ಜನರ ಆಹವಾಲು ಆಲಿಸಲು ‘ಫೇಸ್‌ಬುಕ್‌’: ಶಿವಮೊಗ್ಗ ಡೀಸಿಯ ವಿನೂತನ ಕ್ರಮ

By Kannadaprabha NewsFirst Published Jul 23, 2019, 10:38 AM IST
Highlights

ಫೇಸ್‌ಬುಕ್‌ನಂತಹ ಸಾಮಾಜಿಕ ಜಾಲತಾಣವನ್ನು ಬಳಸಿಕೊಂಡು ಜನರ ಅಹವಾಲುಗಳಿಗೆ ಕಿವಿಯಾಗುವ ಮೂಲಕ ಶಿವಮೊಗ್ಗ ಜಿಲ್ಲಾಡಳಿತ ಹಲವು ಜನಪರ ಕಾರ್ಯಗಳನ್ನು ಕೈಗೊಂಡಿದೆ. ಜಿಲ್ಲಾಡಳಿತದ ಫೇಸ್‌ಬುಕ್ ಪೇಜ್‌ ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಜನರು ಪೇಜ್ ಮೂಲಕ ಸಮಸ್ಯೆ ಹೇಳಿಕೊಳ್ಳಬಹುದಾಗಿದೆ.

ಶಿವಮೊಗ್ಗ(ಜು.23): ಫೇಸ್‌ಬುಕ್‌ನಂತಹ ಸಾಮಾಜಿಕ ಜಾಲತಾಣವನ್ನು ಬಳಸಿಕೊಂಡು ಜನರ ಅಹವಾಲುಗಳಿಗೆ ಕಿವಿಯಾಗುವ ಮೂಲಕ ಶಿವಮೊಗ್ಗ ಜಿಲ್ಲಾಡಳಿತ ಹಲವು ಜನಪರ ಕಾರ್ಯಗಳನ್ನು ಕೈಗೊಂಡಿದೆ.

ಜಿಲ್ಲಾಧಿಕಾರಿ ಅವರ ಫೇಸ್‌ಬುಕ್‌ ಪೇಜ್‌ Deputy commissioner Shivamogga ನಿರಂತರ ಚಟುವಟಿಕೆಗಳಿಂದ ಕೂಡಿದ್ದು, ಜಿಲ್ಲಾಡಳಿತದ ಪ್ರತಿಯೊಂದು ಕಾರ್ಯಚಟುವಟಿಕೆಗಳ ಮಾಹಿತಿಯನ್ನು ಸಾರ್ವಜನಿಕರು ಇಲ್ಲಿ ಸುಲಭವಾಗಿ ಪಡೆಯುವುದು ಸಾಧ್ಯವಾಗಿದೆ.

ಈ ಕುರಿತು ಮಾತನಾಡಿದ ಜಿಲ್ಲಾಧಿಕಾರಿ ಕೆ.ಎ. ದಯಾನಂದ ಅವರು, ‘ಪ್ರತಿನಿತ್ಯ ಜಿಲ್ಲಾಧಿಕಾರಿ ಕಚೇರಿಗೆ ನೂರಾರು ಮಂದಿ ಹಲವಾರು ಅಹವಾಲುಗಳೊಂದಿಗೆ ಆಗಮಿಸುತ್ತಾರೆ. ಅವರೆಲ್ಲರ ಅಹವಾಲುಗಳನ್ನು ಸ್ವೀಕರಿಸಿ ಪರಿಹಾರಕ್ಕೆ ಪ್ರಯತ್ನಿಸಲಾಗುತ್ತಿದೆ. ಇದರೊಂದಿಗೆ ಫೇಸ್‌ಬುಕ್‌ ಮೂಲಕ ಸಹ ಅಹವಾಲು, ಸಮಸ್ಯೆಗಳನ್ನು ತಿಳಿದುಕೊಳ್ಳಲು ಸಾಧ್ಯವಾಗುತ್ತಿದೆ. ಮಲೆನಾಡಿನಂತಹ ಊರಿನಲ್ಲಿ ಸಾಮಾಜಿಕ ಜಾಲತಾಣಗಳನ್ನು ಸಮರ್ಪಕವಾಗಿ ಬಳಸಿಕೊಂಡು ಜನರ ಅಹವಾಲುಗಳಿಗೆ ಪರಿಣಾಮಕಾರಿಯಾಗಿ ಸ್ಪಂದಿಸಲು ಸಾಧ್ಯವಿದೆ ಎಂಬುವುದು ಇಲ್ಲಿ ಅರಿವಾಗಿದೆ ಎಂದು ತಿಳಿಸಿದ್ದಾರೆ.

