ರೋಣ: ಬಾವಿಯಲ್ಲಿ ಬಿದ್ದು ಆಹಾರವಿಲ್ಲದೆ ಬಸವಳಿದಿದ್ದ ನಾಗರ ಹಾವು ರಕ್ಷಣೆ

Suvarna News   | Asianet News
Published : Jan 03, 2020, 09:53 AM IST
ರೋಣ: ಬಾವಿಯಲ್ಲಿ ಬಿದ್ದು ಆಹಾರವಿಲ್ಲದೆ ಬಸವಳಿದಿದ್ದ ನಾಗರ ಹಾವು ರಕ್ಷಣೆ

ಸಾರಾಂಶ

ಬಾವಿಯಲ್ಲಿ ಬಿದ್ದ ನಾಗರ ಹಾವು ರಕ್ಷಸಿದ ಉರಗ ತಜ್ಞ|ರೋಣ ತಾಲೂಕಿನ ಹೊಳೆ ಹಡಗಲಿ ಗ್ರಾಮದ ತೋಟದ ಬಾವಿಯಲ್ಲಿ ಬಿದ್ದಿದ್ದ ನಾಗರ ಹಾವು|ಸತತ 3 ಗಂಟೆ ಕಾರ್ಯಾಚರಣೆ ನಡೆಸಿ ಹಾವು ರಕ್ಷಿಸಿದ ಉರಗ ತಜ್ಞ ಮಂಜುನಾಥ|

ರೋಣ[ಜ.03]: ತಾಲೂಕಿನ ಹೊಳೆ ಹಡಗಲಿ ಗ್ರಾಮದ ನಿಂಗನಗೌಡ ಕೆಂಚನಗೌಡ್ರ ಇವರ ದಾಳಿಂಬೆ ತೋಟದ ಬಾವಿಯಲ್ಲಿ 15 ದಿನಗಳ ಹಿಂದೆ ಬಿದ್ದು, ಅಗತ್ಯ ಆಹಾರ ಸಿಗದೇ ಚಟಪಡಿಸುತ್ತಿದ್ದ ನಾಗರ ಹಾವನ್ನು ಗುರುವಾರ ಪಟ್ಟಣದ ಉರಗ ತಜ್ಞ ಮಂಜುನಾಥ ನಾಯಕ ಸುರಕ್ಷಿತವಾಗಿ ರಕ್ಷಿಸಿ ಅರಣ್ಯದಲ್ಲಿ ಬಿಟ್ಟು ಬರುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

4.5 ಅಡಿ ಉದ್ದದ ನಾಗರ ಹಾವು ರೈತ ನಿಂಗನಗೌಡ ಹ ಕೆಂಚನಗೌಡ್ರ ಇವರ ದಾಳಿಂಬೆ ತೋಟದಲ್ಲಿನ ಬಾವಿಯಲ್ಲಿ ಗೀಜಗ ಬಳಸದೆ ಇರುವ ಗೂಡುಗಳಿದ್ದು, ಈ ಗೂಡುಗಳಲ್ಲಿ ರಾಟವಾಳ ಹಕ್ಕಿಗಳು ಮೊಟ್ಟೆಇಡುತ್ತವೆ. ಹೀಗೆ ಮೊಟ್ಟೆ ಇರಬಹುದೆಂದು ನಾಗರಹಾವು ಆಹಾರವನ್ನರಿಸಿ 15 ದಿನದ ಹಿಂದೆಯೇ 20 ಅಡಿ ಆಳದ ಬಾವಿಯೊಳಗೆ ಅಕಸ್ಮಿಕವಾಗಿ ಬಿದ್ದುದ್ದು, ತನ್ನ ಪ್ರಾಣ ರಕ್ಷಣೆಗೆ ಪರದಾಡಿದೆ. ನಿಂಗನಗೌಡ ಇವರು ರೋಣದ ಉರಗ ತಜ್ಞ ಮಂಜುನಾಥ ನಾಯಕ ಇವರಿಗೆ ಕರೆ ಮಾಡಿ, ಘಟನೆ ಕುರಿತು ತಿಳಿಸಿ ಹಾವನ್ನು ರಕ್ಷಿಸುವಂತೆ ವಿನಂತಿಸಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಸುದ್ದಿ ತಿಳಿಯುತ್ತಿದ್ದಂತೆ ಉರಗ ತಜ್ಞ ಮಂಜುನಾಥ ಅವರು ಗೃಹರಕ್ಷಕ ದಳದ ಸಿಬ್ಬಂದಿ ಬುಡ್ಡಾ ಸುರೇಬಾನ ಅವರೊಂದಿಗೆ ಸ್ಥಳಕ್ಕೆ ತೆರಳಿ ಹೊಳೆ ಹಡಗಲಿ ಗ್ರಾಮಸ್ಥರ ಸಹಾಯ ಪಡೆದು ಸತತ 3 ಗಂಟೆ ಕಾರ್ಯಾಚರಣೆ ನಡೆಸಿ ಗ್ರಾಮದ ರೈತರ ಸಹಾಯದಿಂದ ಬಾವಿಯಲ್ಲಿ ತೊಟ್ಟಿಲು ಬಿಟ್ಟು ಹಾವನ್ನು ರಕ್ಷಿಸಿ ಅರಣ್ಯಕ್ಕೆ ಬಿಟ್ಟರು.

