
ಶಿರಾ : 15 ವರ್ಷದ ತುಂಬಿದ ಆಟೋಗಳಿಗೆ ಬೇರೆ ಜಿಲ್ಲೆಗಳಲ್ಲಿ ಎಫ್ಸಿ ಮಾಡಿಕೊಡಲಾಗುತ್ತಿದೆ. ಕಾರಣಾಂತರಗಳಿಂದ ಜಿಲ್ಲೆಯಲ್ಲಿ ಆಗುತ್ತಿಲ್ಲ. ೧೫ ವರ್ಷ ತುಂಬಿದ ಆಟೋಗಳಿಗೆ ಎಫ್ಸಿ ಮಾಡಿಕೊಡದಿದ್ದರೆ ಹೊಸ ಆಟೋ ಖರೀದಿಸಲು ಆಟೋ ಚಾಲಕರಿಗೆ ಶಕ್ತಿಯಿಲ್ಲ. ಕೆಲವು ವರ್ಷಗಳವರೆಗೆ ೧೫ ವರ್ಷ ತುಂಬಿದ ಆಟೋಗಳಿಗೆ ಸಾರಿಗೆ ಇಲಾಖೆಯಿಂದ ಎಫ್ಸಿ ಮಾಡಿ ಎಂದು ಆಟೋ ಚಾಲಕರ ಹಾಗೂ ಮಾಲೀಕರ ಸಂಘದ ತಾಲೂಕು ಅಧ್ಯಕ್ಷ ಸಿದ್ದೇಶ್ವರ್ ಹೇಳಿದರು.
ನಗರದ ಎಪಿಎಂಸಿ ಆವರಣದಲ್ಲಿ ಶಿರಾ ತಾಲೂಕು ಆಟೋ ಚಾಲಕರ ಕಲ್ಯಾಣ ಜಂಟಿ ಕ್ರಿಯಾ ಸಮಿತಿಯಿಂದ ಏರ್ಪಡಿಸಿದ್ದ ಆಟೋ ಚಾಲಕರ ಕುಂದು ಕೊರತೆ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಶಿರಾ ನಗರದಲ್ಲಿನ ಸುಮಾರು 22 ಆಟೋ ನಿಲ್ದಾಣಗಳು ನಿರ್ನಾಮವಾಗಿವೆ. ಅವುಗಳನ್ನು ನಗರಸಭೆಯಿಂದ ಪುನರ್ ನಿರ್ಮಿಸಿಕೊಡಬೇಕು.
ಆಗ, ಆಟೋ ಚಾಲಕರು ರಸ್ತೆಗಿಳಿಯದೆ ಆಟೋ ನಿಲ್ದಾಣದಲ್ಲಿಯೇ ಕೆಲಸ ಮಾಡುತ್ತಾರೆ. ಶಿರಾನಗರ ಅಬಿವೃದ್ಧಿಯಾಗುತ್ತಿದ್ದು, ನಗರದಲ್ಲಿ ಬೀದಿ ಬದಿ ವ್ಯಾಪಾರಿಗಳು, ಮೊಬೈಲ್ ಕ್ಯಾಂಟೀನ್, ಆಟೋದವರು ಇದ್ದೇವೆ. ಟ್ರಾಫಿಕ್ಗೆ ಧಕ್ಕೆ ಮಾಡುವುದು ಉದ್ದೇಶವಲ್ಲ. ಜನಸಂಖ್ಯೆ ಹೆಚ್ಚಾದಂತೆ ಸಂಚಾರ ದಟ್ಟಣೆಯೂ ಹೆಚ್ಚಾಗಿದೆ. ಪ್ರತಿ ಕುಟುಂಬದಲ್ಲೂ ಕನಿಷ್ಠ ಎರಡು ದ್ವಿಚಕ್ರ ವಾಹನಗಳಿವೆ. ಇದರಿಂದ ರಸ್ತೆಗಳಲ್ಲಿ ದ್ವಿಚಕ್ರ ವಾಹನ ನಿಲ್ಲಿಸುವುದರಿಂದ ಸಂಚಾರಕ್ಕೆ ತೊಂದರೆಯಾಗುತ್ತದೆ. ನಗರ ಪೊಲೀಸರು ಆಟೋ ಚಾಲಕರ ಮೇಲೆ ಕ್ರಮ ಕೈಗೊಳ್ಳುತ್ತಾರೆ. ಸಭೆಯಲ್ಲಿ ಕಾನೂನು ಮತ್ತು ಮಾಪನ ಇಲಾಖೆಯ ಅಧಿಕಾರಿ ದೇವರಾಜ್, ಶಿರಾ ತಾಲೂಕು ಆಟೋ ಚಾಲಕರ ಕಲ್ಯಾಣ ಜಂಟಿ ಕ್ರಿಯಾ ಸಮಿತಿ ಉಪಾಧ್ಯಕ್ಷ ಶ್ರೀನಿವಾಸ್, ಕಾರ್ಯದರ್ಶಿಗಳಾದ ರಘು, ಪ್ರಸಾದ್, ಖಜಾಂಚಿ ಚಿಕ್ಕಣ್ಣ, ಮುಜಾಮಿಲ್, ಜಮೀಲ್, ರಂಗಪ್ಪ, ಬುಕ್ಕಾಪಟ್ಟಣ ಹೋಬಳಿ ಅಧ್ಯಕ್ಷ ರಾಜು, ತಾವರೆಕೆರೆ ಅಧ್ಯಕ್ಷ ರಮೇಶ್, ಕಳ್ಳಂಬೆಳ್ಳ ಅಧ್ಯಕ್ಷ ಪುರದಯ್ಯ ಹಾಜರಿದ್ದರು.