ವಾಟ್ಸಾಪ್ ಗ್ರೂಪ್‌ನಲ್ಲೂ ಸಕ್ರಿಯ:

ಭಾವೈಕ್ಯದ ತಾಣವಾದ ಹಣಗರಕಟ್ಟೆಯಲ್ಲಿ ನೈರ್ಮಲ್ಯ, ಮೂಲಸೌಕರ್ಯಗಳ ಕೊರತೆ ಇತ್ಯಾದಿಗಳ ಕುರಿತು ವಾಟ್ಸಾಪ್‌ ಗ್ರೂಪಿನಲ್ಲಿ ಬಂದ ಪೋಸ್ಟಿಂಗ್‌ ಗಮನಿಸಿ ಅಂದೇ ಜಿಲ್ಲಾಧಿಕಾರಿ ಅವರು ಅಲ್ಲಿಗೆ ಭೇಟಿ ನೀಡಿದ್ದರು. ಆ ಬಳಿಕ ಅಲ್ಲಿನ ಸ್ವಚ್ಛತೆಗೆ ಕ್ರಮ ಕೈಗೊಳ್ಳಲಾಗಿತ್ತು. ಪ್ಲಾಸ್ಟಿಕ್‌ ಬಳಕೆ ಮಾಡದಂತೆ ಸ್ಥಳೀಯ ಅಂಗಡಿಗಳಿಗೆ ಭೇಟಿ ನೀಡಿ ಮನವಿ ಹಾಗೂ ಎಚ್ಚರಿಕೆಯನ್ನು ಸ್ವತಃ ಜಿಲ್ಲಾಧಿಕಾರಿ ಅವರು ಮಾಡಿದ್ದರು. ಈ ಎಲ್ಲಾ ಕಾರಣದಿಂದ ಹಣಗರಕಟ್ಟೆಯಲ್ಲಿ ಸ್ವಚ್ಛತಾ ಕಾರ್ಯಕ್ಕೆ ಚಾಲನೆ ದೊರೆತಿತ್ತು.

ಫೇಸ್‌ಬುಕ್‌ನಲ್ಲಿ ವಿದ್ಯಾರ್ಥಿಗಳಿಗೆ ಇನ್ನು ಕಾಲೇಜುಗಳಿಂದ ಫ್ರೆಂಡ್ ರಿಕ್ವೆಸ್ಟ್!

ವಸತಿ ನಿಲಯಗಳ ಬಗ್ಗೆ ನಿರಂತರ ಅಹವಾಲುಗಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ಸ್ವೀಕರಿಸುತ್ತಿದ್ದ ಜಿಲ್ಲಾಧಿಕಾರಿ ಅವರು ನಿಯಮಿತವಾಗಿ ಅಂತಹ ವಸತಿ ನಿಲಯಗಳಿಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಸುಧಾರಿಸಲು ಕ್ರಮ ಕೈಗೊಳ್ಳುತ್ತಿದ್ದಾರೆ.

ಪರಿಸರ ಸ್ನೇಹಿ ಕುಟುಂಬದ ಪ್ರಮಾಣ ಪತ್ರ:

ನಗರ ವ್ಯಾಪ್ತಿಯಲ್ಲಿರುವ ಮನೆಗಳಲ್ಲಿ ನೀರಿನ ಸಮರ್ಪಕೆ ಬಳಕೆ, ಪ್ಲಾಸ್ಟಿಕ್‌ ಮುಕ್ತ ಪರಿಸರ ನಿರ್ಮಾಣವನ್ನು ಉತ್ತೇಜಿಸಲು ಜಿಲ್ಲಾಡಳಿತ ಆರಂಭಿಸಿರುವ ಪರಿಸರ ಸ್ನೇಹಿ ಕುಟುಂಬ ಪ್ರಶಸ್ತಿ ಯೋಜನೆಗೂ ಸಾಮಾಜಿಕ ಜಾಲತಾಣದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪ್ರತಿ ದಿನ ಅಂತಹ ಒಂದು ಮನೆಯನ್ನು ಗುರುತಿಸಿ ಸ್ವತಃ ಜಿಲ್ಲಾಧಿಕಾರಿ ಅವರು ಮನೆಗೆ ಭೇಟಿ ನೀಡಿ, ಜಿಲ್ಲಾಡಳಿತದಿಂದ ಪರಿಸರ ಸ್ನೇಹಿ ಕುಟುಂಬದ ಪ್ರಮಾಣ ಪತ್ರ ನೀಡುವ ಯೋಜನೆ ಇದಾಗಿದೆ. ಈ ಯೋಜನೆಯ ವಿಡಿಯೋಗಳನ್ನು ಲಕ್ಷಾಂತರ ಮಂದಿ ಫೇಸ್‌ಬುಕ್‌ನಲ್ಲಿ ವೀಕ್ಷಿಸಿದ್ದಾರೆ.

ಜನಸಾಮಾನ್ಯರನ್ನು ತಲುಪಲು ಫೇಸ್‌ಬುಕ್‌ ಸುಲಭ ಮಾಧ್ಯಮವಾಗಿದ್ದು, ಜನರ ನಾಡಿಮಿಡಿತವನ್ನು ತಕ್ಷಣ ಅರಿತುಕೊಳ್ಳಲು ಸಾಧ್ಯವಿದೆ. ಪರಿಸರ ಸ್ನೇಹಿ ಕುಟುಂಬ ಪ್ರಶಸ್ತಿಯಂತಹ ಕಾರ್ಯಕ್ರಮಗಳ ಬಗ್ಗೆ ಸಾಮಾಜಿಕ ಜಾಲತಾಣಗಳ ಮೂಲಕ ಕೆಲವು ಮಂದಿಯಾದರೂ ಪ್ರೇರಣೆ ಪಡೆದರೆ ಅದುವೇ ಯಶಸ್ಸು ಎನ್ನುತ್ತಾರೆ ಜಿಲ್ಲಾಧಿಕಾರಿ ಕೆ.ಎ. ದಯಾನಂದ್‌.

click me!