
ರಾಯಚೂರು ಜಿಲ್ಲೆಯಲ್ಲಿ ದಿನೇ ದಿನೇ ಉಷ್ಣಾಂಶ ಏರಿಕೆಯಾಗುತ್ತಿದ್ದು, ತೀವ್ರ ಬಿಸಿಲಿನ ಪರಿಣಾಮ ಜನಜೀವನ ಅಸ್ತವ್ಯಸ್ತವಾಗುತ್ತಿದೆ. ವಿಶೇಷವಾಗಿ ನವಜಾತ ಶಿಶುಗಳ ಆರೋಗ್ಯದ ಮೇಲೆ ಇದರ ದುಷ್ಪರಿಣಾಮ ಗಂಭೀರವಾಗಿ ಕಾಣಿಸಿಕೊಂಡಿದೆ. ಬಿಸಿಲಿನ ತಾಪಮಾನ ಹೆಚ್ಚಳದಿಂದ ಶಿಶುಗಳಲ್ಲಿ ಜ್ವರ, ನಿರ್ಜಲೀಕರಣ ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಂಡಿದ್ದು, ಪೋಷಕರಲ್ಲಿ ಆತಂಕ ಹೆಚ್ಚಾಗಿದೆ.
ರಾಯಚೂರಿನ ರಿಮ್ಸ್ ಆಸ್ಪತ್ರೆಯಲ್ಲಿ ಈಗಾಗಲೇ 47ಕ್ಕೂ ಹೆಚ್ಚು ನವಜಾತ ಶಿಶುಗಳನ್ನು ದಾಖಲಿಸಲಾಗಿದೆ. ಜ್ವರ ಹಾಗೂ ನಿರ್ಜಲೀಕರಣದಿಂದ ಬಳಲುತ್ತಿರುವ ಈ ಶಿಶುಗಳ ಮೇಲ್ವಿಚಾರಣೆಗೆ ವೈದ್ಯರು ವಿಶೇಷ ಕಾಳಜಿ ವಹಿಸುತ್ತಿದ್ದಾರೆ. ದಿನದ 24 ಗಂಟೆಗಳ ಕಾಲ ಮಕ್ಕಳ ಆರೈಕೆ ನಡೆಯುತ್ತಿದ್ದು, ವೈದ್ಯಕೀಯ ಸಿಬ್ಬಂದಿ ನಿರಂತರವಾಗಿ ಅವರ ಆರೋಗ್ಯ ಸ್ಥಿತಿಯನ್ನು ಪರಿಶೀಲಿಸುತ್ತಿದ್ದಾರೆ.
ಬೆಳಿಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ತೀವ್ರ ಬಿಸಿಲಿನ ಸೆಕೆ ಕಂಡುಬರುತ್ತಿದ್ದು, ಈ ಅವಧಿಯಲ್ಲಿ ಶಿಶುಗಳು ಹೆಚ್ಚು ತೊಂದರೆ ಅನುಭವಿಸುತ್ತಿವೆ. ಬಿಸಿಲಿನ ಪರಿಣಾಮವಾಗಿ ದೇಹದಲ್ಲಿನ ನೀರಿನ ಅಂಶ ಕಡಿಮೆಯಾಗುವುದರಿಂದ ನಿರ್ಜಲೀಕರಣ ಉಂಟಾಗುತ್ತದೆ. ಇದರಿಂದ ಜ್ವರ, ದೌರ್ಬಲ್ಯ, ಜಾಂಡಿಸ್ (ಕಾಮಾಲೆ) ಸೇರಿದಂತೆ ಹಲವು ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ಕೆಲವು ಪ್ರಕರಣಗಳಲ್ಲಿ ಕಿಡ್ನಿ ಹಾಗೂ ಇತರೆ ಅಂಗಾಂಗಗಳ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ವೈದ್ಯರು ಎಚ್ಚರಿಸಿದ್ದಾರೆ.
