ತೆರಿಗೆ ಕಟ್ಟದ ವಾಹನಗಳ ಮಾಲೀಕರಿಗೆ ನೋಟಿಸ್‌ ಬಿಸಿ..!

By Kannadaprabha NewsFirst Published Sep 13, 2023, 11:58 AM IST
Highlights

ಹೊಸಪೇಟೆ ಆರ್‌ಟಿಒ ಕಚೇರಿಯಲ್ಲಿ ವಾಹನಗಳ ತೆರಿಗೆ ಬಾಕಿ ಉಳಿಸಿಕೊಂಡವರಿಗೆ ಈಗ ಟ್ಯಾಕ್ಸ್‌ ಡಿಮ್ಯಾಂಡ್‌ ನೋಟಿಸ್‌ ಜಾರಿ ಮಾಡಿ ಬಿಸಿ ಮುಟ್ಟಿಸಲಾಗುತ್ತಿದೆ. ರಸ್ತೆ ತೆರಿಗೆ ಕುರಿತು ವಾಹನಗಳ ಮಾಲೀಕರಿಗೆ ನೋಟಿಸ್‌ ಜಾರಿ ಮಾಡಿದರೂ ಬಾಕಿ ಉಳಿಸಿಕೊಂಡಿದ್ದಾರೆ. ಬಾಕಿ ಉಳಿಸಿಕೊಂಡವರಿಗೆ ತೆರಿಗೆ ಜತೆಗೆ ದಂಡ ಕೂಡ ಪಾವತಿಸುವಂತಾಗಿದೆ. ಕೆಲವರ ವಿರುದ್ಧ ನ್ಯಾಯಾಲಯದಲ್ಲೂ ದಾವೆ ಹೂಡಲಾಗುತ್ತಿದೆ.

ಕೃಷ್ಣ ಎನ್‌. ಲಮಾಣಿ

ಹೊಸಪೇಟೆ(ಸೆ.13):  ವಾಹನಗಳ ತೆರಿಗೆ ಪಾವತಿಸದೇ ಮೀನಮೇಷ ಎಣಿಸುತ್ತಿರುವ ವಾಹನಗಳ ಮಾಲೀಕರಿಗೆ ಈಗ ಹೊಸಪೇಟೆ ಪ್ರಾದೇಶಿಕ ಸಾರಿಗೆ ಕಚೇರಿ(ಆರ್‌ಟಿಒ)ಯಿಂದ ನೋಟಿಸ್‌ ರವಾನೆ ಮಾಡಿದೆ. ನೋಟಿಸ್‌ಗೂ ಜಗ್ಗದವರ ವಿರುದ್ಧ ಕೋರ್ಚ್‌ನಲ್ಲಿ ದಾವೆ ಹೂಡಲಾಗಿದೆ. ಹೀಗಾಗಿ ಈಗ ವಾಹನಗಳ ಮಾಲೀಕರು ಕಚೇರಿಗೆ ಆಗಮಿಸಿ ಬಾಕಿ ಹಣ ಪಾವತಿ ಮಾಡುತ್ತಿದ್ದಾರೆ.

ಹೊಸಪೇಟೆ ಆರ್‌ಟಿಒ ಕಚೇರಿಯಲ್ಲಿ ವಾಹನಗಳ ತೆರಿಗೆ ಬಾಕಿ ಉಳಿಸಿಕೊಂಡವರಿಗೆ ಈಗ ಟ್ಯಾಕ್ಸ್‌ ಡಿಮ್ಯಾಂಡ್‌ ನೋಟಿಸ್‌ ಜಾರಿ ಮಾಡಿ ಬಿಸಿ ಮುಟ್ಟಿಸಲಾಗುತ್ತಿದೆ. ರಸ್ತೆ ತೆರಿಗೆ ಕುರಿತು ವಾಹನಗಳ ಮಾಲೀಕರಿಗೆ ನೋಟಿಸ್‌ ಜಾರಿ ಮಾಡಿದರೂ ಬಾಕಿ ಉಳಿಸಿಕೊಂಡಿದ್ದಾರೆ. ಬಾಕಿ ಉಳಿಸಿಕೊಂಡವರಿಗೆ ತೆರಿಗೆ ಜತೆಗೆ ದಂಡ ಕೂಡ ಪಾವತಿಸುವಂತಾಗಿದೆ. ಕೆಲವರ ವಿರುದ್ಧ ನ್ಯಾಯಾಲಯದಲ್ಲೂ ದಾವೆ ಹೂಡಲಾಗುತ್ತಿದೆ.

