ಕೊಲ್ಲೂರು ಮೂಕಾಂಬಿಕೆಗೆ ನೂತನ ಬ್ರಹ್ಮರಥ ಸಿದ್ದ, 4 ಶತಮಾನಗಳ ಬಳಿಕ ಹೊಸ 'ರಥೋ'ತ್ಸವ

By Suvarna NewsFirst Published Aug 29, 2022, 5:17 PM IST
Highlights

ಕೊಲ್ಲೂರು ಮೂಕಾಂಬಿಕೆಗೆ ನೂತನ ಬ್ರಹ್ಮರಥ ಸಿದ್ಧವಾಗುತ್ತಿದ್ದು, ನಾಲ್ಕು ಶತಮಾನಗಳ  ನಂತರ ನೂತನ ರಥದಲ್ಲಿ ಉತ್ಸವ ನಡೆಯಲಿದೆ.

ವರದಿ-ಶಶಿಧರ ಮಾಸ್ತಿಬೈಲು, ಏಷ್ಯಾನೆಟ್ ಸುವರ್ಣ ನ್ಯೂಸ್
 

ಉಡುಪಿ, (ಆಗಸ್ಟ್.29): ಭಾರತದಲ್ಲೇ ಪ್ರಸಿದ್ಧಿ ಪಡೆದಿರುವ ಉಡುಪಿಯ ಕೊಲ್ಲೂರು ಮೂಕಾಂಬಿಕಾ ಕ್ಷೇತ್ರಕ್ಕೆ ನೂತನ ಬ್ರಹ್ಮರಥ ನಿರ್ಮಾಣವಾಗುತ್ತಿದೆ. ನಾಲ್ಕು ಶತಮಾನ ಕಂಡ ಹಳೆಯ ಬ್ರಹ್ಮರಥದ ಕೆತ್ತನೆ,ಮರ, ವಾಸ್ತು , ಕಾಷ್ಟಶಿಲ್ಪಗಳ ರಚನೆ ಹೀಗೆ ಯಾವುದರಲ್ಲೂ ಬದಲಾಗದ ಮತ್ತು ಹಳೆಯ ರಥದ ಪಡಿಯಚ್ಚಿನಂತೆ ಹೊಸ ಬ್ರಹ್ಮರಥ ನಿರ್ಮಿಸಲಾಗುತ್ತಿದೆ.

ಕೊಲ್ಲೂರು ಮೂಕಾಂಬಿಕಾ ಕ್ಷೇತ್ರದಲ್ಲಿ ನವರಾತ್ರಿ ಸೇರಿದಂತೆ ಅನೇಕ ಸಂದರ್ಭಗಳಲ್ಲಿ ವೈಭವದ ರಥೋತ್ಸವ ನಡೆಯುತ್ತೆ. ಈ ವೇಳೆ ಬ್ರಹ್ಮರಥವನ್ನು ಎಳೆಯುವ ಸಂಪ್ರದಾಯವಿದ್ದು ಇದೀಗ ಸೇವಾ ರೂಪದಲ್ಲಿ ನೂತನ ರಥ ಸಮರ್ಪಣೆಗೆ ಸಿದ್ಧವಾಗುತ್ತಿದೆ. ಹಳೆಯ ರಥದ ಗಾತ್ರವನ್ನೇ ಹೊಂದಿರುವ ಈ ಸುಂದರ ಬ್ರಹ್ಮರಥ ನಿರ್ಮಾಣ ಕಾರ್ಯ 2023 ಜನವರಿ ತಿಂಗಳಲ್ಲಿ ಪೂರ್ಣಗೊಳ್ಳಲಿದೆ.

