
ಶಿವಮೊಗ್ಗ-ಮಂಗಳೂರು ರೈಲ್ವೇ ಯೋಜನೆ ಶಿವಮೊಗ್ಗದಿಂದ ತೀರ್ಥಹಳ್ಳಿ-ಶೃಂಗೇರಿ ಬರುವ ಪ್ರಸ್ತಾಪ ವರದಿಯಲ್ಲಾಗಿದೆ. ಆದರೆ ಈ ಹಿಂದೆಯೇ ಎನ್.ಆರ್.ಪುರದಲ್ಲಿರುವ ರೈಲ್ವೇ ಹಳಿಯಿಂದಲೇ ಹಾದು ಹೋಗ ಬೇಕು ಎಂದು ಎನ್.ಆರ್.ಪುರದವರು ಒತ್ತಾಯಿಸಿದ್ದಾರೆ ಎಂದು ಸಂಸದ ಕೋಟಾ ಶ್ರೀನಿವಾಸ ಪೂಜಾರಿ ತಿಳಿಸಿದರು.
ರೈಲ್ವೇ ಮಾರ್ಗದ ಬಗ್ಗೆ ಪರಿಸರವಾದಿ ಹಾಗೂ ಕೆಲವು ಸಣ್ಣಪುಟ್ಟ ತೊಂದರೆಗಳಿವೆ. ಈ ಬಗ್ಗೆ ಈಗಾಗಲೇ ಒಂದು ಬಾರಿ ಸಭೆ ನಡೆಸಿದ್ದು, ಅಲ್ಲಿ ಸಮಸ್ಯೆ ಪೂರ್ಣ ಇತ್ಯರ್ಥವಾಗಿಲ್ಲ. ಈ ಹಿನ್ನೆಲೆಯಲ್ಲಿ ಮುಂಬರುವ ಅಧಿವೇಶನದ ನಂತರ ಮತ್ತೊಮ್ಮೆ ಈ ಬಗ್ಗೆ ಸಭೆ ನಡೆಸಿ ಸಾಧಕ ಬಾಧಕ ಮುಂದಿಟ್ಟುಕೊಂಡು ಇವತ್ತಿನ ಕಾಲಘಟ್ಟದಲ್ಲಿ ಪರಿಸರಕ್ಕೆ ಅತ್ಯಂತ ಕಡಿಮೆ ಸಮಸ್ಯೆ ಉಂಟು ಮಾಡುವ ಹಾಗೂ ಜನರಿಗೆ ಅನುಕೂಲವಾಗುವ ಮಾರ್ಗ ಅಂತಿಮಗೊಳಿಸಲಾಗುತ್ತದೆ ಎಂದು ಶನಿವಾರ ಸುದ್ದಿಗಾರರಿಗೆ ತಿಳಿಸಿದರು.
ಗ್ರಾಮ ಸಡಕ್ ಯೋಜನೆಯಲ್ಲಿ ಶೃಂಗೇರಿ ಕ್ಷೇತ್ರಕ್ಕೆ 15 ರಸ್ತೆ ನೀಡಿದ್ದು, ಇದರಲ್ಲಿ 2 ಯೋಜನೆಗಳು ಕಾರ್ಯಗತವಾಗಿದೆ. ಇನ್ನುಳಿದ ಯೋಜನೆ ಪೂರ್ಣವಾಗಿಲ್ಲ ಎಂದು ವರದಿ ಬಂದಿದೆ ಎಂದು ಕೋಟಾ ಶ್ರೀನಿವಾಸಪೂಜಾರಿ ತಿಳಿಸಿದರು.
ಯೋಜನೆ ವೆಬ್ಸೈಟ್ ಲಾಕ್ ಆಗಿ ಸಮಸ್ಯೆಯಾಗಿದೆ ಎಂಬ ವರದಿ ಬಂದಿದೆ. ಈ ಬಗ್ಗೆ ಕೇಂದ್ರದ ಗ್ರಾಮೀಣಾಭಿವೃದ್ಧಿ ಸಚಿವ ಶಿವರಾಜ್ ಸಿಂಗ್ ಚೌಹ್ಹಾಣ್ ಅವರನ್ನು ಭೇಟಿ ಮಾಡಿ ಖುದ್ದು ಪತ್ರ ನೀಡಿ ಅಲ್ಲಿ ಏನಾದರೂ ಸಮಸ್ಯೆಯಿದ್ದರೆ ವೆಬ್ಸೈಟ್ನಲ್ಲಿ ದಾಖಲು ಮಾಡಲು ಕೋರಲಾಗಿದೆ.
