ಕೆಂಪೇಗೌಡ ಏರ್‌ಪೋರ್ಟ್‌ಲ್ಲಿ ನಿಷ್ಕ್ರೀಯ ವಿಮಾನ ತೆರವುಗೊಳಿಸಲು ‘ರಿಕವರಿ ಕಿಟ್‌’

By Kannadaprabha NewsFirst Published Feb 24, 2021, 7:27 AM IST
Highlights

ಉಪಕರಣ ಹೊಂದಿರುವ ದೇಶದ ಪ್ರಥಮ ಏರ್‌ಪೋರ್ಟ್‌| ಕುಂಜ್‌ ಜಿಎಂಬಿಎಚ್‌ ಕಂಪನಿ ಸಹಯೋಗದಲ್ಲಿ ಮುಂದಿನ ದಿನಗಳಲ್ಲಿ ಕೆಐಎ ವಿಮಾನ ನಿಲ್ದಾಣದಲ್ಲೇ ನಿಷ್ಕ್ರೀಯ ವಿಮಾನ ತೆರವುಗೊಳಿಸುವ ಸಂಬಂಧ ತರಬೇತಿ ಕೇಂದ್ರ ಸ್ಥಾಪಿಸಲು ನಿರ್ಧಾರ| ಕ್ಷಿಪ್ರ ಕಾರ್ಯ ಪಡೆ ರಚಿಸಿ, ಅವರಿಗೂ ತಾಂತ್ರಿಕ ತರಬೇತಿ| 

ಬೆಂಗಳೂರು(ಫೆ.24): ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಕೆಐಎ) ಕ್ಷಿಪ್ರಗತಿಯಲ್ಲಿ ನಿಷ್ಕ್ರೀಯ ವಿಮಾನಗಳನ್ನು ತೆರವುಗೊಳಿಸಲು ಅನುವಾಗುವ ‘ರಿಕವರಿ ಕಿಟ್‌’ ಉಪಕರಣ ಸೇರ್ಪಡೆಯಾಗಿದೆ. ಈ ಮೂಲಕ ಈ ಅತ್ಯಾಧುನಿಕ ಉಪಕರಣ ಹೊಂದಿರುವ ದೇಶದ ಮೊದಲ ಹಾಗೂ ದಕ್ಷಿಣ ಏಷ್ಯಾದ ಪ್ರಥಮ ವಿಮಾನ ನಿಲ್ದಾಣ ಎಂಬ ಹೆಗ್ಗಳಿಕೆಗೆ ಕೆಐಎ ಪಾತ್ರವಾಗಿದೆ.

ವಿಮಾನ ನಿಲ್ದಾಣದ ರನ್‌ ವೇಯಲ್ಲಿ ವಿಮಾನಗಳು ನಿಷ್ಕ್ರೀಯವಾದಾಗ ಅಥವಾ ತುರ್ತು ಸಂದರ್ಭಗಳಲ್ಲಿ ರನ್‌ ವೇಯಿಂದ ವಿಮಾನಗಳನ್ನು ತೆರವುಗೊಳಿಸಲು ಈ ಉಪಕರಣ ನೆರವಾಗಲಿದೆ. ಜರ್ಮನಿ ಮೂಲದ ಕುಂಜ್‌ ಜಿಎಂಬಿಎಚ್‌ ಕಂಪನಿ ಈ ಉಪಕರಣವನ್ನು ಉತ್ಪಾದಿಸಿದ್ದು, ಜಗತ್ತಿನ ಅತಿದೊಡ್ಡ ಪ್ರಯಾಣಿಕರ ವಿಮಾನವಾದ ಏರ್‌ಬಸ್‌ ಎ380 ಅನ್ನೂ ತೆರವುಗೊಳಿಸುವಷ್ಟು ಸಾಮರ್ಥ್ಯ ಹೊಂದಿದೆ.

