ಹೊಸಕೋಟೆ ಯುವಕರಲ್ಲಿ ಸ್ವಾಭಿಮಾನದ ಅಲೆ ಎಬ್ಬಿಸಿದ ಶರತ್‌ ಬಚ್ಚೇಗೌಡ

By Kannadaprabha NewsFirst Published Dec 10, 2019, 10:18 AM IST
Highlights

ಹೊಸ ಕೋಟೆ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದ್ದ ಬಿಜೆಪಿ ಸಂಸದ ಶರತ್ ಬಚ್ಚೇಗೌಡರ ಪುತ್ರ ಶರತ್ ಬಚ್ಚೇಗೌಡ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದಿದ್ದು, ಸ್ವಾಭಿಮಾನಕ್ಕೆ ಗೆಲುವು ಸಿಕ್ಕಂತಾಗಿದೆ.

ಸೂಲಿಬೆಲೆ (ಡಿ.10):  ಬಿಜೆಪಿಯಿಂದ ಟಿಕೆಟ್‌ ಸಿಗಲ್ಲ ಎಂದು ಗೋತ್ತಾಗುತ್ತಿದ್ದಂತೆ ಹೊಸಕೋಟೆ ಕ್ಷೇತ್ರದ ಸ್ವಾಭಿಮಾನಕ್ಕಾಗಿ ನಾನು ಪಕ್ಷೇತರನಾಗಿ ಸ್ಪರ್ಧೆಗೆ ಇಳಿಯುತ್ತಿದ್ದೇನೆ ಎಂಬ ಮಾತುಗಳು ಹೊಸಕೋಟೆ ಕ್ಷೇತ್ರದ ಯುವ ಜನತೆಯಲ್ಲಿ ಸ್ವಾಭಿಮಾನದ ಅಲೆ ಶುರುವಾಗಲು ಕಾರಣವಾಯಿತು.

ಯೂತ್‌ ಐಕಾನ್‌ ಎಂದೇ ಖ್ಯಾತಿಯನ್ನು ಹೊಂದಿದ್ದ ಶರತ್‌ ಬಚ್ಚೇಗೌಡ ಎಲ್ಲ ಜನರೊಂದಿಗೆ ಬೆರೆಯುತ್ತಿದ್ದ ಅವರ ಆತ್ಮೀಯತೆ ಬಹುಬೇಗ ಮತದಾರರ ಮನದಲ್ಲಿ ಸ್ಥಾನ ಪಡೆಯಲು ಕಾರಣವಾಯಿತು. ಪ್ರತಿ ಗ್ರಾಮಕ್ಕೆ ಪ್ರಚಾರಕ್ಕೆ ಹೋದಾಗ ಯುವಕರೇ ಹೆಚ್ಚಿನ ಸಂಖ್ಯೆಯಲ್ಲಿ ನೆರೆದು ಹೂ ಮಳೆ ಸುರಿಯುತ್ತಾ ಅವರನ್ನು ಗ್ರಾಮಕ್ಕೆ ಸ್ವಾಗತಿಸುತ್ತಿದ್ದ ಪರಿ ಎಲ್ಲರ ಗಮನ ಸೆಳೆಯಿತು.

ಬಿಜೆಪಿಗರಿಂದ ಶರತ್ ಬಚ್ಚೇಗೌಡಗೆ ಬೆಂಬಲ

ವಿದ್ಯಾವಂತ ಯುವಕ, ಅಲ್ಲದೆ ವಿದೇಶದಲ್ಲಿ ಓದಿ ಬಂದವನು. ಬಿಜೆಪಿ ಕಟ್ಟಿಬೆಳೆಸಿದ್ರೂ ಆದ್ಯತೆ ನೀಡದೆ, ಪಕ್ಷ ಬಿಟ್ಟು ಬಂದೋರಿಗೆ ಆದ್ಯತೆ ನೀಡಿದರು. ಶರತ್‌ಗೆ ಮೋಸ ಮಾಡಿದ್ರು ಎಂಬ ಅಂಶ ಜನರ ಮನ ಮುಟ್ಟುವಲ್ಲಿ ಯಶಸ್ವಿಯಾಗಿತ್ತು. 2018ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ 91 ಸಾವಿರ ಮತ ಪಡೆದಿದ್ದ ಶರತ್‌ ಯುವ ನಾಯಕರಾಗಿ ಹೊರ ಹೊಮ್ಮಿದ್ದರು. ಬಿಜೆಪಿಯ ನಾಯಕರು ಎಷ್ಟೇ ಟೀಕೆ ಮಾಡಿದ್ರು ಎದೆಗುಂದಲಿಲ್ಲ. ಎದುರಾಳಿ ಪರ ಬಂದ ನಾಯಕರ ಮನಸು ನೋವಾಗುವಂತೆ ಟೀಕೆ ಮಾಡಲು ಮುಂದಾಗಲಿಲ್ಲ. ಅವರ ಟೀಕೆಗಳನ್ನೆಲ್ಲ ಗೌರವದಿಂದಲೇ ಉತ್ತರಿಸಿದರು.

ಅವರ ನಡೆ, ನುಡಿ ಮತ್ತು ಮಾತು ಎಲ್ಲ ಮತದಾರರ ಮನದಾಳವನ್ನು ಗೆಲ್ಲುವಲ್ಲಿ ಯಶಸ್ವಿಯಾಗಿ ಕೊನೆಗೆ ಶಾಸಕರಾಗಿ ಆಯ್ಕೆಯಾಗುವ ಮೂಲಕ ತಮ್ಮ ಕುಟುಂಬದ 60 ವರ್ಷಗಳ ರಾಜಕಾರಣವನ್ನು ಮುನ್ನಡೆಸಿಕೊಂಡು ಹೋಗುವ ಯುವ ನಾಯಕರಾಗಿ ಹೊರಹೊಮ್ಮಿದ್ದಾರೆ.

click me!