ಮೈಸೂರು ದಸರಾ: ಮರದ ಅಂಬಾರಿ ಹೊತ್ತು ಸಾಗಿದ ಮಹೇಂದ್ರ ಆನೆ..!

By Kannadaprabha NewsFirst Published Sep 20, 2022, 11:30 PM IST
Highlights

ಅಂಬಾರಿ ಆನೆ ಅಭಿಮನ್ಯು ಜೊತೆಗೆ ಧನಂಜಯ, ಗೋಪಾಲಸ್ವಾಮಿ ಮತ್ತು ಮಹೇಂದ್ರ ಆನೆಗೆ ಮರದ ಅಂಬಾರಿ ಹೊರಿಸಿ ತಾಲೀಮು ನಡೆಸಲಾಗುತ್ತಿದೆ. ಅಭಿಮನ್ಯು, ಧನಂಜಯ, ಗೋಪಾಲಸ್ವಾಮಿ ಆನೆಗಳ ಬಳಿಕ ಮಹೇಂದ್ರ ಆನೆ ಮೇಲೆ ಸೋಮವಾರ ಎರಡನೇ ಬಾರಿ ಮರದ ಅಂಬಾರಿ ಹೊರಿಸಲಾಯಿತು.

ಮೈಸೂರು(ಸೆ.20): ದಸರಾ ಜಂಬೂಸವಾರಿಯಲ್ಲಿ ಭಾಗವಹಿಸಲು ಕಾಡಿನಿಂದ ನಾಡಿಗೆ ಆಗಮಿಸಿರುವ ಗಜಪಡೆಯ ಸದಸ್ಯ ಮಹೇಂದ್ರ ಆನೆಗೆ ಸೋಮವಾರ ಸಂಜೆ ಮರದ ಅಂಬಾರಿ ಹೊರಿಸಿ ತಾಲೀಮು ನಡೆಸಲಾಯಿತು.
ಅಂಬಾರಿ ಆನೆ ಅಭಿಮನ್ಯು ಜೊತೆಗೆ ಧನಂಜಯ, ಗೋಪಾಲಸ್ವಾಮಿ ಮತ್ತು ಮಹೇಂದ್ರ ಆನೆಗೆ ಮರದ ಅಂಬಾರಿ ಹೊರಿಸಿ ತಾಲೀಮು ನಡೆಸಲಾಗುತ್ತಿದೆ. ಅಭಿಮನ್ಯು, ಧನಂಜಯ, ಗೋಪಾಲಸ್ವಾಮಿ ಆನೆಗಳ ಬಳಿಕ ಮಹೇಂದ್ರ ಆನೆ ಮೇಲೆ ಸೋಮವಾರ ಎರಡನೇ ಬಾರಿ ಮರದ ಅಂಬಾರಿ ಹೊರಿಸಲಾಯಿತು.

ಮೈಸೂರು ಅರಮನೆಯಲ್ಲಿ ರಾಜವಂಶಸ್ಥರು ವಾಸವಾಗಿರುವ ಖಾಸ್‌ ಅರಮನೆ ಭಾಗದಲ್ಲಿ ಕ್ರೇನ್‌ ಅಳವಡಿಸಿ ಮಹೇಂದ್ರ ಆನೆ ಮೈಮೇಲೆ 280 ಕೆ.ಜಿ. ತೂಕದ ಮರ ಅಂಬಾರಿ ಕೂರಿಸಿ ನಂತರ ಹಗ್ಗದ ಸಹಾಯದಿಂದ ಬಿಗಿಯಾಗಿ ಕಟ್ಟಲಾಯಿತು. ಮರದ ಅಂಬಾರಿಯೊಳಗೆ 300 ಕೆ.ಜಿ. ಮರಳು ಮೂಟೆಗಳನ್ನು ಇರಿಸಲಾಯಿತು. ಸುಮಾರು 600 ಕೆ.ಜಿ ಭಾರವನ್ನು ಹೊತ್ತು ಮಹೇಂದ್ರ ಹೆಜ್ಜೆ ಹಾಕಿತು.

Mysuru Dasara 2022: ಮೈಸೂರು ಜಂಬೂ ಸವಾರಿಗೆ ನಂದಿಗಿರಿ ಸ್ತಬ್ಧಚಿತ್ರ

ಜಂಬೂಸವಾರಿ ಸಾಗುವ ಮಾರ್ಗದಲ್ಲೇ ಮರದ ಅಂಬಾರಿ ಹೊತ್ತು ಸಾಗಿದ ಮಹೇಂದ್ರ ಆನೆಯೊಂದಿಗೆ ಚೈತ್ರ ಮತ್ತು ವಿಜಯ ಕುಮ್ಕಿ ಆನೆಗಳಾಗಿ ಸಾಗಿದವು. ಇವುಗಳ ಜೊತೆಗೆ ಅಭಿಮನ್ಯು, ಅರ್ಜುನ, ಗೋಪಾಲಸ್ವಾಮಿ, ಧನಂಜಯ, ಭೀಮ, ಗೋಪಿ, ಸುಗ್ರೀವ, ಶ್ರೀರಾಮ ಮತ್ತು ಪಾರ್ಥಸಾರಥಿ ಆನೆಗಳು ಸಾಗಿದವು. ಇನ್ನೂ ಕಾವೇರಿ ಆನೆಯು ಮರಿಯಾನೆಗೆ ಜನ್ಮ ನೀಡಿರುವ ಲಕ್ಷೀ್ಮ ಆನೆಯೊಂದಿಗೆ ಅರಮನೆ ಆವರಣದಲ್ಲೇ ಉಳಿದಿತ್ತು.

ಮೈಸೂರು ಅರಮನೆ ಮುಂಭಾಗದಿಂದ ಹೊರಟ ಗಜಪಡೆಯು ಚಾಮರಾಜ ವೃತ್ತ, ಕೆ.ಆರ್‌. ವೃತ್ತ, ಸಯ್ಯಾಜಿರಾವ್‌ ರಸ್ತೆ, ಹೈವೇ ವೃತ್ತದ ಮೂಲಕ ಬನ್ನಿಮಂಟಪ ತಲುಪಿತು. ನಂತರ ಬಳಿಕ ಅದೇ ಮಾರ್ಗವಾಗಿ ಅರಮನೆಗೆ ವಾಪಸ್‌ ಆದವು.
 

click me!