ಕೊರೋನಾರ್ಭಟದ ನಡುವೆ ಬೆಂಗಳೂರು ಏರ್‌ಪೋರ್ಟ್‌ನಿಂದ ಭಾರೀ ಸರಕು ಸಾಗಣೆ

ಈ ನೂತನ ಉಪಕರಣವನ್ನು ಮಂಗಳವಾರ ಬೆಂಗಳೂರು ಇಂಟರ್‌ ನ್ಯಾಷನಲ್‌ ಏರ್‌ಪೋರ್ಟ್‌ ಲಿಮಿಟೆಡ್‌ನ(ಬಿಐಎಎಲ್‌) ವ್ಯವಸ್ಥಾಪಕ ನಿರ್ದೇಶಕ ಹರಿ ಮರಾರ್‌ ಉದ್ಘಾಟಿಸಿದರು. ಈ ಉಪಕರಣವನ್ನು ವಿಮಾನ ನಿಲ್ದಾಣದ ಅಗತ್ಯಕ್ಕೆ ತಕ್ಕಂತೆ ರೂಪಿಸಿದ್ದು, ಅಗತ್ಯವಿರುವ ಕಡೆ ಸುಲಭವಾಗಿ ಸಾಗಿಸಬಹುದು. ಇದರಿಂದ ತುರ್ತು ಸಂದರ್ಭಗಳಲ್ಲಿ ರನ್‌ ವೇ ಮುಚ್ಚುವ ಸಾಧ್ಯತೆ ಕಡಿಮೆಯಾಗುತ್ತದೆ. ರನ್‌ ವೇಯಲ್ಲಿ ವಿಮಾನ ನಿಷ್ಕಿ್ರಯವಾದಾಗ ವಿಮಾನಗಳ ಕಾರ್ಯಾಚರಣೆ ಮೇಲೆ ಉಂಟಾಗುವ ಅಡಚಣೆಗಳನ್ನು ಕ್ಷಿಪ್ರಗತಿಯಲ್ಲಿ ನಿವಾರಿಸಲು ಸಹಕಾರಿಯಾಗಿದೆ ಎಂದು ಹರಿ ಮರಾರ್‌ ಹೇಳಿದ್ದಾರೆ.

ಕೆಐಎಯಲ್ಲಿ ತರಬೇತಿ ಕೇಂದ್ರ

ಕುಂಜ್‌ ಜಿಎಂಬಿಎಚ್‌ ಕಂಪನಿ ಸಹಯೋಗದಲ್ಲಿ ಮುಂದಿನ ದಿನಗಳಲ್ಲಿ ಕೆಐಎ ವಿಮಾನ ನಿಲ್ದಾಣದಲ್ಲೇ ನಿಷ್ಕ್ರೀಯ ವಿಮಾನ ತೆರವುಗೊಳಿಸುವ ಸಂಬಂಧ ತರಬೇತಿ ಕೇಂದ್ರ ಸ್ಥಾಪಿಸಲು ನಿರ್ಧರಿಸಲಾಗಿದೆ. ಈ ಸಂಬಂಧ ಕಾರ್ಯಪಡೆ ರಚಿಸಿದ್ದು, ಜರ್ಮನಿಯ ಜಿಎಂಬಿಎಚ್‌ನ ತರಬೇತಿ ಕೇಂದ್ರ ಹಾಗೂ ಕೆಐಎ ವಿಮಾನ ನಿಲ್ದಾಣದಲ್ಲಿ ತರಬೇತಿ ನೀಡಲಾಗುತ್ತದೆ. ಇದರೊಂದಿಗೆ ಕ್ಷಿಪ್ರ ಕಾರ್ಯ ಪಡೆ ರಚಿಸಿ, ಅವರಿಗೂ ತಾಂತ್ರಿಕ ತರಬೇತಿ ನೀಡಲಾಗುತ್ತದೆ ಎಂದು ಹರಿ ಮರಾರ್‌ ತಿಳಿಸಿದ್ದಾರೆ.
 

click me!