ದರ್ಶನ್ ಅಂಡ್ ಗ್ಯಾಂಗ್‌ಗೆ 'ಗುನ್ನಾ ಇಟ್ಟ' ಎಸ್‌ಪಿಪಿ ಪ್ರಸನ್ನ ಕುಮಾರ್! ರಹಸ್ಯ ವಿಚಾರಣೆ, ಫ್ಯಾಮಿಲಿ ಭೇಟಿಗೆ ಕೊಕ್ಕೆ!

Published : Mar 03, 2026, 05:21 PM IST
SPP Prasanna Kumar Vs Darshan Gang

ಸಾರಾಂಶ

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ, ನಟ ದರ್ಶನ್ ಮತ್ತು ಇತರ ಆರೋಪಿಗಳ ಪರ ವಕೀಲರು ಸಲ್ಲಿಸಿದ್ದ ಹಲವು ಅರ್ಜಿಗಳಿಗೆ ಎಸ್‌ಪಿಪಿ ಪ್ರಸನ್ನ ಕುಮಾರ್ ವಿರೋಧ ವ್ಯಕ್ತಪಡಿಸಿದ್ದಾರೆ. ಪ್ರತಿದಿನದ ವಿಚಾರಣೆ, ಖುದ್ದು ಹಾಜರಾತಿ, ಮತ್ತು ಇನ್-ಕ್ಯಾಮೆರಾ ಪ್ರೊಸೀಡಿಂಗ್ಸ್‌ನಂತಹ ಬೇಡಿಕೆ ತಿರಸ್ಕರಿಸಲು ವಾದಿಸಿದರು.

ಬೆಂಗಳೂರು (ಮಾ.03): ಚಿತ್ರದುರ್ಗದ ಅಪೊಲೋ ಫಾರ್ಮಸಿ ನೌಕರ ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆ ಇಂದು 57ನೇ ಸೆಷನ್ಸ್ ನ್ಯಾಯಾಲಯದಲ್ಲಿ ನಡೆಯಿತು. ಈ ವೇಳೆ ನಟ ದರ್ಶನ್ ಮತ್ತು ಗ್ಯಾಂಗ್ ಪರ ವಕೀಲರು ಸಲ್ಲಿಸಿದ್ದ ವಿವಿಧ ಅರ್ಜಿಗಳ ಮೇಲೆ ಸುದೀರ್ಘ ವಾದ ಮಂಡಿಸಿದ ವಿಶೇಷ ಸರ್ಕಾರಿ ಅಭಿಯೋಜಕ (ಎಸ್‌ಪಿಪಿ) ಪ್ರಸನ್ನ ಕುಮಾರ್, ಆರೋಪಿಗಳ ಹುಚ್ಚಾಟಕ್ಕೆ ಬ್ರೇಕ್ ಹಾಕುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದರು. ಸುಖಾಸುಮ್ಮನೆ ತನಿಖಾಧಿಕಾರಿಯನ್ನ ಆರೋಪಿ ಮಾಡುವುದು, ಒಳಸಂದರ್ಶನಕ್ಕೆ ಅವಕಾಶ ನೀಡುವುದು ಹಾಗೂ ಇನ್ ಕ್ಯಾಮೆರಾ ಪ್ರೊಸೀಡಿಂಗ್ಸ್ ಬೇಡಿಕೆಗೆ ಅನುಮತಿ ನೀಡಬಾರದು ಎಂದು ವಾದ ಮಂಡಿಸಿದರು.

ಪ್ರತಿದಿನ ವಿಚಾರಣೆ ಅಗತ್ಯವಿಲ್ಲ:

