Latest Videos

ಕೃಷಿ ನೀತಿಗಾಗಿ ಪ್ರಧಾನಿಗೆ ಮನವಿ: ವಿನಯ್‌ ಗುರೂಜಿ

By Kannadaprabha NewsFirst Published Mar 17, 2023, 9:37 AM IST
Highlights

ಸುತ್ತೂರು ಸ್ವಾಮೀಜಿ, ವಚನಾನಂದ ಸ್ವಾಮೀಜಿ ನಾನು ಸೇರಿದಂತೆ ಎಲ್ಲರೂ ಕೃಷಿ ನೀತಿಯ ಕುರಿತು ಅಧ್ಯಯನ ನಡೆಸಿ ಪ್ರಧಾನಿಯವರ ಗಮನಕ್ಕೆ ಅದನ್ನು ತಂದು ಕೃತಿ ನೀತಿ ಜಾರಿಗೆ ತರುವಂತೆ ಮಾಡಲು ಪ್ರಯತ್ನಿಸುತ್ತೇವೆ. ಎರಡು ತಿಂಗಳಲ್ಲಿ ಈ ಕಾರ್ಯವನ್ನು ಮಾಡಲು ಶತ ಪ್ರಯತ್ನ ಮಾಡುತ್ತೇವೆ ಎಂದು ಭರವಸೆ ನೀಡಿದ ಶ್ರೀ ವಿನಯ್‌ ಗುರೂಜಿ. 

ಬೆಂಗಳೂರು(ಮಾ.17):  ಮನಸ್ಸಿಗೆ ಶಾಂತಿ ಕೊಡುವುದನ್ನು ಮಾಡುವುದಲ್ಲದೇ ಮನುಷ್ಯರ ಕಾಳಜಿಯೂ ಮಠಾಧಿಪತಿಗಳ ಆದ್ಯ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಸ್ವಾಮೀಜಿಗಳ ನೇತೃತ್ವದ ನಿಯೋಗ ಪ್ರಧಾನಮಂತ್ರಿಯವರನ್ನು ಭೇಟಿ ಮಾಡಿ ಕೃಷಿ ನೀತಿ ಜಾರಿಗೆ ತರುವಂತೆ ಮನವಿ ಸಲ್ಲಿಸಲಿದೆ ಎಂದು ಗೌರಿಗದ್ದೆ ದತ್ತ ಆಶ್ರಮದ ಶ್ರೀ ವಿನಯ್‌ ಗುರೂಜಿ ಹೇಳಿದರು. ನಗರದ ಪುರಭವನದಲ್ಲಿ ಯುವಬಲ ಜಾಗೃತಿ ಪರಿಷದ್‌ ಆಯೋಜಿಸಿದ್ದ ಜೈ ಜವಾನ್‌ ಜೈ ಕಿಸಾನ್‌ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸುತ್ತೂರು ಸ್ವಾಮೀಜಿ, ವಚನಾನಂದ ಸ್ವಾಮೀಜಿ ನಾನು ಸೇರಿದಂತೆ ಎಲ್ಲರೂ ಕೃಷಿ ನೀತಿಯ ಕುರಿತು ಅಧ್ಯಯನ ನಡೆಸಿ ಪ್ರಧಾನಿಯವರ ಗಮನಕ್ಕೆ ಅದನ್ನು ತಂದು ಕೃತಿ ನೀತಿ ಜಾರಿಗೆ ತರುವಂತೆ ಮಾಡಲು ಪ್ರಯತ್ನಿಸುತ್ತೇವೆ. ಎರಡು ತಿಂಗಳಲ್ಲಿ ಈ ಕಾರ್ಯವನ್ನು ಮಾಡಲು ಶತ ಪ್ರಯತ್ನ ಮಾಡುತ್ತೇವೆ ಎಂದು ಭರವಸೆ ನೀಡಿದರು.

Chikkamagaluru: ಗೌರಿಗದ್ದೆ ಅವಧೂತ ವಿನಯ್ ಗುರೂಜಿ ಮೊರೆ ಹೋದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್

