ಸಮಸ್ಯೆ ಬಗೆಹರಿಸದಿದ್ದರೆ ಪುರಸಭೆಗೆ ಬೀಗ: ಮಾಜಿ ಶಾಸಕ ಬಾಲಕೃಷ್ಣ ಎಚ್ಚರಿಕೆ

By Govindaraj SFirst Published Sep 18, 2022, 12:55 AM IST
Highlights

ಪುರಸಭೆಯಲ್ಲಿನ ಸಮಸ್ಯೆಗಳನ್ನು ಶೀಘ್ರ ಬಗೆಹರಿಸದಿದ್ದರೆ ಕಚೇರಿಗೆ ಬೀಗ ಹಾಕಿ ಬೃಹತ್‌ ಪ್ರತಿಭಟನೆ ಮಾಡಲಾಗುವುದು ಎಂದು ಮಾಜಿ ಶಾಸಕ ಬಾಲಕೃಷ್ಣ ಎಚ್ಚರಿಕೆ ನೀಡಿದರು. 

ಮಾಗಡಿ (ಸೆ.18): ಪುರಸಭೆಯಲ್ಲಿನ ಸಮಸ್ಯೆಗಳನ್ನು ಶೀಘ್ರ ಬಗೆಹರಿಸದಿದ್ದರೆ ಕಚೇರಿಗೆ ಬೀಗ ಹಾಕಿ ಬೃಹತ್‌ ಪ್ರತಿಭಟನೆ ಮಾಡಲಾಗುವುದು ಎಂದು ಮಾಜಿ ಶಾಸಕ ಬಾಲಕೃಷ್ಣ ಎಚ್ಚರಿಕೆ ನೀಡಿದರು. ಪುರಸಭೆ ಆಡಳಿತಾಧಿಕಾರಿಗಳ ನಿರ್ಲಕ್ಷ್ಯ ಧೋರಣೆ ಹಾಗೂ ದುರಾಡಳಿತದ ವಿರುದ್ಧ ಪ್ರತಿಭಟನೆಗೆ ಚಾಲನೆ ನೀಡಿ ಮಾತನಾಡಿದ ಅವರು, ಪುರಸಭೆಯಲ್ಲಿ ಲಂಚ ಕೊಡದಿದ್ದರೆ ಯಾವ ಕೆಲಸವೂ ಆಗುವುದಿಲ್ಲ. ಒಂದು ಖಾತೆ ಮಾಡಿಸಬೇಕೆಂದರೂ ಹಣ ಕೊಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಟೀಕಿ​ಸಿ​ದರು.

ಈಗಾಗಲೇ 750ಕ್ಕೂ ಹೆಚ್ಚು ಇ- ಖಾತೆಗಳು ಬಾಕಿ ಉಳಿದಿವೆ. ಯಾವ ಕಾರಣಕ್ಕೆ ವಿಳಂಬ ಮಾಡುತ್ತಿದ್ದಾರೆ ತಿಳಿಯುತ್ತಿಲ್ಲ. 2 ವರ್ಷಗಳಾದರೂ ಕಚೇರಿಗೆ ಅಲೆದಾಡುತ್ತಿದ್ದರೂ ಇ-ಖಾತೆ ಮಾಡುತ್ತಿಲ್ಲ. ಯುಜಿಡಿಗಳು ಎಲ್ಲೆಂದರಲ್ಲಿ ಉಕ್ಕಿ ಹರಿಯುತ್ತಿವೆ. ಪಟ್ಟಣದ ಸೌಂದರ್ಯವೇ ಹಾಳಾಗುತ್ತಿದೆ. ರಸ್ತೆಗಳೆಲ್ಲ ಕಿತ್ತು ಹೋಗಿದ್ದರೂ ದುರಸ್ತಿಪಡಿಸುವ ಗೋಜಿಗೆ ಹೋಗಿಲ್ಲ. ಪಟ್ಟಣಕ್ಕೆ ಸರಬರಾಜಾಗುವ ಮಂಚನಬೆಲೆ ನೀರು ಕಲುಷಿತವಾಗಿದೆ. ಕಲುಷಿತ ನೀರನ್ನೇ ಪಟ್ಟಣದ ಜನತೆಗೆ ಕುಡಿಯಲು ಸರಬರಾಜು ಮಾಡುತ್ತಿದ್ದಾರೆ. ಇದು ಪುರಸಭೆ ಆಡಳಿತ ವೈಖರಿ. ನಾನು ಶಾಸಕನಾಗಿದ್ದಾಗ ತಿಂಗಳಿಗೊಮ್ಮೆ ಅಧಿಕಾರಿಗಳ ಸಭೆ ಕರೆಯುತ್ತಿದ್ದೆ. 

