ವಿಜಯನಗರದಲ್ಲಿ ಗಮನಸೆಳೆದ ಯೋಗರಥಯಾತ್ರೆ..!

By Girish GoudarFirst Published Jun 19, 2022, 9:33 PM IST
Highlights

*  ಸಾವಿರಾರು ಯೋಗಪಟುಗಳು, ಯೋಗಾಸಕ್ತರು ಭಾಗಿ
*  ಯೋಗದ ಮೂಲಕ ಹಂಪಿ ಮತ್ತೇ ವಿಜೃಂಭಿಸಲಿದೆ
*  ಶ್ವಾಸಗುರು ವಚನಾನಂದ ಸ್ವಾಮೀಜಿ ನೇತೃತ್ವದಲ್ಲಿ ಮೆರವಣಿಗೆ
 

ವರದಿ: ನರಸಿಂಹ ಮೂರ್ತಿ ಕುಲಕರ್ಣಿ, ಏಷ್ಯಾನೆಟ್‌ ಸುವರ್ಣ ನ್ಯೂಸ್‌, ವಿಜಯನಗರ

ವಿಜಯನಗರ(ಜೂ.19): ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಹಿನ್ನಲೆಯಲ್ಲಿ ಇಂದ(ಭಾನುವಾರ) ಹೊಸಪೇಟೆಯಲ್ಲಿ ಯೋಗದ ಮಹತ್ವದ ಬಗ್ಗೆ  ಜನಸಾಮಾನ್ಯರಿಗೆ ತಿಳಿಸುವ ನಿಟ್ಟಿನಲ್ಲಿ ಬೃಹತ್ ಯೋಗರಥಯಾತ್ರೆ ರ್ಯಾಲಿಯನ್ನು ಆಯೋಜಿಸಲಾಗಿತ್ತು. ಯೋಗಪಟುಗಳು, ಯೋಗಾಸಕ್ತರು, ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಸೇರಿದಂತೆ ಸಾವಿರಾರು ಜನರು ಯೋಗರಥಯಾತ್ರೆಯಲ್ಲಿ ಪಾಲ್ಗೊಂಡು ಯೋಗದ ಮೇಲಿನ ತಮ್ಮ ಅಭಿಮಾನ ಮತ್ತು ಬದ್ಧತೆಯನ್ನು ಪ್ರದರ್ಶಿಸಿದರು. 

ಹೊಸಪೇಟೆಯ ವಡಕರಾಯ ದೇವಸ್ಥಾನದಿಂದ ಆರಂಭವಾದ ಬೃಹತ್ ಯೋಗ ರಥಯಾತ್ರೆಗೆ ಶ್ವಾಸಗುರು ಸಂಸ್ಥೆಯ ವಚನಾನಂದ ಸ್ವಾಮೀಜಿ ಅವರು ಚಾಲನೆ ನೀಡಿದರು. ಈ ವೇಳೆ ಕೊಪ್ಪಳದ ಗವಿಮಠದ ಮಲ್ಲಿಕಾರ್ಜುನ ಸ್ವಾಮೀಜಿ, ಮಾತಂಗಬೆಟ್ಟದ ಅನ್ನಪೂರ್ಣಶ್ರೀಗಳು, ನಗರಸಭೆ ಅಧ್ಯಕ್ಷೆ ಸುಂಕಮ್ಮ, ಜಿಲ್ಲಾ ಆಯುಷ್ ಅಧಿಕಾರಿ ಡಾ.ಸುಜಾತಾ ಪಾಟೀಲ್, ಮುಖಂಡರಾದ ಸಿದ್ಧಾರ್ಥ, ಸಂದೀಪ್‍ಸಿಂಗ್ ಸೇರಿದಂತೆ ವಿವಿಧ ಯೋಗಸಂಸ್ಥೆಗಳ ಪ್ರತಿನಿಧಿಗಳು ಇದ್ದರು.

