ಕುವೆಂಪು ವಿಶ್ವವಿದ್ಯಾಲಯ ವ್ಯಾಪ್ತಿಯ ಎಲ್ಲ ಕಾಲೇಜುಗಳಲ್ಲಿ ಸಮಸ್ಯೆ: ಆಯನೂರು ಮಂಜುನಾಥ್‌

By Kannadaprabha NewsFirst Published Feb 1, 2024, 1:30 PM IST
Highlights

ಕುವೆಂಪು ವಿಶ್ವವಿದ್ಯಾಲಯದಲ್ಲಿ ಆಡಳಿತ ಸಂಪೂರ್ಣ ಕುಸಿದಿದೆ. ಇದರ ಪರಿಣಾಮ ವಿ.ವಿ. ವ್ಯಾಪ್ತಿಯಲ್ಲಿ ಬರುವ ಎಲ್ಲ ಕಾಲೇಜುಗಳು ಸಮಸ್ಯೆಗಳನ್ನು ಎದುರಿಸುತ್ತಿವೆ ಎಂದು ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್‌ ಟೀಕಿಸಿದರು. 

ಶಿವಮೊಗ್ಗ (ಫೆ.01): ಕುವೆಂಪು ವಿಶ್ವವಿದ್ಯಾಲಯದಲ್ಲಿ ಆಡಳಿತ ಸಂಪೂರ್ಣ ಕುಸಿದಿದೆ. ಇದರ ಪರಿಣಾಮ ವಿ.ವಿ. ವ್ಯಾಪ್ತಿಯಲ್ಲಿ ಬರುವ ಎಲ್ಲ ಕಾಲೇಜುಗಳು ಸಮಸ್ಯೆಗಳನ್ನು ಎದುರಿಸುತ್ತಿವೆ ಎಂದು ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ್‌ ಟೀಕಿಸಿದರು. ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಒಂದು ಕಡೆ ಪಾಠಗಳು ನಡೆಯುತ್ತಿಲ್ಲ. ಅಧ್ಯಾಪಕರು ಇಲ್ಲ. ಪರೀಕ್ಷೆಗಳು ಸಮಯಕ್ಕೆ ಸರಿಯಾಗಿ ನಡೆಯುತ್ತಿಲ್ಲ. ವಿದ್ಯಾರ್ಥಿ ವೇತನಕ್ಕೆ ತೊಂದರೆಯಾಗಿದೆ. ಹೊಸ ವಿಷಯಗಳಿಗೆ ಯಾರು ಪಾಠ ಮಾಡಬೇಕು ಎಂಬುವುದೇ ಗೊತ್ತಿಲ್ಲ. ಮುಖ್ಯವಾಗಿ ವಿ.ವಿ.ಗೆ ಕಾಯಂ ಕುಲಪತಿ ಹಾಗೂ ಕುಲಸಚಿವರು (ಶೈಕ್ಷಣಿಕ) ಇನ್ನೂ ನೇಮಕವೇ ಆಗಿಲ್ಲ ಎಂದು ಆರೋಪಿಸಿದರು.

ಜ.24ಕ್ಕೆ ಸೆಮಿಸ್ಟರ್‌ ಮುಕ್ತಾಯವಾಗಬೇಕಿತ್ತು. 25ಕ್ಕೆ ಪರೀಕ್ಷೆಗಳು ಆರಂಭವಾಗಬೇಕಿತ್ತು. ಆದರೆ, ಪರೀಕ್ಷಾ ದಿನಾಂಕಗಳನ್ನು ಕಾರಣಗಳು ಇಲ್ಲದೇ ಮುಂದೂಡಲಾಗಿದೆ. ತಮ್ಮ ವೈಫಲ್ಯತೆ ಮುಚ್ಚಿಕೊಳ್ಳಲು ಪರೀಕ್ಷೆಗಳನ್ನು ಮುಂದೂಡಿದರೆ ವಿದ್ಯಾರ್ಥಿಗಳ ಮುಂದಿನ ಶೈಕ್ಷಣಿಕ ವರ್ಷದ ಗತಿಯೇನು? ಎನ್‍ಇಪಿ ಅಂಕಪಟ್ಟಿ ಕೊಟ್ಟಿಲ್ಲ, ಆನ್‍ಲೈನ್ ಅಂಕಪಟ್ಟಿಗಳು ದೋಷಪೂರಿತವಾಗಿವೆ. ಅಂಕಪಟ್ಟಿಯಲ್ಲಿ ಎನ್‍ಎಸ್‍ಎಸ್ ಕ್ರೀಡೆ ಮತ್ತು ಇತರೆ ವಿಷಯಗಳನ್ನು ನಮೂದಿಸಿಲ್ಲ. ವಿದ್ಯಾರ್ಥಿ ವೇತನಕ್ಕೆ ಕಷ್ಟವಾಗಬಹುದು. ಪ್ರಾಂಶುಪಾಲರು ಅಸಹಾಯಕರಾಗಿದ್ದಾರೆ. ಜಿ.ಪಂ. ಸಿಇಒ ಅವರೇ ಕುಲಸಚಿವ ಆಗಿರುವುದರಿಂದ ಅವರಿಗೆ ಕಾರ್ಯದ ಒತ್ತಡ ಇರುತ್ತದೆ. ಹಾಗಾಗಿ, ಅನಗತ್ಯ ವಿಳಂಬ ಆಗುತ್ತದೆ ಎಂದು ದೂರಿದರು.

