
ಬೆಂಗಳೂರು: ಇದೇ ಸೆಪ್ಟೆಂಬರ್ 30ರ ಒಳಗೆ ಇ-ಕೆವೈಸಿ ಮಾಡಿಸುವುದು ಕಡ್ಡಾಯವಾಗಿದೆ. ಒಂದು ವೇಳೆ ನಿಗದಿತ ಸಮಯದೊಳಗೆ ಬಯೋಮೆಟ್ರಿಕ್ ಅಪ್ಡೇಟ್ ಮಾಡದೇ ಹೋದರೆ ರೇಷನ್ ಸಿಗೋದಿಲ್ಲ. ಕಡಿಮೆ ದರದಲ್ಲಿ ಪಡಿತರ ಪಡೆಯುತ್ತಿರುವವರು ಇ-ಕೆವೈಸಿ ಕಡ್ಡಾಯವಾಗಿ ಮಾಡಿಸಿಕೊಳ್ಳಲೇಬೇಕು. ಇಲ್ಲದೇ ಹೋದರೆ, ನೀವು ದುಬಾರಿ ಬೆಲೆ ಕೊಟ್ಟು ಉಳಿದವರಂತೆ ಆಹಾರ ಸಾಮಗ್ರಿ ಖರೀದಿ ಮಾಡಬೇಕಾಗುತ್ತದೆ! ಇದಕ್ಕಾಗಿ ಸೆ.30ರ ಡೆಡ್ಲೈನ್ ವಿಧಿಸಲಾಗಿದ್ದು, ಅಲ್ಲಿಯವರೆಗೆ ನೀವು ಆನ್ಲೈನ್, ಆಫ್ಲೈನ್ ಎರಡರದಲ್ಲಿಯೂ ಇ-ಕೆವೈಸಿ ಮಾಡಿಸಲು ಅವಕಾಶ ಕಲ್ಪಿಸಲಾಗಿದೆ. ರಾಜ್ಯ ಸರ್ಕಾರ, ಪಡಿತರ ಚೀಟಿಯಲ್ಲಿ ಹೆಸರಿರುವ ಪ್ರತಿಯೊಬ್ಬ ಸದಸ್ಯರೂ ತಮ್ಮ ಹೆಬ್ಬೆರಳ ಗುರುತು ನೀಡುವ ಮೂಲಕ ಇ-ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕಿದೆ.
ನಿಗದಿಪಡಿಸಿದ ಸೆಪ್ಟೆಂಬರ್ 30ರ ಗಡುವಿನೊಳಗೆ ಇ-ಕೆವೈಸಿ ಪೂರ್ಣಗೊಳಿಸದಿದ್ದರೆ, ಅಂತಹ ಸದಸ್ಯರ ಹೆಸರುಗಳನ್ನು ಪಡಿತರ ಚೀಟಿಯಿಂದ ತಾತ್ಕಾಲಿಕವಾಗಿ ಅಮಾನತುಗೊಳಿಸುವ ಅಥವಾ ರದ್ದುಪಡಿಸುವ ಸಾಧ್ಯತೆ ಇರುತ್ತದೆ. ಇದರಿಂದಾಗಿ ಮುಂದಿನ ತಿಂಗಳುಗಳಿಂದ ಉಚಿತ ಅಕ್ಕಿ ಹಾಗೂ ಗೃಹಲಕ್ಷ್ಮಿ ಸೇರಿದಂತೆ ಸರ್ಕಾರದ ಇತರೆ ಸೌಲಭ್ಯಗಳ ಹಣ ಸ್ಥಗಿತಗೊಳ್ಳಬಹುದು.
ಹಾಗಿದ್ದರೆ ಇ-ಕೆವೈಸಿ ಸ್ಟೇಟಸ್ ಚೆಕ್ ಮಾಡುವುದು ಹೇಗೆ, ಆನ್ಲೈನ್ನಲ್ಲಿ ಮಾಡುವುದು ಹೇಗೆ? ಆಫ್ಲೈನ್ನಲ್ಲಿ ಮಾಡುವುದು ಹೇಗೆ, ಫುಲ್ ಡಿಟೇಲ್ಸ್ ಇಲ್ಲಿದೆ:
- ಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್ ahara.kar.nic.in ಮೇಲೆ ಕ್ಲಿಕ್ ಮಾಡಿ
- ಮುಖಪುಟದಲ್ಲಿ ಕಾಣುವ ಮೂರು ಗೆರೆಗಳ ಮೇಲೆ ಕ್ಲಿಕ್ ಮಾಡಿ, 'ಇ-ಸೇವೆಗಳು' ಆಯ್ಕೆಯನ್ನು ಆರಿಸಿ.
- ನಂತರ 'ಇ-ರೇಷನ್ ಕಾರ್ಡ್' ಲಿಂಕ್ ಮೇಲೆ ಕ್ಲಿಕ್ ಮಾಡಿ, ಅಲ್ಲಿ ಕಾಣುವ 'ಪಡಿತರ ಚೀಟಿ ವಿವರ' (Show RCs) ಎಂಬುದನ್ನು ಒತ್ತಿ.
- ನಿಮ್ಮ ಜಿಲ್ಲೆಗೆ ಅನುಗುಣವಾಗಿ 'ಬೆಂಗಳೂರು ವಲಯ' ಅಥವಾ 'ಇತರೆ ಜಿಲ್ಲೆಗಳ ವಲಯ'ದ ಲಿಂಕ್ ಅನ್ನು ಕ್ಲಿಕ್ ಮಾಡಿ.