Udupi: ಕೊಲ್ಲೂರು ಅಮ್ಮನ ಭೋಜನ ಪ್ರಸಾದಕ್ಕೆ ರಾಷ್ಟ್ರೀಯ ಸುರಕ್ಷತಾ ಗುಣಮಟ್ಟದ ಮಾನ್ಯತೆ

ಕೊಲ್ಲೂರು ದೇವಸ್ಥಾನ ಹಾಗೂ ಮುರುಡೇಶ್ವರದ ಉದ್ಯಮಿ ಆರ್ ಎನ್ ಶೆಟ್ಟಿ ಅವರ ಕುಟುಂಬದ ನಡುವೆ ಅವಿನಾಭ ಸಂಬಂಧವಿದ್ದು ಶೆಟ್ಟಿ ಅವರ ಪುತ್ರ ಸುನಿಲ್ ಈ ಬ್ರಹ್ಮ ರಥವನ್ನು ಸೇವಾ ರೂಪದಲ್ಲಿ ನಿರ್ಮಿಸಿ ಕೊಡುತ್ತಿದ್ದಾರೆ. ಕ್ಷೇತ್ರದಲ್ಲಿ ಈಗಾಗಲೇ ದಿವಂಗತ ಆರ್ ಎನ್ ಶೆಟ್ಟಿ ಗೆಸ್ಟ್ ಹೌಸ್ ಇದ್ದು, ಭಕ್ತರಿಗೆ ಅನುಕೂಲ ನೀಡುತ್ತಿದೆ. ಇದೀಗ ಸುಮಾರು ಎರಡು ಕೋಟಿ ರೂಪಾಯಿಗೂ ಅಧಿಕ ವೆಚ್ಚದಲ್ಲಿ ಬ್ರಹ್ಮರಥ ನಿರ್ಮಾಣಗೊಳ್ಳುತ್ತಿದೆ. ರಥ ನಿರ್ಮಾಣದಲ್ಲಿ ವಿಶೇಷ ನೈಪುಣ್ಯತೆಯನ್ನು ಪಡೆದಿರುವ ರಾಷ್ಟ್ರಪ್ರಶಸ್ತಿ ಪುರಸ್ಕೃತ ರಥಶಿಲ್ಪಿ ಕೋಟೇಶ್ವರದ ಲಕ್ಷ್ಮೀನಾರಾಯಣ ಆಚಾರ್ಯ ಅವರ ನೇತೃತ್ವದಲ್ಲಿ ರಥ ನಿರ್ಮಾಣವಾಗುತ್ತಿದೆ.

ಜನವರಿ ತಿಂಗಳಲ್ಲಿ ನೂತನ ಬ್ರಹ್ಮರಥ ಕೊಲ್ಲೂರು ಪ್ರವೇಶಿಸಲಿದ್ದು ಫೆಬ್ರವರಿ ತಿಂಗಳಲ್ಲಿ ಮುಕಾಂಬಿಕಾ ದೇವಿಗೆ ಅಷ್ಟಬಂದ ಬ್ರಹ್ಮಕಲಸ್ವೋತ್ಸವ ನೆರವೇರಲಿದೆ. ಕೊಲ್ಲೂರಿನಲ್ಲಿ ನಡೆಯುವ ರಥೋತ್ಸವಕ್ಕೆ ವಿಶೇಷ ಆಕರ್ಷಣೆಯಿದ್ದು ದೇಶವಿದೇಶಗಳಿಂದ ಬರುವ ಭಕ್ತರು ರಥೋತ್ಸವದಲ್ಲಿ ಪಾಲ್ಗೊಳ್ಳುತ್ತಾರೆ. ಹಾಗಾಗಿ 2023ರಲ್ಲಿ ಕೊಲ್ಲೂರಿನ ಮುಕಾಂಬಿಕಾ ದೇವಿಯು ನೂತನ ಬ್ರಹ್ಮರಥದಲ್ಲಿ ಕಂಗೊಳಿಸಲಿದ್ದು, ಜಾತ್ರೆಯ ಸಮಯದಲ್ಲಿ ಧಾರ್ಮಿಕ ಕಾರ್ಯಕ್ರಮಗಳ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿ ರಥೋತ್ಸವಕ್ಕೆ ವಿಶೇಷ ಮೆರುಗು ನೀಡಲಿದ್ದಾರೆ.

ಸದ್ಯ ದೇವಸ್ಥಾನದಲ್ಲಿ ಬಳಸಲಾಗುತ್ತಿರುವ ಬ್ರಹ್ಮರಥ ಸುಮಾರು ನಾಲ್ಕು ಶತಮಾನಗಳಷ್ಟು ಹಿಂದಿನದ್ದು. ಈ ರಥವು ಶಿಥಿಲಾವಸ್ಥೆಯಲ್ಲಿ ಇರುವುದರಿಂದ ನೂತನ ಬ್ರಹ್ಮರಥಕ್ಕೆ ಸಂಕಲ್ಪ ಮಾಡಿದ್ದು, ಜನವರಿ ತಿಂಗಳಲ್ಲಿ ಅದ್ದೂರಿಯಾಗಿ ರಥವನ್ನು ಬರಮಾಡಿಕೊಳ್ಳುತ್ತೇವೆ ಎಂದು ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ ಕೆರಾಡಿ ಹೇಳಿದ್ದಾರೆ.

ಈ ರಥಕ್ಕೆ ಸುಮಾರು 900 ಸಿಎಫ್ ಟಿ ಸಾಗುವಾನಿ, ಚಕ್ರ ಮತ್ತು ಅಚ್ಚುಮರಕ್ಕೆ ಭೋಗಿಯ ಮರ ಬಳಸಿಕೊಳ್ಳಲಾಗಿದೆ. 457 ಸಿಎಫ್ ಟಿ ಭೋಗಿ ಮರ ,100 ಸಿಎಫ್ಟಿ ಹೆಬ್ಬಲಸಿನ ಮರ ಬಳಸಿಕೊಳ್ಳಲಾಗಿದೆ. ಹಳೆಯ ರಥದ ತದ್ರೂಪಿಯಾಗಿ ಈ ನೂತನ ರಥ ನಿರ್ಮಾಣಗೊಳ್ಳುತ್ತಿದೆ ಎಂದು ರಥಶಿಲ್ಪಿ ಲಕ್ಷ್ಮಿನಾರಾಯಣ ಆಚಾರ್ಯ ಹೇಳಿದ್ದಾರೆ.

click me!