Dharwad| ಕಾಂಗ್ರೆಸ್‌, ಜೆಡಿಎಸ್‌ನಂತೆ ಆರ್‌ಎಸ್‌ಎಸ್‌ ತತ್ವ ಬದಲಾಗಲ್ಲ: ಜಗದೀಶ ಶೆಟ್ಟರ್‌

By Kannadaprabha NewsFirst Published Oct 9, 2021, 12:58 PM IST
Highlights

*  ಅಲ್ಪ ಸಂಖ್ಯಾತರ ಓಲೈಕೆಗೆ ವಿಪಕ್ಷಗಳಿಂದ ಆರ್‌ಎಸ್‌ಎಸ್‌ ಟೀಕೆ
*  ಕೀಳುಮಟ್ಟದ ಪ್ರಚಾರವನ್ನು ಬಯಸುತ್ತಿರುವ ಸಿದ್ದರಾಮಯ್ಯ 
*  ಅಲ್ಪಸಂಖ್ಯಾತರ ಓಲೈಕೆಗೆ ಆರ್‌ಎಸ್‌ಎಸ್‌ ಟಾರ್ಗೆಟ್‌ 

ಹುಬ್ಬಳ್ಳಿ(ಅ.09):  ಜೆಡಿಎಸ್‌(JDS), ಕಾಂಗ್ರೆಸ್‌(Congress) ತತ್ವಗಳಲ್ಲಿ ಬದಲಾಗಬಹುದು. ಆದರೆ, ಆರ್‌ಎಸ್‌ಎಸ್‌ ತತ್ವ ಎಂದಿಗೂ ಬದಲಾಗಲ್ಲ ಎನ್ನುವ ಮೂಲಕ ಎಚ್‌.ಡಿ. ಕುಮಾರಸ್ವಾಮಿ(HD Kumaraswamy) ಹೇಳಿಕೆಗೆ ಮಾಜಿ ಸಿಎಂ, ಶಾಸಕ ಜಗದೀಶ ಶೆಟ್ಟರ್‌(Jagadish Shettar) ತಿರುಗೇಟು ನೀಡಿದ್ದಾರೆ.

ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿ, ವಿಪಕ್ಷಗಳು ಕಾಂಪಿಟೇಶನ್‌ಗೆ ಬಿದ್ದಂತೆ ಆರ್‌ಎಸ್‌ಎಸ್‌(RSS) ಬಯ್ಯುತ್ತಿವೆ. ದೇಶದ ಒಗ್ಗಟ್ಟು, ಏಕತೆ ಸೌಹಾರ್ದ ಕಾಪಾಡುವ ಕೆಲಸನ್ನು ಸಂಘ ಮಾಡುತ್ತಿದೆ. ರಾಜಕಾರಣದಲ್ಲಿ ಹಿಂದಿನ ಜನತಾ ಪರಿವಾರ, ಇಂದಿನ ಜೆಡಿಎಸ್‌ ಹಾಗೂ ಅಂದಿನ ಕಾಂಗ್ರೆಸ್‌ ಮತ್ತು ಇಂದಿನ ಕಾಂಗ್ರೆಸ್‌ ಎಂಬ ಬದಲಾವಣೆ ಇದೆ. ಕುಮಾರಸ್ವಾಮಿ, ಸಿದ್ದರಾಮಯ್ಯ(Siddaramaiah) ತತ್ವದಲ್ಲಿ ಬದಲಾಗಬಹುದು.

ದೇಶದ ನೆಮ್ಮದಿಗೆ ಆರ್‌ಎಸ್‌ಎಸ್‌ ಕಾರಣ: ಜಗದೀಶ ಶೆಟ್ಟರ್‌

ಆದರೆ, ನಮ್ಮಲ್ಲಿ ಇವತ್ತಿನ ಸಂಘ ಬೇರೆ ಅವತ್ತಿನ ಸಂಘ ಬೇರೆ ಎಂಬ ಬದಲಾವಣೆ ಇಲ್ಲ. 1925ರಲ್ಲಿ ಯಾವಾಗ ಆರ್‌ಎಸ್‌ಎಸ್‌ ಹುಟ್ಟಿತೋ ಅಂದಿನಿಂದ ಇಂದಿನ ವರೆಗೂ ಅದರ ಮೂಲತತ್ವ, ವಿಚಾರ ಒಂದೇ ಆಗಿದೆ. ದೇಶ ಮೊದಲು, ಉಳಿದದ್ದು ನಂತರ ಎಂಬ ಭಾವನೆ ಎಂದಿನಿಂದಲೂ ಇದೆ. ಅಷ್ಟಕ್ಕೂ ಅಲ್ಪಸಂಖ್ಯಾತರ ಓಲೈಕೆಗೆ ಮಾತ್ರ ಆರ್‌ಎಸ್‌ಎಸ್‌ ಟಾರ್ಗೆಟ್‌ ಮಾಡಲಾಗುತ್ತಿದೆ. ಅವರ ರಾಜಕೀಯದ(Politics) ತೆವಲಿಗೆ ಆರ್‌ಎಸ್‌ಎಸ್‌ಅನ್ನು ಯಾಕೆ ಬಳಸಿಕೊಳ್ಳಲಾಗುತ್ತಿದೆ ತಿಳಿಯುತ್ತಿಲ್ಲ ಎಂದು ಶೆಟ್ಟರ್‌ ಟೀಕಿಸಿದರು.

ಬಿಜೆಪಿ ಚೌಕೀದಾರ್‌ ಅಲ್ಲ ಲೂಟರ್ಸ್‌ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ ಶೆಟ್ಟರ್‌, ಸಿದ್ದರಾಮಯ್ಯ ಕೀಳುಮಟ್ಟದ ಪ್ರಚಾರವನ್ನು ಬಯಸಿದ್ದಾರೆ. ಇದು ಕಾಂಗ್ರೆಸ್ಸಿನ ಸಂಸ್ಕೃತಿ(Culture) ತೋರಿಸುತ್ತದೆ. ಅದರಿಂದ ಬಿಜೆಪಿಗೆ ಯಾವುದೇ ಹಾನಿಯಿಲ್ಲ ಎಂದರು.

ಬಿಜೆಪಿ ಹಾನಗಲ್‌(Hanagal) ಹಾಗೂ ಸಿಂದಗಿ(Sindagi) ಎರಡೂ ಕ್ಷೇತ್ರದಲ್ಲಿ ಗೆಲವು ಸಾಧಿಸಲಿದೆ. ಪಕ್ಷ ಎಲ್ಲವನ್ನೂ ವಿಚಾರ ಮಾಡಿ ಅಭ್ಯರ್ಥಿ ಆಯ್ಕೆ ಮಾಡಿದೆ. ಅವರನ್ನು ಗೆಲ್ಲಿಸಲು ನಾವು ಶ್ರಮಿಸುತ್ತೇವೆ ಎಂದರು.
 

click me!