ಓದುವ ಕನಸಿಗೆ ಕೊಳ್ಳಿಯಿಟ್ಟ ತುಂಗಾ ಪ್ರವಾಹ

By Kannadaprabha NewsFirst Published Aug 13, 2019, 10:50 AM IST
Highlights

ನೂರಾರು ಕನಸುಗಳನ್ನು ಹೊತ್ತು 10ನೇ ತರಗತಿಯಲ್ಲಿ ಕಲಿಯುತ್ತಿದ್ದ ಶಿವಮೊಗ್ಗದ ರೇವತಿ ನೆರೆ ನೀರಿಗೆ ಅಕ್ಷರಗಳು ಮಾಸಿಹೋದ ತನ್ನ ಪುಸ್ತಕಗಳನ್ನು ಎದೆಗೊತ್ತಿಕುಳಿತಿದ್ದಾಳೆ. ಉಳಿದ ಒಂದಷ್ಟು ಪುಸ್ತಕಗಳನ್ನು ಹೊರಗೆ ಬಿಸಿಲಿಗೆ ಒಣ ಹಾಕಿದ್ದಾಳೆ. ಆಕೆಯ ಓದುವ ಕನಸಿಗೆ ತುಂಗಾ ಪ್ರವಾಹ ಕೊಳ್ಳಿ ಇಟ್ಟಿದೆ.

ಶಿವಮೊಗ್ಗ(ಆ.13): ತುಂಗಾ ನದಿ ತನ್ನ ರೌದ್ರಾವತಾರ ನಿಲ್ಲಿಸುತ್ತಿದ್ದಂತೆ ಮನೆಯೊಳಗೆ ಹೊಕ್ಕ ಆಕೆ ಗರಬಡಿದು ನಿಂತಿದ್ದಳು. ತನ್ನ ಪ್ರೀತಿಯ ಪುಸ್ತಕವೆಲ್ಲವೂ ನೀರಿನಿಂದ ತೊಯ್ದು ತೊಪ್ಪೆಯಾಗಿದ್ದವು. ಅಳುವೊಂದು ಬಿಟ್ಟು ಬೇರೇನೂ ಇರಲಿಲ್ಲ.

ರಾಜೀವ್‌ಗಾಂಧಿ ಬಡಾವಣೆಗೆ ಭೇಟಿ ನೀಡಿದಾಗ ಮನೆಯ ಒಳಗೆ ಹಗ್ಗದಲ್ಲಿ ಒಣಗಲು ಪುಸ್ತಕ ನೇತು ಹಾಕಿದ್ದಳು. ಮನೆಯ ಹೊರಗೆ ಕೆಸರನ್ನು ಸರಿಸಿ ಕಲ್ಲಿನ ಮೇಲೆ ಪುಸ್ತಕಗಳನ್ನು ಗಾಳಿಗೆ ಒಡ್ಡಿದ್ದಳು.

ಈಕೆ ರೇವತಿ. ಶಿವಮೊಗ್ಗದ ಸರ್ಕಾರಿ ಶಾಲೆಯಲ್ಲಿ ಎಸ್‌ಎಸ್ ಎಲ್‌ಸಿ ಓದುತ್ತಿದ್ದಾಳೆ. ವಿದ್ಯಾನಗರದ ರಾಜೀವ್ ಗಾಂಧಿ ಬಡಾವಣೆಯಲ್ಲಿ ವಾಸ. ತಂದೆ ಕೂಲಿ ಕಾರ್ಮಿಕ. ಮನೆಯಲ್ಲಿ ಕಿತ್ತು ತಿನ್ನುವ ಬಡತನ. ಆದರೆ ಇದಾವುದೂ ಆಕೆಯ ಓದುವ ಕನಸಿಗೆ ಅಡ್ಡಿಯಾಗಿರಲಿಲ್ಲ. ಹೇಗೋ ಕಷ್ಟಪಟ್ಟು ಒಂದಿಷ್ಟು ಪುಸ್ತಕಗಳನ್ನು ಖರೀದಿಸಿ ಓದುತ್ತಿದ್ದಳು.

ಕರ್ನಾಟಕ ಪ್ರವಾಹದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಆಕೆಯ ಓದುವ ಕನಸು ಹಸಿರಾಗಿತ್ತು. ಬಡತನದ ಗೋಳಿನ ನಡುವೆಯೇ ತಮ್ಮ ಕುಟುಂಬದ ಬದುಕು ಹಸನಾಗಿ ಬದಲಾಗಬೇಕು ಎಂಬ ಆಸೆಯಿತ್ತು. ಇದಕ್ಕಾಗಿ ಆಕೆ ಹಗಲು ರಾತ್ರಿ ಕಷ್ಟಪಟ್ಟು ಓದುತ್ತಿದ್ದಳು. ಆದರೆ ಶುಕ್ರವಾರ ರಾತ್ರಿಯ ಮಳೆ ಆಕೆಯ ಕನಸಿಗೆ ತಣ್ಣೀರೆರಚಿದೆ.

ಉಕ್ಕಿ ಹರಿಯುತ್ತಿದ್ದ ತುಂಗೆ: ಆಕೆಗೆ ಶುಕ್ರವಾರ ಕೆಟ್ಟ ದಿನವಾಗಿತ್ತು. ನಾಲ್ಕೈದು ದಿನಗಳಿಂದ ಸುರಿಯುತ್ತಿದ್ದ ಮಳೆಯಿಂದ ಪಕ್ಕದಲ್ಲಿಯೇ ಹರಿಯುತ್ತಿದ್ದ ತುಂಗೆ ಉಕ್ಕಿ ಹರಿಯುತ್ತಿದ್ದಳು. ಆದರೆ ಅದು ತಮ್ಮ ಮನೆಯ ಕಡೆಗೆ ತಿರುಗುತ್ತದೆ ಎಂದು ಕನಸಿನಲ್ಲಿಯೂ ಯೋಚಿಸಿರಲಿಲ್ಲ.

ಶುಕ್ರವಾರ ಎಂದಿನಂತೆ ರಾತ್ರಿ 10 ಗಂಟೆಯವರೆಗೆ ಓದಿ ಬಳಿಕ ಮನೆಯವರ ಜೊತೆ ಮಲಗಿದ್ದಳು. ರಾತ್ರಿ ಇದ್ದಕ್ಕಿದ್ದಂತೆ ತುಂಗೆ ಭೋರ್ಗರೆಯುತ್ತಾ ಇವರಿದ್ದ ಬಡಾವಣೆಯತ್ತ ನುಗ್ಗಿತು. ಗಡಿಬಿಡಿಯಲ್ಲಿ ಮನೆಯವರು ಜೀವದ ಹಂಗು ತೊರೆದು ಹೊರಗೆ ಓಡಿದ್ದರು. ಇವರ ಜೊತೆ ಈಕೆಯೂ ಓಡಿದ್ದಳು.

ಪ್ರವಾಹದಲ್ಲಿ ಕೊಚ್ಚಿ ಹೋಯ್ತು ವಿದ್ಯಾರ್ಥಿನಿ ಕನಸು!

ಪುಸ್ತಕವನ್ನು ಮಂಚದ ಮೇಲಿಡಲು ಮರೆತಿರಲಿಲ್ಲ. ಆದರೆ ಈಗ ಮಸುಕು ಮಸುಕಾಗಿರುವ ಅಕ್ಷರಗಳುಳ್ಳ ಪುಸ್ತಕವನ್ನು ಎದೆಗವಚಿಕೊಂಡು ಮೌನವಾಗಿ ಸಂಕಟಪಡುತ್ತಿದ್ದಾಳೆ.

click me!