ಸ್ವಲ್ಪ ದಯೆ ತೋರಿ ಬಿಟ್ಟಿದ್ರೂ, ಸಾಯೋ ತನಕ ಮಗನನ್ನ ಚೆನ್ನಾಗಿ ನೋಡಿಕೊಳ್ತಿದ್ವಿ: ತಾಯಿ ರತ್ನಪ್ರಭಾ ಕಣ್ಣೀರು!

Published : Sep 05, 2024, 10:06 AM ISTUpdated : Sep 05, 2024, 12:10 PM IST
ಸ್ವಲ್ಪ ದಯೆ ತೋರಿ ಬಿಟ್ಟಿದ್ರೂ, ಸಾಯೋ ತನಕ ಮಗನನ್ನ ಚೆನ್ನಾಗಿ ನೋಡಿಕೊಳ್ತಿದ್ವಿ: ತಾಯಿ ರತ್ನಪ್ರಭಾ ಕಣ್ಣೀರು!

ಸಾರಾಂಶ

Renukaswamy Murder ರೇಣುಕಾಸ್ವಾಮಿ ಸಾವಿನ ಮುನ್ನ ತೆಗೆದ ಕೊನೆಯ ಫೋಟೋಗಳು ವೈರಲ್‌ ಆಗಿದ್ದು, ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ. ಪರಿಸ್ಥಿತಿಯ ಬಗ್ಗೆ ಮಾತನಾಡಿರುವ ಅವರು, ಯಾರೂ ಸಹ ಇಂಥ ಸ್ಥಿತಿಯಲ್ಲಿ ಮಗನನ್ನು ನೋಡೋಕೆ ಇಷ್ಟಪಡೋದಿಲ್ಲ ಎಂದು ಹೇಳಿದ್ದಾರೆ.

ಬೆಂಗಳೂರು (ಸೆ.5): ರೇಣುಕಾಸ್ವಾಮಿ ಸಾವು ಕಾಣುವ ಮುನ್ನ ತೆಗೆಯಲಾದ ಎರಡು ಕೊನೆ ಕ್ಷಣದ ಫೋಟೋಗಳು ಮಾಧ್ಯಮಗಳಲ್ಲಿ ವೈರಲ್‌ ಆದ ಬೆನ್ನಲ್ಲಿಯೇ ರೇಣುಕಾಸ್ವಾಮಿ ಅವರ ತಂದೆ ತಾಯಿಯ ದುಃಖ ಮುಗಿಲುಮುಟ್ಟಿದೆ.  ಯಾರೂ ಸಹ ಇಂಥ ಸ್ಥಿತಿಯಲ್ಲಿ ಮಗನನ್ನು ನೋಡೋಕೆ ಇಷ್ಟಪಡೋದಿಲ್ಲ ಎಂದು ರೇಣುಕಾಸ್ವಾಮಿ ತಂದೆ ಕಾಶಿನಾಥ್‌ ಮಾತನಾಡಿದ್ದಾರೆ. ಆತ ತಪ್ಪಾಯ್ತು ಅಂತಾ ಕ್ಷಮೆ ಕೇಳಿದ್ದರೂ ಆ ರಾಕ್ಷಸರು ಬಿಡಲಿಲ್ಲ ಎಂದು ಹೇಳಿಕೊಂಡಿದ್ದಾರೆ. ರೇಣುಕಾಸ್ವಾಮಿ ಅವರ ಕೊನೆ ಕ್ಷಣದ ಎರಡು ಫೋಟೋಗಳ ಪೈಕಿ ಒಂದು ಫೋಟೋದಲ್ಲಿ ರೇಣುಕಾಸ್ವಾಮಿ ಪ್ರಾಣಭಿಕ್ಷೆ ನೀಡುವಂತೆ ಬೇಡಿಕೊಳ್ಳುತ್ತಿದ್ದರೆ, ಇನ್ನೊಂದು ಫೋಟೋದಲ್ಲಿ ರಕ್ಕಸ ಗ್ಯಾಂಗ್‌ ಮಾಡಿದ ದಾಳಿಯಿಂದ ನೆಲದ ಮೇಲೆ ಬಿದ್ದಿರುವ ಫೋಟೋ ಆಗಿದೆ. ರೇಣುಕಾಸ್ವಾಮಿ ಜೀವಂತವಾಗಿರುವಾಗಲೇ ತೆಗೆದ ಫೋಟೋ ಇದಾಗಿದೆ. ಪಟ್ಟಣಗೆರೆ ಶೆಡ್‌ನ ಸಿಬ್ಬಂದಿ ತಮ್ಮ ಮೊಬೈಲ್‌ನಲ್ಲಿ ತೆಗೆದ ಫೋಟೋವನ್ನು ಡಿ ಗ್ಯಾಂಗ್‌ನ ವಿನಯ್‌ಗೆ ಕಳಿಸಿದ್ದರು. ವಿನಯ್‌ನ ಮೊಬೈಲ್‌ನಿಂದ ಈ ಫೋಟೋವನ್ನು ಪೊಲೀಸರು ತೆಗೆದುಕೊಂಡಿದ್ದಾರೆ.

