Kolar: ಜಿಲ್ಲಾಸ್ಪತ್ರೆಯಲ್ಲಿ ಸೌಲಭ್ಯದ ಕೊರತೆ ಆಗಬಾರದು: ಜಿಲ್ಲಾಧಿಕಾರಿ ಸೂಚನೆ

By Govindaraj SFirst Published Sep 17, 2022, 11:35 PM IST
Highlights

ಜಿಲ್ಲಾಸ್ಪತ್ರೆಗೆ ಎಲ್ಲಾ ರೀತಿಯ ಮೂಲಸೌಲಭ್ಯ ಒದಗಿಸಬೇಕು. ಯಾವುದೇ ಕಾರಣಕ್ಕೆ ಆಸ್ಪತ್ರೆಯಲ್ಲಿ ಸಮಸ್ಯೆ ಉಂಟಾಗಬಾರದು ಎಂದು ಜಿಲ್ಲಾಧಿಕಾರಿ ವೆಂಕಟ್‌ ರಾಜಾ ಸೂಚಿಸಿದರು. ಎಸ್‌ಡಿಎನ್‌ಆರ್‌ ಜಿಲ್ಲಾಸ್ಪತ್ರೆಯಲ್ಲಿನ ಅವ್ಯವಸ್ಥೆಗಳ ಬಗ್ಗೆ ದೂರು ಬಂದ ಹಿನ್ನೆಲೆ ದಿಢೀರನೇ ಭೇಟಿ ನೀಡಿ ಪರಿಶೀಲನೆ ನಡೆಸಿದರು. 

ಕೋಲಾರ (ಸೆ.17): ಜಿಲ್ಲಾಸ್ಪತ್ರೆಗೆ ಎಲ್ಲಾ ರೀತಿಯ ಮೂಲಸೌಲಭ್ಯ ಒದಗಿಸಬೇಕು. ಯಾವುದೇ ಕಾರಣಕ್ಕೆ ಆಸ್ಪತ್ರೆಯಲ್ಲಿ ಸಮಸ್ಯೆ ಉಂಟಾಗಬಾರದು ಎಂದು ಜಿಲ್ಲಾಧಿಕಾರಿ ವೆಂಕಟ್‌ ರಾಜಾ ಸೂಚಿಸಿದರು. ಎಸ್‌ಡಿಎನ್‌ಆರ್‌ ಜಿಲ್ಲಾಸ್ಪತ್ರೆಯಲ್ಲಿನ ಅವ್ಯವಸ್ಥೆಗಳ ಬಗ್ಗೆ ದೂರು ಬಂದ ಹಿನ್ನೆಲೆ ದಿಢೀರನೇ ಭೇಟಿ ನೀಡಿ ಪರಿಶೀಲನೆ ನಡೆಸಿದರು. ತಾಯಿ ಹಾಗೂ ಮಕ್ಕಳ ಆಸ್ಪತ್ರೆಗೆ ತೆರಳಿದ ಅವರು, ತೀವ್ರ ನಿಗಾ ಘಟಕ, ಶಸ್ತ್ರ ಚಿಕಿತ್ಸಾ ಕೊಠಡಿ, ವಾರ್ಡ್‌ಗಳು, ಸೋಲಾರ್‌ ವ್ಯವಸ್ಥೆ ವೀಕ್ಷಿಸಿದರು.

ಆಸ್ಪತ್ರೆಯಲ್ಲಿ ಬಿಸಿ ನೀರಿಲ್ಲ: ತಾಯಿ ಹಾಗೂ ಮಕ್ಕಳ ಆಸ್ಪತ್ರೆಯಲ್ಲಿ ಬಾಣಂತಿಯರಿಗೆ ಬಿಸಿ ನೀರಿನ ವ್ಯವಸ್ಥೆ ಇಲ್ಲ ಎಂಬ ದೂರುಗಳು ಬಂದಿದ್ದವು. ಜೊತೆಗೆ ಉಳಿದ ವಿಭಾಗ, ಶೌಚಾಲಯಕ್ಕೆ ಸಮರ್ಪಕವಾಗಿ ನೀರು ಪೂರೈಕೆಯಾಗದಿರುವ ಸಮಸ್ಯೆಗಳಿದ್ದವು. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಖುದ್ದಾಗಿ ಆಸ್ಪತ್ರೆಗೆ ಭೇಟಿ ನೀಡಿ ಸೌಲಭ್ಯ ಪರಿಶೀಲಿಸಿದರು. ಬಳಿಕ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ವಿಜಯ್‌ ಕುಮಾರ್‌ರಿಂದ ಆಸ್ಪತ್ರೆಯ ಕುರಿತು ಸಮಗ್ರ ಮಾಹಿತಿ ಪಡೆದರು. ಹೊಸದಾಗಿ ಅಳವಡಿಸಿರುವ ಬಿಸಿ ನೀರಿನ ಯಂತ್ರ ಪರಿಶೀಲಿಸಿದರು.

ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದರೆ 5 ಲಕ್ಷ ಬಡ್ಡಿ ರಹಿತ ಸಾಲ: ರಮೇಶ್‌ ಕುಮಾರ್‌

ಆಸ್ಪತ್ರೆಯ ವಿವಿಧ ಭಾಗಗಳಿಗೆ ಭೇಟಿ ನೀಡಿದ ಬಳಿಕ ಜಿಲ್ಲಾಧಿಕಾರಿ ಅವರು ಆಸ್ಪತ್ರೆಯ ವೈದ್ಯಾಧಿಕಾರಿಗಳ ಸಭೆ ನಡೆಸಿದರು. ಆಸ್ಪತ್ರೆಗೆ ಹೆಚ್ಚಿನ ಅನುದಾನ ಬೇಕಿದ್ದರೆ ಪ್ರಸ್ತಾವನೆ ಸಲ್ಲಿಸಿ. ಸರ್ಕಾರಕ್ಕೆ ಪತ್ರ ಬರೆದು ಅನುದಾನ ಪಡೆಯೋಣ. ಆದರೆ, ಯಾವುದೇ ಕಾರಣಕ್ಕೆ ಆಸ್ಪತ್ರೆಯಲ್ಲಿ ಸಮಸ್ಯೆ ಉಂಟಾಗಬಾರದು. ನೀರು ಕೊರತೆಯಾಗದಂತೆ ನೀಡಿಕೊಳ್ಳಬೇಕು. ವಿದ್ಯುತ್‌ ಕೈಕೊಟ್ಟರೆ ಬ್ಯಾಕ್‌ಆಪ್‌ ಸಿದ್ಧತೆ ಮಾಡಿಕೊಂಡಿರಬೇಕು. ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಸೂಚಿಸಿದರು.

ಬೋರ್‌ವೆಲ್‌ ಕೊರೆಯಿಸಲು ಕ್ರಮ: ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ವಿಜಯಕುಮಾರ್‌ ಆಸ್ಪತ್ರೆಯ ಆವರಣದಲ್ಲಿರುವ ನಾಲ್ಕು ಕೊಳವೆ ಬಾವಿಗಳು ಕೆಟ್ಟು ಹೋಗಿರುವುದರಿಂದ ಪ್ರತಿ ದಿನವೂ ನಗರಸಭೆಯಿಂದ 20 ಟ್ಯಾಂಕರ್‌ ನೀರನ್ನು ಸರಬರಾಜು ಮಾಡಿಸಿಕೊಳ್ಳಲಾಗುತ್ತಿದೆ, ಅದರಲ್ಲೂ ಡಯಾಲಿಜಿಸ್‌ಗೆ ಸಾಕಷ್ಟುನೀರು ಖರ್ಚಾಗುತ್ತಿದೆ ಎಂದು ಜಿಲ್ಲಾಧಿಕಾರಿ ಗಮನಕ್ಕೆ ತಂದರು. ಇದಕ್ಕೆ ಉತ್ತರಿಸಿದ ಜಿಲ್ಲಾಧಿಕಾರಿ, ಭೂ ವಿಜ್ಞಾನಿರನ್ನು ಕರೆಯಿಸಿ ನೀರು ಇರುವ ಪಾಯಿಂಟ್‌ ಗುರ್ತಿಸಿದ ನಂತರ ಜಿಲ್ಲಾಡಳಿತ ಗಮನಕ್ಕೆ ತಂದರೆ ಸರ್ಕಾರದ ಗಮನಕ್ಕೆ ತಂದು ಕೊಳವೆಬಾವಿ ಕೊರೆಯಿಸಲಾಗುವುದು ಎಂದು ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ವಿಜಯಕುಮಾರ್‌ಗೆ ಹೇಳಿದರು.

