ರೈತರಿಗೆ ಸುಳ್ಳು ಹೇಳಿ ರಾಜಕೀಯ ಮಾಡಲಾರೆ: ಪ್ರತಾಪಗೌಡ ಪಾಟೀಲ್‌

Kannadaprabha News   | Asianet News
Published : Mar 26, 2021, 03:46 PM IST
ರೈತರಿಗೆ ಸುಳ್ಳು ಹೇಳಿ ರಾಜಕೀಯ ಮಾಡಲಾರೆ: ಪ್ರತಾಪಗೌಡ ಪಾಟೀಲ್‌

ಸಾರಾಂಶ

ಚುನಾವಣೆ ಅಖಾಡದಲ್ಲಿ ಧುಮುಕಿದ್ದು ವಿರೋಧ ಪಕ್ಷದವರು ಇಲ್ಲಸಲ್ಲದ ಅಪಪ್ರಚಾರ ಮಾಡುವುದು ಸ್ವಾಭಾವಿಕ| ಈ ಬಗ್ಗೆ ಕಾರ್ಯಕರ್ತರು ವಿಚಲಿತರಾಗದೆ ಸಿಎಂ ಯಡಿಯೂರಪ್ಪ ಹಾಗೂ ಪ್ರಧಾನಿ ಮೋದಿಯವರ ಅಭಿವೃದ್ಧಿ ಯೋಜನೆಗಳನ್ನು ತಿಳಿಸಿ ಮತ ಪಡೆಯಲು ಕಾರ್ಯೋನ್ಮುಖರಾಗಲಿ| ಅಭಿವೃದ್ಧಿ ಕೆಲಸಗಳೇ ತಮ್ಮ ಗೆಲುವಿಗೆ ಶ್ರೀರಕ್ಷೆ: ಪ್ರತಾಪಗೌಡ ಪಾಟೀಲ್‌| 

ಸಿಂಧನೂರು(ಮಾ.26): ಅಭಿವೃದ್ಧಿ ಕೆಲಸಗಳೇ ತಮ್ಮ ಗೆಲುವಿಗೆ ಶ್ರೀರಕ್ಷೆ. ರೈತರಿಗೆ ಸುಳ್ಳು ಆಶ್ವಾಸನೆ ನೀಡಿ ರಾಜಕೀಯ ಮಾಡಲಾರೆ ಎಂದು ಮಸ್ಕಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲ್‌ ಹೇಳಿದ್ದಾರೆ. 

ಜಿಪಂ ಸದಸ್ಯ ಎನ್‌.ಶಿವನಗೌಡ ಗೊರೇಬಾಳ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ತಮ್ಮ ಅವಧಿಯಲ್ಲಿ ಕ್ಷೇತ್ರ ವ್ಯಾಪ್ತಿಯಲ್ಲಿ ಶುದ್ಧ ಕುಡಿಯುವ ನೀರು, ರಸ್ತೆ, ಶಾಲಾ ಕಟ್ಟಡಗಳು ಸೇರಿದಂತೆ ಅನೇಕ ಅಭಿವೃದ್ಧಿ ಕೆಲಸಗಳನ್ನು ಮಾಡಲಾಗಿದೆ. ಅಭಿವೃದ್ಧಿ ವಿಚಾರದಲ್ಲಿ ಯಾರೊಂದಿಗೂ ರಾಜೀ ಮಾಡಿಕೊಂಡಿಲ್ಲ. ಕ್ಷೇತ್ರದ ಜನತೆಗೆ ಒಳಿತಾಗುವ ದೃಷ್ಟಿಯಿಂದ ಕೋಟ್ಯಂತರ ರು. ವೆಚ್ಚದಲ್ಲಿ ಅನೇಕ ಕಾಮಗಾರಿಗಳನ್ನು ಮಾಡಲಾಗಿದೆ ಎಂದರು.

