ದಸರಾ ಕಾರ್ಯಕ್ರಮಕ್ಕೆ ಗೈರಾಗಿ ಬಹಿರಂಗ ಅಸಮಾಧಾನ ಹೊರಹಾಕುತ್ತಿರುವ ಶಾಸಕ

By Web DeskFirst Published Aug 27, 2019, 10:05 AM IST
Highlights

ಬಿಜೆಪಿ ಸರ್ಕಾರದ ಸಂಪುಟದಲ್ಲಿ ಸ್ಥಾನ ವಂಚಿತ ಶಾಸಕ ತಮ್ಮ ಅಸಮಾಧಾನ ಮುಂದುವರಿಸಿದ್ದಾರೆ. ದಸರಾ ಕಾರ್ಯಕ್ರಮದಿಂದ ದೂರ ಉಳಿದು ಪದೇ ಪದೇ ತಮ್ಮ ಅತೃಪ್ತಿ ಹೊರ ಹಾಕುತ್ತಿದ್ದಾರೆ. 

ಮೈಸೂರು [ಆ.27]:  ರಾಜ್ಯ ಬಿಜೆಪಿ ಸರ್ಕಾರದ ಸಂಪುಟದಲ್ಲಿ ಸ್ಥಾನ ವಂಚಿತ ಕೃಷ್ಣರಾಜ ಕ್ಷೇತ್ರದ ಶಾಸಕ ಎಸ್‌.ಎ.ರಾಮದಾಸ್‌ ಅವರು ಸಚಿವ ವಿ.ಸೋಮಣ್ಣ ಉಸ್ತುವಾರಿಯಲ್ಲಿ ನಡೆಯುತ್ತಿರುವ ನಾಡಹಬ್ಬ ದಸರಾ ಕಾರ್ಯಕ್ರಮಕ್ಕೆ ಭಿನ್ನಮತ ಮುಂದುವರಿಸಿದ್ದಾರೆ. 

ದಸರಾ ಸಿದ್ಧತೆಗೆ ಸಂಬಂಧಿಸಿ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಕರೆದಿದ್ದ ದಸರಾ ಕಾರ್ಯಕಾರಿ ಸಮಿತಿ ಸಭೆಗೆ ರಾಮದಾಸ್‌ ಇತ್ತೀಚೆಗೆ ಗೈರಾಗಿದ್ದರು. ಅದರ ಬೆನ್ನಲ್ಲೇ ಈಗ ಮೈಸೂರು ಅರಮನೆಯಲ್ಲಿ ನಡೆದ ಗಜಪಡೆ ಸ್ವಾಗತ ಸಮಾರಂಭದಿಂದಲೂ ದೂರ ಉಳಿದು ತಮ್ಮ ಅಸಮಾಧಾನವನ್ನು ಬಹಿರಂಗಪಡಿಸಿದ್ದಾರೆ.

ರಾಜ್ಯ ರಾಜಕೀಯದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ರಾಮದಾಸ್‌ ಮುನಿಸನ್ನು ಸಚಿವ ಸೋಮಣ್ಣ ಇದೇ ಮೊದಲ ಬಾರಿಗೆ ಬಹಿರಂಗವಾಗಿ ಒಪ್ಪಿಕೊಂಡಿದ್ದು, ಸದ್ಯದಲ್ಲೇ ಅವರನ್ನು ಭೇಟಿಯಾಗಿ ಮನವೊಲಿಸುವ ಕೆಲಸ ಮಾಡುತ್ತೇವೆ ಎಂದು ತಿಳಿಸಿದ್ದಾರೆ. ಜತೆಗೆ, ದಸರಾಗೆ ಸಂಬಂಧಿಸಿದ ಮುಂದಿನ ಕಾರ್ಯಕ್ರಮಗಳಲ್ಲಿ ಮುನಿಸು ಮರೆತು ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ವಿಶ್ವಾಸವನ್ನೂ ವ್ಯಕ್ತಪಡಿಸಿದ್ದಾರೆ.

ಸಂಪರ್ಕಕ್ಕೆ ಸಿಗುತ್ತಿಲ್ಲ:

ರಾಮದಾಸ್‌ ಭಿನ್ನಮತ ವಿಚಾರವಾಗಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಸೋಮಣ್ಣ, ಗಜಪಡೆ ಸ್ವಾಗತಕ್ಕೆ ರಾಮದಾಸ್‌ ಅವರನ್ನು ಆಹ್ವಾನಿಸಲು ಪ್ರಯತ್ನಿಸಿದ್ದೇನೆ. ಅವರು ನನ್ನ ಸಂಪರ್ಕಕ್ಕೆ ಸಿಗುತ್ತಿಲ್ಲ. ಆದರೆ, ಆ.28ರ ರಾತ್ರಿ ಮೈಸೂರಿಗೆ ಬಂದು, ಆ.29 ಮತ್ತು 30 ರಂದು ಖುದ್ದಾಗಿ ಅವರನ್ನು ಭೇಟಿ ಮಾಡಿ ಮನವೊಲಿಸುತ್ತೇನೆ ಎಂದು ತಿಳಿಸಿದರು. ಇದು ವರ್ಷಕ್ಕೊಮ್ಮೆ ಬರುವ ನಾಡಹಬ್ಬ. ಎಲ್ಲರೂ ಒಟ್ಟಾಗಿ ಹಬ್ಬ ಆಚರಿಸಬೇಕು ಎಂಬುದು ನಮ್ಮ ಆಸೆ. ಮುನಿಸು ಬಿಟ್ಟು ರಾಮದಾಸ್‌ ಮುಂದಿನ ಕಾರ್ಯಕ್ರಮಗಳಿಗೆ ಬರುವ ವಿಶ್ವಾಸ ಇದೆ ಎಂದು ಹೇಳಿದರು.

ಮಹಾರಾಜರ ಭಾವಚಿತ್ರ ಕಡ್ಡಾಯ

ದಸರಾ ಮಹೋತ್ಸವದ ಎಲ್ಲ ಆಹ್ವಾನ ಪತ್ರಿಕೆಗಳಲ್ಲಿ ಈ ಬಾರಿ ಮೈಸೂರು ಮಹಾರಾಜ (ಜಯಚಾಮರಾಜ ಒಡೆಯರ್‌) ಭಾವಚಿತ್ರ ಕಡ್ಡಾಯವಾಗಿ ಹಾಕಲು ಆದೇಶಿಸಲಾಗಿದೆ. ಮುಖ್ಯಮಂತ್ರಿಗಳ ನಿರ್ದೇಶನದಂತೆ ಈ ಆದೇಶ ಮಾಡಿದ್ದೇನೆ. ಮಹಾರಾಜರನ್ನು ಗೌರವಿಸುವುದು ನಮ್ಮ ಕರ್ತವ್ಯ ಎಂದು ಈ ಕುರಿತು ಸೋಮಣ್ಣ ಸ್ಪಷ್ಟಪಡಿಸಿದ್ದಾರೆ.

click me!