ಪಿಎಂಜಿಎಸ್ವೈ ಯೋಜನೆ ಟೆಂಡರ್ ಕರೆಯುವಾಗ ರಸ್ತೆ ನಿರ್ಮಾಣ ಹಾಗೂ ಅದರ ನಿರ್ವಹಣೆ ಬಗ್ಗೆ ಕರಾರು ಆಗಿದೆ. ಟೆಂಡರ್ ಕರೆದಾಗ ಯಾವ ಷರತ್ತು ಇದೆಯೋ ಅದನ್ನು ಅದೇ ಗುತ್ತಿಗೆದಾರರು ನಿರ್ವಹಣೆ ಮಾಡಬೇಕಿದೆ. ಹಾಗೆ ಮಾಡದೆ ಇದ್ದರೆ ಅಲ್ಲಿನ ಎಂಜಿನಿಯರ್ ಮೇಲೆ ದೂರು ದಾಖಲಾಗುತ್ತದೆ ಮತ್ತು ಆ ಗುತ್ತಿಗೆದಾರರ ಡಿಪಾಸಿಟ್ ಹಣ ಮುಟ್ಟುಗೋಲು ಹಾಕಿಕೊಳ್ಳ ಲಾಗುತ್ತದೆ.
ಮಹಾರಾಷ್ಟ್ರದಲ್ಲಿ ಕರ್ನಾಟಕದ ಅಡಕೆ ಲಾರಿಗಳನ್ನು ಸೀಜ್ ಮಾಡಿರುವ ಕುರಿತು ಕೇಂದ್ರ ಸಚಿವ ಪ್ರಲ್ಹಾದ್ ಜೋಷಿ ಕಚೇರಿಯಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರನ್ನು ನಾನು, ಸಂಸದ ಬ್ರಿಜೇಶ್ ಚೌಟ, ವಿಶ್ವೇಶ್ವರ ಹೆಗ್ಡೆ ಕಾಗೇರಿ ಭೇಟಿ ಮಾಡಿ ಮಾತುಕತೆ ನಡೆಸಿದ ಬಳಿಕ ಸಮಸ್ಯೆ ಬಗೆಹರಿದಿದೆ ಎಂಬ ಮಾಹಿತಿ ನನಗೆ ಅಡಕೆ ಬೆಳೆಗಾರರ ಸಂಘದವರು ತಿಳಿಸಿದ್ದಾರೆ ಎಂದು ತಿಳಿಸಿದರು.
ಪ್ರಕೃತಿ ವಿಕೋಪ ನಿಧಿ ಹೆಚ್ಚು ತರಲು ಪ್ರಯತ್ನ
ಮಳೆ ಕಡಿಮೆಯಾದಾಗ, ಪ್ರವಾಹ ಅಥವಾ ಬರದಂತಹ ಪ್ರಕೃತಿ ವಿಕೋಪ ನಿಧಿ ಕ್ರೋಢೀಕರಿಸಿ ಬಿತ್ತನೆಗೆ, ಕುಡಿಯುವ ನೀರಿಗೆ, ಜನ ಜಾನುವಾರುಗಳಿಗೆ ನೀಡಲು ರಾಜ್ಯ ಸರ್ಕಾರದಲ್ಲಿ ಅವಕಾಶವಿದೆ. ಕಡಿಮೆಯಾದಲ್ಲಿ ಕೇಂದ್ರಕ್ಕೆ ಮನವಿ ಮಾಡಿ ತರಿಸಿಕೊಳ್ಳಬಹುದು. ನಮ್ಮ ಜಿಲ್ಲೆಯಲ್ಲಿ ಯಾವುದಾದರೂ ಸಮಸ್ಯೆ ಉಂಟಾದಲ್ಲಿ ಕೇಂದ್ರದಿಂದ ಯಾವರೀತಿ ಹೆಚ್ಚು ಅನು ದಾನ ತರಬೇಕು. ರಾಜ್ಯ ಎಷ್ಟು ಅನುದಾನ ಕೊಡುತ್ತದೆ ಎಂಬ ಬಗ್ಗೆ ಮಾತನಾಡಿ ಕ್ಷೇತ್ರಕ್ಕೆ ತರುವ ಪ್ರಯತ್ನ ಮಾಡಲಾ ಗುವುದು ಎಂದು ಸಂಸದರು ತಿಳಿಸಿದರು.