ಬಳ್ಳಾರಿ–ಗುಂತಕಲ್ ಮಾರ್ಗವಾಗಿ ಬೆಂಗಳೂರಿಗೆ ವಂದೇ ಭಾರತ ರೈಲು, ಹೊಸಪೇಟೆಯಲ್ಲಿ ಪರಿಶೀಲನೆ

ಕಟ್ಟುನಿಟ್ಟಿನ ಕ್ರಮ:

ಹೊಸಪೇಟೆ ಆರ್‌ಟಿಒ ವ್ಯಾಪ್ತಿಯಲ್ಲಿ ಬಾಕಿ ಇರುವ ತೆರಿಗೆ ವಸೂಲಿಗೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ತೆರಿಗೆ ಉಳಿಸಿಕೊಂಡವರಿಗೆ ಪಾವತಿಸಲು ಸೂಚಿಸಿದೆ. ನಗರದ ಆರ್‌ಟಿಒ ವ್ಯಾಪ್ತಿಯಲ್ಲಿ 500 ವಾಹನಗಳ ಸೀಜ್‌ ಮಾಡಲು ಕೂಡ ಈಗಾಗಲೇ ತಯಾರಿಯೂ ನಡೆದಿದೆ. ವಾಹನ ತೆರಿಗೆ ಬಾಕಿ ಉಳಿಸಿಕೊಂಡಿರುವ 2 ಸಾವಿರ ವಾಹನಗಳ ಮಾಲೀಕರಿಗೆ ಆರ್‌ಟಿಒ ಕಚೇರಿಯಿಂದ ಟ್ಯಾP್ಸ… ಡಿಮ್ಯಾಂಡ್‌ ನೋಟಿಸ್‌ ಕಳಿಸಲಾಗಿದೆ. ನೋಟಿಸ್‌ ನೀಡಿದರೂ ತೆರಿಗೆ ಕಟ್ಟದಿದ್ದರೆ ಕಠಿಣ ಕ್ರಮವನ್ನು ಕೈಗೊಳ್ಳಲು ಆರ್‌ಟಿಒ ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ. ನೋಟಿಸ್‌ ಜಾರಿ ಬಳಿಕ ಶೇ. 30ರಷ್ಟು ವಾಹನಗಳ ಮಾಲೀಕರು ತೆರಿಗೆ ಪಾವತಿ ಮಾಡಿದ್ದಾರೆ. ಇನ್ನುಳಿದವರು ಕೂಡ ಪಾವತಿ ಮಾಡದಿದ್ದರೆ ಮೊಕದ್ದಮೆ ಸೇರಿದಂತೆ ನಿಯಮದ ಅನ್ವಯ ಬಾಕಿ ವಸೂಲಾತಿಗೆ ಕ್ರಮ ವಹಿಸಲಾಗಿದೆ.

52 ಪ್ರಕರಣಗಳು ವಿಲೇವಾರಿ:

2022ರಲ್ಲಿ ಹೊಸಪೇಟೆ ಆರ್‌ಟಿಒ ವ್ಯಾಪ್ತಿಯಲ್ಲಿ ತೆರಿಗೆ ಬಾಕಿ ಉಳಿಸಿಕೊಂಡಿರುವ 120 ವಾಹನ ಮಾಲೀಕರ ವಿರುದ್ಧ ನ್ಯಾಯಾಲಯದಲ್ಲಿ ದಾವೆ ಹೂಡಲಾಗಿತ್ತು. ಇದರಲ್ಲಿ 52 ಪ್ರಕರಣಗಳು ವಿಲೇವಾರಿಯಾಗಿದ್ದು, ₹65 ಲಕ್ಷ ಬಾಕಿ ತೆರಿಗೆ ಸಂಗ್ರಹವಾಗಿದೆ. 2023ರಲ್ಲಿ ಕೂಡ ತೆರಿಗೆ ಬಾಕಿ ಉಳಿಸಿಕೊಂಡಿರುವ 200 ವಾಹನ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿದೆ.

