ಬೀದರ್‌: ಕೋವಿಡ್‌ ಆರೋಗ್ಯ ಕೇಂದ್ರವಾದ ಸಪ್ನಾ ಹೋಟೆಲ್‌..!

By Kannadaprabha NewsFirst Published Jul 29, 2020, 3:10 PM IST
Highlights

ಬೀದರ್‌ನ ಅತ್ಯಾಧುನಿಕ ಸಪ್ನಾ ಹೋಟೆಲ್‌ ಈಗ ಕೋವಿಡ್‌ ಕಾಳಜಿ ಹಾಗೂ ಆರೋಗ್ಯ ಕೇಂದ್ರ| ಖಾಸಗಿ ಆಸ್ಪತ್ರೆಯ 6 ವೈದ್ಯರು ಸೇರಿ ಆರಂಭಿಸಿರುವ ವಿಶೇಷ ಕೋವಿಡ್‌ ಕೇಂದ್ರ| ಉಸಿರಾಟ ತೊಂದರೆಯಿಂದ ನರಳುತ್ತಿರುವ ರೋಗಿಗಳ ಆರೋಗ್ಯದ ಮೇಲೆ ಹೆಚ್ಚಿನ ನಿಗಾವಹಿಸಲು ಇಬ್ಬರು ಫಿಜಿಶಿಯನ್‌ ಹಾಗೂ ಶ್ವಾಸಕೋಶ ಕಾಯಿಲೆಗೆ ಸಂಬಂಧಿಸಿದ ವಿಶೇಷ ತಜ್ಞರು ಚಿಕಿತ್ಸೆ ನೀಡುವ ವ್ಯವಸ್ಥೆ|

ಬೀದರ್‌(ಜು.29): ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಮಹಾಮಾರಿ ಕೊರೋನಾ ಸೋಂಕು ತಡೆಯಲು ಹಾಗೂ ಜನರ ಆರೋಗ್ಯ ಕಾಪಾಡುವ ಉದ್ದೇಶದಿಂದ ಸರ್ಕಾರದೊಂದಿಗೆ ಕೈಜೋಡಿಸಿ ನಗರದ ಸಪ್ನಾ ಹೋಟಲ್‌ನ ಸುಸಜ್ಜಿತ ಕೋಣೆಗಳಲ್ಲಿ ವಿಶೇಷ ಕೋವಿಡ್‌ ಕಾಳಜಿ ಕೇಂದ್ರ ಹಾಗೂ ಆರೋಗ್ಯ ಕೇಂದ್ರ ಆರಂಭಿಸಲಾಗಿದೆ ಎಂದು ಕೇಂದ್ರದ ನಿರ್ದೇಶಕ ಮತ್ತು ಭಾರತೀಯ ವೈದ್ಯಕಿಯ ಸಂಘದ ಜಿಲ್ಲಾಧ್ಯಕ್ಷ ಡಾ.ವಿ.ವಿ.ನಾಗರಾಜ ತಿಳಿಸಿದ್ದಾರೆ.

ಕೋವಿಡ್‌ ಕಾಳಜಿ ಕೇಂದ್ರದಲ್ಲಿ ಸೋಂಕಿನ ಲಕ್ಷಣ ರಹಿತ ಪಾಸಿಟಿವ್‌ ಬಂದಿರುವ ರೋಗಿ ಹಾಗೂ ಸಾಮಾನ್ಯದಿಂದ ಮಧ್ಯಮ ಗತಿಯಲ್ಲಿರುವ ಕೆಮ್ಮು, ನೆಗಡಿ ಕಾಣಿಸಿಕೊಂಡ ವ್ಯಕ್ತಿಗಳಿಗೆ ಚಿಕಿತ್ಸೆ ನೀಡಲಾಗುತ್ತದೆ. ಉಸಿರಾಟ ತೊಂದರೆ ಮತ್ತು ಶ್ವಾಸ ಉಚ್ಚಾರ ಪ್ರಮಾಣದಲ್ಲಿ ಶೇ.90ಕ್ಕಿಂತ ಮೇಲ್ಪಟ್ಟ ಸೋಂಕಿತರಿಗೆ ಈ ಕೋವಿಡ್‌ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗುತ್ತದೆ ಎಂದು ಮಾಹಿತಿ ನೀಡಿ​ದ​ರು.

ಆಕ್ಸಿಜೆನ್‌, ಐಸಿಯು ಸೌಲ​ಭ್ಯ:

ಸೋಂಕಿನ ಲಕ್ಷಣ ಹೊಂದಿರುವ ರೋಗಿಗಳಿಗಾಗಿಯೇ ಕೋವಿಡ್‌ ಕೇಂದ್ರದಲ್ಲಿಯ 33 ಕೋಣೆಗಳ ಪೈಕಿ 11 ಕೋಣೆಗಳಲ್ಲಿ ಆಕ್ಸಿಜೆನ್‌ ಹಾಗೂ 8 ಹಾಸಿಗೆಗಳಿಗೆ ಐಸಿಯು ಅಳವಡಿಸಲಾಗಿದ್ದು, ಜೊತೆಯಲ್ಲಿ ಚಿಕಿತ್ಸೆಗೆ ಅಗತ್ಯವಿರುವ ಎಲ್ಲ ಸೌಲಭ್ಯ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.