- ಅಲ್ಲಿ 'RC Status' ಆಯ್ಕೆಮಾಡಿ, ನಿಮ್ಮ 12 ಅಂಕಿಯ ರೇಷನ್ ಕಾರ್ಡ್ ನಂಬರ್ ಅನ್ನು ಬಾಕ್ಸ್ನಲ್ಲಿ ಟೈಪ್ ಮಾಡಿ 'Go' ನೀಡಿ.
- ಈಗ ನಿಮ್ಮ ಕುಟುಂಬದ ಎಲ್ಲಾ ಸದಸ್ಯರ ಹೆಸರುಗಳ ಪಟ್ಟಿ ಕಾಣಿಸುತ್ತದೆ.
- Success' ಎಂದು ಹಸಿರು ಬಣ್ಣದಲ್ಲಿದ್ದರೆ ನಿಮ್ಮ ಇ-ಕೆವೈಸಿ ಆಗಿದೆ ಎಂದರ್ಥ. 'Pending' ಅಥವಾ ಖಾಲಿ ಇದ್ದರೆ: ಇ-ಕೆವೈಸಿ ಆಗಿಲ್ಲ ಎಂದರ್ಥ.
ಇ-ಕೆವೈಸಿ ಮಾಡಿಸಲು ನಿಮಗೆ ಬೇಕಿರುವ ಮುಖ್ಯ ದಾಖಲೆಗಳು ಎಂದರೆ
-ರೇಷನ್ ಕಾರ್ಡ್ ಸಂಖ್ಯೆ
- ಕುಟುಂಬದ ಎಲ್ಲಾ ಸದಸ್ಯರ ಆಧಾರ್ ಕಾರ್ಡ್
* ಆನ್ಲೈನ್ ಮೂಲಕ ಮನೆಯಿಂದಲೇ ಸುಲಭವಾಗಿ ಮೊಬೈಲ್ ಆ್ಯಪ್ ಮೂಲಕ ಆಧಾರ್ಗೆ ಮೊಬೈಲ್ ಸಂಖ್ಯೆ ಲಿಂಕ್ ಆಗಿರುವ ಸಾರ್ವಜನಿಕರು ಮನೆಯಲ್ಲೇ ಕುಳಿತು ಇ-ಕೆವೈಸಿ ಮಾಡಬಹುದು.
* ಗೂಗಲ್ ಪ್ಲೇ ಸ್ಟೋರ್ನಿಂದ 'Mera Ration' ಹಾಗೂ 'Aadhaar FaceRD' ಆ್ಯಪ್ಗಳನ್ನು ಡೌನ್ಲೋಡ್ ಮಾಡಿಕೊಳ್ಳಬೇಕು.
* ಆ್ಯಪ್ನಲ್ಲಿ 'Aadhaar Seeding' ಅಥವಾ ಇ-ಕೆವೈಸಿ ಆಯ್ಕೆ ಮಾಡಿಕೊಂಡು ರೇಷನ್ ಕಾರ್ಡ್ ಹಾಗೂ ಆಧಾರ್ ಸಂಖ್ಯೆ ನಮೂದಿಸಬೇಕು.
* OTP ಅಥವಾ ಮುಖದ ಗುರುತು ಮೂಲಕ ಪ್ರಕ್ರಿಯೆಯನ್ನು ಸುಲಭವಾಗಿ ಪೂರ್ಣಗೊಳಿಸಬಹುದು.
-ನಿಮ್ಮ ಪಡಿತರ ಚೀಟಿಯಲ್ಲಿ ಹೆಸರಿರುವ ಎಲ್ಲಾ ಸದಸ್ಯರು ತಮ್ಮ ಆಧಾರ್ ಕಾರ್ಡ್ ಮತ್ತು ರೇಷನ್ ಕಾರ್ಡ್ ಸಂಖ್ಯೆಯೊಂದಿಗೆ ನಿಯಮಿತವಾಗಿ ಪಡಿತರ ಪಡೆಯುವ ನ್ಯಾಯಬೆಲೆ ಅಂಗಡಿಗೆ ಭೇಟಿ ನೀಡಬೇಕು.
- ನ್ಯಾಯಬೆಲೆ ಅಂಗಡಿಯಲ್ಲಿರುವ ಇ-ಪೋಸ್ ಯಂತ್ರದಲ್ಲಿ ನಿಮ್ಮ ಹೆಬ್ಬೆರಳ ಗುರುತು (ಫಿಂಗರ್ ಪ್ರಿಂಟ್) ನೀಡುವ ಮೂಲಕ ಕೆವೈಸಿ ಪ್ರಕ್ರಿಯೆಯನ್ನು ಉಚಿತವಾಗಿ ಪೂರ್ಣಗೊಳಿಸಬಹುದು.
- ಒಂದು ವೇಳೆ ನ್ಯಾಯಬೆಲೆ ಅಂಗಡಿಯಲ್ಲಿ ತಾಂತ್ರಿಕ ತೊಂದರೆ ಇದ್ದಲ್ಲಿ, ನಿಮ್ಮ ಹತ್ತಿರದ ಗ್ರಾಮ ಒನ್, ಕರ್ನಾಟಕ ಒನ್ ಅಥವಾ ಬೆಂಗಳೂರು ಒನ್ ಕೇಂದ್ರಗಳಿಗೂ ಭೇಟಿ ನೀಡಿ ಇದನ್ನು ಮಾಡಿಸಬಹುದು.