ಚುನಾವಣೆಗೆ ಮುನ್ನ ನೀಡಿದ ಭರವಸೆಯಂತೆ ನಿಮ್ಮ ಸಮಸ್ಯೆಗೆ ಪರಿಹಾರ: ಸಚಿವ ತಂಗಡಗಿ

ಈ ಎಲ್ಲ ಸಮಸ್ಯೆಗಳನ್ನು ಇಟ್ಟುಕೊಂಡು ನಾಳೆ ಅಥವಾ ನಾಡಿದ್ದು, ಸುಮಾರು 15 ಕಾಲೇಜುಗಳ ಪ್ರಾಂಶುಪಾಲರ ಜೊತೆಗೂಡಿ ಉನ್ನತ ಶಿಕ್ಷಣ ಸಚಿವ ಡಾ.ಸುಧಾಕರ್ ಅವರನ್ನು ಭೇಟಿ ಮಾಡಿ, ಸಮಸ್ಯೆಗಳನ್ನು ಗಮನಕ್ಕೆ ತರಲಾಗುವುದು ಮತ್ತು ರಾಜ್ಯಪಾಲರು ಮಧ್ಯೆ ಪ್ರವೇಶ ಮಾಡಿ, ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಮನವಿ ಮಾಡಲಾಗುವುದು ಎಂದು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ಸದಸ್ಯ ವೈ.ಎಚ್. ನಾಗರಾಜ್, ಪ್ರಮುಖರಾದ ಶಿ.ಜು.ಪಾಶ, ಐಡಿಯಲ್ ಗೋಪಿ, ಮುಕ್ತಿಯಾರ್‌ ಅಹಮದ್, ಸೈಯ್ಯದ್‍ ವಾಹಿದ್‍ ಅಡ್ಡು , ಸಂತೋಷ್ ಆಯನೂರು ಇದ್ದರು.

ಶಾಮನೂರು ಹೇಳಿಕೆ ಬಿಜೆಪಿಗೆ ಒಳಹೊಡೆತ: ಕೆಲವರು ನನ್ನ ವಿರುದ್ಧ ಪಕ್ಷದ ನಾಯಕರಿಗೆ ದೂರು ಕೊಟ್ಟಿದ್ದಾರೆ. ಪ್ರೇತಾತ್ಮಗಳಿಗೆ ಉತ್ತರಿಸುವ ಅವಶ್ಯಕತೆ ಇಲ್ಲ ಎಂದು ಆಯನೂರು ಮಂಜುನಾಥ್‌ ಹೇಳಿದರು. ಶಿವಮೊಗ್ಗದ ಬೆಕ್ಕಿನ ಕಲ್ಮಠದ ಸಮಾರಂಭದಲ್ಲಿ ಶಾಮನೂರು ಶಿವಶಂಕರಪ್ಪ ಅವರು, ಬಿ.ವೈ.ರಾಘವೇಂದ್ರ ಅವರನ್ನು ಗೆಲ್ಲಿಸಬೇಕು ಎಂದು ಹೇಳಿದ್ದರು. ಅದನ್ನು ಖಂಡಿಸಿ ಅವರ ವಿರುದ್ಧ ಕಾಂಗ್ರೆಸ್ ಹೈಕಮಾಂಡ್‍ಗೆ ದೂರು ಕೊಡಲು ಇವರಿಗೆ ತಾಕತ್ತಿಲ್ಲ. ಹೈಕಮಾಂಡ್ ನನಗೆ ನೋಟಿಸ್ ಕೊಟ್ಟರೆ ಉತ್ತರ ನೀಡುತ್ತೇನೆ ಎಂದರು.

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ಟಿಕೆಟ್‌ಗೆ ನಾನು ಆಕಾಂಕ್ಷಿ: ಪ್ರಮೋದ್ ಮಧ್ವರಾಜ್

ಶಾಮನೂರು ಶಿವಶಂಕರಪ್ಪ ಅವರಿಂದ ಅಚಾತುರ್ಯವಾಗಿದೆ ನಿಜ. ಮತ್ತೊಂದು ರೀತಿಯಲ್ಲಿ ಕಾಂಗ್ರೆಸ್‍ಗೆ ಲಾಭವೂ ಆಗಿದೆ. ಅವರ ಹೇಳಿಕೆಯಿಂದ ವೀರಶೈವರಲ್ಲದ ಹಿಂದುಳಿದ ವರ್ಗಗಳು ಜಾಗೃತಗೊಂಡಿವೆ. ಇದು ಕಾಂಗ್ರೆಸ್‍ಗೆ ಲಾಭವು ಆಗುತ್ತದೆ. ಬಹುಶಃ ಇದನ್ನು ಗಮನದಲ್ಲಿಟ್ಟುಕೊಂಡು ಶಾಮನೂರು ಅವರು ಬಿಜೆಪಿಗೆ ಒಳಹೊಡೆತ ಹೊಡಿದ್ದಿದ್ದಾರೆ. ಬೆಕ್ಕಿನಕಲ್ಮಠದ ಸಮಾರಂಭದಲ್ಲಿಯೇ ಅಧ್ಯಕ್ಷತೆ ವಹಿಸಿದ್ದ ಈ ಮಹಾನುಭವರು ಕೊನೆಪಕ್ಷ ಶಾಮನೂರು ಹೇಳಿಕೆಯನ್ನು ಅಲ್ಲಿಯೇ ಹೇಳಿ ಉತ್ತರ ನೀಡಬಹುದಿತ್ತು. ಅವರು ಬಾಯಿಯೇ ಬಿಡಲಿಲ್ಲ ಎಂದರು.

click me!