ಚಿತ್ರದುರ್ಗದಲ್ಲೂ ಮಳೆ ಅಬ್ಬರ, ಕೆರೆ ಕಟ್ಟೆ ಹೊಡೆದು ಶಾಲೆಗೆ ನುಗ್ಗಿದ ನೀರು

By Suvarna NewsFirst Published May 19, 2022, 5:58 PM IST
Highlights

* ಚಿತ್ರದುರ್ಗ ಜಿಲ್ಲೆಯಲ್ಲೂ ಮಳೆ ಅಬ್ಬರ
* ಮಳೆಯಿಂದ ಜಿಲ್ಲೆಯಲ್ಲಿ ಅಪಾರ ಪ್ರಮಾಣದಲ್ಲಿ ನಷ್ಟ
* ಕೆರೆ ಕಟ್ಟೆ ಹೊಡೆದು ಶಾಲೆಗೆ ನುಗ್ಗಿದ ನೀರು

ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್

ಚಿತ್ರದುರ್ಗ, (ಮೇ.19): ಚಿತ್ರದುರ್ಗ ಜಿಲ್ಲೆಯಲ್ಲೂ ಮಳೆ ಜೋರಾಗಿದೆ. ಬುಧವಾರ  ರಾತ್ರಿ ಜಿಲ್ಲೆಯಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಚಿತ್ರದುರ್ಗ ಸೇರಿದಂತೆ ಹಿರಿಯೂರು, ಹೊಸದುರ್ಗ, ಹೊಳಲ್ಕೆರೆ, ಚಳ್ಳಕೆರೆ ಹಾಗೂ ಮೊಳಕಾಲ್ಮೂರು ತಾಲ್ಲೂಕಿನ ನಗರ ಹಾಗೂ ಹಳ್ಳಿಗಾಡಿನ ತಗ್ಗು ಪ್ರದೇಶದ ಮನೆಗಳಿಗೆ ನೀರು ಮನೆಗಳು ಕುಸಿದು ಬಿದ್ದಿವೆ. ನೀರು ನುಗ್ಗಿ ಮನೆಯಲ್ಲಿನ ದವಸ ಧಾನ್ಯಗಳು ನಾಶವಾಗಿವೆ.

ಅಲ್ಲದೆ ಸಾಕಷ್ಟು ಜಮೀನಿನಲ್ಲಿ ನೀರು ನಿಂತು ಕಳೆದ ವಾರವಷ್ಟೇ ಉಳುಮೆ ಮಾಡಿದ್ದ ಬೆಳೆಯು ನಷ್ಟವಾಗಿ ರೈತರು ಕಂಗಾಲಾಗಿದ್ದಾರೆ.
ನಿನ್ನೆ ಸಂಜೆ 6 ಗಂಟೆ ಸುಮಾರಿನಿಂದ ಜಿಲ್ಲೆಯ ಹಲವೆಡೆ ಪ್ರಾರಂಭಗೊಂಡ ಮಳೆ ಅರ್ಭಟ ರಾತ್ರಿ ಆಗುತ್ತಿದ್ದಂತಲೇ ಹೆಚ್ಚಾಯಿತು. ರಾತ್ರಿಯಿಂದ ಬೆಳಗ್ಗೆ ವರೆಗೂ ಸುರಿದ ಧಾರಾಕಾರ ಮಳೆಗೆ ಚಿತ್ರದುರ್ಗ ತಾಲ್ಲೂಕಿನ 11 ಮನೆಗಳು ಕುಸಿದು ಬಿದ್ದಿವೆ. ಅಲ್ಲದೆ ಮಲ್ಲಾಪುರ ಕೆರೆ ಕೊಡಿ‌ ಬಿದ್ದು ಕೆರೆಯ ಪಕ್ಕದಲ್ಲಿನ ಸರ್ಕಾರಿ ಪ್ರಾಥಮಿಕ ಶಾಲೆಗೆ ನೀರು ನುಗ್ಗಿದೆ. 

