ಕೊಡಗು: ಭೂಗರ್ಭದಲ್ಲಿ ಹುದುಗಿದ್ದ ಶಿವ ದೇವಸ್ಥಾನ ಪತ್ತೆ

Published : Oct 24, 2022, 02:00 AM IST
ಕೊಡಗು: ಭೂಗರ್ಭದಲ್ಲಿ ಹುದುಗಿದ್ದ ಶಿವ ದೇವಸ್ಥಾನ ಪತ್ತೆ

ಸಾರಾಂಶ

ಬೆಳ್ಳುಮಾಡು ಗ್ರಾಮಸ್ಥರಿಂದ ಜೀರ್ಣೋದ್ಧಾರ ಕಾರ್ಯ, 13ನೇ ಶತಮಾನದಲ್ಲಿ ನಾಡದೇವರಾಗಿ ಸ್ಥಿತನಾಗಿದ್ದ ಶ್ರೀ ಮಾದೇವರಪ್ಪ

ಮಂಜುನಾಥ್‌ ಟಿ.ಎನ್‌.

ವಿರಾಜಪೇಟೆ(ಅ.24):  ತಾಲೂಕಿನ ಬೆಳ್ಳುಮಾಡು ಗ್ರಾಮದಲ್ಲಿ ಕೆಂಪು ಕಲ್ಲಿನಿಂದ ನಿರ್ಮಿತವಾದ, ತಾಮ್ರದ ಹೊದಿಕೆಯೊಂದಿಗೆ ವಿಶೇಷವಾಗಿ ಕಾಣುವ ಬನಹೊಂದಿರುವ ಶಿವನ ದೇಗುಲವು ಪತ್ತೆಯಾಗಿದೆ. ವಿರಾಜಪೇಟೆ ತಾಲೂಕಿನ ಕಾಕೋಟುಪರಂಬು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಾದ ಕುಂಜಿಲಗೇರಿ, ಅರಪಟ್ಟು, ಬೆಳ್ಳುಮಾಡು, ಕಂಡಂಗಮರೂರು, ಬೆಪ್ಪುನಾಡು ಖ್ಯಾತಿಯ ಗ್ರಾಮವಾಗಿದ್ದ ಬೆಳ್ಳುಮಾಡು ಗ್ರಾಮದ ಸರ್ವೇ ಸಂಖ್ಯೆ 76/10ರಲ್ಲಿ ಇಂದಿನ ಬೆಳ್ಳುಮಾಡು ದವಸ ಭಂಡಾರ ಸಹಕಾರ ನಿಯಮಿತ ಕಟ್ಟಡದ ಹಿಂಭಾಗದ ಸ್ಥಳದಲ್ಲಿ ಸುಮಾರು 13ನೇ ಶತಮಾನದಲ್ಲಿ ನಾಡು ದೇವನಾಗಿ ಸ್ಥಿತನಾಗಿದ್ದ ಶ್ರೀ ಮಾದೇವರಪ್ಪ ದೇವನ ದೇಗುಲ ಇದಾಗಿದೆ ಎಂದು ಗುರುತಿಸಲಾಗಿದೆ.

ದೇಗುಲವು ಕಳ್ಳಕಾರ ಪಾಲಾಗಿ, ಕಾಡು ಪಾಲಾಗಿ, ಪ್ರಕೃತಿಯಲ್ಲಾದ ಬದಲಾವಣೆಯಿಂದ ಶಿಥಿಲಾವಸ್ಥೆಗೆ ತಲುಪಿದೆ. ದೇಗುಲವು 2009ರಲ್ಲಿ ಮೊತ್ತ ಮೊದಲ ಬಾರಿಗೆ ಬೆಳಕಿಗೆ ಬಂದಿತ್ತು. ನಂತರದಲ್ಲಿ ದೇಗುಲಕ್ಕೆ ತೆರಳಲು ದಾರಿಯಿಲ್ಲದ ಕಾರಣ ಅಭಿವೃದ್ಧಿ ಕಾಣದೆ ಮತ್ತೆ ಶಿಥಿಲಾವಸ್ಥೆಗೆ ತಲುಪಿತ್ತು.