VIJYANAGARA; ಫಲಿತಾಂಶದಲ್ಲಿ ದಾಖಲೆ ಬರೆದ ಕೊಟ್ಟೂರಿನ‌ ಇಂದೂ ಪಿಯು ಕಾಲೇಜು

ಜೂ.21 ಯೋಗೋತ್ಸವ ಹಿನ್ನಲೆ ಪೂರ್ವಭಾವಿಯಾಗಿ ಯಾತ್ರೆ

ಇನ್ನೂ ಜೂ. 21ರಂದು ಅಂತರರಾಷ್ಟ್ರೀಯ ಯೋಗ ದಿನಾಚರಣೆ ಹಿನ್ನಲೆ ಹಂಪಿಯಲ್ಲಿ ಕಳೆದೊಂದು ತಿಂಗಳಿಂದ ಯೋಗೋತ್ಸವ ಹೆಸರಲ್ಲಿ ಪ್ರತಿ ಭಾನುವಾರ ಸ್ಮಾರಕವೊಂದರ ಮುಂದೆ ಯೋಗೋತ್ಸವ ಕಾರ್ಯಕ್ರಮ ನಡೆಯುತ್ತಿದೆ.  ಇದರ ಭಾಗವಾಗಿ ಇದೀಗ ಹೊಸಪೇಟೆ ಯಲ್ಲಿ ಯೋಗರಥಯಾತ್ರೆ ಮಾಡಲಾಗ್ತಿದೆ. ನಗರದ ವಡಕರಾಯ ದೇವಸ್ಥಾನದಿಂದ ನಗರದ ಮೇನ್‍ಬಜಾರ್, ಪಾದಗಟ್ಟಿ ಅಂಜನೇಯ ದೇವಸ್ಥಾನ, ಗಾಂಧಿಚೌಕ್,ಪುಣ್ಯಮೂರ್ತಿ ಸರ್ಕಲ್, ಬಸ್ ನಿಲ್ದಾಣ,‌ ಪುನೀತ್‍ರಾಜಕುಮಾರ್ ಸರ್ಕಲ್, ಡಾ.ಬಿ.ಆರ್.ಅಂಬೇಡ್ಕರ್ ಸರ್ಕಲ್ ಮಾರ್ಗವಾಗಿ ಜಿಲ್ಲಾ ಕ್ರೀಡಾಂಗಣದವರೆಗೆ ನಡೆಯಿತು.

ಈ ವೇಳೆ ಶ್ವಾಸಗುರು ಸಂಸ್ಥೆಯ ವಚನಾನಂದಸ್ವಾಮೀಜಿ ಅವರು ಸೇರಿದಂತೆ ಗಣ್ಯರು ಡಾ.ಪುನೀತ್‍ರಾಜಕುಮಾರ್ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮತ್ತು ಪುಷ್ಪಾರ್ಚನೆ ಮಾಡಿ ನಮನ ಸಲ್ಲಿಸಿದರು.
ಎಲ್ಲದಕ್ಕೂ ಯೋಗದಲ್ಲಿದೆ ಪರಿಹಾರವಿದೆ ರಾರಾಜಿಸಿದ ನಾಮಫಲಕ ದೇಹದ ಮತ್ತು ಮನಸ್ಸಿನ ಎಲ್ಲ ರೋಗ ಮತ್ತು ಸಮಸ್ಯೆಗೆ ಯೋಗದಲ್ಲಿ ಪರಿಹಾರವಿದೆ. ಆತ್ಮ ಪರಮಾತ್ಮ ಲೀನವೇ ಯೋಗ,‌ ಯೋಗಯುಕ್ತ-ರೋಗಮುಕ್ತ ಎನ್ನುವದು ಸೇರಿದಂತೆ ಯೋಗದ ಮಹತ್ವ ಸಾರುವ ವಿವಿಧ ನಾಮ ಫಲಕಗಳನ್ನಿಡಿದುಕೊಂಡು ವಿದ್ಯಾರ್ಥಿಗಳು, ಯೋಗಪಟುಗಳು ಮತ್ತು ಯೋಗಾಸಕ್ತರು ಸಾಗಿದ್ದು ಗಮನಸೆಳೆಯಿತು.