ಅಸಾನಿ ಎಫೆಕ್ಟ್, ಊಟಿಯಂತಾದ ಚಿತ್ರದುರ್ಗದ ಜೋಗಿಮಟ್ಟಿ ವನ್ಯಧಾಮ

 ಬಿರುಗಾಳಿಗೆ ಶಾಲೆಯಲ್ಲಿನ ಎರಡು ಮರಗಳು ಉರುಳಿ ಬಿದ್ದಿದ್ದು, ಶಾಲೆಯ ಆವರಣ ಕೆರೆ ಮಯವಾಗಿತ್ತು. ಇದರಿಂದಾಗಿ ಶಿಕ್ಷಕರು ಹಾಗೂ ಮಕ್ಕಳು ಶಾಲೆಯ ಒಳಗಡೆ ಹೋಗಲು ಸಾಧ್ಯವಾಗದ‌ ಕಾರಣ ಎರಡು ದಿನಗಳ ಕಾಲ ಶಾಲೆಗೆ ರಜೆ ಘೋಷಿಸಲಾಗಿದೆ.
ಇನ್ನೂ ಕೆರೆಯ ನೀರು ಹೆಚ್ಚಾಗಿ ಹೊರಗಡೆ ಹರಿಯುತ್ತಿರುವುದರಿಂದ ಮಲ್ಲಾಪುರ, ಬೆಳಗಟ್ಟ ಸೇರಿದಂತೆ ಹಲವು ಗ್ರಾಮಗಳ ಜಮೀನಿನಲ್ಲಿ ನೀರು ನಿಂತಿದೆ. ಇದರಿಂದಾಗಿ ಕಳೆದ ವಾರವಷ್ಟೇ ರೈತರು ಬಿತ್ತನೆ ಮಾಡಿದ್ದೆಲ್ಲ ಹೊಳೆಯಲ್ಲಿ ಹೋಮ ಮಾಡಿದಂತಾಗಿದ್ದು ರೈತರು ಕಂಗಾಲಾಗಿದ್ದಾರೆ. 

ಸಾಲ ಮಾಡಿ ಬಿತ್ತನೆ ಮಾಡಿದ್ದ ಗೊಬ್ಬರ, ಧಾನ್ಯಗಳು ನೀರಿನಲ್ಲಿ ಕೊಚ್ಚಿ ಹೋಗಿದೆ ಎಂದು ರೈತರು ಅಳಲು ತೊಡಿಕೊಂಡಿದ್ದಾರೆ.
ಹೊಸದುರ್ಗ, ಹೊಳಲ್ಕೆರೆ, ಚಳ್ಳಕೆರೆ, ಹಿರಿಯೂರು ಹಾಗೂ ಮೊಳಕಾಲ್ಮೂರು ತಾಲ್ಲೂಕಿನಲ್ಲೂ ಕೂಡ ಇದೇ ಪರಿಸ್ಥಿತಿ ನಿರ್ಮಾಣವಾಗಿದ್ದು, ಸುಮಾರು 42 ಮನೆಗಳು ಕುಸಿದು ಬಿದ್ದಿವೆ. ತಗ್ಗು ಪ್ರದೇಶಗಲ್ಲಿನ ಮನೆಗಳಿಗೆ ನೀರು ನುಗ್ಗಿ ಮನೆಯಲ್ಲಿನ ದವಸಧಾನ್ಯ ಸಂಪೂರ್ಣವಾಗಿ ಆಳಾಗಿವೆ. ಅಲ್ಲದೆ ಮನೆಗೆ ನುಗ್ಗಿದ್ದ ನೀರನ್ನು ಹೊರ ಹಾಕಲು ಜನರು ರಾತ್ರಿ ಹಿಡಿ ಹರಸಾಹಸ ಪಡುವ ಪರಿಸ್ಥಿತಿ ನಿರ್ಮಾಣವಾಗಿತ್ತು.

click me!