
ಶಿರಾ (ಸೆ.30): ಜೆಡಿಎಸ್ ಶಾಸಕರಾಗಿದ್ದ ಬಿ. ಸತ್ಯನಾರಾಯಣ ಅವರ ನಿಧನದಿಂದ ತೆರವಾಗಿರುವ ಶಿರಾ ವಿಧಾನಸಭಾ ಕ್ಷೇತ್ರಚುನಾವಣೆಗೆ ಸದ್ದಿಲ್ಲದೆ ಅಖಾಡ ಸಜ್ಜಾಗುತ್ತಿದ್ದು, ಆಡಳಿತಾರೂಢ ಬಿಜೆಪಿಯಿಂದ ಯಾರು ಕಣಕ್ಕಿಳಿಯುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.
ಶಿರಾ ವಿಧಾನಸಭಾ ಉಪಚುನಾವಣೆಯಲ್ಲಿ ಬಿಜೆಪಿ ವತಿಯಿಂದ ಕಾಡುಗೊಲ್ಲ ಸಮುದಾಯದ ನನಗೆ ಟಿಕೆಟ್ ನೀಡಬೇಕು ಎಂದು ಮುಖಂಡ ಡಾ.ಶಿವಕುಮಾರ್ ಒತ್ತಾಯಿಸಿದ್ದಾರೆ.
ಶಿರಾಕ್ಕೆ ಕೈ ಅಭ್ಯರ್ಥಿ ಟಿಬಿಜೆ; ಬಿಜೆಪಿ, ದಳದಿಂದ ಯಾರು? ...
ಈ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿ, ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಗುಬ್ಬಿ ಕ್ಷೇತ್ರಕ್ಕೂ ನಾನು ಟಿಕೆಟ್ ಆಕಾಂಕ್ಷಿಯಾಗಿದ್ದೆ. ಆದರೆ ಕೊನೆ ಗಳಿಗೆಯಲ್ಲಿ ಟಿಕೆಟ್ ಕೈತಪ್ಪುವಂತೆ ಮಾಡಿದರು. ಆದರೆ ಈ ಬಾರಿಯ ಶಿರಾ ವಿಧಾನಸಭಾ ಉಪಚುನಾವಣೆಗೆ ನನಗೆ ಟಿಕೆಟ್ ನೀಡಬೇಕು. ಕಾಡುಗೊಲ್ಲ ಸಮುದಾಯಕ್ಕೆ ನ್ಯಾಯ ಒದಗಿಸಬೇಕು. ಈಗಾಗಲೇ ಬಿಜೆಪಿ ವರಿಷ್ಠರೊಂದಿಗೆ ಚರ್ಚೆ ನಡೆಸಿದ್ದು, ಟಿಕೆಟ್ ಸಿಗುವ ಬಗ್ಗೆ ಭರವಸೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.
ಈ ಕ್ಷೇತ್ರದಲ್ಲಿ ಬಿಜೆಪಿ ದೊಡ್ಡ ಮಟ್ಟದಲ್ಲಿ ಯಾವತ್ತೂ ಸದ್ದು ಮಾಡಿಲ್ಲ. ಕ್ಷೇತ್ರದ ಮುಖಂಡರಾದ ಎಸ್.ಆರ್. ಗೌಡ, ಬಿ.ಕೆ. ಮಂಜುನಾಥ್, ಬಿ. ಗೋವಿಂದಪ್ಪ ಮೊದಲಾದ ಆಕಾಂಕ್ಷಿಗಳಾಗಿದ್ದದ್ದರೂ ಈ ಬಾರಿ ಕ್ಷೇತ್ರದ ಹೊರಗಿನವರೇ ಇಲ್ಲಿ ಕಣಕ್ಕಿಳಿಯುವ ಸಾಧ್ಯತೆ ಹೆಚ್ಚಾಗಿದೆ. ಪಕ್ಷ ಅಧಿಕಾರದಲ್ಲಿರುವುದರಿಂದ ಪ್ರಬಲ ಅಭ್ಯರ್ಥಿಯನ್ನೇ ಕಣಕ್ಕಿಳಿಸಿ ಗೆಲ್ಲುವ ಲೆಕ್ಕಾಚಾರ ನಡೆದಿದೆ.