ವಿದ್ಯುತ್‌ ಖಾಸಗೀಕರಣ ಹುನ್ನಾರ: 26ರಂದು ರಾಜ್ಯಾದ್ಯಂತ ರೈತರ ಬೃಹತ್‌ ಪ್ರತಿಭಟನೆ

By Kannadaprabha NewsFirst Published Sep 21, 2022, 11:52 AM IST
Highlights

ವಿದ್ಯುತ್‌ ಕ್ಷೇತ್ರವನ್ನು ಖಾಸಗೀಕರಣಗೊಸಿ ರೈತರ ಐ.ಪಿ. ಸೆಟ್‌ಗಳಿಗೆ ಮೀಟರ್‌ ಅಳವಡಿಸಲು ಹುನ್ನಾರ ನಡೆಸಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯಿಂದ ಪ್ರತಿಭಟನೆ

ಶಿವಮೊಗ್ಗ (ಸೆ.21) : ವಿದ್ಯುತ್‌ ಕ್ಷೇತ್ರವನ್ನು ಖಾಸಗೀಕರಣಗೊಸಿ ರೈತರ ಐ.ಪಿ. ಸೆಟ್‌ಗಳಿಗೆ ಮೀಟರ್‌ ಅಳವಡಿಸಲು ಹುನ್ನಾರ ನಡೆಸಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ನಾಯಕರಾದ ಕೆ.ಟಿ.ಗಂಗಾಧರ್‌ ಹಾಗೂ ಚುಕ್ಕಿ ನಂಜುಂಡಸ್ವಾಮಿ ನೇತೃತ್ವದಲ್ಲಿ ಸೆ.26ರಂದು ಬೆಳಗ್ಗೆ 10.30ಕ್ಕೆ ರಾಜ್ಯಾದ್ಯಂತ ರೈತರ ಬೃಹತ್‌ ಪ್ರತಿಭಟನೆ ನಡೆಯಲಿದೆ ಎಂದು ಸಂಘದ ಶಿವಮೊಗ್ಗ ತಾಲೂಕು ಅಧ್ಯಕ್ಷ ಜಿ.ಆರ್‌.ಸಣ್ಣರಂಗಪ್ಪ ಹೇಳಿದರು.

ಪಂಪ್‌ಸೆಟ್‌ಗೆ ಮೀಟರ್‌ ಹಾಕಿದ್ರೆ ಸಿಎಂ ಕುರ್ಚಿ ಕಾಲು ಮುರಿತೀವಿ; ಬಡಗಲಪುರ ನಾಗೇಂದ್ರ

ಆರೋಪಗಳೇನು?

  • ವಿದ್ಯುಚ್ಛಕ್ತಿ ಕ್ಷೇತ್ರವನ್ನು ಸಂಪೂರ್ಣವಾಗಿ ಖಾಸಗೀಕರಣಗೊಳಿಸಿ ಕೇಂದ್ರ ಸರ್ಕಾರ ರೈತರ ಮರಣಶಾಸನ ಬರೆಯಲು ಮುಂದಾಗಿದೆ
  •  ವಿದ್ಯುತ್‌ ಉತ್ಪಾದನೆ, ಪ್ರಸರಣೆ, ದರ ನಿಗದಿ ಮಾಡುವ ಹಕ್ಕನ್ನು ಖಾಸಗಿ ಬಂಡವಾಳಶಾಹಿಗಳಿಗೆ ಕೊಡುವ ಹುನ್ನಾರ
  •  ಈ ವರ್ಷ ಪ್ರಾಕೃತಿಕ ವಿಕೋಪದಿಂದ ಕೃಷಿ, ಆಹಾರದ ಬೆಳೆಗಳು, ತೋಟದ ಬೆಳೆಗಳು ಸಂಪೂರ್ಣ ನಾಶ

ಮಂಗಳವಾರ ಪ್ರೆಸ್‌ ಟ್ರಸ್ಟ್‌ನಲ್ಲಿ ನಡೆದ ಪ್ರತಿಕಾಗೋಷ್ಠಿಯಲ್ಲಿ ಮಾತನಾಡಿದ ವರು, ಸೆ.26ರಂದು ಸೋಮವಾರ ಬೆಳಗ್ಗೆ 10.30ಕ್ಕೆ ನಗರದ ಡಾ. ಬಿ.ಆರ್‌. ಅಂಬೇಡ್ಕರ್‌ ಭವನ ಆವರಣದಲ್ಲಿ ಎಲ್ಲ ರೈತರು ಜೊತೆಗೂಡಿ ಅಲ್ಲಿಂದ ಕಾಲ್ನಡಿಗೆ ಮೂಲಕ ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ತಲುಪಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಲು ಉದ್ದೇಶಿಸಲಾಗಿದೆ ಎಂದು ಹೇಳಿದರು.

