Uttara Kannada : ಹಂಫ್ಸ್‌ ರಹಿತ ಸರ್ವಿಸ್‌ ರಸ್ತೆ: ಅಪಘಾತ ಸಂಖ್ಯೆ ಹೆಚ್ಚಳ

By Kannadaprabha NewsFirst Published Nov 26, 2022, 11:12 AM IST
Highlights
  • ಹಂಫ್ಸ್‌ ರಹಿತ ಸರ್ವಿಸ್‌ ರಸ್ತೆ: ಅಪಘಾತ ಸಂಖ್ಯೆ ಹೆಚ್ಚಳ
  • ಅವೈಜ್ಞಾನಿಕವಾಗಿ ರಸ್ತೆ ನಿರ್ಮಾಣ
  • ಅರೆಬರೆ ಕಾಮಗಾರಿ ವಿರುದ್ಧ ಸ್ಥಳೀಯರ ಆಕ್ರೋಶ

ಕಾರವಾರ (ನ.26) : ನಗರದಲ್ಲಿ ಹಾದುಹೋದ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಫ್ಲೈಓವರ್‌ ನಿರ್ಮಾಣ ಮಾಡಲಾಗಿದ್ದು, ಆರ್‌ಟಿಒ ಕಚೇರಿ ಎದುರು ಸರ್ವಿಸ್‌ ರಸ್ತೆ ಬಳಿ ಹಂಫ್ಸ್‌ ಇಲ್ಲದೇ ಅಪಘಾತಗಳು ನಡೆಯುತ್ತಿವೆ. ಗೋವಾ ಕಡೆಯಿಂದ ಅಂಕೋಲಾ ಕಡೆಗೆ ತೆರಳಲು, ಅಂಕೋಲಾ ಕಡೆಯಿಂದ ಗೋವಾ ಕಡೆಗೆ ಸಾಗಲು ಎರಡು ಪ್ರತ್ಯೇಕ ಫ್ಲೈಓವರ್‌ ನಿರ್ಮಾಣ ಮಾಡಲಾಗಿದೆ. ಅಂಕೋಲಾ ಕಡೆಯಿಂದ ಬರುವುದು ಪೂರ್ಣಗೊಂಡು ಸಂಚಾರ ಮುಕ್ತಗೊಳಿಸಲಾಗಿದೆ. ಗೋವಾ ಕಡೆಯಿಂದ ಬರುವುದು ಇನ್ನೂ ಪೂರ್ಣಗೊಂಡಿಲ್ಲ.

ಅಂಕೋಲಾ ಕಡೆಯಿಂದ ಬರುವುದು ನಗರದ ಲಂಡನ್‌ ಬ್ರಿಜ್ಡ್‌ ಬಳಿ ಪ್ರಾರಂಭವಾಗಿ ಆರ್‌ಟಿಒ ಕಚೇರಿ ಎದುರು ಮುಕ್ತಾಯಗೊಳ್ಳುತ್ತದೆ. ಗೋವಾ ಕಡೆಯಿಂದ ಬರುವುದು ಆರ್‌ಟಿಒ ಕಚೇರಿಯಿಂದ ಲಂಡನ್‌ ಬ್ರಿಜ್ಡ್‌ ಬಳಿ ಅಂತ್ಯವಾಗುತ್ತದೆ.

Traffic Rules ದ್ವಿಚಕ್ರ ವಾಹನಕ್ಕೆ 2 ಮಿರರ್, ಇಂಡಿಕೇಟರ್ ಕಡ್ಡಾಯ, ಉಲ್ಲಂಘಿಸಿದರೆ ಬೀಳುತ್ತೆ ದಂಡ!

ಆರ್‌ಟಿಒ ಕಚೇರಿ ಬಳಿ ಇಳಿಯುವಲ್ಲಿ ಪಕ್ಕದಿಂದ ಸರ್ವಿಸ್‌ ರಸ್ತೆಯೂ ಸೇರುತ್ತದೆ. ಹೆದ್ದಾರಿ ಹಾಗೂ ಸರ್ವಿಸ್‌ ರಸ್ತೆಯಿಂದ ಬರುವ ವಾಹನಗಳು ವೇಗವಾಗಿ ಬರುತ್ತವೆ. ಹೆದ್ದಾರಿಯಿಂದ ಬರುವವರಿಗೆ ಕೆಳಗಿನ ಸರ್ವಿಸ್‌ ರಸ್ತೆ, ಸರ್ವಿಸ್‌ ರಸ್ತೆಯಿಂದ ಬರುವವರಿಗೆ ಮೇಲಿನ ಹೆದ್ದಾರಿ ರಸ್ತೆ ಕಾಣುವುದಿಲ್ಲ. ಹೆದ್ದಾರಿಯ ಫ್ಲೈಓವರ್‌ ಅಂತ್ಯದಲ್ಲಿ ಅಥವಾ ಸರ್ವಿಸ್‌ ರಸ್ತೆಗಾಗಲಿ ರೋಡ್‌ ಹಂಫ್ಸ್‌ ಹಾಕಿಲ್ಲ. ಹೀಗಾಗಿ ಎರಡೂ ಕಡೆಯಿಂದ ವಾಹನಗಳು ವೇಗವಾಗಿ ಬರುವುದರಿಂದ ಅಪಘಾತಗಳು ನಡೆಯುತ್ತಿವೆ.

