ಕೊರೋನಾ ಪಾಸಿಟಿವ್‌-ನೆಗೆಟಿವ್‌ ಸಂದೇಶ ರವಾನೆ: ಬಿಬಿಎಂಪಿಗೆ ಸಾರ್ವಜನಿಕರಿಂದ ಹಿಡಿಶಾಪ

By Kannadaprabha NewsFirst Published Oct 4, 2020, 9:08 AM IST
Highlights

10 ದಿನ ಅಂತರದಲ್ಲಿ ಪಾಸಿಟಿವ್‌-ನೆಗೆಟಿವ್‌ ಸಂದೇಶ ಕಳಿಸಿದ ಪಾಲಿಕೆ| ಮೆಸೇಜ್‌ ನೋಡಿ ಗೊಂದಲ| ಬಿಬಿಎಂಪಿ ಎಡವಟ್ಟಿನಿಂದ ಸೋಂಕು ಇಲ್ಲದಿದ್ದರೂ ಸಾಕಷ್ಟು ಮಂದಿ ಆಸ್ಪತ್ರೆಗೆ ದಾಖಲಾಗಿ ಹಣ ಕಳೆದುಕೊಳ್ಳುವ ಸ್ಥಿತಿ ನಿರ್ಮಾಣ| 

ಬೆಂಗಳೂರು(ಅ.04): ಕೊರೋನಾ ವಿಚಾರದಲ್ಲಿ ಬಿಬಿಎಂಪಿ ಎಡವಟ್ಟು ಮುಂದುವರಿದಿದೆ. ಏಕೆಂದರೆ, ಕೊರೋನಾ ಪರೀಕ್ಷೆಗೆ ಒಳಗಾಗಿದ್ದ ಪತ್ರಕರ್ತರೊಬ್ಬರಿಗೆ ಪಾಸಿಟಿವ್‌ ಇದೆ ಎಂದು ಸಂದೇಶ ಕಳುಹಿಸಿದ್ದ ಸಿಬ್ಬಂದಿ 10 ದಿನದ ಬಳಿಕ ನೆಗೆಟಿವ್‌ ಎಂದು ಮತ್ತೊಂದು ಸಂದೇಶ ಕಳುಹಿಸಿ ಗೊಂದಲ ಉಂಟು ಮಾಡಿರುವ ಘಟನೆಯೊಂದು ತಡವಾಗಿ ಬೆಳಕಿಗೆ ಬಂದಿದೆ.

ವಿಧಾನಸಭೆ ಕಲಾಪ ವರದಿಗೆ ಮಾಡುವ ಪತ್ರಕರ್ತರು ಕಡ್ಡಾಯವಾಗಿ ಕೊರೋನಾ ಪರೀಕ್ಷೆಗೆ ಒಳಗಾಗಬೇಕು ಎಂದು ಸ್ಪೀಕರ್‌ ಆದೇಶಿಸಿದ್ದರು. ಅದರಂತೆ ಸೆ.18ರಂದು ಆ ಪತ್ರಕರ್ತ ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ಆರ್‌ಟಿಪಿಸಿಆರ್‌ ಪರೀಕ್ಷೆಗೆ ಒಳಗಾಗಿದ್ದರು. ಬಿಬಿಎಂಪಿ ಸಿಬ್ಬಂದಿ ಸೆ.20ರಂದು ಸಂಜೆ ಆ ಪತ್ರಕರ್ತನ ಮೊಬೈಲ್‌ಗೆ ಕೊರೋನಾ ಪಾಸಿಟಿವ್‌ ಇದೆ ಎಂಬ ಸಂದೇಶ ಕಳುಹಿಸಿದ್ದಾರೆ. ಈ ವೇಳೆ ಆತಂಕಗೊಂಡ ಪತ್ರಕರ್ತ, ತಕ್ಷಣ ಪುಲಿಕೇಶಿನಗರದ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಾಗಿದ್ದಾರೆ.

ಕೊರೋನಾ, ಗರಿಷ್ಠ ಸಾವಿನಲ್ಲಿ ರಾಜ್ಯದ ಎರಡು ಜಿಲ್ಲೆಗಳು!

ಸೆ.30ರಂದು ಬಿಬಿಎಂಪಿಯಿಂದ ಪತ್ರಕರ್ತನಿಗೆ ಬಂದಿರುವ ಮತ್ತೊಂದು ಸಂದೇಶದಲ್ಲಿ ಕೊರೋನಾ ನೆಗೆಟಿವ್‌ ಬಂದಿದೆ. ಇದರಿಂದ ಆಶ್ಚರ್ಯ ಹಾಗೂ ಕೋಪಗೊಂಡಿರುವ ಆ ಪತ್ರಕರ್ತ, ಬಿಬಿಎಂಪಿಗೆ ಹಿಡಿಶಾಪ ಹಾಕಿದ್ದಾರೆ. ಬಿಬಿಎಂಪಿ ಎಡವಟ್ಟಿನಿಂದ ಸೋಂಕು ಇಲ್ಲದಿದ್ದರೂ ಸಾಕಷ್ಟು ಮಂದಿ ಆಸ್ಪತ್ರೆಗೆ ದಾಖಲಾಗಿ ಹಣ ಕಳೆದುಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ. ಸರ್ಕಾರ ಈ ಬಗ್ಗೆ ಗಮನಹರಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
 

click me!