ಕೆಜಿಎಫ್‌ ಮಿನಿ ವಿಧಾನಸೌಧ ಉದ್ಘಾಟನೆಗೆ ಸಿದ್ಧ: ಕೆಜಿಎಫ್‌ ನಗರಲ್ಲಿ 10 ಕೋಟಿ ರುಪಾಯಿಗಳ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಮಿನಿವಿಧಾನ ಸೌಧದ ಕಾಮಗಾರಿ ಬಹುತೇಕ ಮುಗಿದಿದ್ದು, ಶೀಘ್ರದಲ್ಲೇ ಲೋಕಾರ್ಪಣೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ವೆಂಕಟ್‌ ರಾಜಾ ತಿಳಿಸಿದರು. ನಗರದಲ್ಲಿ ಮಿನಿ ವಿಧಾನಸೌಧ ಕಟ್ಟಡ ಕಾಮಗಾರಿ ಪರಿಶೀಲಿಸದ ಅವರು, ಈಗಾಗಲೇ ವಿದ್ಯುತ್‌ ಕಾಮಗಾರಿ, ಕಟ್ಟಡಕ್ಕೆ ಸುಣ್ಣ ಬಣ್ಣ, ಕಾಂಪೌಂಡ್‌ ಕಾಮಗಾರಿ ಪೂರ್ಣಗೊಂಡಿದೆ. ಕಟ್ಟಡದ ಮುಂಭಾಗ ವಿದ್ಯುತ್‌ ದೀಪಗಳ ಅಳವಡಿಕೆ, ಲೀಫ್‌್ಟಅಳವಡಿಕೆ, ಕಚೇರಿಗಳಿಗೆ ಪೀಠೋಪಕರಣ ಅಳವಡಿಕೆ ಬಾಕಿಯಿದ್ದು ಎರಡು ಮೂರು ದಿನಗಳಲ್ಲಿ ಎಲ್ಲ ಕಾಮಗಾರಿ ಮುಗಿಸಿ ಕಟ್ಟಡವನ್ನು ತಾಲೂಕು ಆಡಳಿತಕ್ಕೆ ನೀಡಲಿದ್ದಾರೆಂದು ಜಿಲ್ಲಾಧಿಕಾರಿ ತಿಳಿಸಿದರು.

ಕೋಲಾರ ಜಿಲ್ಲೆಯಲ್ಲಿ ಶುರುವಾಗಿದೆ ರಾಜಕೀಯ ಗುದ್ದಾಟ: ಚುನಾವಣೆ ಟಿಕೆಟ್‌ಗಾಗಿ ಕಸರತ್ತು

ಅಧಿವೇಶನದ ಬಳಕ ಉದ್ಘಾಟನೆ: ಕಟ್ಟಡವನ್ನು ಉದ್ಘಾಟಿಸಲು ಶಾಸಕರ ಜೊತೆ ದಿನಾಂಕವನ್ನು ನಿಗದಿಪಡಿಸಿ ಸಚಿವರ ಗಮನಕ್ಕೆ ತರಲಾಗುವುದು. ಸಚಿವರು ನಿಗದಿಪಡಿಸಿದ ದಿನಾಂಕದಂದು ಕಟ್ಟಡವನ್ನು ಉದ್ಘಾಟಸಿಲಾಗುವುದು. ವಿಧಾನಸಭೆ ಅದೀವೇಶನ ಮುಗಿದ ನಂತರ ಕಂದಾಯ ಸಚಿವರು ಉದ್ಘಾಟನೆಯ ದಿನಾಂಕವನ್ನು ನಿಗದಿಪಡಿಸಲಿದ್ದಾರೆ ಎಂದರು. ಮಿನಿ ವಿಧಾನ ಸೌಧ ಕಟ್ಟಡಕ್ಕೆ ಕೆಜಿಎಫ್‌ ತಾಲೂಕು ಆಡಳಿತ ಕಚೇರಿ ಎಂದು ನಾಮಕರಣ ಮಾಡಲಾಗಿದೆ. ತಾಲೂಕಿನ 20 ಕ್ಕೂ ಹೆಚ್ಚು ಕಚೇರಿಗಳು ಇಲ್ಲಿ ಕಾರ‍್ಯನಿರ್ವಹಿಸಲಿದ್ದು, ಇದರಿಂದ ಒಂದೇ ಸೂರನಡಿ ಎಲ್ಲಾ ಸರಕಾರಿ ಕಚೇರಿಗಳು ಇರುವುದರಿಂದ ಸಾರ್ವಜನಿಕರಿಗೆ ಅನುಕೂಲವಾಗಲಿದೆ ಎಂದರು.

click me!