ರಾಮನಗರ: ಕೆರೆಯಲ್ಲಿ ಈಜಲು ಹೋಗಿದ್ದ ಮೂವರು MBBS ವಿದ್ಯಾರ್ಥಿಗಳು ನಾಪತ್ತೆ

ಸಮಸ್ಯೆಗಳನ್ನು ಆಲಿಸಿ ಅವರಿಗೆ ಎಚ್ಚರಿಕೆ ಕೊಟ್ಟು ಕೆಲಸ ಮಾಡಿಸುತ್ತಿದ್ದೆ .ಆದರೆ ಈಗಿನ ಶಾಸಕರು ಸಭೆ ಮಾಡುವುದಿಲ್ಲ ಎಂದು ಲೇವಡಿ ಮಾಡಿ​ದರು. ಮಾಜಿ ಸಚಿವ ಎಚ್‌.ಎಂ.ರೇವಣ್ಣ ಮಾತನಾಡಿ, ನಾನು ರಾಜಕೀಯಕ್ಕೆ ಪ್ರವೇಶಿಸಿದ್ದು ಪುರಸಭೆ ಸದಸ್ಯನಾಗಿ, ನಮ್ಮ ಅವಧಿಯಲ್ಲಿ ಪಟ್ಟಣದಲ್ಲಿ ಸಾಕಷ್ಟುಅಭಿವೃದ್ಧಿ ಮಾಡಿದ್ದೇವೆ. ಖಾತೆಗಳಿಗೆ ಅರ್ಜಿ ಸಲ್ಲಿಸಿದ ಒಂದು ತಿಂಗಳೊಳಗೆ ಉತ್ತರ ಕೊಡಬೇಕು. ಆದರೆ ಪುರಸಭೆಯಲ್ಲಿ 2 ವರ್ಷಗಳಾದರೂ ಏನಾಗಿದೆ ಎಂಬುದನ್ನು ಹೇಳುತ್ತಿಲ್ಲ ಎಂದು ಟೀಕಿ​ಸಿ​ದರು. ರಾಜ್ಯದಲ್ಲಿ ಬಿಜೆಪಿ ಸರ್ಕಾರ 40 ಪರ್ಸೆಂಟ್‌ ಸರ್ಕಾರ ಎಂಬ ಸ್ಥಿತಿಗೆ ಬಂದಿದ್ದರೆ ಮಾಗಡಿ ಪುರಸಭೆ ಅದಕ್ಕಿಂತ ಹೆಚ್ಚು ಪರ್ಸೆಂಟ್‌ ಪಡೆಯುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ. 