ಪ್ರಸ್ತುತ ಕೃಷಿಕನು ಕಣ್ಣೀರು ಹಾಕುತ್ತಿದ್ದಾನೆ. ನಾವು ದೇವರುಗಳಿಗೆ ಕಾಣಿಕೆ ಹಾಕುತ್ತೇವೆ. ಅವರಾರ‍ಯರೂ ನಮಗೆ ಕಂಡಿಲ್ಲ. ಅದು ನಮ್ಮ ಭಾವನೆ. ಹಾಗೆಯೇ ನಿತ್ಯ ನಮಗೆ ಅನ್ನ ಹಾಕುವ ರೈತರಿಗೆ ರಾಜ್ಯದಲ್ಲಿರುವ 7 ಕೋಟಿ ಜನರು ಒಂದೊಂದು ಸಾವಿರ ರು. ತೆಗೆದಿಟ್ಟರೆ ನಮ್ಮ ರೈತರು ನೇಣು ಹಾಕಿಕೊಳ್ಳುವ ಅವಶ್ಯಕತೆ ಇರುವುದಿಲ್ಲ. ಹೀಗಾಗಿ ನಾನು ರೈತರ ಈ ಕಾರ್ಯಕ್ರಮಕ್ಕೆ ನಮ್ಮ ಆಶ್ರಮದ ವತಿಯಿಂದ ಒಂದು ಲಕ್ಷ ರು.ಗಳನ್ನು ಮೀಸಲಿಡುತ್ತೇನೆ. ಸಾಧ್ಯವಾದರೆ ನೀವು ಕೂಡ ಅನ್ನದಾನ ಕಣ್ಣೀರು ಒರೆಸಲು ಮುಂದಾಗಿ ಎಂದು ಕರೆ ನೀಡಿದರು.

ಕೃಷಿ ಸಚಿವ ಬಿ.ಸಿ.ಪಾಟೀಲ್‌ ಮಾತನಾಡಿ, ದೊಡ್ಡ ಶ್ರೀಮಂತರಾದ ಅದಾನಿ, ಅಂಬಾನಿ, ಟಾಟಾ-ಬಿರ್ಲಾ ಇವರಾರ‍ಯರು ಜನರಿಗೆ ಅನ್ನ ಕೊಡುವುದಿಲ್ಲ. ಹೊಲದಲ್ಲಿ ಬೆವರು ಸುರಿಸಿ ದುಡಿಯುವಂತ ರೈತರು ಮಾತ್ರ ಇಡೀ ಜಗತ್ತಿಗೆ ಅನ್ನ ಕೊಡುತ್ತಿದ್ದಾರೆ. ದೇಶವನ್ನು ಕಾಯುವ ಯೋಧ ಗಡಿಭಾಗವನ್ನು ಕಾಯ್ದು ರಕ್ಷಣೆ ಮಾಡಿದರೆ, ಈ ದೇಶದ ಜನತೆಗೆ ಅನ್ನವನ್ನು ಕೊಟ್ಟು ರಕ್ಷಣೆ ಮಾಡುವಂತ ರೈತ ಇಬ್ಬರು ಕೂಡ ನಮ್ಮ ದೇಶದ ಎರಡು ಕಣ್ಣಿದ್ದಂತೆ. ಅವರಿಗೆ ಸಮಾನ ಗೌರವಗಳು ಸಲ್ಲಬೇಕು ಎಂದರು.

ಹರಿಹರದ ಪಂಚಮಸಾಲಿ ಜಗದ್ಗುರು ಪೀಠದ ಶ್ರೀ ವಚನಾನಂದ ಸ್ವಾಮೀಜಿ ಮಾತನಾಡಿದರು. ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ತು ಸಭಾಪತಿ ಬಸವರಾಜ ಹೊರಟ್ಟಿ, ಮೇಜರ್‌ ಜನರಲ್‌ ವಿ.ಪಿ.ಎಸ್‌.ಭಕುನಿ, ರೈತ ಮುಖಂಡ ವೀರಸಂಗಯ್ಯ, ಬಿಬಿಎಂಪಿ ಮಾಜಿ ಸದಸ್ಯ ಬಿ.ಮೋಹನ್‌, ಚಲನಚಿತ್ರ ನಟ ಆರ್ಯನ್‌ ಸಂತೋಷ್‌, ಗ್ರಂಥಾಲಯ ಇಲಾಖೆ ನಿರ್ದೇಶಕ ಡಾ. ಸತೀಶ್‌ಕುಮಾರ್‌ ಎಸ್‌.ಹೊಸಮನಿ, ಯುವಬಲ ಜಾಗೃತಿ ಪರಿಷದ್‌ ಅಧ್ಯಕ್ಷೆ ಪ್ರಾಚೀಗೌಡ, ಉಪಾಧ್ಯಕ್ಷೆ ಪ್ರತಿಭಾಗೌಡ ಉಪಸ್ಥಿತರಿದ್ದರು. ಸಮಾರಂಭದಲ್ಲಿ ಕೃಷಿಕರಿಗೆ ಜೈ ಕಿಸಾನ್‌ ಮತ್ತು ಯೋಧರಿಗೆ ಜೈ ಜವಾನ್‌ ಪ್ರಶಸ್ತಿ ನೀಡಿ ಗೌರವಿಸಲಾಯಿತು.

click me!