ಹೊಸಗುತ್ತಿ- ಹೊಸಳ್ಳಿ ಏತ ನೀರಾವರಿ ಯೋಜನೆಗೆ ಅಪ್ಪಚ್ಚು ರಂಜನ್‌ ಚಾಲನೆ

ದೇಗುಲದ ಕುರುಹ ಪತ್ತೆ: 

ಗ್ರಾಮದಲ್ಲಿ ಏಳಿಗೆ, ಅಭಿವೃದ್ಧಿ ಇಲ್ಲದೆ ಸಾವು- ನೊವುಗಳು ಸಂಭವಿಸುತಿತ್ತು. ಇದನ್ನು ಮನಗಂಡ ಗ್ರಾಮಸ್ಥರು 2009ರ ಅಕ್ಟೋಬರ್‌ನಲ್ಲಿ ಗ್ರಾಮದ ಶ್ರೀ ಅಯ್ಯಪ್ಪ ಶಾಸ್ತಾವು ದೇಗುಲದ ಜೀರ್ಣೋದ್ಧಾರ ಮಾಡುವ ಸಲುವಾಗಿ ದೇವಾಲದಯ ಆವರಣದಲ್ಲಿ ಪ್ರಶ್ನಾರ್ಥ ಕಾರ್ಯ ನಡೆಸಲಾಗಿತ್ತು. ಪ್ರಶ್ನಾಚಿಂತನೆಯಲ್ಲಿ ಕಂಡುಬಂದಂತೆ ಗ್ರಾಮಸ್ಥರು ದೇಗುಲದ ಕುರುಹುಗಳನ್ನು ಹುಡುಕಿ ತೆರಳಿದ ಸಂದರ್ಭದಲ್ಲಿ ದಟ್ಟಕಾಡು ಆವರಿಸಿಕೊಂಡಿದ್ದ ಜಾಗದಲ್ಲಿ ಭಗ್ನಗೊಂಡ ದೇವಾಲಯವು ಪತ್ತೆಯಾಯಿತು ಎಂದು ಮಾತಂಡ ಮನೆತನದ ಸದಸ್ಯರು ಹೇಳುತ್ತಾರೆ.

ಅವಶೇಷಗಳು ಪತ್ತೆ: 

ದೇಗುಲ ಪತ್ತೆಯಾದ ಜಾಗವನ್ನು ಶುಚಿಗೊಳಿಸಲು ಮುಂದಾದ ಗ್ರಾಮಸ್ಥರು ದೇಗುಲದ ಮೇಲೆ ದಟ್ಟವಾಗಿ ಬೆಳೆದಿದ್ದ ಕಾಡು ಮರಗಗಳು, ಗಿಡಗಂಟೆಗಳನ್ನು ಶ್ರಮದಾನದ ಮೂಲಕ ಕಡಿದು ಶುಚಿಗೊಳಿಸಿದರು. ದೇಗುಲಕ್ಕೆ ಕಾಯಕಲ್ಪ ನೀಡಲು ಮುಂದಾದದರು. ಜೀರ್ಣೋದ್ಧಾರಕ್ಕೂ ಮುನ್ನ ದೇವಸ್ಥಾನದ ಆವರಣದಲ್ಲಿ ಹೂವಿನ ಪ್ರಶ್ನೆ, ತಾಂಬೂಲ ಪ್ರಶ್ನೆ ಮತ್ತು ಅಷ್ಟಮಂಗಲ ಪ್ರಶ್ನೆ ಮೂಲಕ ದೇವಸ್ಥಾನದ ಇತಿಹಾಸ ತಿಳಿಯಲು ಗ್ರಾಮಸ್ಥರು ನಿರ್ಧರಿಸಿದರು. ಪ್ರಶ್ನಾಚಿಂತನೆ ನಡೆಸಿದ ಆಗಮಿಕರು ತಿಳಿಸಿದಂತೆ ದೇವಸ್ಥಾನದ ಆವರಣದಲ್ಲಿ ಪಾಳುಬಿದ್ದ ಬಾವಿಯ ಕುರುಹು ಪತ್ತೆಯಾಗಿದೆ. ಕೆಲವು ಅಡಿಗಳ ವರೆಗೆ ಅಗೆದಾಗ ತೆರೆದ ಬಾವಿಯಲ್ಲಿ ಶಿವಲಿಂಗದ ಮೇಲ್ಭಾಗ, ಪಂಚಲೋಹದ ಗಣಪತಿ ವಿಗ್ರಹ, ಸಾಲಿಗ್ರಾಮ, ಗಂಟೆಯ ಮಣಿಗಳು, ದೇವರ ಕತ್ತಿ (ಕಡ್ತಲೆ) ಮುಂತಾದ ವಸ್ತುಗಳು ದೊರಕಿದವು.