'ಈ ಫೋಟೋ ನೋಡಿ ಏನ್‌ ಹೇಳ್ಬೇಕು ಅನ್ನೋದೇ ಗೊತ್ತಾಗ್ತಾ ಇಲ್ಲ. ಅಷ್ಟು ಪರಿಪರಿಯಾಗಿ ಬೇಡಿಕೊಂಡ್ರೂ ಅವರು ಬಿಟ್ಟಿಲ್ಲಾ ಅಂದ್ರೆ ಅವರಿಗೆ ಏನ್‌ ಹೇಳ್ಬೇಕು ಅಂತಾನೇ ಅರ್ಥ ಆಗ್ತಿಲ್ಲ. ಅವರು ಒಂದು ಸ್ವಲ್ಪ ದಯೆ ತೋರಿ ಬಿಟ್ಟಿದ್ರೆ ಇಂದು ಅವನು ಮನೆಯಲ್ಲಿ ಇರುತ್ತಿದ್ದ. ಅಷ್ಟು ಕೇಳಿಕೊಂಡಾಗಲಾದರೂ ಬಿಡಬಹುದಿತ್ತು. ಅಷ್ಟು ಕೇಳಿಕೊಂಡ ನಂತರ ಬಿಟ್ಟಿದ್ದರೆ, ಆತ ಮನೆಗೆ ಬರುತ್ತಿದ್ದ. ಅವನನ್ನು ಹೆಂಗಾದರೂ ನೋಡಿಕೊಳ್ಳುತ್ತಿದ್ದೆವು' ಎಂದು ತಾಯಿ ರತ್ನಪ್ರಭಾ ಕಣ್ಣೀರಿಟ್ಟಿದ್ದಾರೆ.

ಅಷ್ಟೆಲ್ಲಾ ಕಣ್ಣೀರಿಟ್ಟಿದ್ದಾನೆ. ಕೊನೆ ಗಳಿಗೆಯಲ್ಲಿ ಬಿಟ್ಟು ಕಳಿಸಿದ್ದರೂ ಸಾಕಿತ್ತು. ಅವರಿಗೆ ಅಷ್ಟೂ ಮನಸ್ಸು ಬರಲಿಲ್ಲವಲ್ಲ. ಎಷ್ಟು ಕಟುಕರಿರಬೇಕು ಅವರು.  ತುಂಬಾ ನೋವನುಭವಿಸಿ ನರಳಿ ನರಳಿ ಪ್ರಾಣ ಬಿಟ್ಟಿದ್ದಾನೆ. ಏನ್‌ ಶಿಕ್ಷೆ ಕೊಡಬೇಕು ಅಂತಾ ನಾನು ಹೇಳೋದಿಲ್ಲ. ಕಾನೂನು ಅವರಿಗೆ ಏನ್‌ ಶಿಕ್ಷೆ ಕೊಡುತ್ತೋ ಅದು ನಮಗೆ ಸಮಾಧಾನ ನೀಡಲಿದೆ.  ಆದ್ರೆ ಅವರನ್ನು ಬಿಡಬಾರದು. ಶಿಕ್ಷೆ ಆಗಲೇಬೇಕು. ಕಠಿಣವಾಗಿ ಶಿಕ್ಷೆ ಆಗ್ಲೇಬೇಕು. ಮಗ ಯಾವ ರೀತಿ ನರಳಿದ್ದಾನೆ ಅನ್ನೋದನ್ನ ನೋಡೋಕೆ ಆಗ್ತಿಲ್ಲ. ನನ್ನ ಮಗನ ಫೋಟೋ ನೋಡಿದರೆ, ಕರುಳು ಹಿಂಡುತ್ತೆ ಎಂದು ಹೇಳಿದ್ದಾರೆ.

