ಕನಕಗಿರಿಯಲ್ಲೇ 100 ಬೆಡ್‌ ತಾಲೂಕು ಆಸ್ಪತ್ರೆ ನಿರ್ಮಿಸಿ ಸಾರ್ವಜನಿಕರ ಆಗ್ರಹ

By Kannadaprabha NewsFirst Published Aug 22, 2022, 1:11 PM IST
Highlights

ಪಟ್ಟಣಕ್ಕೆ ಮಂಜೂರಾಗಿರುವ 100 ಬೆಡ್‌ ತಾಲೂಕು ಆಸ್ಪತ್ರೆಯನ್ನು ಕನಕಗಿರಿಯಲ್ಲೇ ನಿರ್ಮಿಸಬೇಕು. ಜಾಗದ ಕೊರತೆ ನೆಪವೊಡ್ಡಿ ಬೇರೆಡೆ ನೀಡಲು ಶಾಸಕರು, ಅಧಿಕಾರಿಗಳು ಮುಂದಾಗಬಾರದು ಎಂದು ಶಾಸಕ ಬಸವರಾಜ ದಢೇಸೂಗೂರು ಮತ್ತು ಡಿಎಚ್‌ಒ ಅಲಕಾನಂದ ರಿಗೆ ಪಟ್ಟಣದ ಪ್ರಮುಖರು ಒತ್ತಾಯಿಸಿದರು

ಕನಕಗಿರಿ (ಆ.22) : ಪಟ್ಟಣಕ್ಕೆ ಮಂಜೂರಾಗಿರುವ 100 ಬೆಡ್‌ ತಾಲೂಕು ಆಸ್ಪತ್ರೆಯನ್ನು ಕನಕಗಿರಿಯಲ್ಲೇ ನಿರ್ಮಿಸಬೇಕು. ಜಾಗದ ಕೊರತೆ ನೆಪವೊಡ್ಡಿ ಬೇರೆಡೆ ನೀಡಲು ಶಾಸಕರು, ಅಧಿಕಾರಿಗಳು ಮುಂದಾಗಬಾರದು ಎಂದು ಶಾಸಕ ಬಸವರಾಜ ದಢೇಸೂಗೂರು(MLA Basavaraj Dadhesuguru) ಮತ್ತು ಡಿಎಚ್‌ಒ ಅಲಕಾನಂದ(DHO Alakanda)ರಿಗೆ ಪಟ್ಟಣದ ಪ್ರಮುಖರು ಒತ್ತಾಯಿಸಿದರು. ಇಲ್ಲಿನ ಸರ್ಕಾರಿ ಆಸ್ಪತ್ರೆ(Govt Hospitala)ಯಲ್ಲಿ ನಡೆದ ಸಭೆಯಲ್ಲಿ ಪ್ರಾ.ಕೃ.ಪ.ಸ. ಸಂಘದ ಅಧ್ಯಕ್ಷ ಬಿ. ಕನಕಪ್ಪ ಮಾತನಾಡಿ, 2022- 23ರ ರಾಜ್ಯ ಬಜೆಟ್‌ನಲ್ಲಿ ರಾಜ್ಯದ 7 ಹೊಸ ತಾಲೂಕುಗಳಿಗೆ 100 ಬೆಡ್‌ ಆಸ್ಪತ್ರೆ ಮಂಜೂರಾಗಿವೆ. ಈ ಪೈಕಿ ಶಾಸಕರ ಶ್ರಮದಿಂದ ಕ್ಷೇತ್ರದ ಕೇಂದ್ರ ಸ್ಥಾನವಾದ ಕನಕಗಿರಿ ತಾಲೂಕಿಗೆ 100 ಬೆಡ್‌ ಆಸ್ಪತ್ರೆಯನ್ನು ರಾಜ್ಯ ಸರ್ಕಾರ ಮಂಜೂರು ಮಾಡಿದೆ. ಈ ಸಂಬಂಧ ಇಲಾಖೆ, ಡಿಎಚ್‌ಒ, ತಹಸೀಲ್ದಾರ್‌ ನಡುವೆ ಪತ್ರ ವ್ಯವಹಾರ ನಡೆದಿವೆ. ಕನಕಗಿರಿ ಪಟ್ಟಣದಲ್ಲಿ ಆಸ್ಪತ್ರೆ ನಿರ್ಮಿಸಲು ಜಾಗದ ಕುರಿತು ತುರ್ತು ದಾಖಲೆ ನೀಡಲು ಡಿಎಚ್‌ಒ ಕಚೇರಿಯಿಂದ ಸೂಚಿಸಿ ಪತ್ರ ಬರೆಯಲಾಗಿದೆ. ಇಷ್ಟೆಲ್ಲ ಆದರೂ ಆಸ್ಪತ್ರೆಯನ್ನು ಕಾರಟಗಿಗೆ ನೀಡಲು ಮುಂದಾಗಿರುವುದು ನಮಗೆ ಮಾಡಿದ ಅನ್ಯಾಯವಾಗುತ್ತದೆ. ಆದ್ದರಿಂದ ಪಟ್ಟಣದಲ್ಲಿಯೇ 100 ಬೆಡ್‌ ಆಸ್ಪತ್ರೆ ನಿರ್ಮಿಸಿ ಜಾಗವನ್ನು ನೀಡುತ್ತೇವೆ. ಕಾರಟಗಿಗೆ ಬೇಕಾದರೆ ಮತ್ತೊಂದು ಆಸ್ಪತ್ರೆ ತನ್ನಿ ನಮಗೆ ಸಂತೋಷ ಎಂದರು.