ದರ್ಶನ್ ಪರ ವಕೀಲರು ಪ್ರಕರಣದ ಟ್ರಯಲ್ ಅನ್ನು ಪ್ರತಿದಿನ ನಡೆಸಬೇಕು ಎಂದು ಮನವಿ ಮಾಡಿದ್ದರು. ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಎಸ್ಪಿಪಿ, 'ಇದೇ ನ್ಯಾಯಾಲಯದಲ್ಲಿ ಸುಮಾರು 977 ಪ್ರಕರಣಗಳ ವಿಚಾರಣೆ ನಡೆಯುತ್ತಿದೆ. ಸುಪ್ರೀಂ ಕೋರ್ಟ್ ಕೂಡ ಪ್ರತಿದಿನ ವಿಚಾರಣೆ ಅಗತ್ಯವಿಲ್ಲ ಎಂದು ಈ ಹಿಂದೆ ಅಭಿಪ್ರಾಯಪಟ್ಟಿದೆ. ಎಲ್ಲಾ ಕೇಸ್‌ಗಳನ್ನು ಬದಿಗೊತ್ತಿ ಈ ಒಂದು ಪ್ರಕರಣವನ್ನೇ ಏಕೆ ಪ್ರತಿದಿನ ಮಾಡಬೇಕು? ಈಗ ನಡೆಯುತ್ತಿರುವಂತೆ ವಾರಕ್ಕೆ ಎರಡು ದಿನಗಳ ವಿಚಾರಣೆಯೇ ಮುಂದುವರಿಯಲಿ' ಎಂದು ವಾದಿಸಿದರು.

ಖುದ್ದು ಹಾಜರಾತಿಗೆ ಆಕ್ಷೇಪ:

ಆರೋಪಿಗಳನ್ನು ವಿಡಿಯೋ ಕಾನ್ಫರೆನ್ಸ್ ಬದಲಿಗೆ ಖುದ್ದಾಗಿ ಕೋರ್ಟ್‌ಗೆ ಹಾಜರುಪಡಿಸಬೇಕು ಎಂಬ ವಕೀಲರ ಬೇಡಿಕೆಗೂ ಎಸ್ಪಿಪಿ ವಿರೋಧ ವ್ಯಕ್ತಪಡಿಸಿದರು. 'ಆರೋಪಿಗಳನ್ನು ಕೋರ್ಟ್‌ಗೆ ಕರೆತಂದಾಗ ವಿಪರೀತ ಜನಜಂಗುಳಿ ಉಂಟಾಗುತ್ತದೆ, ಇದು ಭದ್ರತಾ ದೃಷ್ಟಿಯಿಂದ ಸವಾಲಾಗುತ್ತದೆ. ಆದ್ದರಿಂದ ವಿಡಿಯೋ ಕಾನ್ಫರೆನ್ಸ್ ಮೂಲಕವೇ ವಿಚಾರಣೆ ನಡೆಯುವುದು ಸೂಕ್ತ' ಎಂದರು.

ಜೈಲು ಮ್ಯಾನುವಲ್ ಪಾಲಿಸಿ:

ಕುಟುಂಬಸ್ಥರ ಜೊತೆ 'ಒಳಸಂದರ್ಶನ'ಕ್ಕೆ (Family Meeting) ಅವಕಾಶ ಕೋರಿ ದರ್ಶನ್ ಸಲ್ಲಿಸಿದ್ದ ಅರ್ಜಿಯ ಬಗ್ಗೆ ಮಾತನಾಡಿದ ಎಸ್ಪಿಪಿ, 'ಆರೋಪಿಗಳು ಮೊದಲು ಜೈಲು ಅಧಿಕಾರಿಗಳಿಗೆ ಮನವಿ ಮಾಡಬೇಕು. ಜೈಲು ಮ್ಯಾನುವಲ್ ಪ್ರಕಾರ ಅವಕಾಶ ಸಿಗದಿದ್ದರೆ ಮಾತ್ರ ಕೋರ್ಟ್‌ಗೆ ಬರಬೇಕು. ಪದೇ ಪದೇ ಇಂತಹ ಅರ್ಜಿಗಳನ್ನು ಸಲ್ಲಿಸಿ ನ್ಯಾಯಾಲಯದ ಅಮೂಲ್ಯ ಸಮಯವನ್ನು ವ್ಯರ್ಥ ಮಾಡಲಾಗುತ್ತಿದೆ' ಎಂದು ಕಿಡಿಕಾರಿದರು.

ಠಾಣೆಗೆ ವಕೀಲರ ಭೇಟಿ ಅಸಾಧ್ಯ:

ಆರೋಪಿ ಪವನ್ ಪರ ವಕೀಲರು ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಗೆ ಭೇಟಿ ನೀಡಲು ಅವಕಾಶ ಕೋರಿದ್ದರು. ಇದಕ್ಕೆ ಉತ್ತರಿಸಿದ ಎಸ್ಪಿಪಿ, 'ಠಾಣೆಯಲ್ಲಿ ಅತ್ಯಾ*ಚಾರ, ಪೋಕ್ಸೋ ಅಂತಹ ಅತ್ಯಂತ ಸೂಕ್ಷ್ಮ ಪ್ರಕರಣಗಳ ತನಿಖೆ ನಡೆಯುತ್ತಿರುತ್ತದೆ. ಅಂತಹ ಜಾಗಕ್ಕೆ ವಕೀಲರ ತಂಡಕ್ಕೆ ಭೇಟಿ ನೀಡಲು ಹೇಗೆ ಅವಕಾಶ ನೀಡಲು ಸಾಧ್ಯ? ಮಹಜರ್ ವೇಳೆ ಸುಳ್ಳು ಸಾಕ್ಷಿ ಸೃಷ್ಟಿಸಲಾಗಿದೆ ಎಂಬ ಆರೋಪ ಕೇವಲ ಮಾಧ್ಯಮಗಳಲ್ಲಿ ಪ್ರಚಾರ ಪಡೆಯಲು ಮಾಡುತ್ತಿರುವ ತಂತ್ರವಷ್ಟೇ. ಮೊಬೈಲ್ ಸೀಜ್ ಮಾಡಿರುವುದು ಮತ್ತು ಅದರಿಂದ ಸಂಗ್ರಹಿಸಿದ ಡಿಜಿಟಲ್ ಸಾಕ್ಷ್ಯಗಳು ಅತ್ಯಂತ ಪ್ರಮುಖವಾಗಿವೆ' ಎಂದು ಸ್ಪಷ್ಟಪಡಿಸಿದರು.

ಇನ್ ಕ್ಯಾಮರಾ ಪ್ರೊಸೀಡಿಂಗ್ಸ್ ಬೇಡ:

ವಿಚಾರಣೆಯನ್ನು 'ಇನ್ ಕ್ಯಾಮರಾ' (ರಹಸ್ಯವಾಗಿ) ನಡೆಸಬೇಕು ಎಂಬ ಬೇಡಿಕೆಯನ್ನು ತಳ್ಳಿಹಾಕಿದ ಎಸ್ಪಿಪಿ, 'ಇದೇ ವಕೀಲರು ಕೋರ್ಟ್ ಒಳಗಡೆ ಇನ್ ಕ್ಯಾಮರಾ ಕೇಳುತ್ತಾರೆ, ಹೊರಗೆ ಬಂದು ಮಾಧ್ಯಮಗಳ ಮುಂದೆ ಹೇಳಿಕೆ ನೀಡುತ್ತಾರೆ. ಇದರಲ್ಲಿ ಮುಚ್ಚಿಡುವಂತದ್ದು ಏನೂ ಇಲ್ಲ. ಇದು ಅತ್ಯಾ*ಚಾರ ಅಥವಾ ಪೋಕ್ಸೋ ಪ್ರಕರಣವಲ್ಲ, ಆದ್ದರಿಂದ ಅಂತಹ ಅಗತ್ಯವಿಲ್ಲ' ಎಂದರು.

ಮಾರ್ಚ್ 9ಕ್ಕೆ ಆದೇಶ:

ಎಲ್ಲಾ ಅರ್ಜಿಗಳ ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯವು ವಿಚಾರಣೆಯನ್ನು ಮಾರ್ಚ್ 9ಕ್ಕೆ ಮುಂದೂಡಿದೆ. ಅಂದು ಈ ಎಲ್ಲಾ ಅರ್ಜಿಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯವು ತನ್ನ ಅಂತಿಮ ಆದೇಶವನ್ನು ಪ್ರಕಟಿಸಲಿದೆ.

PREV
Read more Articles on
click me!

Recommended Stories

ಬಿಎಂಟಿಸಿ ಬಸ್ ಅಡ್ಡಗಟ್ಟಿ ಮಿಡಲ್ ಫಿಂಗರ್ ತೋರಿಸಿದ ಯುವಕ; ಪೊಲೀಸರು ಕೊಟ್ರು ನೋಡಿ ಟ್ವಿಸ್ಟೆಡ್ ಶಾಕ್!
'ಗ್ರಾಮೀಣ ಜ್ಞಾನ ಸಮುಚ್ಚಯ' ಪುಸ್ತಕ ಲೋಕಾರ್ಪಣೆ: ರಾಜೇಂದ್ರಕುಮಾರ್ ಆಡಳಿತದ ಸಾಧನೆ ಕೊಂಡಾಡಿದ ಹೊರಟ್ಟಿ