Uttara Kannada: 'ಒಮಿಕ್ರೋನ್‌ ಸೋಂಕಿತ ದೇಶದಿಂದ ಆಗಮಿಸುವವರಿಗೆ ಮುದ್ರೆ'

By Kannadaprabha NewsFirst Published Dec 19, 2021, 8:35 AM IST
Highlights

*  ಕೋವಿಡ್‌ ಲಸಿಕಾಕರಣ ಕುರಿತು ಸಭೆ ನಡೆಸಿ 
*  ಒಮಿಕ್ರೋನ್‌ ಪ್ರಕರಣಗಳಿರುವ ದೇಶಗಳಿಂದ ಆಗಮಿಸುವವರ ಬಗ್ಗೆ ಹೆಚ್ಚಿನ ನಿಗಾ
*  ಲಸಿಕಾಕರಣ ಕಾರ್ಯಕ್ರಮದಲ್ಲಿ ಹೆಚ್ಚಿನ ಪ್ರಗತಿ ಸಾಧಿಸಲು ಕ್ರಮ

ಕಾರವಾರ(ಡಿ.19):  ಒಮಿಕ್ರೋನ್‌(Omicron) ಪ್ರಕರಣಗಳಿರುವ ದೇಶಗಳಿಂದ ಜಿಲ್ಲೆಗೆ ಆಗಮಿಸುವ ಪ್ರವಾಸಿಗರ ಮೇಲೆ ಕಟ್ಟುನಿಟ್ಟಾಗಿ ನಿಗಾ ವಹಿಸಿ ಮುದ್ರೆ ಹಾಕುವ ವ್ಯವಸ್ಥೆ ಮಾಡಬೇಕೆಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌( Mullai Muhilan) ಸೂಚಿಸಿದರು. ಜಿಲ್ಲಾಧಿಕಾರಿ ಕಚೇರಿ ನ್ಯಾಯಾಲಯ ಸಭಾಂಗಣದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಹಾಗೂ ಜಿಲ್ಲಾಸ್ಪತ್ರೆ ವೈದ್ಯಾಧಿಕಾರಿಗಳೊಂದಿಗೆ ಕೋವಿಡ್‌-19 3ನೇ ಅಲೆಯ ಒಮಿಕ್ರೋನ್‌ ಪ್ರಕರಣಗಳ ಮುಂಜಾಗೃತ ಕ್ರಮ, ಕೋವಿಡ್‌ ಲಸಿಕಾಕರಣ(Covid Vaccination) ಕುರಿತು ಸಭೆ ನಡೆಸಿ ಅವರು ಮಾತನಾಡಿದರು.

ಜಿಲ್ಲೆಗೆ ಒಮಿಕ್ರೋನ್‌ ಪ್ರಕರಣಗಳಿರುವ ದೇಶಗಳಿಂದ ಆಗಮಿಸುವವರ ಬಗ್ಗೆ ಹೆಚ್ಚಿನ ನಿಗಾವಹಿಸಿ ಹಾಗೂ ಪ್ರತಿಯೊಬ್ಬರು ಮನೆಯಲ್ಲಿಯೇ ಇರುವಂತೆ ನೋಡಿಕೊಳ್ಳಬೇಕು. ಅಂತವರು ವಾಸಿಸುವ ಮನೆಗಳಿಗೆ ಈ ಹಿಂದಿನಂತೆ ಗುರುತಿಗಾಗಿ ಸ್ಟಿಕರ್‌ಗಳನ್ನು ಅಂಟಿಸಲು ಅವಶ್ಯಕ ಕ್ರಮಗಳನ್ನು ಕೈಗೊಳ್ಳಿ, ಕೋವಿಡ್‌ ವಾರ್‌ ರೂಮ್‌ನಿಂದ(Covid War Room) ಪ್ರತಿದಿನ ಸಂಬಂಧಿಸಿದವರನ್ನು ಸಂಪರ್ಕಿಸಿ, ಪಾಸಿಟಿವ್‌ ರೋಗಿ ಎಂದು ತಿಳಿದು ಬಂದಲ್ಲಿ ದಾಖಲಿಸಿ ಮತ್ತು ಕೋವಿಡ್‌ ರೂಮ್‌ನಿಂದ ಸಂಬಂಧಿಸಿದ ತಾಲೂಕು ಆರೋಗ್ಯಾಧಿಕಾರಿ, ತಹಸೀಲ್ದಾರ್‌ರೊಂದಿಗೆ ಜಿಲ್ಲಾಧಿಕಾರಿಗೂ ಪ್ರತಿದಿನ ಮಾಹಿತಿ ನೀಡುವ ವ್ಯವಸ್ಥೆ ಮಾಡಿ ಎಂದರು.