ರಾಜ್ಯದ ಆಹಾರ ಉತ್ಪಾದನೆಗಾಗಿ ವ್ಯವಸಾಯ ಭೂಮಿಯ ನೀರಾವರಿಗಾಗಿ ಸುಮಾರು .25 ಲಕ್ಷಕ್ಕೂ ಹೆಚ್ಚು ಐ.ಪಿ. ಸೆಟ್‌ಗಳನ್ನು ರೈತರು ಬಳಸುತ್ತಿದ್ದಾರೆ. ಇದಕ್ಕಾಗಿ ರೈತರು ಕೋಟ್ಯಂತರ ರು. ಬಂಡವಾಳ ಹೂಡಿದ್ದೇವೆ. ಸರ್ಕಾರಗಳು ಮಾಡಬೇಕಾದ ಈ ಕೆಲಸವನ್ನು ರೈತರೇ ತಮ್ಮ ಸ್ವಂತ ಇಚ್ಛಾಶಕ್ತಿಯಿಂದ ಮಾಡಿ, ಲಕ್ಷಾಂತರ ಹೆಕ್ಟೇರ್‌ ವ್ಯವಸಾಯ ಭೂಮಿಯನ್ನು ನೀರಾವರಿ ಮಾಡಿದ್ದೇವೆ. ಆದರೆ, ವಿದ್ಯುಚ್ಛಕ್ತಿ ಕ್ಷೇತ್ರವನ್ನು ಸಂಪೂರ್ಣವಾಗಿ ಖಾಸಗೀಕರಣಗೊಳಿಸಿ ಕೇಂದ್ರ ಸರ್ಕಾರ ರೈತರ ಮರಣಶಾಸನ ಬರೆಯಲು ಮುಂದಾಗಿದೆ ಎಂದು ದೂರಿದರು.

ವಿದ್ಯುತ್‌ ಉತ್ಪಾದನೆ, ಪ್ರಸರಣೆ, ದರ ನಿಗದಿ ಮಾಡುವ ಹಕ್ಕನ್ನು ಖಾಸಗಿ ಬಂಡವಾಳಶಾಹಿಗಳಿಗೆ ಕೊಟ್ಟು ವ್ಯವಸಾಯದ ಭೂಮಿಯ ನೀರಾವರಿಗಾಗಿ ರೈತರು ಹಾಕಿರುವ ಐ.ಪಿ. ಸೆಟ್ಟುಗಳಿಗೆ ಮೀಟರ್‌ ಅಳವಡಿಸಲು ಹುನ್ನಾರ ನಡೆಸಿದೆ. ಈಗಾಗಲೇ ವಿದ್ಯುತ್‌ ಖಾಸಗೀಕರಣ ಬಿಲ್‌ ಅನ್ನು ಸಂಸತ್ತಿನಲ್ಲಿ ಮಂಡಿಸಿದ್ದು, ಕೇಂದ್ರ ಸರ್ಕಾರದ ವಿದ್ಯುಚ್ಛಕ್ತಿ ಖಾಸಗೀಕರಣ ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ರೈತವಿರೋಧಿ ನೀತಿಯನ್ನು ಖಂಡಿಸಿ ರಾಜ್ಯಾದ್ಯಂತ ರೈತರ ಬೃಹತ್‌ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ಇನ್ನೊಂದು ವರ್ಷದಲ್ಲಿ ಎಲ್ಲ ಫುಟ್ಪಾತ್‌ ಟ್ರಾನ್ಸ್‌ಫಾರ್ಮರ್‌ ಸ್ಥಳಾಂತರ: ಬೆಸ್ಕಾಂ

ಈ ವರ್ಷ ದೇಶಾದ್ಯಂತ ಜಲಪ್ರಳಯ, ಮೇಘ ಸ್ಫೋಟದಂತದ ಪ್ರಾಕೃತಿಕ ವಿಕೋಪದಿಂದ ಕೃಷಿ, ಆಹಾರದ ಬೆಳೆಗಳು, ತೋಟದ ಬೆಳೆಗಳು ಸಂಪೂರ್ಣ ನಾಶವಾಗಿವೆ ಮತ್ತು ಪ್ರವಾಹದಿಂದ ಮಣ್ಣು ಸಂಪೂರ್ಣವಾಗಿ ಕೊಚ್ಚಿಹೋಗಿದೆ. ಕೃಷಿ ಸಬಲೀಕರಣಕ್ಕೆ ಪ್ರತಿ ಎಕರೆಗೆ .25 ಸಾವಿರ ಪರಿಹಾರ ಕೊಡಬೇಕು ಎಂದು ಒತ್ತಾಯಿಸಿದರು.

ರಾಜ್ಯದಲ್ಲಿ ನಿರ್ಮಿಸುತ್ತಿರುವ ಹೆದ್ದಾರಿಗಳಿಗೆ ಕಡ್ಡಾಯವಾಗಿ ಸ್ಥಳೀಯ ಸೇವಾ ರಸ್ತೆಗಳನ್ನು ಜೊತೆಯಲ್ಲೇ ನಿರ್ಮಿಸಬೇಕು. ಈ ಹಿಂದೆ ಬಡವರ ಮನೆಗಳಿಗೆ 40 ಯೂನಿಟ್‌ವರೆಗೆ ಉಚಿತ ವಿದ್ಯುತ್‌ ನೀಡುತ್ತಿದ್ದ ಸರ್ಕಾರ ಇತ್ತೀಚೆಗೆ 74 ಯೂನಿಟ್‌ಗಳವರೆಗೆ ಹೆಚ್ಚಿಸಿ ಹೊರಡಿಸಿದ್ದ ಆದೇಶವನ್ನು ರಾತ್ರೋರಾತ್ರಿ ವಾಪಸ್‌ ಪಡೆದಿದ್ದು, ತಕ್ಷಣವೇ 75 ಯೂನಿಟ್‌ಗಳವರೆಗೆ ಬಡವರಿಗೆ ಮನೆ ಬಳಕೆಗೆ ಉಚಿತ ವಿದ್ಯುತ್‌ ನೀಡಬೇಕೆಂದು ಆಗ್ರಹಿಸಿದರು.

click me!