ಉರಗ ಸಂರಕ್ಷಕರು ಬಾವಿಯಲ್ಲಿ ಬಿದ್ದ ಉರಗಗಳನ್ನು ರಕ್ಷಿಸುವಾಗ ತುಂಬಾ ಜಾಗೂರಕರಾಗಿ ಕಾರ್ಯಾಚರಣೆ ನಡೆಸಬೇಕು. ಅನಾವಶ್ಯಕ ಸ್ಟಂಚ್‌ ಮಾಡಿ ಸಂಕಷ್ಟಕ್ಕೊಳಗಾಗಬಾರದು. ಇಂತಹ ಸಂದರ್ಭಗಳಲ್ಲಿ ತೊಟ್ಟಿಲನ್ನು ಬಳಸಿ ಉರಗಗಳನ್ನು ಸುಲಭವಾಗಿ ಮೇಲೆತ್ತಬಹುದು. ಉರಗಗಳು ತಮ್ಮ ಜೀವಿತಾವಧಿಯಲ್ಲಿ 1000ಕ್ಕೂ ಅಧಿಕ ಇಲಿಗಳನ್ನು ಭಕ್ಷಿಸುವುದರ ಮೂಲಕ ರೈತನ ಮಿತ್ರನಾಗಿ ಕಾರ್ಯನಿರ್ವಹಿಸುತ್ತವೆ ಮತ್ತು ಪರಿಸರ ಸಮತೋಲನದಲ್ಲಿ ಪ್ರಮುಖ ಪಾತ್ರ ವಹಿಸುವುದರಿಂದ ಉರಗಗಳನ್ನು ಕೊಲ್ಲದೆ ಅರಣ್ಯ ಇಲಾಖೆ ಅಥವಾ ಉರಗ ಸಂರಕ್ಷಕರನ್ನು ಸಂಪರ್ಕಿಸಿ ಉರಗಗಳ ಸಂತತಿಯನ್ನು ಉಳಿಸಲು ಸಾರ್ವಜನಿಕರು ಸಹಕರಿಸಬೇಕು ಎಂದು ಉರಗ ತಜ್ಞ ಮಂಜುನಾಥ ನಾಯಕ ಮನವಿ ಮಾಡಿದರು.

PREV
click me!

Recommended Stories

ಗೃಹ ಲಕ್ಷ್ಮೀ ಅಡಿ 1.24 ಕೋಟಿ ಸ್ತ್ರೀಯರಿಗೆ ₹1.54 ಕೋಟಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
ಬೆಂಗಳೂರು : ಹೊಸ ಮಾರ್ಗಗಳಿಗೆ ಬರಲಿವೆ ಚಾಲಕ ರಹಿತ ರೈಲು