ಈ ಬಗ್ಗೆ ಮಾತನಾಡಿರುವ ತಂದೆ ಕಾಶಿನಾಥ್‌, ನನ್ನ ಮಗನ ಫೋಟೋ ನೋಡಿದ್ರೆ ಕರುಳಿ ಕಿತ್ತು ಬರುತ್ತೆ. ದರ್ಶನ್‌ ಗ್ಯಾಂಗ್‌ಗೆ ಕಠಿಣ ಶಿಕ್ಷೆ ಆಗಲೇಬೇಕು ಎಂದು ಕಣ್ಣೀರಿಟ್ಟಿದ್ದಾರೆ. ನನ್ನ ಮಗ ಕಿರುಚಾಡಿ ಪ್ರಾಣ ಬಿಟ್ಟಿದ್ದಾನೆ. ತಪ್ಪಾಯಯ್ತು, ತಪ್ಪಾಯ್ತು ಎಂದು ಕ್ಷಮೆ ಕೇಳಿದ್ದಾನೆ. ಆದರೂ ಈ ರಾಕ್ಷಸರ ಮನ ಕರಗಲಿಲ್ಲ ಎಂದಿದ್ದಾರೆ. ಏನೋ ನೋವ್‌ನಿಂದ ಸುಧಾರಿಸಿಕೊಳ್ಳೋಣ ಅನ್ನೋವಾಗ ಈ ಫೋಟೋ ನೋಡಿ ಮತ್ತೆ ದುಃಖ ಆಗ್ತಾ ಇದೆ.  ನಮಗೆ ಆರೋಗ್ಯ ವ್ಯತ್ಯಾಸ ಆಗ್ತಾ ಇದೆ. ರಾಕ್ಷಸರಿಗಿಂತ ಕೆಟ್ಟದಾಗಿ ಆ ಜನ ವರ್ತಿಸಿದ್ದಾರೆ. ರೇಣುಕಾಸ್ವಾಮಿಗೆ ಅವರು ಕೊಟ್ಟ ಶಿಕ್ಷೆಯನ್ನೇ ಆ ಗ್ಯಾಂಗ್‌ ನೀಡಿ. ಒಂದು ಎಳ್ಳಷ್ಟು ಅವರಿಗೆ ಮನುಷ್ಯತ್ವವಿಲ್ಲ. ಅವರುಗೆ ಯಾವ ಶಿಕ್ಷೆ ಆಗಬೇಕು ಅನ್ನೋದನ್ನ ನ್ಯಾಯಾಲಯವೇ ತಿಳಿಸಬೇಕು. ಅವರಿಗೆ ಎಲ್ಲೂ ಕೂಡ ಬೇಲ್‌ ಸಿಗಬಾರದು. ಎಷ್ಟು ಕಿರುಚಾಡಿರ್ತಾನೆ, ಒದ್ದಾಡಿರ್ತಾನೆ, ಹೆಂಡ್ತಿ ಪ್ರಗ್ನೆಂಟ್‌ ಅಂದಿರ್ತಾನೆ. ಆದರೆ, ಅವರಿಗೆ ಕನಿಕರವೇ ಇಲ್ಲ ಎಂದು ಹೇಳಿದ್ದಾರೆ. ಮೊದಲು ಮಾತಲ್ಲಿ ಮಾತ್ರ ಹೇಳ್ತಾ ಇದ್ದರೂ, ಹೀಗೆಲ್ಲಾ ಹಿಂಸೆ ಕೊಟ್ಟಿದ್ದಾರೆ ಅಂತಾ. ಈಗ ಈ ಫೋಟೋ ನೋಡಿ ನನಗೆ ಆಘಾತವೇ ಆಗಿದೆ. ಅಲ್ಲಿದ್ದ ಯಾರಿಗೂ ಮನುಷ್ಯತ್ವವೇ ಇರಲಿಲ್ಲ. ರಾಕ್ಷಸರ ಬಗ್ಗೆ ಕೇಳಿದ್ವಿ ಈಗ ನೋಡ್ತಾ ಇದ್ದೇವೆ ಎಂದು ಹೇಳಿದ್ದಾರೆ.

