ಅಯೋಧ್ಯೆಯಲ್ಲಿ‌ ಮೊಳಗಲಿದೆ ರಾಮನಗರದ ಮಂಗಳವಾದ್ಯ!

By Suvarna NewsFirst Published Jan 17, 2024, 10:00 PM IST
Highlights

ರಾಮನಗರದ ವಿಜಯ್ ಕುಮಾರ್ ಎಂಬುವವರಿಗೆ ಅಯೋಧ್ಯೆಯಲ್ಲಿ ಮಂಗಳವಾದ್ಯ ನುಡಿಸುವ ಅವಕಾಶ ಸಿಕ್ಕಿದೆ. 48 ದಿನಗಳ ಕಾಲ ಅಯೋಧ್ಯೆಯಲ್ಲೇ ಇದ್ದು ರಾಮನ ಸೇವೆ ಮಾಡುವ ಅವಕಾಶ ದೊರಕಿದೆ.

ವರದಿ: ಜಗದೀಶ್ ಏಷ್ಯಾನೆಟ್ ಸುವರ್ಣನ್ಯೂಸ್

ರಾಮನಗರ (ಜ.17): ಕೋಟ್ಯಾಂತರ ರಾಮ ಭಕ್ತರ ಕನಸು ನನಸಾಗುವ ಸುದಿನ,  ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಗೆ ಕೌಂಟ್ ಡೌನ್ ಶುರುವಾಗಿದೆ. ಅಯೋಧ್ಯೆಗೆ ಹೋಗಿ ಸೇವೆ ಮಾಡೋದೆ ಒಂದು ದೊಡ್ಡ ಭಾಗ್ಯ, ಆ ನಿಟ್ಟಿನಲ್ಲಿ ರಾಮನಗರದ ವಿಜಯ್ ಕುಮಾರ್ ಎಂಬುವವರಿಗೆ ಅಯೋಧ್ಯೆಯಲ್ಲಿ ಮಂಗಳವಾದ್ಯ ನುಡಿಸುವ ಅವಕಾಶ ಸಿಕ್ಕಿದೆ. 48 ದಿನಗಳ ಕಾಲ ಅಯೋಧ್ಯೆಯಲ್ಲೇ ಇದ್ದು ರಾಮನ ಸೇವೆ ಮಾಡುವ ಅವಕಾಶ ದೊರಕಿದೆ.

48 ದಿನಗಳ ಕಾಲ ಅಯೋಧ್ಯೆಯಲ್ಲಿ ಶ್ರೀರಾಮನ ಸೇವೆ ಮಾಡಲಿರುವ ತಂಡ
ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆಗೆ ದಿನಗಣನೆ ಆರಂಭವಾಗಿದೆ. ಇಡೀ ದೇಶದಾದ್ಯಂತ ರಾಮಜಪ ಮೊಳಗುತ್ತಿದೆ. ಅಯೋಧ್ಯೆಯಲ್ಲಿ ಶ್ರೀರಾಮನ ಸೇವೆ ಮಾಡಲು ಅವಕಾಶ ಸಿಕ್ಕರೆ ಸಾಕು ಅಂತಾ ಲಕ್ಷಾಂತರ ಜನರು ಕಾಯ್ತಾ ಇದ್ದಾರೆ. ಅವಕಾಶ ಸಿಕ್ಕರೇ ಯಾರು ತಾನೇ ಬಿಡ್ತಾರೆ.  ಹೌದು, ರಾಮನ ಹೆಸರಿರುವ ರಾಮನಗರಕ್ಕೂ ಶ್ರೀರಾಮನಿಗೂ ದೊಡ್ಡ ನಂಟೇ ಇದೆ. ಈ ನಂಟಿನ ಜೊತೆಗೆ ಅಯೋಧ್ಯೆಯಲ್ಲಿ ಮಂಗಳವಾದ್ಯ ನುಡಿಸುವ ಜವಾಬ್ದಾರಿ ಇದೀಗ ರಾಮನಗರದ ವಿಜಯ್ ಕುಮಾರ್ ನೇತೃತ್ವದ ತಂಡಕ್ಕಿ ಸಿಕ್ಕಿದೆ. ರಾಮನಗದ ಡೋಲು ವಿದ್ವಾನ್ ವಿಜಯ್ ಕುಮಾರ್ ನ 10 ಜನರ ತಂಡ ಅಯೋಧ್ಯೆಗೆ ತೆರಳಿ ರಾಮನ ಸೇವೆ ಮಾಡಲು ಹೊರಟಿದ್ದಾರೆ.

