
ಬೆಂಗಳೂರು (ಜ.01): ರಾಜ್ಯದಲ್ಲಿ ವಸತಿ ರಹಿತರಿಗೆ ಸೂರು ಕಲ್ಪಿಸಬೇಕಾದ ಸರ್ಕಾರಿ ಯೋಜನೆಗಳು ಈಗ ವಿವಾದದ ಕೇಂದ್ರಬಿಂದುವಾಗಿವೆ. ವರ್ಷಗಳಿಂದ ಕಷ್ಟಪಟ್ಟು ಹಣ ಉಳಿಸಿ, ಕಾನೂನುಬದ್ಧವಾಗಿ ಮನೆಗಾಗಿ ಅರ್ಜಿ ಸಲ್ಲಿಸಿದವರಿಗೆ ವಸತಿ ಭಾಗ್ಯ ಸಿಗುತ್ತಿಲ್ಲ. ಆದರೆ, ಸರ್ಕಾರಿ ಜಾಗವನ್ನು ಅಕ್ರಮವಾಗಿ ಒತ್ತುವರಿ ಮಾಡಿದವರಿಗೆ ಕೇವಲ ಎರಡೇ ವಾರದಲ್ಲಿ ಪುನರ್ವಸತಿ ಮತ್ತು ಫ್ಲ್ಯಾಟ್ಗಳ ಹಂಚಿಕೆಯಾಗುತ್ತಿರುವುದು ಭಾರಿ ಚರ್ಚೆಗೆ ಗ್ರಾಸವಾಗಿದೆ.
ಕೋಗಿಲು ಲೇಔಟ್ನಲ್ಲಿ ಸರ್ಕಾರಿ ಜಾಗ ಒತ್ತುವರಿ ಮಾಡಿದವರಿಗೆ ಸರ್ಕಾರವು ವಿಶೇಷ ಆದ್ಯತೆ ನೀಡುತ್ತಿದೆ. ಇಲ್ಲಿನ ಒತ್ತುವರಿದಾರರಿಗೆ ಕೇವಲ ಎರಡೇ ವಾರದಲ್ಲಿ ಪುನರ್ವಸತಿ ಕಲ್ಪಿಸಲಾಗುತ್ತಿದ್ದು, ಅಚ್ಚರಿಯ ವಿಷಯವೆಂದರೆ ಸರ್ಕಾರವೇ ಅವರಿಗೆ ಲೋನ್ ಮತ್ತು ಸಬ್ಸಿಡಿ ವ್ಯವಸ್ಥೆಯನ್ನು ಮಾಡಿಕೊಡುತ್ತಿದೆ. ಮಾರುಕಟ್ಟೆಯಲ್ಲಿ ಸುಮಾರು 11.20 ಲಕ್ಷ ರೂಪಾಯಿ ಬೆಲೆಬಾಳುವ ಫ್ಲ್ಯಾಟ್ಗಳನ್ನು ಒತ್ತುವರಿದಾರರಿಗೆ ಕೇವಲ 1.75 ಲಕ್ಷದಿಂದ 2.75 ಲಕ್ಷ ರೂಪಾಯಿಗಳ ರಿಯಾಯಿತಿ ದರದಲ್ಲಿ ಹಂಚಿಕೆ ಮಾಡಲಾಗುತ್ತಿದೆ.
ಒಂದೆಡೆ ಒತ್ತುವರಿದಾರರಿಗೆ ಇಷ್ಟು ಸವಲತ್ತು ಸಿಗುತ್ತಿದ್ದರೆ, ಮತ್ತೊಂದೆಡೆ ರಾಜೀವ್ ಗಾಂಧಿ ವಸತಿ ಯೋಜನೆಯಡಿ ನಿಯಮಾನುಸಾರ ಅರ್ಜಿ ಸಲ್ಲಿಸಿದವರು ವರ್ಷಗಳಿಂದ ಕಾಯುತ್ತಿದ್ದಾರೆ. 'ನಾವು ನಿಗಮ ನಿಗದಿಪಡಿಸಿದ ಪೂರ್ಣ ಮೊತ್ತ 11.20 ಲಕ್ಷ ರೂಪಾಯಿ ಪಾವತಿಸಲು ಸಿದ್ಧರಿದ್ದೇವೆ, ಆದರೂ ನಮಗೆ ಮನೆ ಸಿಗುತ್ತಿಲ್ಲ' ಎಂದು ಅರ್ಜಿದಾರರು ಅಳಲು ತೋಡಿಕೊಳ್ಳುತ್ತಿದ್ದಾರೆ.
ಸೆಪ್ಟೆಂಬರ್ 2021 ರಿಂದ ಮಾರ್ಚ್ 2026 ರವರೆಗೆ ಒಟ್ಟು 73,375 ಜನರು ವಸತಿಗಾಗಿ ಅರ್ಜಿ ಸಲ್ಲಿಸಿದ್ದಾರೆ. ಆದರೆ, ರಾಜೀವ್ ಗಾಂಧಿ ವಸತಿ ನಿಗಮವು ನಾನಾ ತಾಂತ್ರಿಕ ಕಾರಣಗಳನ್ನು ನೀಡಿ ಬರೋಬ್ಬರಿ 57,415 ಅರ್ಜಿಗಳನ್ನು ತಿರಸ್ಕರಿಸಿದೆ. ಕೇವಲ 15,960 ಜನರನ್ನು ಮಾತ್ರ ಅರ್ಹರೆಂದು ಗುರುತಿಸಲಾಗಿದೆ. ಮುಂಗಡ ಹಣ ಪಾವತಿಸಿ, ಎಲ್ಲಾ ದಾಖಲೆಗಳನ್ನು ಸರಿಯಾಗಿ ಹೊಂದಿದ್ದರೂ ಸಹ ಕ್ಷುಲ್ಲಕ ಕಾರಣ ನೀಡಿ ಬಡವರ ಅರ್ಜಿಗಳನ್ನು ತಳ್ಳಿಹಾಕಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.
ಪ್ರಾಮಾಣಿಕವಾಗಿ ತೆರಿಗೆ ಪಾವತಿಸಿ, ನಿಯಮದಂತೆ ಮನೆಗಾಗಿ ಕಾಯುತ್ತಿರುವವರಿಗಿಂತ, ಕಾನೂನು ಉಲ್ಲಂಘಿಸಿ ಒತ್ತುವರಿ ಮಾಡಿದವರಿಗೆ ಸರ್ಕಾರ ಹೆಚ್ಚಿನ ಮಣೆ ಹಾಕುತ್ತಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.