ಕಳೆದ ನಾಲ್ಕು ತಿಂಗಳಿಂದ ರೈತರು 5ಎ ಕಾಲುವೆ ನೀರಿಗಾಗಿ ನಿರಂತರ ಹೋರಾಟ ಮಾಡುತ್ತಿದ್ದಾರೆ. ತಾವು ಸಹ ಮುಖ್ಯಮಂತ್ರಿ ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರ ಸಚಿವ ಸದಾನಂದಗೌಡ, ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರೊಂದಿಗೆ ಹೋರಾಟಗಾರರ ನಿಯೋಗ ಕರೆದುಕೊಂಡು ಮಾತುಕತೆ ನಡೆಸಿದ್ದೆ. ಆದರೆ ನೀರಿನ ಕೊರತೆ ಹಿನ್ನೆಲೆಯಲ್ಲಿ ಆ ಯೋಜನೆ ಪೂರ್ಣಗೊಳಿಸಲು ಸಾಧ್ಯವಾಗುತ್ತಿಲ್ಲ. ಅದರ ಬದಲಾಗಿ ವಟಗಲ್ ‌ಬಸವೇಶ್ವರ ಏತ ನೀರಾವರಿ ಯೋಜನೆಯ ಡಿಪಿಆರ್‌ಪೂರ್ಣಗೊಂಡಿದ್ದು ತನ್ಮೂಲಕ ಎಲ್ಲ ರೈತರಿಗೂ ನೀರೊದಗಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.

ಉಪಚುನಾವಣಾ ಕದನ: 'ಪಕ್ಷಾಂತರಿಗಳಿಗೆ ಜನತೆ ತಕ್ಕ ಪಾಠ ಕಲಿಸ್ತಾರೆ'

ಚುನಾವಣೆ ಅಖಾಡದಲ್ಲಿ ಧುಮುಕಿದ್ದು ವಿರೋಧ ಪಕ್ಷದವರು ಇಲ್ಲಸಲ್ಲದ ಅಪಪ್ರಚಾರ ಮಾಡುವುದು ಸ್ವಾಭಾವಿಕ. ಈ ಬಗ್ಗೆ ಕಾರ್ಯಕರ್ತರು ವಿಚಲಿತರಾಗದೆ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಪ್ರಧಾನಿ ಮೋದಿಯವರ ಅಭಿವೃದ್ಧಿ ಯೋಜನೆಗಳನ್ನು ತಿಳಿಸಿ ಮತ ಪಡೆಯಲು ಕಾರ್ಯೋನ್ಮುಖರಾಗಲಿ. ಕ್ಷೇತ್ರದಾದ್ಯಂತ ಬಿಜೆಪಿ ಅಲೆ ಹೆಚ್ಚಿದೆ. ಗೆದ್ದರೆ ಸಚಿವ ಸ್ಥಾನ ಸಿಗುತ್ತದೆ ಎಂಬ ಬಗ್ಗೆ ಈಗಲೇ ಹೇಳಲಾಗುವುದಿಲ್ಲ ಎಂದು ಪ್ರತಿಕ್ರಿಯಿಸಿದರು.

ಜಿಪಂ ಸದಸ್ಯ ಎನ್‌.ಶಿವನಗೌಡ ಗೊರೇಬಾಳ, ಬಿಜೆಪಿ ಮಂಡಲ ಅಧ್ಯಕ್ಷ ಹನುಮೇಶ ಸಾಲಗುಂದಾ, ಮುಖಂಡರಾದ ಬಸವರಾಜ ಕುರುಕುಂದಾ, ಮಲ್ಲನಗೌಡ ಗುಂಜಳ್ಳಿ, ಸಣ್ಣ ವೀರಭದ್ರಪ್ಪ ಕುರುಕುಂದಿ, ಖಾಸೀಂ ಸಾಬ ಕಾರ್ಪೇಂಟರ್‌, ಕಡಬೂರು ಅಮರೇಶ, ಪುಲದಿನ್ನಿ ಹನುಮಂತಪ್ಪ, ಸಾಲಗುಂದಾ ಲಿಂಗಪ್ಪ ಇದ್ದರು.
 

PREV
click me!

Recommended Stories

ಡಿಜಿಪಿಯಾಗಿ ಅಲೋಕ್‌ ಕುಮಾರ್ ಮುಂಬಡ್ತಿ, ಸರ್ಕಾರದ ವಿರುದ್ಧ 8 ತಿಂಗಳ ಕಾನೂನು ಹೋರಾಟಕ್ಕೆ ಜಯ!
ರಾಮನಗರ: ರಸ್ತೆಗೆ ಕುರಿಗಳು ಅಡ್ಡಿ, ಹಾರ್ನ್ ಮಾಡಿದ್ದಕ್ಕೆ ಬಸ್ ಚಾಲಕನ ಮೇಲೆ ಗ್ರಾಮಸ್ಥರಿಂದ ಹಲ್ಲೆ!