ಕಾಫಿನಾಡಿನ ಮನೆ ಮನೆಗಳ ಮೇಲೆ ಜೈ ಶ್ರೀ ರಾಮ್ ನಾಮಫಲಕ

ಅಂದಹಾಗೆ ವಿಜಯ್ ಕುಮಾರ್ ಗೆ ರಾಮಮಂದಿರ ಟ್ರಸ್ಟ್ ನ ಚಂಪಲ್ ರಾಯ್ , ಗೋಪಾಲ್ ಜೀ ಹಾಗೂ ಪೇಜಾವರ ಶ್ರೀಗಳು ಖುದ್ದು ಆಹ್ವಾನ ನೀಡಿದ್ದು,  ವಿಜಯ್ ಕುಮಾರ್ ಜೊತೆ ಮೈಸೂರು, ಶ್ರೀರಂಗಪಟ್ಟಣ, ಮೇಲುಕೋಟೆ, ಮಂಡ್ಯ ಮೂಲದ  10 ಮಂದಿ ತಂಡ  ಅಯೋಧ್ಯೆಗೆ ತೆರಳಲಿದ್ದಾರೆ, ರಾಮಲಲ್ಲಾ ಮೂರ್ತಿಯ ಪ್ರಾಣ ಪ್ರತಿ ಷ್ಠಾಪನೆಯಾದ ನಂತರ 48 ದಿನಗಳ ಕಾಲ ನಡೆಯುವ ಪೂಜಾ ವಿಧಿವಿಧಾನಗಳಲ್ಲಿ ಈ ತಂಡ ಮಂಗಳವಾದ್ಯ ಮೊಳಗಿಸುತ್ತಾರೆ.

ಕಳೆದ 2008 ರಿಂದ ವಿಜಯ್ ಕುಮಾರ್ ಅಯೋಧ್ಯೆಯಲ್ಲಿ ರಾಮ ನವಮಿಯಂದು ಮಂಗಳವಾಧ್ಯ ನುಡಿಸುತ್ತಾ ಬಂದಿದ್ದಾರೆ.
ನಾಲ್ವರು ನಾದಸ್ವರ ವಾದಕರು, ನಾಲ್ವರು ಡೋಲು ಭಾರಿಸುವವರು, ಒಬ್ಬರು ಸ್ಯಾಕ್ಸಾಫೋನ್ ನುಡಿಸುವವರು  ಮತ್ತು ಇಬ್ಬರು ತಾಳ-ಶೃತಿಗೆ. ಹೀಗೆ 10 ಮಂದಿಯ ತಂಡ ಇದೇ 19 ರಂದು ಅಯೋಧ್ಯೆಗೆ ಪ್ರಯಾಣ ಬೆಳೆಸಲಿದ್ದಾರೆ. ಈ ಅವಕಾಶ ಸಿಕ್ಕಿರುವುದು ನನ್ನ ಪೂರ್ವಜನುಮದ ಪುಣ್ಯ, ಕುಟುಂಬದಲ್ಲೂ ಕೂಡ ಸಂತಸ ಮನೆ ಮಾಡಿದೆ ಅಂತಾರೆ ಡೋಲುವಾದಕ ವಿಜಯ್ ಕುಮಾರ್.

ಅಯೋಧ್ಯೆಯಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ, ಹಿರೇಮಗಳೂರಿನ ಕೋದಂಡ ರಾಮ ಸ್ವಾಮಿ ದೇಗುಲ ಶುಚಿ ಕಾರ್ಯ

ಒಟ್ಟಾರೆ, ಅಯೋಧ್ಯೆಯಲ್ಲಿ ನಡೆಯುತ್ತಿರುವ ಬಾಲರಾಮನ ಪ್ರಾಣ ಪ್ರತಿಷ್ಠಾಪನೆಗೆ ರಾಮನಗರದ ತಂಡ ಮಂಗಳವಾದ್ಯದ ರಾಗಸೇವೆ ನೀಡ್ತಿದ್ದು, ಅಯೋಧ್ಯೆಗೂ ರಾಮನಗರಕ್ಕೂ ಇರುವ ನಂಟು ಮತ್ತಷ್ಟು ಗಟ್ಟಿಗೊಳಿಸಿದ್ದು, ಜಿಲ್ಲೆಯ ಜನರಲ್ಲಿ ಖುಷಿ ತಂದಿದೆ.

click me!