ಅನಧಿಕೃತ ಶಾಶ್ವತ ವಾಸ್ತವ್ಯದ ಸರ್ಟಿಫಿಕೇಟ್ಗೆ ಅಧಿಕಾರಿಗಳೇ ಹೊಣೆ
ಚುನಾವಣಾ ಆಯೋಗದ ಎಸ್ಐಆರ್ನ ಮೂಲ ಉದ್ದೇಶ ಭಾರತೀಯ ಪೌರತ್ವ, ಮತದಾನದ ಹಕ್ಕನ್ನು ಖಾತ್ರಿ ಮಾಡು ವುದು, ಮೃತರಾದವರನ್ನು ಪಟ್ಟಿಯಿಂದ ತೆಗೆದು ಹಾಕುವುದು ಹಾಗೂ ಬಾಂಗ್ಲಾ ದೇಶಿಗರು ಸೇರಿದಂತೆ ವಿದೇಶಗರು ಬಂದು ಇಲ್ಲಿ ಅನಾಹುತ ಮಾಡುವುದನ್ನು ತಪ್ಪಿಸುವುದು ಆಗಿದೆ. ಆದರೆ ದುರಂತವೆಂದರೆ ಕರ್ನಾಟಕದ ಕಾಂಗ್ರೆಸ್ ಸರ್ಕಾರ ಅವರಿಗೆ ಓಟು ಬೀಳಬೇಕು ಎಂಬ ಕಾರಣಕ್ಕೆ ಶಾಶ್ವತ ವಾಸ್ತವ್ಯದ ಸರ್ಟಿಫಿಕೇಟ್ ಎಸ್ಐಆರ್ ವೇಳೆ ಪಡೆಯಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಕೋಟಾ ಶ್ರೀನಿವಾಸಪೂಜಾರಿ ಆರೋಪಿಸಿದರು.
ಸಂವಿಧಾನ, ಚುನಾವಣಾ ಆಯೋಗದ ಚೌಕಟ್ಟಿನಲ್ಲಿ ಶಾಶ್ವತ ವಾಸ್ತವ್ಯದ ಸರ್ಟಿಫಿಕೇಟ್ಗೆ ಮಾನ್ಯತೆಯಿಲ್ಲ. ಶಾಶ್ವತ ವಾಸ್ತವ್ಯದ ಸರ್ಟಿಫಿಕೇಟನ್ನು ಭಾರತದಲ್ಲದವರಿಗೆ, ವಿದೇಶದಿಂದ ಬಂದವರಿಗೆ, ಮತೀಯ ಕಾರಣಗಳಿಗೆ ಓಟು ಹಾಕುತ್ತಾರೆ ಎಂಬುವರಿಗೆ ಮಾತ್ರ ನೀಡಲು ಪ್ರಯತ್ನಿಸಿ ಊರ್ಜಿತ ಮಾಡುವ ಪ್ರಯತ್ನ ನಡೆದಿದೆಯೇ ಎಂಬ ಬಗ್ಗೆ ಪರಿಶೀಲನೆ ಮಾಡಲಾ ಗುತ್ತಿದೆ. ಈಗಾಗಲೇ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದು, ಅಗತ್ಯವಿದ್ದರೆ ಮತ್ತೊಮ್ಮೆ ದೂರು ನೀಡಲಾಗುವುದು.
ರಾಜಕೀಯ ಕಾರಣಗಳಿಗೆ ಶಾಶ್ವತ ವಾಸ್ತವ್ಯದ ಸರ್ಟಿಫಿಕೇಟ್ ಕೊಡುತ್ತಿರುವುದು ಕೇವಲ ಮತಗಳಿಕೆ ವ್ಯವಸ್ಥೆ ದೃಷ್ಟಿಯಿಂದ ಹೊರತು ವಾಸ್ತವಿಕತೆಗೆ ಹತ್ತಿರವಿರುವುದಿಲ್ಲ. ಅಂತಹ ಮತದಾರರ ನಿರಾಕರಣೆಯಾಗುತ್ತದೆ.
ಸರ್ಕಾರದ ಅಧಿಕಾರಿಗಳು ಸರ್ಕಾರದ ಮಾತನ್ನು ಕೇಳಿ ಶಾಶ್ವತ ವಾಸ್ತವ್ಯದ ಸರ್ಟಿಫಿಕೇಟ್ ಅನಧಿಕೃತವಾಗಿ ಕೊಟ್ಟರೆ ಅದಕ್ಕೆ ಅಧಿಕಾರಿಗಳೇ ನೇರವಾಗಿ ಹೊಣೆಯಾಗುತ್ತದೆ. ಇದಕ್ಕೆ ರಾಜಕಾರಣಿ ಹೊಣೆಯಾಗುವುದಿಲ್ಲ ಎಂಬುದನ್ನು ಗಮನವಿಟ್ಟು ಕೊಂಡು ಕೆಲಸ ಮಾಡಬೇಕು ಎಂದು ಕೋಟಾ ಶ್ರೀನಿವಾಸಪೂಜಾರಿ ಹೇಳಿದರು.