ಅನತಿ ದೂರದಲ್ಲಿ ಲಿಂಗದ ಪಾಣಿಪೀಠವು ದೊರಕಿತ್ತು. ದೇಗುಲದ ಮುಖ ಮಂಟಪ, ಪ್ರಾಂಗಣ, ಕೆಂಪು ಕಲ್ಲಿನಿಂದ ನಿರ್ಮಿತವಾದ ಬಲಿಪೀಠ ಮುಂತಾದವುಗಳು ಪತ್ತೆಯಾಗಿದೆ. ದೇವಾಲಯದ ಆವರಣಕ್ಕೆ ಹೊಂದಿಕೊಂಡಿರುವ ಕಾಫಿ ತೋಟದಲ್ಲಿ ಜೋಡಿ ನಾಗದೇವರ ನಾಗ ಕಲ್ಲು, ದೇಗುಲದ ಗರ್ಭಗುಡಿಗೆ ಅಳವಡಿಸುವ ಕುಂಭ ಕಳಶ ಮುಂತಾದವುಗಳು ಪತ್ತೆಯಾಗಿವೆಯ ಗ್ರಾಮದಲ್ಲಿ ನೆಲೆಸಿರುವ ಮಾತಂಡ ಕುಟುಂಬಸ್ಥರ ಮುಂದಾಳತ್ವದಲ್ಲಿ ಇದೀಗ ದೇಗುಲ ಪತ್ತೆಯಾದ 13 ವರ್ಷಗಳ ಬಳಿಕ ಜೀರ್ಣೋದ್ಧಾರಕ್ಕೆ ಗ್ರಾಮಸ್ಥರು ಮುಂದಾಗಿದ್ದಾರೆ.

ಇದರ ಭಾಗವಾಗಿ ದೇವಸ್ಥಾನದ ಇತಿಹಾಸ ಅರಿಯಲು ಪ್ರಾಚ್ಯವಸ್ತು ಮತ್ತು ಪುರಾತತ್ವ ಇಲಾಖೆ ನಿವೃತ್ತ ಅಧಿಕಾರಿಗಳಾಗಿರುವ ಮೂಲತಃ ಪಾರಾಣೆ ನಿವಾಸಿಯಾಗಿದ್ದು ಪ್ರಸ್ತುತ ಮೈಸೂರಿನಲ್ಲಿ ವಾಸವಿರುವ ನಾಯಕಂಡ ಪ್ರಕಾಶ್‌ ಮುತ್ತಣ್ಣ ಅವರನ್ನು ಗ್ರಾಮಸ್ಥರು ಸಂಪರ್ಕಿಸಿದ್ದಾರೆ. ಅ.21ರಂದು ದೇಗುಲವಿರುವ ಸ್ಥಳಕ್ಕೆ ಆಗಮಿಸಿದ ಪ್ರಕಾಶ್‌ ಮುತ್ತಣ್ಣ ಶೋಧ ಕಾರ್ಯ ಆರಂಭಿಸಿದ್ದಾರೆ.