ಕಲಾತಂಡಗಳ ಪ್ರದರ್ಶನ

ಯೋಗ ರಥಯಾತ್ರೆಯಲ್ಲಿ ವಿವಿಧ ಕಲಾತಂಡಗಳ ಕಲಾಪ್ರದರ್ಶನವೂ ಆಕರ್ಷಕವಾಗಿತ್ತು. ಬ್ರಹ್ಮಕುಮಾರಿ ಸಂಸ್ಥೆಯ ವತಿಯಿಂದ ಯೋಗಾಸನದ ವಿವಿಧ ಭಂಗಿಗಳ ಪ್ರದರ್ಶನ ರಥಯಾತ್ರೆ ಯಲ್ಲಿ ಕಂಡುಬಂದಿತು. ರಥಯಾತ್ರೆಯಲ್ಲಿ ಪತಂಜಲಿ,ಆರ್ಟ್ ಆಫ್ ಲಿವಿಂಗ್,ಬ್ರಹ್ಮಕುಮಾರಿ ಸಂಸ್ಥೆ ಸೇರಿದಂತೆ ವಿವಿಧ ಯೋಗಸಂಸ್ಥೆಗಳ ಪ್ರತಿನಿಧಿಗಳು,ಯೋಗಪಟುಗಳು,ಶಾಲಾ-ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು, ಆಯುಷ್ ಇಲಾಖೆ ಹಾಗೂ ವಿವಿಧ ಇಲಾಖೆಗಳ ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು ಪಾಲ್ಗೊಂಡಿದ್ದರು.

ಹೂವಿನಹಡಗಲಿ: ಹೂವಿನ ವ್ಯಾಪಾರಿ ಮಗಳಿಗೆ ಎಂಎಸ್ಸಿ ಕೆಮೆಸ್ಟ್ರಿಯಲ್ಲಿ ಮೊದಲ ರ್‍ಯಾಂಕ್

ಯೋಗೋತ್ಸವದ ಮಾಹಿತಿ ನೀಡಿದ ಸ್ವಾಮೀಜಿ

ಬೃಹತ್ ಯೋಗರಥಯಾತ್ರೆಯ ನಂತರ ಜಿಲ್ಲಾಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಶ್ವಾಸಗುರು ಸಂಸ್ಥೆಯ ವಚನಾನಂದ ಸ್ವಾಮೀಜಿ ಅವರು ವಿಜಯನಗರ ಸಾಮ್ರಾಜ್ಯದ ಸಂದರ್ಭದಲ್ಲಿ ವೈಭವದಿಂದ ಮೆರೆದಿದ್ದ ಹಂಪಿಯು ಮತ್ತೇ ಯೋಗದ ಮೂಲಕ ವೈಭವದಿಂದ ವಿಜೃಂಭಿಸಲಿದೆ ಎಂದರು.

ಜೀವನದಲ್ಲಿ ಸ್ಥಿತಪ್ರಜ್ಞ ಮತ್ತು ಸಮಚಿತ್ತದೊಂದಿಗೆ ಇರುವುದನ್ನು ಕಲಿಸುವುದೇ ಯೋಗ ಎಂದು ಬಣ್ಣಿಸಿದ ಅವರು ಇದೇ ಜೂ.21ರಂದು ಜಗತ್ತಿನ 196 ದೇಶಗಳು ಸೂರ್ಯನೆಡೆಗೆ ಮುಖಮಾಡಿ ಯೋಗ ಮಾಡುವುದು ನಮ್ಮ ದೇಶಕ್ಕೆ ನೀಡುವ ಗೌರವ ಮತ್ತು ನಮ್ಮ ದೇಶದ ಶ್ರೇಷ್ಠ ಗೌರವ ಯೋಗ ಎಂದರು. ಜೂ.21ರಂದು ಬೆಳಗ್ಗೆ 5ಕ್ಕೆ ಎಲ್ಲರೂ ಹಂಪಿಯ ಎದುರು ಬಸವಣ್ಣಮಂಪಟದ ಎದುರು ಸೇರೋಣ ಯೋಗ ಮಾಡುವುದರ ಮೂಲಕ ರೋಗಮುಕ್ತರಾಗೋಣ ಎಂದರು.
 

click me!