ಈಗ ಮತ್ತೋರ್ವ ಸ್ವಾಮೀಜಿಯಿಂದ ಡಿಸಿಎಂ ಸ್ಥಾನಕ್ಕೆ ಬೇಡಿಕೆ

By Kannadaprabha NewsFirst Published Jan 18, 2020, 10:51 AM IST
Highlights

ವಚನನಾನಂದ ಸ್ವಾಮೀಜಿ ಆಯ್ತು. ಈಗ ಮತ್ತೋರ್ವ ಸ್ವಾಮೀಜಿ ಸಿಎಂ ಮುಂದೆ ತಮ್ಮ ಬೇಡಿಕೆ ಇರಿಸಿದ್ದಾರೆ. ಉಪ ಮುಖ್ಯಮಂತ್ರಿ ಸ್ಥಾನಕ್ಕೆ ಡಿಮ್ಯಾಂಡ್ ಮಾಡಿದ್ದಾರೆ. 

ದಾವಣಗೆರೆ [ಜ.18]: ಉಪ ಮುಖ್ಯಮಂತ್ರಿ ಸ್ಥಾನ ತೆಗೆದು ಹಾಕುತ್ತೇವೆಂದರೆ ನಮ್ಮ ವಿರೋಧವಿಲ್ಲ. ಆಕಸ್ಮಾತ್‌ ಡಿಸಿಎಂ ಸ್ಥಾನ ಕೊಡುವುದಿದ್ದರೆ ನಮ್ಮ ಸಮಾಜಕ್ಕೂ ನೀಡಬೇಕು ಎಂದು ಹರಿಹರ ತಾ. ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಪುರಿ ಸ್ವಾಮೀಜಿ ಹೇಳಿದ್ದಾರೆ.

ವಾಲ್ಮೀಕಿ ಸಮುದಾಯಕ್ಕೆ ಉಪ ಮುಖ್ಯಮಂತ್ರಿ ಸ್ಥಾನ ನೀಡಬೇಕೆಂಬ ಬೇಡಿಕೆ ಇದ್ದೇ ಇದೆ. ಒಂದು ವೇಳೆ ಡಿಸಿಎಂ ಹುದ್ದೆ ತೆಗೆದು ಹಾಕುತ್ತೇವೆಂದರೆ ಅದಕ್ಕೆ ನಮ್ಮ ಯಾವುದೇ ವಿರೋಧವೂ ಇಲ್ಲ. ಆಕಸ್ಮಾತ್‌ ಡಿಸಿಎಂ ಸ್ಥಾನ ನೀಡಿದರೆ ವಾಲ್ಮೀಕಿ ಸಮಾಜಕ್ಕೂ ಅವಕಾಶ ನೀಡಬೇಕೆಂಬ ಬೇಡಿಕೆ ವಿಚಾರದಲ್ಲಿ ಎರಡು ಮಾತಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ನಗರದ ನಾಯಕ ಹಾಸ್ಟೆಲ್‌ನಲ್ಲಿ ವಾಲ್ಮೀಕಿ ಜಾತ್ರಾ ಮಹೋತ್ಸವ ಅಂಗವಾಗಿ ನಡೆದ ಪೂರ್ವ ಸಿದ್ಧತಾ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಸಿಎಂ ಹುದ್ದೆ ನಾಯಕ ಸಮುದಾಯದ ಶಾಸಕರಿಗೂ ನೀಡಬೇಕು ಎಂಬ ಒತ್ತಾಯವಿದೆ ಎಂದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಮುಖ್ಯಮಂತ್ರಿ ಯಡಿಯೂರಪ್ಪ ಮೇಲೆ ನಮಗೆ ಅಪಾರ ವಿಶ್ವಾಸವಿದೆ. ಹಾಗೆಯೇ ನಾಯಕ ಸಮುದಾಯಕ್ಕೆ ಶೇ.7.5 ಮೀಸಲಾತಿ ನೀಡುತ್ತಾರೆಂಬ ನಂಬಿಕೆಯೂ ಇದೆ. ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ನಾಯಕ ಸಮುದಾಯಕ್ಕೆ ಮೀಸಲಾತಿ ನೀಡುವ ಕುರಿತಂತೆ ನ್ಯಾ.ನಾಗಮೋಹನ ದಾಸ್‌ ಆಯೋಗವೂ ರಚನೆಯಾಗಿತ್ತು ಎಂದು ಹೇಳಿದರು.

ನಾವಿರೋದೆ ಹೀಗೆ ಕಣ್ರಿ: ಬೇಡಿಕೆ-ಬೆದರಿಕೆಯ ಹಿಂದಿನ ಸೀಕ್ರೆಟ್ ಬಿಚ್ಚಿಟ್ಟ ವಚನಾನಂದ ಸ್ವಾಮಿ..

ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಆಯೋಗ ತನ್ನ ಕೆಲಸ ಮಾಡುತ್ತಿದೆ. ಈಗಾಗಲೇ ವಾಲ್ಮೀಕಿ ನಾಯಕ ಸಮುದಾಯದ ನಿಯೋಗವು ನ್ಯಾ.ನಾಗಮೋಹನ ದಾಸ್‌ರನ್ನು ಭೇಟಿ ಮಾಡಿ, ಮನವಿ ಸಹ ಮಾಡಿದ್ದೇವೆ. ವಾಲ್ಮೀಕಿ ಜಾತ್ರೆ ನಂತರ ನಮ್ಮ ಸಮುದಾಯಕ್ಕೆ ಶೇ.7.5 ಮೀಸಲಾತಿ ಸಿಗುವ ವಿಶ್ವಾಸವಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಒಂದು ವೇಳೆ ವಾಲ್ಮೀಕಿ ಜಾತ್ರೆ ನಂತರವೂ ನಾಯಕ ಸಮುದಾಯಕ್ಕೆ ನ್ಯಾಯಯುತವಾಗಿ ಸಿಗಬೇಕಾದ ಶೇ.7.5 ಮೀಸಲಾತಿ ನೀಡಲು ವಿಳಂಬವಾದರೆ, ಸಮುದಾಯದ ಸಭೆ ನಡೆಸಿ, ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ ಎಂದು ವಾಲ್ಮೀಕಿ ಪೀಠದ ಪ್ರಸನ್ನಾನಂದ ಪುರಿ ಸ್ವಾಮೀಜಿ ಸ್ಪಷ್ಟಪಡಿಸಿದರು. ಈ ವೇಳೆ ಸಮಾಜದ ಮುಖಂಡರು, ಜನ ಪ್ರತಿನಿಧಿಗಳು ಇದ್ದರು.

click me!