ಎರಡೂ ಕಡೆಯಿಂದ ಬಂದವರಿಗೆ ಕೊನೆಯ ಕ್ಷಣದಲ್ಲಿ ವಾಹನ ನಿಯಂತ್ರಣ ಮಾಡಲು ಸಾಧ್ಯವಾಗದೇ ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ. ಐಆರ್‌ಬಿ ಕಂಪೆನಿ ಮುಂದಾಗುವ ಅಪಘಾತಗಳನ್ನು ತಡೆಯುವ ನಿಟ್ಟಿನಲ್ಲಿ ಎರಡೂ ಕಡೆ ಅಥವಾ ಒಂದು ಕಡೆಯಾದರೂ ಹಂಫ್ಸ್‌ ಅಳವಡಿಸಬೇಕಿದೆ. ಹೆದ್ದಾರಿ ಕಾಮಗಾರಿ 2013ರಲ್ಲಿ ಆರಂಭವಾಗಿದ್ದು, ಕಂಪೆನಿಯ ಒಪ್ಪಂದದಂತೆ 2017ರಲ್ಲಿ ಹೆದ್ದಾರಿ ಚತುಷ್ಪಥ ಕೆಲಸ ಪೂರ್ಣಗೊಳಿಸಬೇಕಿತ್ತು. ದಶಕ ಕಳೆದರೂ ಇದುವರೆಗೂ ಪೂರ್ಣಗೊಂಡಿಲ್ಲ. ಕಾರವಾರದಿಂದ ಬಿಣಗಾವರೆಗೆ ಎರಡು ಸುರಂಗ ಕೊರೆಯಲಾಗುತ್ತಿದ್ದು, ಅದು ಕೂಡ ಇನ್ನೂ ಮುಕ್ತಾಯವಾಗಿಲ್ಲ.

ಚತುಷ್ಪಥ ಕೆಲಸ ಪೂರ್ಣಗೊಳ್ಳದೇ ಇದ್ದರೂ ಟೋಲ್‌ ಸಂಗ್ರಹ ಮಾಡಲಾಗುತ್ತಿರುವುದಕ್ಕೆ ಈಗಾಗಲೇ ಹಲವಾರು ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ. ಅರೆಬರೆ ಕಾಮಗಾರಿಯಿಂದಾಗಿ ಸಾರ್ವಜನಿಕರು, ವಾಹನ ಸವಾರರು ಸಾಕಷ್ಟುತೊಂದರೆ ಅನುಭವಿಸುತ್ತಿದ್ದಾರೆ.

ಭಾವುಕ ಕ್ಷಣ ಸೃಷ್ಟಿಸಿದ ಅಪಘಾತ: ಕೇರಳ ಸಾರಿಗೆ ಚಾಲಕನ ಸಮಯಪ್ರಜ್ಞೆಗೆ ಶ್ಲಾಘನೆ

ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಚತುಷ್ಪಥ ಕೆಲಸ ನಡೆಯುತ್ತಿದ್ದು, ಕೆಲವು ಕಡೆ ಅವೈಜ್ಞಾನಿಕವಾಗಿದ್ದರೆ, ಇನ್ನು ಕೆಲವು ಕಡೆ ಅರೆಬರೆ ಕೆಲಸ ಮಾಡಿದ್ದಾರೆ. ಇದರಿಂದ ಜನರಿಗ ಸಾಕಷ್ಟುತೊಂದರೆ ಆಗುತ್ತಿದೆ. ಜಿಲ್ಲಾಡಳಿತ ಸಂಬಂಧಿಸಿದವರೊಂದಿಗೆ ಮಾತುಕತೆ ನಡೆಸಿ ಆದಷ್ಟುಶೀಘ್ರದಲ್ಲಿ ಕಾಮಗಾರಿ ಮುಕ್ತಾಯಗೊಳಿಸಲು ಸೂಚಿಸಬೇಕು.

-ಪ್ರವೀಣ ಶೆಟ್ಟಿ, ಸ್ಥಳೀಯರು

click me!