Exclusive Photo: ದರ್ಶನ್‌ ಗ್ಯಾಂಗ್‌ ಎದುರು ರೇಣುಕಾಸ್ವಾಮಿ ಪ್ರಾಣಭಿಕ್ಷೆ ಬೇಡಿದ್ದ ಎರಡು ಫೋಟೋ ವೈರಲ್‌!

ನಮ್ಮ ಸೊಸೆ ಬಗ್ಗೆ, ಹುಟ್ಟೋ ಮಗು ಬಗ್ಗೆ ಚಿಂತೆ. ನಮ್ಮನ್ನು ನೋಡಿಕೊಳ್ತಿದ್ದ ಅದರ ಬಗ್ಗೆಯೂ ನಮಗೆ ಯೋಚನೆ ಇದೆ.  ಇವರು ರಾಕ್ಷಸರಲ್ಲಿ ರಾಕ್ಷಸರಾಗಿದ್ದಾರೆ. ಎಷ್ಟು ಸಮಾಧಾನ ಮಾಡಿಕೊಂಡರೂ ಈ ಫೋಟೋ ನೋಡಿದ ಬಳಿಕ ಸಮಾಧಾನ ಆಗುತ್ತಿಲ್ಲ. ಪೊಲೀಸ್‌ಗೆ ಹೇಳಬಹುದಿತ್ತು. ನಮಗೆ ಹೇಳಬಹುದಿತ್ತು. ಆದರೆ, ದರ್ಶನ್‌ ನಟನೆಯಲ್ಲಿ ದೇವರಾಗೋ ಬದಲು ನಿಜಜೀವನದಲ್ಲಿ ದೇವರಾಗಬಹುದಿತ್ತು ಎಂದು ಹೇಳಿದ್ದಾರೆ.

ರಾಮ ಕೂಡ ನಾಲ್ಕ್‌ ಕೊಲೆ ಮಾಡಿದ್ದ, ದರ್ಶನ್‌ ಮಾಡಿದ್ರೆ ತಪ್ಪೇನು: ಕಿಲ್ಲಿಂಗ್‌ ಸ್ಟಾರ್‌ ಪರ ಮಾತನಾಡಿದ ಪುಂಗ ಉಮೇಶ್‌!

ರಾಜ್‌ಕುಮಾರ್,‌ ಉದಯ್‌ಕುಮಾರ್‌ ಅವರಿಗೆ ದಿನವೂ ಕೈಮುಗಿತಾ ಇದ್ವಿ. ಆದರೆ, ದರ್ಶನ್‌ರನ್ನು ನೋಡಿ ನಟರ ಬಗ್ಗೆ ಇದ್ದ ಗೌರವವೆಲ್ಲಾ ಕಳೆದುಕೊಂಡು ಬಿಟ್ಟಿದ್ದೇನೆ. ಈ ರೀತಿ ಅಮಾನವೀಯ ಜೀವನ ಯಾರದ್ದೂ ಇರಬಾರದು ಎಂದು ಹೇಳಿದ್ದಾರೆ.

 

PREV
Read more Articles on
click me!

Recommended Stories

ಗೃಹ ಲಕ್ಷ್ಮೀ ಅಡಿ 1.24 ಕೋಟಿ ಸ್ತ್ರೀಯರಿಗೆ ₹1.54 ಕೋಟಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
ಬೆಂಗಳೂರು : ಹೊಸ ಮಾರ್ಗಗಳಿಗೆ ಬರಲಿವೆ ಚಾಲಕ ರಹಿತ ರೈಲು