ಬೀದರ್‌: ಅಣ್ಣಾಮಲೈ ಜೊತೆಗೆ ಮಕ್ಕಳ ನೇರ ಸಂದರ್ಶನ

ದಿನದ 24 ಗಂಟೆ ವೈದ್ಯರು, ವಿಶೇಷ ತಜ್ಞ​ರಿಂದ ತಪಾ​ಸ​ಣೆ

ಚಿಕಿತ್ಸೆಗಾಗಿ ದಾಖಲಾದ ರೋಗಿಗಳನ್ನು ದಿನದ 24 ಗಂಟೆ ನಿಯೋಜಿಸಲಾಗಿರುವ ವೈದ್ಯರು ಹಾಗೂ ಶ್ವಾಸಕೋಶ ಚಿಕಿತ್ಸೆಗೆ ವಿಶೇಷ ತಜ್ಞ ವೈದ್ಯರಿಂದ ತಪಾಸಣೆ ಮಾಡುವ ವ್ಯವಸ್ಥೆ ಕಲ್ಪಿಸಲಾಗಿದೆ. ಕೇಂದ್ರದಲ್ಲಿ ಚಿಕಿತ್ಸೆಗಾಗಿ ದಾಖಲಾಗಿರುವ ಎಲ್ಲ ರೋಗಿಗಳಿಗೆ ಥರ್ಮಾ ಮೀಟರ್‌, ಆಕ್ಸಿ ಮೀಟರ್‌ ನೀಡಲಾಗುತ್ತದೆ. 24 ತಾಸು ಕರ್ತವ್ಯ ನಿರತ ವೈದ್ಯರ ಸೇವೆ ಲಭ್ಯವಿರಲಿದೆ. ಫಿಜಿಶಿಯನ್‌ ವೈದ್ಯರು ಸಹ ಮೇಲಿಂದ ಮೇಲೆ ರೌಂಡ್ಸ್‌ ಹಾಕುತ್ತಾರೆ. ಒಟ್ಟು ನಾಲ್ಕು ಜನ ಫಿಜೀಶಿಯನ ವೈದ್ಯರ ಪಾಳೆಯ ಪ್ರಕಾರ ಎರಡು ದಿನಕ್ಕೆ ಒಂದು ಸಾರಿ ಬದಲಾವಣೆ ಮಾಡಲಾಗುತ್ತದೆ.

ಉಸಿರಾಟ ತೊಂದರೆಯಿಂದ ನರಳುತ್ತಿರುವ ರೋಗಿಗಳ ಆರೋಗ್ಯದ ಮೇಲೆ ಹೆಚ್ಚಿನ ನಿಗಾವಹಿಸಲು ಇಬ್ಬರು ಫಿಜಿಶಿಯನ್‌ ಹಾಗೂ ಶ್ವಾಸಕೋಶ ಕಾಯಿಲೆಗೆ ಸಂಬಂಧಿಸಿದ ವಿಶೇಷ ತಜ್ಞರು ಚಿಕಿತ್ಸೆ ನೀಡುವ ವ್ಯವಸ್ಥೆಯೂ ಇದೆ. ಆಯುಷ್ಮಾನ್‌ ಭಾರತ ಹಾಗೂ ಕರ್ನಾಟಕ ಆರೋಗ್ಯ ಸುರಕ್ಷಾ ಯೋಜನೆ ವ್ಯಾಪ್ತಿಯಲ್ಲಿ ಬರುವ ಜನರಿಗೂ ಸರ್ಕಾರ ನಿಗದಿಪಡಿಸಿರುವ ದರದಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಜೊತೆಯಲ್ಲಿ ಈ ಯೊಜನೆಗಳ ವ್ಯಾಪ್ತಿಯಲ್ಲಿ ಬಾರದ ಜನರಿಗೂ ಸರ್ಕಾರ ನಿಗದಿಪಡಿಸಿರುವ ದರದಲೇ ಚಿಕಿತ್ಸೆ ಮಾಡಲಾಗುತ್ತದೆ.

ಜಿಲ್ಲಾಧಿಕಾರಿಗಳ ಕಾಳಜಿಯಿಂದಾಗಿ ಅವರ ಪ್ರೋತ್ಸಾಹ ಮತ್ತು ಸಹಕಾರದ ಮೇರೆಗೆ ಖಾಸಗಿ ಆಸ್ಪತ್ರೆಯ 6 ವೈದ್ಯರು ಸೇರಿ ಆರಂಭಿಸಿರುವ ವಿಶೇಷ ಕೋವಿಡ್‌ ಕೇಂದ್ರದಿಂದ ಜನ ಸ್ನೇಹಿಯಾಗಿ, ರೋಗಕ್ಕೆ ತಕ್ಕಂತೆ ತಜ್ಞರ ಸಲಹೆ ಮೇರೆಗೆ ಚಿಕಿತ್ಸೆ ನೀಡಿ ರೋಗಿಗಳನ್ನು ಬೇಗನೆ ಗುಣಮುಖರಾಗಿ ಮನೆಗೆ ಹೋಗುವಂಥ ವಾತಾವಾರಣ ನಿರ್ಮಿಸುವ ಉದ್ದೇಶ ಹೊಂದಲಾಗಿದೆ. ಜಿಲ್ಲೆಯ ಜನರು ಇದರ ಸದುಪಯೋಗ ಪಡೆದುಕೊಳ್ಳಬೇ​ಕು ಎಂದು ಭಾರತೀಯ ವೈದ್ಯಕಿಯ ಸಂಘದ ಜಿಲ್ಲಾಧ್ಯಕ್ಷ ಡಾ.ನಾಗರಾಜ ಅವರು ತಿಳಿಸಿದ್ದಾರೆ.
 

click me!