ವಿವಾದಾತ್ಮಕ ಹೇಳಿಕೆ: ನಟ ಚೇತನ್‌ ವಿರುದ್ಧ ಮತ್ತೊಂದು ದೂರು

ಶೋಧದ ವೇಳೆ ಕಂಡುಬಂದದ್ದು: ದೇಗುಲವು ಸುಮಾರು 700-800 ವರ್ಷಗಳ ಇತಿಹಾಸ ಹೊಂದಿರಬಹುದೆಂದು ಊಹಿಸಬಹುದಾಗಿದೆ. ಉತ್ಖನನ ಮಾಡಿದಂತೆ ದೇಗುಲದ ಅವಶೇಷಗಳು ಮತ್ತು ಇತಿಹಾಸವನ್ನು ತಿಳಿಯಬಹುದಾಗಿದೆ. ಗರ್ಭದೊಳಗೆ ಶಿವಲಿಂಗ ಪೀಠ ಮತ್ತು ರುದ್ರ ಭಾಗವು ದೊರೆತಿರುವುದರಿಂದ ಈಶ್ವರ ದೇವಾಲಯವೆಂದು ಗುರುತಿಸಲಾಗುತ್ತದೆ. ದೇಗುಲವು ಸಂಪೂರ್ಣವಾಗಿ ಸುಣ್ಣ ಮತ್ತು ಮರಳು ಹಾಗೂ ಕೆಂಪುಕಲ್ಲಿನಿಂದ ನಿರ್ಮಿಸಿದ್ದು, ಹೆಂಚುಗಳನ್ನು ಬಳಸಲಾಗಿದೆ. ಪ್ರಸ್ತುತ ಇನ್ನಷ್ಟುಅನ್ವೇಶಣೆ ಮಾಡಿದಲ್ಲಿ ಇತಿಹಾಸ ಅರಿಯಲು ಸಾಧ್ಯವಾಗುತ್ತದೆ ಎಂದು ನಾಯಕಂಡ ಪ್ರಕಾಶ್‌ ಮುತ್ತಣ್ಣ ಹೇಳುತ್ತಾರೆ.

ದೇವಸ್ಥಾನಕ್ಕೆ ತೆರಳಲು ದಾರಿಯಿಲ್ಲದೆ ಅನೇಕ ಅಡೆತಡೆಗಳು ಎದುರಾಗಿದ್ದರಿಂದ ಜೀರ್ಣೋದ್ಧಾರ ಕಾರ್ಯ ಅರ್ಧಕ್ಕೇ ನಿಂತಿತ್ತು. ಇದೀಗ ಮತ್ತೆ ಜೀರ್ಣೋದ್ಧಾರ ಕಾರ್ಯ ಮಾಡಲು ನಿರ್ಧರಿಸಿದ್ದು, ಪುರಾತತ್ವ ಇಲಾಖೆ ನಿವೃತ್ತ ಅಧಿಕಾರಿ ಪ್ರಕಾಶ್‌ ಅವರು ದೇವಸ್ಥಾನಕ್ಕೆ ತಾತ್ಕಾಲಿಕವಾಗಿ ದಾರಿ ತೋರಿಸಿದ್ದು, ಶೋಧ ಕಾರ್ಯ ನಡೆಸುತ್ತಿದ್ದಾರೆ. ಶೀಘ್ರವೇ ಗ್ರಾಮಸ್ಥರು, ದಾನಿಗಳ ಸಹಕಾರದೊಂದಿಗೆ ದೇವಸ್ಥಾನವನ್ನು ಅಭಿವೃದ್ಧಿ ಮಾಡಲಾಗುವುದು ಅಂತ ಮಾತಂಡ ಕುಟುಂಬಸ್ಥರು ಮಾತಂಡ ನಟೇಶ್‌ ಕಾಳಪ್ಪ ತಿಳಿಸಿದ್ದಾರೆ. 
 

PREV
Read more Articles on
click me!

Recommended Stories

ಜಾಸ್ತಿ ಬೇಡ ಎರಡೇ ಮಕ್ಕಳನ್ನಷ್ಟೇ ಮಾಡಿಕೊಳ್ಳಿ: ನವದಂಪತಿಗಳಿಗೆ ಸಿಎಂ ಸಲಹೆ
ಇಂದು ಲೋಕಸಭೆಯಲ್ಲಿ ‘ವಂದೇ ಮಾತರಂ’ ಚರ್ಚೆ: ಮೋದಿ ಚಾಲನೆ