾ ಕಾನೂನು ನಿಯಮಗಳನ್ನು ಗಾಳಿಗೆ ತೂರಿ 371ಜೆ ಕಾಯ್ದೆಯ ಉದ್ದೇಶವನ್ನೇ ಹಾಳು ಮಾಡುತ್ತಿದೆ ಅಂತ ಯಾದಗಿರಿ ರಾಜ್ಯ ರೈತ ಸಂಘದ ಉಪಾಧ್ಯಕ್ಷ ಲಕ್ಷ್ಮೀಕಾಂತ ಎ. ಪಾಟೀಲ್ ಮದ್ದರಕಿ ಹೇಳಿದ್ದಾರೆ. 
 

click me!