ಬಿಜೆಪಿ ಪಕ್ಷದ ಬಿ ಟೀಮ್‌ ಆಗಿ ಕೆಲಸ ಮಾಡುತ್ತಿರುವ ಜೆಡಿಎಸ್‌ ಪಕ್ಷದ ಶಾಸಕರು ಉಸ್ತುವಾರಿ ಸಚಿವರಿಂದ ಹೆಚ್ಚಿನ ಅನುದಾನ ಮಾಗಡಿ ಪಟ್ಟಣಕ್ಕೆ ತಂದು ಪುರಸಭೆಯಲ್ಲಿ ಆಗುತ್ತಿರುವ ಸಮಸ್ಯೆಗಳನ್ನು ಬಗೆಹರಿಸುವ ಕೆಲಸ ಮಾಡಬೇಕೆಂದರು. ಪ್ರತಿಭಟನಾಕಾರರಿಂದ ಮನವಿ ಪತ್ರ ಸ್ವೀಕರಿಸಿದ ಪಿಡಿ ರಮೇಶ್‌, ಪುರ​ಸ​ಭೆ​ಯಲ್ಲಿ ಇ-ಖಾತೆ 224 ಬಾಕಿ ಇದ್ದು ಇನ್ನೂ 15 ದಿನದೊಳಗೆ ಅದನ್ನು ವಿಲೇವಾರಿ ಮಾಡಲಾಗು​ವು​ದು. ಮುಖ್ಯಾ​ಧಿಕಾರಿಗಳು ಮತ್ತು ಅದಕ್ಕೆ ಸಂಬಂ​ಧಿಸಿದ ಅ​ಧಿಕಾರಿಗಳನ್ನು ಅಮಾನತು ಮಾಡುವ ಕೆಲಸ ಮಾಡು​ತ್ತೇವೆ ಎಂದು ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನೆಯನ್ನು ಹಿಂಪಡೆಯಲಾಯಿತು.

ಗ್ರಾಮೀಣ ಭಾಗದ ಜನರ ಕಷ್ಟ ಎಚ್‌ಡಿಕೆಗೇನು ಗೊತ್ತು?: ಸಿ.ಪಿ.ಯೋಗೇಶ್ವರ್‌

ಪಟ್ಟಣದ ಕಲ್ಯಾಗೇಚ್‌ನ ವಿನಾಯಕ ಸ್ವಾಮಿ ದೇವಸ್ಥಾನದಿಂದ, ಡೂಂಲೈಚ್‌ ವೃತ್ತದ ಮಾರ್ಗವಾಗಿ ಕೆಂಪೇಗೌಡ ಸರ್ಕಲ್‌ನಿಂದ ಪುರಸಭೆವರೆಗೂ ಪುರಸಭೆ ಆಡಳಿತ ವಿರುದ್ಧ ಕಾಂಗ್ರೆಸ್‌ ಪಕ್ಷ ಬೃಹತ್‌ ಪ್ರತಿಭಟನೆ ನಡೆಸಿದರು. ಪ್ರತಿಭಟನೆಯಲ್ಲಿ ಒಕ್ಕಲಿಗ ಸಂಘದ ನಿರ್ದೇಶಕ ಎಚ್‌.ಎನ್‌.ಅಶೋಕ್‌, ಪುರಸಭೆ ಸದಸ್ಯರಾದ ಪುರುಷೋತ್ತಮ, ಶಿವಕುಮಾರ್‌, ರಿಯಾಜ್‌, ಮಂಡಿ ಗುರು, ರಘು, ಪೋಲಿಸ್‌ ವಿಜಿ, ಕಾಂಗ್ರೆಸ್‌ ಮುಖಂಡರಾದ ಆಗ್ರೋ ಪುರುಷೋತ್ತಮ್‌, ರಾಮಕೃಷ್ಣಯ್ಯ, ಶಶಾಂಕ್‌ ರೇವಣ್ಣ, ತೋಟದ ಮನೆ ಗಿರೀಶ್‌, ದೊಡ್ಡಿ ಲಕ್ಷ್ಮಣ್‌, ಚಂದೂರಾಯನಹಳ್ಳಿ ಕೃಷ್ಣ, ಮಹಾಂತೇಶ್‌, ಕಲ್ಯಾಗೇಚ್‌ ನವೀನ್‌, ಮೂರ್ತಿ, ಪ್ರವೀಣ್‌, ತೇಜು ಮತ್ತಿ​ತ​ರರು ಭಾಗವಹಿಸಿದ್ದರು.

click me!