ಮಕ್ಕಳ ಅಸ್ವಸ್ಥತೆಯಿಂದಾಗಿ ಅವರ ನಿರಂತರ ಕಿರುಚಾಟ ತಾಯಂದಿರಿಗೂ ಕಷ್ಟಕರ ಪರಿಸ್ಥಿತಿ ಉಂಟುಮಾಡಿದೆ. ಬಾಣಂತಿಯರು ಶಿಶುಗಳಿಗೆ ಹಾಲುಣಿಸಲು ಹರಸಾಹಸ ಪಡುತ್ತಿದ್ದಾರೆ. ತಾಯಿಯರು ಸರಿಯಾಗಿ ಹಾಲುಣಿಸದಿದ್ದರೆ ಶಿಶುಗಳಲ್ಲಿ ನಿರ್ಜಲೀಕರಣ ಹೆಚ್ಚಾಗುವ ಸಾಧ್ಯತೆ ಇರುವುದರಿಂದ, ಮಕ್ಕಳ ಆರೋಗ್ಯ ಮತ್ತಷ್ಟು ಹದಗೆಡುತ್ತಿದೆ.
ಈ ಕುರಿತು ಮಕ್ಕಳ ತಜ್ಞ ಡಾ. ವಿಜಯ ಸುಖಾಣಿ ಅವರು ಪ್ರತಿಕ್ರಿಯಿಸಿ, ಬಿಸಿಲಿನ ತೀವ್ರತೆಯಿಂದ ನವಜಾತ ಶಿಶುಗಳಲ್ಲಿ ಜ್ವರ ಹಾಗೂ ನಿರ್ಜಲೀಕರಣ ಸಾಮಾನ್ಯವಾಗಿ ಕಾಣಿಸುತ್ತಿದೆ. ದೇಹದಲ್ಲಿ ನೀರಿನ ಕೊರತೆ ಉಂಟಾದಾಗ ಜಾಂಡಿಸ್ ಸಮಸ್ಯೆಯೂ ಕಾಣಿಸಬಹುದು. ಆದ್ದರಿಂದ ತಾಯಂದಿರು ಶಿಶುಗಳಿಗೆ ನಿಯಮಿತವಾಗಿ ಹಾಗೂ ಸಮರ್ಪಕವಾಗಿ ಹಾಲುಣಿಸುವುದು ಅತ್ಯಗತ್ಯ ಎಂದು ಸಲಹೆ ನೀಡಿದ್ದಾರೆ.
ಅದೇ ರೀತಿ, ಬಿಸಿಲಿನ ತಾಪಮಾನ ಕಡಿಮೆಯಾಗುವವರೆಗೆ ಮಕ್ಕಳನ್ನು ವಿಶೇಷ ಕಾಳಜಿಯಿಂದ ನೋಡಿಕೊಳ್ಳಬೇಕು ಎಂದು ಅವರು ಸೂಚಿಸಿದ್ದಾರೆ. ಮಧ್ಯಾಹ್ನ 12 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಶಿಶುಗಳನ್ನು ಹೊರಗೆ ತೆಗೆದುಕೊಂಡು ಹೋಗಬಾರದು. ಮಕ್ಕಳಿಗೆ ಹಗುರವಾದ, ಬಿಳಿ ಬಣ್ಣದ ಬಟ್ಟೆಗಳನ್ನು ಧರಿಸುವಂತೆ ಮಾಡಬೇಕು. ತಾಪಮಾನದಿಂದ ರಕ್ಷಿಸಲು ಸಾಧ್ಯವಾದಷ್ಟು ತಂಪಾದ ವಾತಾವರಣದಲ್ಲಿ ಇರಿಸುವುದು ಒಳಿತು ಎಂದು ಹೇಳಿದ್ದಾರೆ.
ರಾಯಚೂರಿನಲ್ಲಿ ಏರುತ್ತಿರುವ ಬಿಸಿಲಿನ ತೀವ್ರತೆ ನವಜಾತ ಶಿಶುಗಳ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿರುವ ಹಿನ್ನೆಲೆಯಲ್ಲಿ, ಪೋಷಕರು ಮತ್ತು ಆರೋಗ್ಯ ಇಲಾಖೆ ಹೆಚ್ಚಿನ ಜಾಗೃತಿಯನ್ನು ವಹಿಸುವುದು ಅತ್ಯಗತ್ಯವಾಗಿದೆ.