131 ಕೋಟಿ ಗುರಿ:

ಸಾರಿಗೆ ಇಲಾಖೆಯಿಂದ ಹೊಸಪೇಟೆ ಆರ್‌ಟಿಒಗೆ ಪ್ರಸಕ್ತ ಸಾಲಿನಲ್ಲಿ ₹131.5 ಕೋಟಿ ರಾಜಸ್ವ ಸಂಗ್ರಹ ಗುರಿ ನಿಗದಿಸಲಾಗಿದೆ. ನಿಗದಿತ ರಾಜಸ್ವ ಸಂಗ್ರಹ ಗುರಿ ಸಾಧನೆಗೆ ಮೋಟಾರು ವಾಹನಗಳ ಬಾಕಿ ಇರುವ ತೆರಿಗೆ ವಸೂಲಿಗೆ ಮುಂದಾಗಿದ್ದಾರೆ. ಆರ್‌ಟಿಒ ಕಚೇರಿ ರಸ್ತೆ ಸುರಕ್ಷತಾ ಪ್ರಕರಣಗಳನ್ನು ಕೂಡ ದಾಖಲಿಸುತ್ತಿದೆ.

ಜಿ20 ಶೃಂಗಸಭೆಗೆ ಬುದ್ಧಿ ಇರೋರನ್ನ ಕರೆಸ್ತಾರೆ, ರಾಹುಲ್ ಗಾಂಧೀನ ಕರೆಸಿ ಏನು ಮಾಡಬೇಕು: ಯತ್ನಾಳ

ನೋಟಿಸ್‌ ಬಳಿಕ ಶೇ. 30 ಪ್ರಗತಿ

ಹೊಸಪೇಟೆಯ ಆರ್‌ಟಿಒ ಕಚೇರಿ ವ್ಯಾಪ್ತಿಯಲ್ಲಿ ಒಟ್ಟು 4,812 ವಾಹನಗಳಿಂದ ₹2.45 ಕೋಟಿ ರಸ್ತೆ ತೆರಿಗೆ ಬಾಕಿ ಉಳಿಸಿಕೊಂಡಿದ್ದಾರೆ. ತೆರಿಗೆ ಪಾವತಿಗೆ ಇಲಾಖೆಯಿಂದ ವಿವಿಧ ಕ್ರಮಗಳ ಹೊರತಾಗಿಯೂ ಬಾಕಿ ಉಳಿಸಿಕೊಂಡಿದ್ದು, ವಸೂಲಿಗೆ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ಬಹುತೇಕ ಮಾಲೀಕರು ಅಂದಾಜು ₹1 ಲಕ್ಷಗಿಂತಲೂ ಹೆಚ್ಚಿನ ಮೊತ್ತ ಪಾವತಿಸಬೇಕಿದೆ. ನೋಟಿಸ್‌ ಜಾರಿ ಬಳಿಕ ಶೇ. 30ರಷ್ಟುಪ್ರಗತಿಯೂ ಕಂಡಿದೆ.

ತೆರಿಗೆ ಬಾಕಿ ಉಳಿಸಿಕೊಂಡಿರುವ ಎಲ್ಲ ವಾಹನ ಮಾಲೀಕರು ತಮ್ಮ ದಾಖಲೆಗಳನ್ನು ಪರಿಶೀಲಿಸಿ ತೆರಿಗೆ ಬಾಕಿ ಇದ್ದಲ್ಲಿ, ಸಾರಿಗೆ ಇಲಾಖೆಯ ವಾಹನ್‌ ಪೋರ್ಟಲ್‌ ಮೂಲಕ ಇ- ಪೇಮೆಂಟ್‌ ಅಥವಾ ಕಚೇರಿಗೆ ಡಿಡಿ ಮೂಲಕ ತೆರಿಗೆ ಪಾವತಿಸಬೇಕು. ಈಗಾಗಲೇ ನೋಟಿಸ್‌ ಕೂಡ ಜಾರಿ ಮಾಡಲಾಗಿದೆ. ಬಾಕಿ ಹಣ ಪಾವತಿ ಮಾಡದಿದ್ದರೆ ನಿಯಮಾವಳಿ ಪ್ರಕಾರ ಕ್ರಮವಹಿಸಲಾಗುವುದು ಎಂದು ಹೊಸಪೇಟೆ ಪ್ರಾದೇಶಿಕ ಸಾರಿಗೆ ಅಧಿಕಾರಿ ವಸಂತ್‌ ಚವ್ಹಾಣ ತಿಳಿಸಿದ್ದಾರೆ. 

click me!