Omicron Threat: ಬೆಂಗ್ಳೂರಲ್ಲಿ ಮತ್ತೆ ಕೊರೋನಾ ಸೋಂಕು ಏರಿಕೆ..!

ಲಸಿಕೆ ನೀಡುವಲ್ಲಿ ಭಟ್ಕಳ ಹಾಗೂ ಹಳಿಯಾಳ ತಾಲೂಕುಗಳ ಪ್ರಗತಿ ಕಡಿಮೆ ಇರುವುದರಿಂದ ಇಲ್ಲಿ ಹೆಚ್ಚಿನ ಗಮನ ಹರಿಸಿ, ಎಲ್ಲ ತಾಲೂಕುಗಳಲ್ಲಿ ಎರಡನೆ ಡೋಸ್‌ ಲಸಿಕೆ(Vaccine) ಪಡೆಯಲು ಬಾಕಿ ಇರುವ ಫಲಾನುಭವಿಗಳನ್ನು ಗುರುತಿಸಿ ಲಸಿಕಾಕರಣ ಕಾರ್ಯಕ್ರಮದಲ್ಲಿ ಹೆಚ್ಚಿನ ಪ್ರಗತಿ ಸಾಧಿಸಿ, ಅವಶ್ಯಕ ಔಷಧಿಗಳು ಲಭ್ಯವಿಲ್ಲದಿದ್ದಲ್ಲಿ ದರ ನಿಗದಿಪಡಿಸಿಟ್ಟುಕೊಳ್ಳಿ ಎಂದರು.

ಕಾರವಾರ ವೈಧ್ಯಕೀಯ ಮಹಾವಿದ್ಯಾಲಯ, ಹೊನ್ನಾವರ, ಸಿದ್ದಾಪುರ, ಜೊಯಿಡಾ, ಭಟ್ಕಳ, ಶಿರಶಿ, ಯಲ್ಲಾಪೂರ ತಾಲೂಕು ಆಸ್ಪತ್ರೆಯಲ್ಲಿನ ಪಿಎಸ್‌ಎ ಪ್ಲಾಂಟ್‌ ಘಟಕಗಳಿಗೆ ಟ್ರಾನ್ಸಫಾರ್ಮರ್‌ ಮತ್ತು ಜನರೇಟರಗಳ ಪೊರೈಕೆಯಾಗುವ ಪ್ರಕ್ರಿಯೆ ಬರುವ ಜನವರಿ ತಿಂಗಳ ಮೊದಲನೆ ವಾರದೊಳಗೆ ಪೂರ್ಣಗೊಳಿಸಿ, ಶಿರಸಿ ಮತ್ತು ಭಟ್ಕಳ ತಾಲೂಕು ಆಸ್ಪತ್ರೆಗೆ 6 ಕೆ ಎಲ್‌ ಟ್ಯಾಂಕ್‌ ಸಿವಿಲ್‌ ಕಾಮಗಾರಿ ಅಂತಿಮಗೊಂಡಿರುವುದರಿಂದ ಆದ್ಯತೆ ಮೇರೆಗೆ ಟ್ಯಾಂಕ್‌ನ ಪೂರೈಕೆ ಹಾಗೂ ಮುಂಡಗೋಡ ಮತ್ತು ಹಳಿಯಾಳ ತಾಲೂಕು ಆಸ್ಪತ್ರೆಗಳಿಗೆ ಪಿಎಸ್‌ಎ ಘಟಕ ತ್ವರಿತ ಪೂರ‍್ಯಕೆಯಾಗಬೇಕೇಂದು ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆಯಬೇಕೇಂದು ಸೂಚಿಸಿದರು.

ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರಿಯಾಂಗಾ ಎಂ, ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ನಿರ್ದೇಶಕ ಡಾ. ಗಜಾನನ ನಾಯಕ, ಅರವಳಿಕೆ ತಜ್ಞ ಮಂಜುನಾಥ ಭಟ್‌, ಆಡಳಿತಾಧಿಕಾರಿ ಅಪೇಕ್ಷಾ ಪವಾರ, ಜಿಲ್ಲಾಸ್ಪತ್ರೆ ಶಸ್ತ್ರಚಿಕಿತ್ಸಕ ಶಿವಾನಂದ ಕುಡ್ತಲಕರ್‌, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ, ಡಾ. ಶರದ್‌ ನಾಯಕ, ಆರ್‌.ಸಿ.ಎಚ್‌.ಓ ಡಾ. ರಮೇಶರಾವ್‌, ಜಿಲಾ ಸರ್ವೇಕ್ಷಾಣಾಧಿಕಾರಿ ಡಾ. ವಿನೋದ ಭೂತೆ ಸೇರಿದಂತೆ ಇತರರು ಇದ್ದರು.

ವಿದೇಶದಿಂದ ಬರೋರಿಗೆ ಸಾಂಸ್ಥಿಕ ಕ್ವಾರಂಟೈನ್‌ ಸದ್ಯಕ್ಕಿಲ್ಲ

ಬೆಂಗಳೂರು: ವಿದೇಶಗಳಿಂದ(Foreign) ನಿತ್ಯ ಸಾವಿರಾರು ಮಂದಿ ಆಗಮಿಸುತ್ತಿರುವುದರಿಂದ ಎಲ್ಲರಿಗೂ ಸಾಂಸ್ಥಿಕ ಕ್ವಾರಂಟೈನ್‌(Institutional Quarantine) ಕಲ್ಪಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಸಾಂಸ್ಥಿಕ ಕ್ವಾರಂಟೈನ್‌ ಮಾಡಬೇಕೇ ಅಥವಾ ಬೇಡವೇ ಎಂಬ ಜಿಜ್ಞಾಸೆಗೆ ಬಿಬಿಎಂಪಿ(BBMP)  ಸಿಲುಕಿದೆ.

Omicron Variant: ಸೋಂಕಿತರಿಗೆ ತಾತ್ಕಾಲಿಕ ಆಸ್ಪತ್ರೆಯಲ್ಲಿ ಒಮಿಕ್ರೋನ್‌ ಚಿಕಿತ್ಸೆ

ವಿದೇಶದಿಂದ ಬಂದು ಹೋಂ ಕ್ವಾರಂಟೈನ್‌(Home Quarantine) ಇರುವವರಲ್ಲಿ ಎರಡು ಮೂರು ದಿನಕ್ಕೆ ಸೋಂಕು ಕಾಣಿಸಿಕೊಳ್ಳುತ್ತಿದೆ. ಜೊತೆಗೆ ಒಮಿಕ್ರೋನ್‌(Omicron) ಪತ್ತೆಯಾಗುತ್ತಿರುವುದು ಬಿಬಿಎಂಪಿಯನ್ನು ಚಿಂತೆಗೀಡು ಮಾಡಿದೆ. ವಿದೇಶದಿಂದ ಬಂದು ಹೋಂ ಕ್ವಾರಂಟೈನ್‌ನಲ್ಲಿ ಇರುವವರಲ್ಲಿ ಸೋಂಕು ದೃಢಪಡುತ್ತಿದ್ದರೆ, ರಾಜ್ಯ ಸರ್ಕಾರ ಈ ಹಿಂದಿನಂತೆ ಸಾಂಸ್ಥಿಕ ಕ್ವಾರಂಟೈನ್‌ ಜಾರಿಗೆ ತರಲಿದೆ ಎಂಬ ಚರ್ಚೆ ಮುನ್ನೆಲೆಗೆ ಬಂದಿತ್ತು.

ಈ ಹಿಂದಿನಂತೆ ಬಿಬಿಎಂಪಿ ಕೂಡ ಸಾಂಸ್ಥಿಕ ಕ್ವಾರಂಟೈನ್‌ ಜಾರಿಗೆ ತರಲಿದೆ ಎಂಬ ಚರ್ಚೆಗಳು ಆರಂಭಗೊಂಡಿತ್ತು. ಆದರೆ ಇದೀಗ ಹೈ ರಿಸ್ಕ್‌ ದೇಶಗಳು ಸೇರಿದಂತೆ ಯಾವುದೇ ದೇಶಗಳಿಂದ ಬರುವ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಈವರೆಗೆ ಕಡ್ಡಾಯ ಸಾಂಸ್ಥಿಕ ಕ್ವಾರಂಟೈನ್‌ ನಿಗದಿಪಡಿಸಿಲ್ಲ ಎಂದು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯು(ಬಿಬಿಎಂಪಿ) ಸ್ಪಷ್ಟಪಡಿಸಿದೆ.
 

click me!