ಉತ್ತರಕನ್ನಡ: ಸುಸಜ್ಜಿತ ಆಸ್ಪತ್ರೆ ನಿರ್ಮಾಣಕ್ಕಾಗಿ ಆರೋಗ್ಯ ಇಲಾಖೆಗೆ ಡಿಸಿ ಪ್ರಸ್ತಾವ

ಶಾಸಕ ಬಸವರಾಜ ದಢೇಸುಗೂರು ಮಾತನಾಡಿ, ನವಲಿ ಗ್ರಾಮಕ್ಕೆ ಸಿಎಚ್‌ಸಿ ಮಂಜೂರಾಗಿದ್ದು, .10 ಕೋಟಿ ಅನುದಾನ ಮಂಜೂರಾಗಿದೆ. ಕನಕಗಿರಿ ನನಗೆ ಬೇರೆಯಲ್ಲ. ಕ್ಷೇತ್ರದ ಎರಡು ತಾಲೂಕು ಕೇಂದ್ರಗಳಲ್ಲಿ 100 ಬೆಡ್‌ ಆಸ್ಪತ್ರೆ ನಿರ್ಮಿಸಲಾಗುವುದು. ಸಣ್ಣಪುಟ್ಟತಪ್ಪುಗಳಾಗಿದ್ದರೆ ಸರಿಪಡಿಸಿಕೊಳ್ಳುವೆ. ಮುಖಂಡರು, ಕಾರ್ಯಕರ್ತರು ನೋವು ಮಾಡಿಕೊಳ್ಳಬಾರದು ಎಂದರು. ಈ ವೇಳೆ ಟಿಎಚ್‌ಒ ರಾಘವೇಂದ್ರ ಠಿಕಾರೆ, ಆರೋಗ್ಯ ರಕ್ಷಾ ಸಮಿತಿಯ ಸದಸ್ಯ ಟಿ.ಜೆ. ರಾಜಶೇಖರ್‌, ನರಸಪ್ಪ ಕುರುಗೋಡು, ಮಂಡಲ ಅಧ್ಯಕ್ಷ ಮಹಾಂತೇಶ ಸಜ್ಜನ, ಜಿಲ್ಲಾ ಎಸ್‌ಸಿ ಮೋರ್ಚಾಧ್ಯಕ್ಷ ಸಣ್ಣ ಕನಕಪ್ಪ, ಹಿರಿಯ ಮುಖಂಡ ವಿರೂಪಾಕ್ಷಪ್ಪ ಭತ್ತದ, ಚನ್ನಪ್ಪ ತೆಗ್ಗಿನಮನಿ ಇದ್ದರು.

ಎತ್ತಂಗಡಿಗೆ ಶಿಫಾರಸು ಪತ್ರ ಬರೆದಿದ್ದೇಕೆ?

ಕನಕಗಿರಿ ಹಾಗೂ ಕಾರಟಗಿ ಎರಡು ಕಡೆಗಳಲ್ಲಿ ಆಸ್ಪತ್ರೆ ಆರಂಭಿಸಲಾಗುವುದೆಂದು ಡಿಎಚ್‌ಒ ಸಭೆಯಲ್ಲಿ ಹೇಳುತ್ತಿದ್ದಂತೆ ಎರಡು ಕಡೆ ಆಸ್ಪತ್ರೆಯಾದರೆ, ಇಲ್ಲಿಗೆ ಮಂಜೂರಾದ ಆಸ್ಪತ್ರೆಯನ್ನು ಶಾಸಕರು ಕಾರಟಗಿ ಪಟ್ಟಣಕ್ಕೆ ನೀಡಿ ಎಂದು ಎತ್ತಂಗಡಿ ಶಿಫಾರಸು ಪತ್ರ ಬರೆದಿರುವುದು ಏಕೆ? ಎಂದು ಮುಖಂಡರು ಪ್ರಶ್ನಿಸಿದರು. ಕಾರಟಗಿಗೆ ಮಂಜೂರಾಗಿದ್ದರೆ ಅಲ್ಲಿನ ಆಸ್ಪತ್ರೆಯಿಂದ ನಡೆದ ಪತ್ರ ವ್ಯವಹಾರವನ್ನು ತೋರಿಸಿ ಎಂದು ಪಟ್ಟು ಹಿಡಿದರು. ಇದರಿಂದ ಡಿಎಚ್‌ಒ ತಟಸ್ಥರಾಗಿ ಕುಳಿತುಕೊಂಡರು. ಸದ್ಯ ಸಮುದಾಯ ಆರೋಗ್ಯ ಕೇಂದ್ರದ ಪಕ್ಕದಲ್ಲಿ ಭೂಮಿ ಇದೆ. ಸ್ವಚ್ಛಗೊಳಿಸಿ ಆಸ್ಪತ್ರೆ ಕಟ್ಟಡಕ್ಕೆ ಭೂಮಿಪೂಜೆ ನೆರವೇರಿಸಬೇಕು ಎಂದು ಪ್ರಮುಖರು ಶಾಸಕ ಹಾಗೂ ಅಧಿಕಾರಿಗಳಿಗೆ ಮನವಿ ಮಾಡಿದರು. Chamarajanagar: ಸರ್ಕಾರಿ ಮೆಡಿಕಲ್ ಕಾಲೇಜಿನಲ್ಲಿ ನರ್ಸ್‌ಗಳ ಕೊರತೆ, ಶಸ್ತ್ರಕ್ರಿಯೆ ಸ್ಥಗಿತ!

click me!